ಹಾಸನ: ಎರಡು ಬೈಕ್ಗಳು ಮುಖಾಮುಖಿ ಢಿಕ್ಕಿ; ಓರ್ವ ಮೃತ್ಯು

ಹಾಸನ: ಎರಡು ಬೈಕ್ ಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಫುಡ್ ಡೆಲಿವರಿ ಬಾಯ್ ಒಬ್ಬರು ಸ್ಥಳದಲ್ಲೇ ಮೃತಪಟ್ಟು ಮತ್ತೊಬ್ಬ ತೀವ್ರವಾಗಿ ಗಾಯಗೊಂಡ ಘಟನೆ ನಗರ ಹೊರ ವಲಯದ ಬೂವನಹಳ್ಳಿ ಕೂಡು ಬಳಿಯ ರಾ.ಹೆ.75ರ ಬೈಪಾಸ್ ರಸ್ತೆಯಲ್ಲಿ ನಡೆದಿದೆ.
ನಗರದ ಎಸ್.ಬಿ.ಎಂ. ಲೇಔಟ್ ನ ಶರಾವತಿ ಬಡಾವಣೆ ನಿವಾಸಿ ಶರತ್ (40) ಮೃತ ವ್ಯಕ್ತಿ. ರವಿವಾರ ರಾತ್ರಿ 11ಗಂಟೆ ಸುಮಾರಿನಲ್ಲಿ ಫುಡ್ ಡೆಲಿವರಿ ಮಾಡಲು ನಗರದ ಕಡೆಯಿಂದ ಬಂದು ಗೆಂಡೆಗಟ್ಟೆಗೆ ಹೋಗುವ ರಸ್ತೆ ಬಳಿ ರಾಷ್ಟ್ರೀಯ ಹೆದ್ದಾರಿಗೆ ತಿರುವು ತೆಗೆದುಕೊಳ್ಳುವಾಗ ಬೆಂಗಳೂರು ಕಡೆಯಿಂದ ಬಂದ ಮತ್ತೊಂದು ಬೈಕ್ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಹೆಲ್ಮೆಟ್ ಧರಿಸದ ಕಾರಣ ಘಟನೆಯಲ್ಲಿ ಶರತ್ ಅವರ ತಲೆಗೆ ತೀವ್ರ ಪೆಟ್ಟಾಗಿದೆ. ಗಂಭೀರವಾಗಿ ಗಾಯಗೊಂಡು ರಕ್ತಸ್ರಾವಕ್ಕೆ ಒಳಗಾದ ಅವರು ಸ್ಥಳದಲ್ಲೇ ಮೃತರಾದರು. ಮತ್ತೊಬ್ಬ ಬೈಕ್ ಸವಾರನೂ ಗಾಯಗೊಂಡಿದ್ದು, ಆತನನ್ನು ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂಲತಃ ಮುತ್ತತ್ತಿ ಗ್ರಾಮದ ಶರತ್ ಪೂರ್ಣಾವಧಿ ಫುಡ್ ಡೆಲಿವರ ಬಾಯ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಅವರಿಗೆ ಪತ್ನಿ ಹಾಗೂ ಐದನೇ ತರಗತಿ ವ್ಯಾಸಂಗ ಮಾಡುತ್ತಿರುವ ಪುತ್ರ ಇದ್ದಾರೆ. ನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ