ಹಿಟ್ಲರ್ ತನಗೆ ಬೇಡವಾದವರನ್ನು ಮಾತ್ರ ತುಳಿಯುತ್ತಿದ್ದ, ಆದರೆ ಜೋಶಿ ತಮಗೆ ಬೇಕಾದವರನ್ನೂ ತುಳಿದಿದ್ದಾರೆ : ದಿಂಗಾಲೇಶ್ವರ ಸ್ವಾಮೀಜಿ

Update: 2024-04-12 15:41 GMT

ಹುಬ್ಬಳ್ಳಿ : ಹಿಟ್ಲರ್ ತನಗೆ ಬೇಡವಾದವರನ್ನು ಮಾತ್ರ ತುಳಿಯುತ್ತಿದ್ದ. ಆದರೆ ಪ್ರಹ್ಲಾದ್ ಜೋಶಿಯವರು ತಮಗೆ ಬೇಕಾದವರನ್ನೂ ತುಳಿದಿದ್ದಾರೆ. ಹಿಟ್ಲರ್ ಜೋಶಿಯವರಿಂದ ಟ್ರೈನಿಂಗ್ ತೆಗೆದುಕೊಳ್ಳಬೇಕಿತ್ತು ಎಂದು ಧಾರವಾಡ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ದಿಂಗಾಲೇಶ್ವರ ಸ್ವಾಮೀಜಿ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ಅವರ ಮನೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಜೋಶಿ ಹಿಟ್ಲರ್ ಗಿಂತಲೂ ಹೆಚ್ಚಿನ ವ್ಯಕ್ತಿತ್ವದವರು. ನಮ್ಮ‌ ಜನಾಂಗವನ್ನು ಒಡೆಯುವ ಷಡ್ಯಂತ್ರವನ್ನು ಮಾಡುತ್ತಿದ್ದಾರೆ. ಜೋಶಿಯವರ ಈ‌ ಷಡ್ಯಂತ್ರದ ವಿರುದ್ಧವೇ ನಾನು‌ ಚುನಾವಣೆಗೆ ಸ್ಪರ್ಧೆ ಮಾಡುವ ಅವಶ್ಯಕತೆ ಬಂದಿದೆ. ಜೋಶಿ ಸಾಕಷ್ಟು ಜನರಿಗೆ ಆಸೆ ತೋರಿಸಿ‌ ತುಳಿದಿದ್ದಾರೆ ಎಂದರು.

ನನ್ನ ತೇಜೋವಧೆ ಮಾಡುವ ಪ್ರಯತ್ನಗಳಾಗುತ್ತಿವೆ. ಪ್ರಹ್ಲಾದ್ ಜೋಶಿಯವರು ಮೇಲಿಂದ ಮೇಲೆ‌ ತಪ್ಪುಗಳನ್ನು ಮಾಡುತ್ತಾ ಹೊರಟಿದ್ದಾರೆ. ಈ ಜಿಲ್ಲೆ ಹಾಗೂ ರಾಜ್ಯಕ್ಕೆ ಜೋಶಿಯವರ ಕೊಡುಗೆ ಏನೂ‌ ಇಲ್ಲ. ದೊಡ್ಡವರ ಹೆಸರಿನಲ್ಲಿ‌ ಜೋಶಿ ದುರಾಡಳಿತ ಮಾಡುತ್ತಿದ್ದಾರೆ ಎಂದರು.

ಕರಡಿ‌ಸಂಗಣ್ಣ, ಸಿಎಂ‌ ಉದಾಸಿ, ಜಿ.ಎಂ‌.ಸಿದ್ದೇಶ್ವರ ಅವರು ಜೋಶಿಯವರ ಕಿರಿಕಿರಿಗೆ ಬೇಸತ್ತಿದ್ದಾರೆ. ಅನೇಕ‌ ಜನ ನಾಯಕರನ್ನು ಮಾನಸಿಕ‌ ಹಾಗೂ ಆರ್ಥಿಕ‌ವಾಗಿ ಮೂಲೆ ಗುಂಪು‌ ಮಾಡಿದ್ದಾರೆ. ಚುನಾವಣೆಯ ಆಸೆ ತೋರಿಸಿ ಸಾಕಷ್ಟು ಜನರನ್ನು ಆರ್ಥಿಕವಾಗಿ ಮೂಲೆಗುಂಪು‌ ಮಾಡಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ‌ ಪಕ್ಷದ ನಾಯಕರಿಂದ ಸ್ವಾಮೀಜಿ ಮನವೋಲಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾವುದೇ ವ್ಯಕ್ತಿಗಳಿಂದ ನಮ್ಮನ್ನು ಹತ್ತಿಕ್ಕಲು‌ ಸಾಧ್ಯವಿಲ್ಲ. ವದಂತಿಗಳು ಹಬ್ಬಿಸುವ ಮೂಲಕ ಜನರಲ್ಲಿ‌ ಗೊಂದಲ‌ ಮೂಡಿಸುವ ಕೆಲಸ‌ ಮಾಡಲಾಗುತ್ತಿದೆ ಎಂದರು.

ಜೋಶಿಯವರು ಎಲ್ಲ ಜಾತಿಯ ಜನರನ್ನ‌ ವ್ಯವಸ್ಥಿತವಾಗಿ ತುಳಿಯುವ ಕೆಲಸ ಮಾಡುತ್ತಿದ್ದಾರೆ. ಜೋಶಿಯವರು ದುಡಿದು ತಿನ್ನುವವರಲ್ಲ, ಬಡಿದು ತಿನ್ನುವರು ಎಂದು ವಾಗ್ದಾಳಿ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News