ಗೃಹಲಕ್ಷ್ಮಿ ಹಣ ಕೂಡಿಟ್ಟು ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮಹಿಳೆ

Update: 2024-05-22 09:07 GMT

ಬೆಂಗಳೂರು: ಬೆಳಗಾವಿಯ ಮಹಿಳೆಯೊಬ್ಬರು ಕಳೆದ 10 ತಿಂಗಳ ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟು, ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವ ಘಟನೆ ರಾಮದುರ್ಗದ ಸುರೇಬಾನ - ಮನಿಹಾಳ ಗ್ರಾಮದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ರಾಮದುರ್ಗದ ಮನಿಹಾಳ ಗ್ರಾಮದ ಸಕ್ಕುಬಾಯಿ ಈರಣ್ಣ ಕರದಿನ, ಹಲವು ತಿಂಗಳಿಂದ ಕಣ್ಣಿನ ಸಮಸ್ಯೆ ಎದುರಿಸುತ್ತಿದ್ದರು. ಬಲಗಣ್ಣಿನಲ್ಲಿ ಪೊರೆ ಬಂದಿದ್ದ ಕಾರಣ ಶಸ್ತ್ರಚಿಕಿತ್ಸೆ ಅನಿವಾರ್ಯ ಆಗಿತ್ತು. ಹಣಕಾಸಿನ ಸಮಸ್ಯೆಯಿಂದ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದೆ ಸುಮ್ಮನಿದ್ದ ಸಕ್ಕುಬಾಯಿ, ಕಳೆದ 10 ತಿಂಗಳಿಂದ ರಾಜ್ಯ ಸರ್ಕಾರದಿಂದ ಬರುತ್ತಿರುವ ಗೃಹಲಕ್ಷ್ಮಿ ಯೋಜನೆಯ ಮೊತ್ತವನ್ನು ಕೂಡಿಟ್ಡು, ಕಳೆದ ವಾರ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ರಾಮದುರ್ಗದ ಡಾ.ವಿಜಯ್ ಸುಲ್ತಾನ್ ಪುರ ಮಹಿಳೆಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಪತಿ ಈರಣ್ಣ ಕರದಿನ, ನೇಕಾರರಾಗಿ ಕೆಲಸ ಮಾಡುತ್ತಿದ್ದು, ಮೂರು ಮಕ್ಕಳ ಕೂಡು ಕುಟುಂಬ ಇವರದ್ದಾಗಿದೆ.

ಗೃಹಲಕ್ಷ್ಮಿ ಯೋಜನೆ ನಮ್ಮ ಕುಟುಂಬವನ್ನು ಕೈಹಿಡಿಯಿತು. ಹಿಂದಿನ ಮಂಗಳವಾರ ನನ್ನ ಪತ್ನಿ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾದರು. ಒಟ್ಟು 26 ಸಾವಿರ ಬಿಲ್ ಆಗಿದ್ದು, ಗೃಹಲಕ್ಷ್ಮಿ ಯೋಜನೆಯಿಂದ 20 ಸಾವಿರ ರೂಪಾಯಿ ಕೂಡಿಟ್ಟಿದ್ದೇವು. ಹೀಗಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಅನುಕೂಲವಾಯಿತು ಎಂದು ಈರಣ್ಣ ಕರದಿನ ಸಂತಸ ವ್ಯಕ್ತಪಡಿಸಿದರು.

ಗೃಹಲಕ್ಷ್ಮಿ ಹಣದಿಂದ ಬಡ ಮಹಿಳೆಯೊಬ್ಬರು ಮೊನ್ನೆಯಷ್ಟೆ ತಮ್ಮ ಮನೆಗೆ ಫ್ರೀಜ್ ಖರೀದಿಸಿದ್ದರೆ, ಮತ್ತೋರ್ವ ಮಹಿಳೆ ಮೊಬೈಲ್ ಖರೀದಿಸಿದ್ದರು. ಬಡ ವಿದ್ಯಾರ್ಥಿಗಳ ಪಾಲಿಗೆ ಈ ಯೋಜನೆ ಹಲವು ರೀತಿಯಲ್ಲಿ ವರದಾನವಾಗಿದೆ.

ಸಿಎಂ, ಡಿಸಿಎಂ, ಸಚಿವೆಗೆ ಧನ್ಯವಾದ

ಗೃಹಲಕ್ಷ್ಮಿ ಯೋಜನೆಯ ರೂವಾರಿಗಳಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಧನ್ಯವಾದ ಹೇಳಬೇಕು. ಅವರು ನೀಡುವ ಎರಡು ಸಾವಿರ ರೂಪಾಯಿಯಿಂದ ನನ್ನ ಕಣ್ಣಿನ ಸಮಸ್ಯೆಗೆ ಪರಿಹಾರ ಸಿಕ್ಕಿತು ಎಂದು ಸಕ್ಕುಬಾಯಿ ಕರದಿನ ಹೇಳಿದರು.

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News