ಹಾವೇರಿ | ಬಾಲಕನ ಕೆನ್ನೆಯ ಗಾಯಕ್ಕೆ ಹೊಲಿಗೆ ಬದಲು ಫೆವಿಕ್ವಿಕ್ ಹಾಕಿದ ನರ್ಸ್ ಅಮಾನತು

ಗಾಯಾಳು ಬಾಲಕ ಗುರುಕಿಶನ್
ಹಾವೇರಿ: ಬಾಲಕನ ಕೆನ್ನೆಯ ಗಾಯಕ್ಕೆ ಹೊಲಿಗೆಯ ಬದಲು ಫೆವಿಕ್ವಿಕ್ ಹಾಕಿದ್ದ ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್ ಅನ್ನು ಅಮಾನತ ಮಾಡಲಾಗಿದೆ.
ಜ್ಯೋತಿ ಅಮಾನತುಗೊಂಡ ನರ್ಸ್.
ಜನವರಿ 14ರಂದು ಆಟ ಆಡುತ್ತಿದ್ದ ವೇಳೆ ಬಿದ್ದು ಏಳು ವರ್ಷದ ಬಾಲಕ ಗುರುಕಿಶನ್ ಕೆನ್ನೆಗೆ ಗಾಯವಾಗಿತ್ತು. ಈ ವೇಳೆ ಮಗುವನ್ನು ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಅಲ್ಲಿ ನರ್ಸ್ ಜ್ಯೋತಿ ಬಾಲಕನ ಕೆನ್ನೆಯ ಗಾಯಕ್ಕೆ ಹೊಲಿಗೆ ಹಾಕುವ ಬದಲು ಫೆವಿಕ್ವಿಕ್ ಹಾಕಿ ಚಿಕಿತ್ಸೆ ಬ್ಯಾಂಡೆಡ್ ಅಂಟಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಈ ಬಗ್ಗೆ ವೀಡಿಯೊ ವೈರಲ್ ಆದ ಬೆನ್ನಲ್ಲೆ ಕರ್ತವ್ಯಲೋಪ ಎಸಗಿದ ಆರೋಪದಲ್ಲಿ ನರ್ಸ್ ಜ್ಯೋತಿಯನ್ನು ಅಮಾನತುಗೊಳಿಸಲಾಗಿದೆ. ಸರಕಾರದ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಫೆವಿಕ್ವಿಕ್ ಅಂಟು ದ್ರಾವಣವಾಗಿದ್ದು, ವೈದ್ಯಕೀಯ ಬಳಕೆಯಲ್ಲಿಲ್ಲ. ಮಗುವಿನ ಚಿಕಿತ್ಸೆಗೆ ಫೆವಿಕ್ವಿಕ್ ಬಳಸಿ ಕರ್ತವ್ಯ ಲೋಪವೆಸಗಿದ್ದಾರೆ. ಸ್ಟಾಫ್ ನರ್ಸ್ ಬಗ್ಗೆ ಪ್ರಾಥಮಿಕ ವರದಿ ಪಡೆದು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಮಗುವಿನ ಆರೋಗ್ಯದಲ್ಲಿ ಅಡ್ಡಪರಿಣಾಮಗಳ ಬಗ್ಗೆ ನಿಗಾ ಇಡಲು ಸೂಚನೆ ನೀಡಿದ್ದು, ಚಿಕಿತ್ಸೆಗೆ ಒಳಪಟ್ಟಿದ್ದ ಮಗು ಆರೋಗ್ಯವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.