ಬಾಂಗ್ಲಾದೇಶದಲ್ಲಿ ಮುಸ್ಲಿಮರಿಂದ ದಾಳಿಗಳ ಕುರಿತು ಸುಳ್ಳು ಮಾಹಿತಿಗಳನ್ನು ಹರಡುತ್ತಿರುವ ಬಲಪಂಥೀಯರು: ಬಿಬಿಸಿ ವರದಿ

Update: 2024-08-18 13:04 GMT

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಬಾಂಗ್ಲಾದೇಶದಲ್ಲಿ ಉರಿಯುತ್ತಿರುವ ಕಟ್ಟಡಗಳು, ಭಯಾನಕ ಹಿಂಸಾಚಾರ ಮತ್ತು ನೆರವಿಗಾಗಿ ರೋದಿಸುತ್ತಿರುವ ಮಹಿಳೆಯರ ಆಘಾತಕಾರಿ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡುತ್ತಿವೆ. ಸುದೀರ್ಘ ಕಾಲ ಬಾಂಗ್ಲಾದೇಶವನ್ನು ಆಳಿದ್ದ ಶೇಖ್ ಹಸೀನಾ ಅವರ ಸರಕಾರದ ಪತನದ ಬಳಿಕ ದೇಶದಲ್ಲಿ ನಡೆಯುತ್ತಿರುವ ‘ಹಿಂದೂಗಳ ನರಮೇಧ’ಕ್ಕೆ ಈ ವೀಡಿಯೊಗಳು ಸಾಕ್ಷಿಯಾಗಿವೆ ಎಂದು ಅವುಗಳನ್ನು ಹಂಚಿಕೊಳ್ಳುತ್ತಿರುವವರು ಹೇಳುತ್ತಿದ್ದಾರೆ.

ಟಾಮಿ ರಾಬಿನ್ಸನ್ ಎಂಬ ಹೆಸರನ್ನು ಬಳಸುತ್ತಿರುವ ಬ್ರಿಟಿಷ್ ಕಟ್ಟರ್ ಬಲಪಂಥೀಯ ಕಾರ್ಯಕರ್ತ ಸ್ಟೀಫನ್ ಯಾಷ್ಲೆ-ಲೆನನ್ ಕರಾಳ ಎಚ್ಚರಿಕೆಗಳ ಜೊತೆಗೆ ವೀಡಿಯೊಗಳನ್ನು ಹಂಚಿಕೊಳ್ಳುವುದರಲ್ಲಿ ತೊಡಗಿಕೊಂಡಿದ್ದಾನೆ. ಇದೇ ಲೆನನ್ ಯಾನೆ ರಾಬಿನ್ಸನ್ ಬ್ರಿಟನ್ ನಲ್ಲಿ ಮುಸ್ಲಿಮರು ಮತ್ತು ವಲಸಿಗರನ್ನು ಗುರಿಯಾಗಿಸಿಕೊಂಡು ನಡೆದಿದ್ದ ಗಲಭೆಗಳ ಸಂದರ್ಭ ಪ್ರಚೋದನಕಾರಿ ಪೋಸ್ಟ್ ಗಳನ್ನು ಮಾಡಿದ್ದಕ್ಕಾಗಿ ತೀವ್ರ ಟೀಕೆಗಳಿಗೊಳಗಾಗಿದ್ದ.

ಆದರೆ ಆನ್ಲೈನ್ ನಲ್ಲಿ ಹಂಚಿಕೊಳ್ಳಲಾಗಿರುವ ಹೆಚ್ಚಿನ ವೀಡಿಯೊಗಳು ಮತ್ತು ಹೇಳಿಕೆಗಳು ಸುಳ್ಳು ಎನ್ನುವುದನ್ನು ಬಿಬಿಸಿ ಬಯಲಿಗೆಳೆದಿದೆ.

ಬಾಂಗ್ಲಾದೇಶದಲ್ಲಿ 400ಕ್ಕೂ ಅಧಿಕ ಜೀವಗಳನ್ನು ಬಲಿತೆಗೆದುಕೊಂಡ ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆದರಿ ಪ್ರಧಾನಿ ಶೇಖ್ ಹಸೀನಾ ಅವರು ಭಾರತಕ್ಕೆ ಪಲಾಯನ ಮಾಡಿದ ಬಳಿಕ ಸಂಭ್ರಮಾಚರಣೆ ಸಂದರ್ಭದಲ್ಲಿ ಹಿಂಸಾಚಾರವು ಇನ್ನಷ್ಟು ಉಲ್ಬಣಗೊಂಡಿತ್ತು. ಗಲಭೆಕೋರರು ಹಸೀನಾರ ಆವಾಮಿ ಲೀಗ್ ಪಕ್ಷದ ಸದಸ್ಯರನ್ನು ಗುರಿಯಾಗಿಸಿಕೊಂಡಿದ್ದು, ಈ ಸದಸ್ಯರಲ್ಲಿ ಹಿಂದುಗಳು ಮತ್ತು ಮುಸ್ಲಿಮರು ಸೇರಿದ್ದಾರೆ.

ತಳಮಟ್ಟದ ವರದಿಗಳು ಹಿಂಸಾಚಾರ ಮತ್ತು ಲೂಟಿಗಳು ಹಿಂದುಗಳು ಮತ್ತು ಅವರ ಆಸ್ತಿಗಳ ಮೇಲೆ ಪರಿಣಾಮವನ್ನುಂಟು ಮಾಡಿದ್ದನ್ನು ಸೂಚಿಸಿದ್ದರೆ, ಭಾರತದಲ್ಲಿಯ ಬಲಪಂಥೀಯರು ಸಾಮಾಜಿಕ ಮಾಧ್ಯಮಗಳಲ್ಲಿ ಘಟನೆಗಳನ್ನು ತಪ್ಪಾಗಿ ಬಿಂಬಿಸುವ ಸುಳ್ಳು ವೀಡಿಯೊಗಳು ಮತ್ತು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. 

ವೈರಲ್ ಆಗಿರುವ ಒಂದು ಪೋಸ್ಟ್ ಬಾಂಗ್ಲಾದೇಶದಲ್ಲಿ ಹಿಂದೂ ದೇವಸ್ಥಾನಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ಹೇಳಿಕೊಂಡಿದೆ. ಆದರೆ ಘಟನೆ ನಿಜವಾಗಿಯೂ ನಡೆದಿದ್ದು ಚಿತ್ತಗಾಂಗ್ ನ ಆವಾಮಿ ಲೀಗ್ ಕಚೇರಿಯಲ್ಲಿ ಮತ್ತು ವೀಡಿಯೊದಲ್ಲಿ ಹೇಳಿರುವಂತೆ ಸಮೀಪದ ನವಗ್ರಹ ದೇವಸ್ಥಾನಕ್ಕೆ ಯಾವುದೇ ಹಾನಿಯುಂಟಾಗಿಲ್ಲ ಎನ್ನುವುದನ್ನು ಬಿಬಿಸಿಯು ದೃಢಪಡಿಸಿದೆ.

 

ಶಾಲೆಯೊಂದನ್ನು ಸುಟ್ಟು ಹಾಕಿದ್ದು, ಅಲ್ಲಿಗೆ ಭೇಟಿ ನೀಡಿದ್ದ ಬಿಬಿಸಿ ತಂಡವು ದಾಳಿಯ ಹಿಂದಿನ ಕಾರಣಗಳು ಧಾರ್ಮಿಕಕ್ಕಿಂತ ಹೆಚ್ಚಾಗಿ ರಾಜಕೀಯವಾಗಿರುವಂತಿದೆ ಎನ್ನುವುದನ್ನು ಕಂಡುಕೊಂಡಿದೆ.

ಈ ಎಲ್ಲ ಪೋಸ್ಟ್ ಗಳನ್ನು ಹಲವಾರು ಖಾತೆಗಳಿಂದ ಹಂಚಿಕೊಳ್ಳಲಾಗಿದ್ದು, ಈ ಪೈಕಿ ಹೆಚ್ಚಿನವು ಹಿಂದೂ ರಾಷ್ಟ್ರವಾದಿ ಮೌಲ್ಯಗಳನ್ನು ಬೆಂಬಲಿಸುತ್ತಿವೆ.

ಮುಸ್ಲಿಮರು ಹಿಂದುಗಳನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ತಪ್ಪಾಗಿ ಬಿಂಬಿಸಿರುವ ಈ ಪೋಸ್ಟ್ ಗಳಲ್ಲಿ ಕೆಲವನ್ನು ಬಾಂಗ್ಲಾದೇಶ ಅಥವಾ ಭಾರತದಿಂದ ಬಹುದೂರದಲ್ಲಿರುವ ಖಾತೆಗಳಿಂದ ಹಂಚಿಕೊಳ್ಳಲಾಗಿದೆ. ಬಾಂಗ್ಲಾದೇಶದಲ್ಲಿಯ ಪರಿಶೀಲಿಸಲ್ಪಡದ ವೀಡಿಯೊಗಳನ್ನು ಹಂಚಿಕೊಳ್ಳುತ್ತಿರುವ ಟಾಮಿ ರಾಬಿನ್ಸನ್, ಆ ದೇಶದಲ್ಲಿ ‘ಹಿಂದುಗಳ ನರಮೇಧ’ನಡೆಯುತ್ತಿದೆ ಎಂದು ಈ ಪೋಸ್ಟ್ ಗಳಲ್ಲಿ ಹೇಳಿದ್ದಾನೆ.

 

ರಾಬಿನ್ಸನ್ ಪೋಸ್ಟ್ ಮಾಡಿದ ವೀಡಿಯೊವೊಂದರ ತನಿಖೆಗಿಳಿದ ಬಿಬಿಸಿಗೆ ಕಂಡು ಬಂದಿದ್ದೇ ಬೇರೆ. ಬಹಳ ಹಿಂದೆಯೇ ಪ್ರಕರಣ ದಾಖಲಾಗಿದ್ದ ಭೂವಿವಾದಕ್ಕೆ ಸಂಬಂಧಿಸಿದಂತೆ ಹಿಂದು ಮಹಿಳೆಯ ಮನೆಯ ಮೇಲೆ ದಾಳಿ ನಡೆದಿತ್ತು. ವಾಸ್ತವದಲ್ಲಿ ಗಲಭೆಗೂ ಇದಕ್ಕೂ ಯಾವುದೇ ಸಂಬಂಧವಿರಲಿಲ್ಲ. ಮಹಿಳೆ ತನ್ನ ಪತಿಯ ಪ್ರಾಣಕ್ಕಾಗಿ ದಾಳಿಕೋರರನ್ನು ಅಂಗಲಾಚುತ್ತಿರುವ ವೀಡಿಯೊವನ್ನು ರಾಬಿನ್ಸನ್ ಪೋಸ್ಟ್ ಮಾಡಿದ್ದು,ಅದನ್ನು ಮುಸ್ಲಿಮರ ದಾಳಿ ಎಂದು ಬಿಂಬಿಸಿದ್ದ.

ಹಿಂದುಗಳು ಆವಾಮಿ ಲೀಗ್ ನ ಬೆಂಬಲಿಗರಾಗಿದ್ದು, ಅವರ ಒಡೆತನದ ಆಸ್ತಿಗಳ ಮೇಲೆ ದಾಳಿಗಳು ನಡೆದಿರುವುದು ನಿಜ. ಆದರೆ ಹೆಚ್ಚಿನವು ರಾಜಕೀಯ ಪ್ರೇರಿತವಾಗಿವೆ ಮತ್ತು ಬಲಪಂಥೀಯ ಖಾತೆಗಳು ಇವುಗಳಿಗೆ ಧಾರ್ಮಿಕ ಬಣ್ಣ ನೀಡಿ ವೀಡಿಯೊಗಳನ್ನು ಹರಡುತ್ತಿವೆ ಎಂದು ಬಾಂಗ್ಲಾದೇಶಕ್ಕಾಗಿ ಎಎಫ್ಪಿ ಫ್ಯಾಕ್ಟ್ ಚೆಕರ್ ಕಾದರುದ್ದೀನ್ ಶಿಶಿರ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News