"ನಮ್ಮ ಕುಟುಂಬದ 50 ಸಾವಿರ ಕೋಟಿ ರೂ.ಆಸ್ತಿ ಹುಡುಕಿಕೊಡಿ": ಬಿಜೆಪಿ ನಾಯಕರಿಗೆ ಸಚಿವ ಪ್ರಿಯಾಂಕ್ ಖರ್ಗೆ ಸವಾಲು

Update: 2024-10-17 17:42 GMT

ಬೆಂಗಳೂರು: ದಮ್ಮು, ತಾಕತ್ತಿನ ಬಿಜೆಪಿಯವರಿಗೆ ನನ್ನ ಸವಾಲು, ಎಲ್ಲ ತನಿಖಾ ಏಜೆನ್ಸಿಗಳನ್ನು ಕಳುಹಿಸಲಿ, ಎಲ್ಲಿ ಬೇಕಾದರೂ ರೈಡ್ ಮಾಡಿಸಲಿ, ನಮ್ಮ ಕುಟುಂಬದ 50 ಸಾವಿರ ಕೋಟಿ ರೂ.ಗಳ ಆಸ್ತಿಯನ್ನು ಹುಡುಕಿಕೊಡಲಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.

ಈ ಸಂಬಂಧ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, ಫೇಕ್ ಫ್ಯಾಕ್ಟರಿಯನ್ನು ಸ್ಥಾಪಿಸಿ ಸುಳ್ಳುಗಳ ವ್ಯಾಪಾರಕ್ಕೆ ಹೆಸರುವಾಸಿಯಾಗಿರುವ ಬಿಜೆಪಿ ಹಾಗೂ ಅದರ ನಾಯಕರು ಬಹಳ ಹಿಂದಿನಿಂದಲೂ ನಮ್ಮ ಕುಟುಂಬದ ಮೇಲೆ 50 ಸಾವಿರ ಕೋಟಿ ರೂ. ಆಸ್ತಿಯ ಆರೋಪ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಹೀಗೆ ಆರೋಪ ಮಾಡಿದ್ದ ಬಿಜೆಪಿಯ ಕೆಲ ಪುಡಿ ಮುಖಂಡರಿಗೆ ಲೀಗಲ್ ನೋಟಿಸ್ ಕಳಿಸಿದ್ದೆ, ಆದರೆ ಇದುವರೆಗೂ ಅವರ್ಯಾರೂ 50 ಸಾವಿರ ಕೋಟಿ ರೂ.ಗಳ ಅಸ್ತಿಯನ್ನು ತೋರಿಸದಿರುವುದು ನನಗೆ ನಿರಾಸೆಯನ್ನುಂಟುಮಾಡಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಕಳೆದ ಹನ್ನೊಂದು ವರ್ಷ ವರ್ಷದಿಂದ ಕೇಂದ್ರದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದೆ, ಸೋಕಾಲ್ಡ್ ಶಕ್ತಿಮಾನ್ ಪ್ರಧಾನಿ ಇದ್ದಾರೆ, ಐಟಿ, ಈಡಿ, ಸಿಬಿಐ ಇವರ ಕೈನಲ್ಲೇ ಇದ್ದಾವೆ, ಹೀಗಿದ್ದೂ ಇದುವರೆಗೂ ನಮ್ಮ 50 ಸಾವಿರ ಕೋಟಿ ರೂ.ಗಳ ಆಸ್ತಿ ಹುಡುಕಲು ಸಾಧ್ಯವಾಗದಿರುವುದೇಕೆ? ಎಂದು ಅವರು ಪ್ರಶ್ನಿಸಿದ್ದಾರೆ.

ರಾಜ್ಯ ಬಿಜೆಪಿ, ಯಾರದು ಸುಳ್ಳು, ಯಾರದು ಸತ್ಯ ಎನ್ನುವುದು ಈಗಾಗಲೇ ಜಗತ್ತಿಗೆ ತಿಳಿದಿರುವ ಸಂಗತಿ, ನಿಮಗೆ ನಮ್ಮ 50 ಸಾವಿರ ಕೋಟಿ ಆಸ್ತಿಯ ದಾಖಲೆ ತೋರಿಸಲಾಗಿಲ್ಲ, ಸಿಎ ನಿವೇಶನ ಹೇಗೆ ಅಕ್ರಮ ಎನ್ನುವುದನ್ನು ನಿರೂಪಿಸಲಾಗಿಲ್ಲ ಎಂದು ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.

ಆದರೆ, ನನ್ನ ಸತ್ಯಕ್ಕೆ ಹಲವು ನಿದರ್ಶನಗಳಿವೆ. ನಾನು ಬಯಲಿಗೆಳೆದಿದ್ದ ಪಿಎಸ್‍ಐ ಹಗರಣವನ್ನು ನಿಮ್ಮವರೇ ಒಪ್ಪಿದ್ದಾರೆ, ಅಧಿಕಾರಿಗಳು, ಆರೋಪಿಗಳ ಬಂಧನವಾಗಿದೆ. ನಾನು ಆರೋಪಿಸಿದ್ದ ಬಿಟ್ ಕಾಯಿನ್ ಹಗರಣದಲ್ಲಿ ಪೊಲೀಸ್ ಅಧಿಕಾರಿಗಳ ಬಂಧನವಾಗಿದೆ. ಹಗರಣಕ್ಕೆ ಸಾಕ್ಷ್ಯ ಸಿಕ್ಕಿದೆ. ಗಂಗಾ ಕಲ್ಯಾಣದಲ್ಲಿ ಭ್ರಷ್ಟರ ಕಲ್ಯಾಣವಾಗಿದೆ ಎಂದಿದ್ದೆ, ಅಂತೆಯೇ ನಿಮ್ಮವರೇ ನಡೆದಿರುವ ಅಕ್ರಮವನ್ನು ಒಪ್ಪಿಕೊಂಡಿದ್ದಾರೆ, ಅಧಿಕಾರಿಗಳ ತಲೆದಂಡವಾಗಿದೆ ಎಂದು ಅವರು ತಿಳಿಸಿದ್ದಾರೆ.

ಭೋವಿ ನಿಗಮದ ನಡೆದ ಅಕ್ರಮಕ್ಕೆ ಪುರಾವೆ ಸಿಕ್ಕಿದೆ, ತನಿಖೆಯಲ್ಲಿ ಸಾಬೀತಾಗಿದೆ. ಟ್ರಕ್ ಟರ್ಮಿನಲ್ ಹಗರಣದಲ್ಲಿ ನಿಮ್ಮವರ ಬಂಧನವಾಗಿದೆ, ಅಕ್ರಮ ನಡೆದಿರುವುದು ಜಗಜ್ಜಾಹೀರಾಗಿದೆ. ಕೋವಿಡ್ ಹಗರಣದಲ್ಲಿ ಅಧಿಕಾರಿಗಳ ತಲೆದಂಡವಾಗಿದೆ, ಸಮಿತಿಯ ತನಿಖೆಯಲ್ಲಿ ಅಕ್ರಮದ ಅಘಾದತೆ ಬಿಚ್ಚಿಕೊಳ್ಳುತ್ತಿದೆ. ಕೆಕೆಆರ್‍ಡಿಬಿ ಹಗರಣಕ್ಕೆ ಸಾಕ್ಷಿಗಳು ದೊರೆತಿವೆ. ಪರಶುರಾಮ ಥೀಮ್ ಪಾರ್ಕ್ ಹಗರಣ ಜನರ ಮುಂದೆ ಬಯಲಾಗಿದೆ. ಕಿಯೋನಿಕ್ಸ್ ಹಗರಣದ ಬಗ್ಗೆ ಸಿಎಜಿ ವರದಿಯಲ್ಲಿ ಪುರಾವೆ ಸಿಕ್ಕಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ನನ್ನ ಮುಂದಿನ ಹೇಳಿಕೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವ ಬದಲು ಬಿಜೆಪಿಯವರು ಈ ಪ್ರಶ್ನೆಗಳಿಗೆ ಉತ್ತರಿಸುವ ಧೈರ್ಯ ತೋರಲಿ, ಯಡಿಯೂರಪ್ಪ ಮೇಲೆ ಪೋಕ್ಸೋ ಪ್ರಕರಣ ಇರುವುದು ಸುಳ್ಳಾ? ಭ್ರಷ್ಟಾಚಾರದಲ್ಲಿ ಜೈಲಿಗೆ ಹೋಗಿದ್ದು ಸುಳ್ಳಾ? ಮುನಿರತ್ನ ಇಬ್ಬರು ಮಾಜಿ ಸಿಎಂಗಳಿಗೆ ಹನಿಟ್ರಾಪ್ ಮಾಡಿದ್ದು ಸುಳ್ಳಾ? ಬಿಜೆಪಿಯ 15ಕ್ಕೂ ಹೆಚ್ಚು ನಾಯಕರು ಸಿಡಿಗೆ ತಡೆಯಾಜ್ಞೆ ತಂದಿದ್ದು ಸುಳ್ಳಾ? ಎಂದು ಅವರು ಪ್ರಶ್ನಿಸಿದ್ದಾರೆ.

ನಿಮ್ಮ ವಿಧಾನಪರಿಷತ್ ವಿಪಕ್ಷ ನಾಯಕರು ಶಾಲೆ ಹೆಸರಲ್ಲಿ ನಿವೇಶನ ಪಡೆದು ಬಿರಿಯಾನಿ ಹೋಟೆಲ್ ಮಾಡಿದ್ದು ಸುಳ್ಳಾ? ನಿಮ್ಮ ವಿರೋಧ ಪಕ್ಷದ ನಾಯಕರು ಅಕ್ರಮ ನಿವೇಶನ ಪಡೆದು ವಾಪಸ್ ನೀಡಿದ್ದು ಸುಳ್ಳಾ? ಎಂದು ಪ್ರಿಯಾಂಕ್ ಖರ್ಗೆ ಬಿಜೆಪಿ ನಾಯಕರಿಗೆ ಸರಣಿ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News