ಇತರ ಧರ್ಮ-ಸಮುದಾಯದ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುವ ಟ್ಯಾಬ್ಲೋ, ನೃತ್ಯರೂಪಕಕ್ಕೆ ಅವಕಾಶವಿಲ್ಲ: ಮಂಗಳೂರು ಕಮಿಷನರ್‌ ಕುಲದೀಪ್ ಕುಮಾರ್ ಜೈನ್

Update: 2023-09-02 14:18 GMT

ಮಂಗಳೂರು. ಸೆ.2: ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಮೊಸರುಕುಡಿಕೆ ಆಚರಣೆಯ ವೇಳೆ ಕೆಲವೊಂದು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ಪೊಲೀಸ್ ಇಲಾಖೆ ಸಂಘಟಕರಿಗೆ ಸೂಚಿಸಿದೆ. ಅಲ್ಲದೆ ಮಾರ್ಗಸೂಚಿಯನ್ನು ಪ್ರಕಟಿಸಿದೆ.

ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ಕಾರ್ಯಕ್ರಮ ಆಯೋಜಿಸುವ ಸಂಘಟಕರು ಕಡ್ಡಾಯವಾಗಿ ಪೊಲೀಸ್ ಇಲಾಖೆಯಿಂದ ಮುಂಚಿತವಾಗಿ ಅನುಮತಿ ಪಡೆಯಬೇಕು. ಮಡಿಕೆಗಳನ್ನು 14 ಅಡಿ ಎತ್ತರದವರೆಗೆ ಮಾತ್ರ ಕಟ್ಟಲು ಅವಕಾಶ. ಮಡಿಕೆಗಳನ್ನು ಹೊರತುಪಡಿಸಿ ಬೇರೆ ಯಾವುದೇ ವಸ್ತುಗಳನ್ನು ಕಟ್ಟಬಾರದು. ಮಡಿಕೆಗಳನ್ನು ಕಟ್ಟುವಾಗ ಸಾರ್ವಜನಿಕ ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ಸೂಕ್ತ ನಿಗಾ ವಹಿಸಬೇಕು. ಮಡಿಕೆ ಒಡೆಯುವ ಸ್ವಯಂಸೇವಕರ ಮೇಲೆ ತಂಪು ನೀರನ್ನು ಚೆಲ್ಲಬಾರದು. ಪೊಲೀಸ್ ಇಲಾಖೆಯಿಂದ ಅಂತಿಮಗೊಳಿಸಲಾದ ರೂಟ್‌ನಲ್ಲಿ ಮಾತ್ರ ಮೆರವಣಿಗೆ ಸಾಗಬೇಕು ಎಂದು ಸೂಚಿಸಲಾಗಿದೆ.

ಮಡಿಕೆ ಕಟ್ಟುವಾಗ, ಸ್ಥಬ್ಧಚಿತ್ರ ತಯಾರಿಸುವಾಗ ಸ್ಥಳದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಯ ಬಗ್ಗೆ ಎಚ್ಚರಿಕೆ ವಹಿಸಬೇಕು. ಮೊಸರು ಕುಡಿಕೆ ಮೆರವಣಿಗೆ ಸಾಗುವ ರಸ್ತೆಗಳಲ್ಲಿ ಸಾಕಷ್ಟು ಬೆಳಕಿನ ವ್ಯವಸ್ಥೆ ಇರುವಂತೆ ನೋಡಿಕೊಳ್ಳ ಬೇಕು. ತುರ್ತು ಸಂದರ್ಭ ಬಳಸಲು ಅನುಕೂಲವಾಗುವಂತೆ ಮೆರವಣಿಗೆಯಲ್ಲಿ ಒಂದು ಸುಸಜ್ಜಿತ ಅಂಬ್ಯುಲೆನ್ಸ್ ವ್ಯವಸ್ಥೆಗೊಳಿಸಬೇಕು. ಧ್ವನಿವರ್ಧಕ ಬಳಕೆ ಬಗ್ಗೆ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದುಕೊಳ್ಳಬೇಕು. ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ರಾತ್ರಿ 10 ಗಂಟೆ ತನಕ ಮಾತ್ರ ಧ್ವನಿವರ್ಧಕ ಬಳಸಲು ಅವಕಾಶವಿದೆ.

ಯಾವುದೇ ಕಾರಣಕ್ಕೂ ಮೆರವಣಿಗೆಯಲ್ಲಿ ಡಿಜೆ ಬಳಸಬಾರದು. ಫಿಟ್‌ನೆಸ್ ಸರ್ಟಿಫಿಕೆಟ್, ಇನ್ಸೂರೆನ್ಸ್ ಸರ್ಟಿಫಿಕೆಟ್ ಇರುವ ವಾಹನಗಳಲ್ಲಿ ಮಾತ್ರ ಸ್ಥಬ್ಧಚಿತ್ರವನ್ನು ಅಳವಡಿಸಲು ಉಪಯೋಗಿಸಬೇಕು. ಸ್ವಯಂಸೇವಕರನ್ನು ಗುಂಪುಗಳಾಗಿ ವಿಂಗಡಿಸಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ನಿಯೋಜಿಸಿ ಮೆರವಣಿಗೆಯು ಸುಲಲಿತವಾಗಿ ಸಾಗುವಂತೆ ಮಾಡಬೇಕು. ಯಾವುದೇ ಧರ್ಮ/ಸಮುದಾಯದ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುವಂತಹ ಟ್ಯಾಬ್ಲೋ, ನೃತ್ಯರೂಪಕ ಇರಬಾರದು.

ಸುಡುಮದ್ದು ಬಳಸುವಾಗ ಆಸ್ಪತ್ರೆಗಳ ಬಳಿ, ಜನ ಸಂದಣಿಯ ಮಧ್ಯೆ ಬಳಸಬಾರದು. ರಾತ್ರಿ 10 ಗಂಟೆಯ ನಂತರ ಸುಡುಮದ್ದು/ ಪಟಾಕಿಗಳನ್ನು ಬಳಸಬಾರದು. ಕಾರ್ಯಕ್ರಮಕ್ಕೆ ಸಂಬಂಧಿಸಿ ಸಾರ್ವಜನಿಕ ಸ್ಥಳಗಳಲ್ಲಿ ಫ್ಲೆಕ್ಸ್ ಮತ್ತು ಬ್ಯಾನರ್‌ಗಳನ್ನು ಅಳವಡಿಸುವ ಪೂರ್ವದಲ್ಲಿ ಸಂಬಂಧಪಟ್ಟ ಸ್ಥಳೀಯ ಪ್ರಾಧಿಕಾರದಿಂದ ಕಡ್ಡಾಯವಾಗಿ ಅನುಮತಿ ಪಡೆದು ಕೊಳ್ಳಬೇಕು. ಪ್ಲೆಕ್ಸ್, ಬ್ಯಾನರ್‌ಗಳಲ್ಲಿ ಯಾವುದೇ ಪ್ರಚೋದನಾತ್ಮಕ ಬರಹಗಳು/ಚಿತ್ರಗಳನ್ನು ಬಳಸಬಾರದು. ಎಲ್ಲಾ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್‌ಗಳನ್ನು ಕಾರ್ಯಕ್ರಮ ಮುಗಿದ ಬಳಿಕ ಸಂಘಟಕರೇ ಕಡ್ಡಾಯವಾಗಿ ತೆರವುಗೊಳಿಸಬೇಕು. ಕಾರ್ಯಕ್ರಮಕ್ಕೆ ಬರುವ ಜನರ ವಾಹನ ಪಾರ್ಕಿಂಗ್‌ಗೆ ಸ್ಥಳ ಗುರುತಿಸಬೇಕು, ಮೆರವಣಿಗೆ ಹಾದುಹೋಗುವ ರಸ್ತೆಯಲ್ಲಿ ವಾಹನಗಳ ನಿಲುಗಡೆಯಾಗದಂತೆ ಸ್ವಯಂಸೇವಕರನ್ನು ನಿಯೋಜಿಸಬೇಕು. ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಬಂದೋಬಸ್ತ್ ಕರ್ತವ್ಯದಲ್ಲಿರುವ ಪೊಲೀಸ್ ಅಧಿಕಾರಿಗಳ ಸೂಚನೆಗಳನ್ನು ಪಾಲಿಸಬೇಕು, ಪೊಲೀಸರೊಂದಿಗೆ ಸಂಘಟಕರು ಕೂಡ ಸಹಕರಿಸಬೇಕು.

ಧ್ವನಿವರ್ಧಕ ಅಳವಡಿಸುವವರಿಗೆ ಸೂಚನೆ

ಸ್ಥಬ್ಧಚಿತ್ರಗಳಲ್ಲಿ/ಕಾರ್ಯಕ್ರಮ ಸ್ಥಳಗಳಲ್ಲಿ ಧ್ವನಿವರ್ಧಕವನ್ನು ಅಳವಡಿಸುವ ಮೊದಲು ಪೊಲೀಸ್ ಇಲಾಖೆಯಿಂದ ಪಡೆಯಲಾದ ಪರವಾನಗಿ ಪರಿಶೀಲಿಸಿ ಅನುಮತಿಯಿದ್ದಲ್ಲಿ ಮಾತ್ರ ಧ್ವನಿವರ್ಧಕವನ್ನು ಅಳವಡಿಸಬೇಕು. ಪೊಲೀಸ್ ಇಲಾಖೆಯಿಂದ ನೀಡಲಾದ ಪರವಾನಗಿಯಲ್ಲಿ ನಿಗದಿಪಡಿಸಿದ ಸಮಯದವರೆಗೆ ಮಾತ್ರ ಧ್ವನಿವರ್ಧಕವನ್ನು ಬಳಸುವುದು. ಡಿಜೆ ಬಳಸಲು ಅವಕಾಶ ಇರುವುದಿಲ್ಲ. ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳ ಬಳಿ ಧ್ವನಿವರ್ಧಕ ಅಳವಡಿಸಬಾರದು ಎಂದು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News