ಕಾಂಗ್ರೆಸ್ ಬಿಟ್ಟಿ ಭಾಗ್ಯಗಳನ್ನು ಘೋಷಿಸಿ ನಾಡಿನ ಖಜಾನೆ ಬರಿದು ಮಾಡುತ್ತಿದೆ : ಪ್ರಹ್ಲಾದ್‌ ಜೋಶಿ

Update: 2024-05-25 07:27 GMT

Photo:fb/prahladjoshi

ಹುಬ್ಬಳ್ಳಿ : ಕಾಂಗ್ರೆಸ್ ಬಿಟ್ಟಿ ಭಾಗ್ಯಗಳನ್ನು ಘೋಷಿಸಿ ನಾಡಿನ ಖಜಾನೆ ಬರಿದು ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದರು.

ವಿಧಾನ ಪರಿಷತ್ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ ಪ್ರಯುಕ್ತ ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಮತಯಾಚಿಸಿ ಮಾತನಾಡಿದರು.

"ಸ್ವಾತಂತ್ರ್ಯ ಬಂದ ಬಳಿಕ 60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ದೇಶವನ್ನು ದೋಚಿದೆಯಷ್ಟೇ. ಈಗ ನೋಡಿದರೆ ಈ ಭಾಗ್ಯ ಆ ಭಾಗ್ಯ ಎಂದು ಏನೆಲ್ಲಾ ಘೋಷಣೆ ಮಾಡುತ್ತಾ ದೇಶದ ಖಜಾನೆ ಬರಿದು ಮಾಡಲು ಹೊರಟಿದೆ" ಎಂದು ಹರಿಹಾಯ್ದರು.

ʼದೇಶದ ನಾಗರಿಕರಿಗೆ ನಿಜವಾಗಿಯೂ ಬೇಕಾಗಿರುವುದು ಶಿಕ್ಷಣ, ಆರೋಗ್ಯ, ಉದ್ಯೋಗ, ವಸತಿ. ಆದರೆ, ಇದಕ್ಕೆ ಪೂರಕ ಮೂಲ ಸೌಕರ್ಯಗಳನ್ನು ಒದಗಿಸುವುದರ ಬಗ್ಗೆ ಯಾವ ಯೋಜನೆಯೂ ಕಾಂಗ್ರೆಸ್ಸಿಗರಲ್ಲಿ ಇಲ್ಲ. ದೇಶದ ಅಭಿವೃದ್ಧಿಗಾಗಿ ಯಾವ ಯೋಚನೆ, ಯೋಜನೆಯೂ ಕಾಂಗ್ರೆಸ್ ಬಳಿ ಇಲ್ಲ. ಇಂತವರ ಕೈಗೆ ಅಧಿಕಾರ ಹೋದರೆ ಜನರು ಅಧೋಗತಿ ತಲುಪುತ್ತಾರೆʼ ಎಂದು ಹೇಳಿದರು.

ಬಿಜೆಪಿ ಬೆಂಬಲಕ್ಕೆ ಕರೆ: ಕಳೆದ ಹತ್ತು ವರ್ಷದಿಂದ ಬಿಜೆಪಿ ಆಡಳಿತದಲ್ಲಿ ಸಮೃದ್ಧ ಭಾರತವನ್ನು ಸೃಷ್ಟಿಸಲಾಗುತ್ತಿದೆ. ಸಮರ್ಥ, ಸಶಕ್ತ ಭಾರತ ನಿರ್ಮಾಣಕ್ಕಾಗಿ ಮತ್ತೆ ಮತ್ತೆ ಬಿಜೆಪಿಯನ್ನೇ ಅಧಿಕಾರಕ್ಕೆ ತರಬೇಕು ಎಂದು ಪದವೀಧರ ಮತದಾರರಲ್ಲಿ ಪ್ರಹ್ಲಾದ್  ಜೋಶಿ ಬೆಂಬಲ ಕೋರಿದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್, ಶಾಸಕ ಕೃಷ್ಣ ನಾಯ್ಕ, ಮಾಜಿ ಸಚಿವ ಆನಂದ ಸಿಂಗ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಚನ್ನಬಸವನ ಗೌಡ, ಎಸ್ಟಿ ಮೋರ್ಚಾ ಪ್ರಮುಖರಾದ ಬಂಗಾರು ಹನಮಂತ, ಹಾಗೂ ಪಕ್ಷದ ಪ್ರಮುಖರು ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News