ಫ್ರಾನ್ಸ್ ನಲ್ಲಿ ಮುಂದುವರಿದ ಹಿಂಸಾಚಾರ: 667 ಮಂದಿ ಬಂಧನ; 250 ಪೊಲೀಸರಿಗೆ ಗಾಯ

Update: 2023-06-30 17:28 GMT

ಪ್ಯಾರಿಸ್: ಪೊಲೀಸರ ಗುಂಡೇಟಿಗೆ ಯುವಕ ಬಲಿಯಾಗಿರುವುದನ್ನು ಖಂಡಿಸಿ ಫ್ರಾನ್ಸ್ನಲ್ಲಿ ಬುಧವಾರದಿಂದ ಮುಂದುವರಿದಿರುವ ಹಿಂಸಾತ್ಮಕ ಪ್ರತಿಭಟನೆಯನ್ನು ನಿಯಂತ್ರಿಸಲು ಭದ್ರತಾ ಸಿಬಂದಿ ಹರಸಾಹಸ ಪಡುತ್ತಿದ್ದು ಇದುವರೆಗೆ 667ಕ್ಕೂ ಅಧಿಕ ಜನರನ್ನು ಬಂಧಿಸಿರುವುದಾಗಿ ವರದಿಯಾಗಿದೆ.

ಪ್ರತಿಭಟನಾಕಾರರು ಬ್ಯಾರಿಕೇಡ್ಗಳನ್ನು ನಿರ್ಮಿಸಿ ರಸ್ತೆ ತಡೆ ನಡೆಸಿದರಲ್ಲದೆ ಭದ್ರತಾ ಸಿಬಂದಿಯತ್ತ ಪಟಾಕಿಗಳನ್ನು ಎಸೆದರು. ಪ್ಯಾರಿಸ್ ನ ಹೊರವಲಯದಲ್ಲಿರುವ 12ನೇ ಜಿಲ್ಲೆಯಲ್ಲಿನ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದರು. ಈ ಘರ್ಷಣೆಯಲ್ಲಿ ಕನಿಷ್ಟ 250 ಭದ್ರತಾ ಸಿಬಂದಿ ಗಾಯಗೊಂಡಿದ್ದಾರೆ.

ಕ್ಲಮರ್ಟ್, ನೆಯುಲಿ-ಸುರ್-ಮ್ಯಾರ್ನ್ ಮುಂತಾದ ನಗರಗಳಲ್ಲಿ ಗುರುವಾರ ರಾತ್ರಿ ಮುನ್ನೆಚ್ಚರಿಕೆ ಕ್ರಮವಾಗಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಪ್ಯಾರಿಸ್ ವಲಯದಲ್ಲಿ ಬಸ್ಸು ಹಾಗೂ ಟ್ರಾಮ್ ಸೇವೆಗಳನ್ನು ರದ್ದುಗೊಳಿಸಲಾಗಿದೆ. ಫ್ರಾನ್ಸ್ನಲ್ಲಿ ಯುವಕನ ಹತ್ಯೆ ಖಂಡಿಸಿ ಬೆಲ್ಜಿಯಂನ ಬ್ರಸೆಲ್ಸ್ನಲ್ಲೂ ಪ್ರತಿಭಟನೆ ನಡೆದಿದೆ.

ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿ ಪ್ರಯೋಗಿಸಿದರೂ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಹಲವು ನಗರಗಳಲ್ಲಿ ಶಾಲೆಗಳು, ಅಂಗಡಿ ಮತ್ತು ಬ್ಯಾಂಕ್ಗಳಿಗೆ ಬೆಂಕಿಹಚ್ಚಲಾಗಿದೆ. 667ಕ್ಕೂ ಅಧಿಕ ಜನರನ್ನು ಬಂಧಿಸಿದ್ದು ಬಂಧಿತರಲ್ಲಿ ಹೆಚ್ಚಿನವರು 14ರಿಂದ 18 ವರ್ಷದವರು. ಹಿಂಸಾಚಾರವನ್ನು ನಿಯಂತ್ರಿಸಲು 40,000 ಭದ್ರತಾ ಸಿಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಆಂತರಿಕ ಸಚಿವ ಜೆರಾಲ್ಡ್ ದರ್ಮಾನಿಯನ್ ಹೇಳಿದ್ದಾರೆ. ಭಾರೀ ಸಂಖ್ಯೆಯಲ್ಲಿ ಭದ್ರತಾ ಸಿಬಂದಿ ನಿಯೋಜಿಸಲಾಗಿದ್ದರೂ ದೇಶದ ಹಲವೆಡೆ ಹಿಂಸಾಚಾರ ಮುಂದುವರಿದಿದೆ.

ಪ್ರತಿಭಟನಾಕಾರರು ಪುರಸಭೆಯ ಕಟ್ಟಡಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ಪೂರ್ವದ ಲಿಯಾನ್ ನಗರದಲ್ಲಿ ಟ್ರಾಮ್ (ರೈಲಿನ ರೀತಿಯ ಸಾರಿಗೆ ವ್ಯವಸ್ಥೆ) ಒಂದಕ್ಕೆ ಬೆಂಕಿ ಹಚ್ಚಲಾಗಿದೆ. ಕೇಂದ್ರ ಪ್ಯಾರಿಸ್ನ ರಿವೊಲಿ ರಸ್ತೆಯಲ್ಲಿನ ಕೆಲವು ಅಂಗಡಿಗಳನ್ನು ದೋಚಲಾಗಿದೆ.

ಮಂಗಳವಾರ ರಾತ್ರಿ ಪ್ಯಾರಿಸ್ ಹೊರವಲಯದ ನ್ಯಾಂಟೆರ್ ಎಂಬ ನಗರದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನೇಲ್ ಎಂ. ಎಂಬ ಯುವಕ ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿದ್ದು ಇದನ್ನು ಪ್ರಶ್ನಿಸಿದ ಪೊಲೀಸರ ಮೇಲೆಯೇ ಕಾರು ಚಲಾಯಿಸಲು ಮುಂದಾಗಿದ್ದಾನೆ. ಆಗ ಆತ್ಮರಕ್ಷಣೆಗೆ ಪೊಲೀಸರು ಹಾರಿಸಿದ ಗುಂಡೇಟಿನಿಂದ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿಕೆ ನೀಡಿದ್ದರು.

ಆದರೆ ಬುಧವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ವೀಡಿಯೊದಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಕಾರಿನ ಚಾಲಕನ ಹಣೆಗೆ ಪೊಲೀಸ್ ಸಿಬಂದಿ ಪಿಸ್ತೂಲನ್ನು ಗುರಿಹಿಡಿದು ಪ್ರಶ್ನಿಸುತ್ತಿರುವುದು, ಅವರಿಂದ ತಪ್ಪಿಸಿಕೊಂಡು ಚಾಲಕ ಕಾರು ಚಲಾಯಿಸಿದಾಗ ಗುಂಡು ಹಾರಿದ ಸದ್ದು, ಕಾರು ಸ್ವಲ್ಪ ಎದುರು ಚಲಿಸಿ ರಸ್ತೆಪಕ್ಕ ಉರುಳಿ ಬೀಳುವುದು, ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ದೃಶ್ಯವಿದೆ.

ವಾಯವ್ಯ ಫ್ರಾನ್ಸ್ ನ ನ್ಯಾಂಟೆರ್ ನಗರದಲ್ಲಿ ಹಲವು ವಾಹನಗಳು ಬೆಂಕಿಗೆ ಆಹುತಿಯಾಗಿದೆ. ನಗರಾಡಳಿತದ ಸಭಾಂಗಣ ಹಾಗೂ ಬಸ್ಡಿಪೋಗೆ ಬೆಂಕಿ ಹಚ್ಚಲಾಗಿದೆ.

ಮ್ಯಾಕ್ರನ್ ವಿದೇಶ ಪ್ರವಾಸ ಮೊಟಕು

ಫ್ರಾನ್ಸ್ನಲ್ಲಿ ಹಿಂಸಾಚಾರ ಮುಂದುವರಿದಿರುವ ಹಿನ್ನೆಲೆಯಲ್ಲಿ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ವಿದೇಶ ಪ್ರವಾಸ ಮೊಟಕುಗೊಳಿಸಿ ದೇಶಕ್ಕೆ ಹಿಂತಿರುಗಲಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ.

ಬೆಲ್ಜಿಯಂನ ಬ್ರಸೆಲ್ಸ್ನಲ್ಲಿ ನಡೆಯುತ್ತಿರುವ ಯುರೋಪಿಯನ್ ಯೂನಿಯನ್ ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಮ್ಯಾಕ್ರನ್ ಇದೀಗ ದೇಶಕ್ಕೆ ವಾಪಸಾಗಿ ಅಧಿಕಾರಿಗಳ ತುರ್ತು ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ವರದಿಯಾಗಿದೆ.

ಮಕ್ಕಳು ಮನೆಯೊಳಗೇ ಇರಬೇಕು: ಇಮ್ಯಾನುವೆಲ್ ಮ್ಯಾಕ್ರನ್

ಪ್ರತಿಭಟನೆಯ ನೆಪದಲ್ಲಿ ಹಿಂಸಾಚಾರ, ಲೂಟಿಯಲ್ಲಿ ತೊಡಗಿರುವವರಲ್ಲಿ ಹೆಚ್ಚಿನವರು ಯುವಜನರಾಗಿದ್ದಾರೆ. ಇದುವರೆಗೆ ಬಂಧಿಸಲ್ಪಟ್ಟಿರುವ ಸುಮಾರು 875 ಜನರಲ್ಲಿ ಮೂರನೇ ಒಂದರಷ್ಟು ಯುವಜನರಾಗಿದ್ದು ತಮ್ಮ ಮಕ್ಕಳು ಬೀದಿಗಿಳಿಯದಂತೆ ಹೆತ್ತವರು ಕ್ರಮ ಕೈಗೊಳ್ಳಬೇಕು ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಆಗ್ರಹಿಸಿದ್ದಾರೆ.

ಮಕ್ಕಳನ್ನು ಮನೆಯೊಳಗೇ ಇರಿಸಿಕೊಳ್ಳುವುದು ಹೆತ್ತವರ ಹೊಣೆಯಾಗಿದೆ. ಅದು ಸರಕಾರ ಕೆಲಸವಲ್ಲ ಎಂದು ಮ್ಯಾಕ್ರಮ್ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.

ಜತೆಗೆ, ಸಾಮಾಜಿಕ ಮಾಧ್ಯಮಗಳು ಹಿಂಸೆಯ ದಳ್ಳುರಿಗೆ ತುಪ್ಪ ಸುರಿಯವು ಕಾರ್ಯ ಮಾಡಬಾರದು. ಸಾಮಾಜಿಕ ಮಾಧ್ಯಮ ವೇದಿಕೆಗಳು ಹಿಂಸಾಚಾರ ಉಲ್ಬಣಕ್ಕೆ ಪೂರಕವಾಗಬಾರದು ಎಂದವರು ಆಗ್ರಹಿಸಿದ್ದಾರೆ.

ಬುಧವಾರದಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ 492 ಕಟ್ಟಡಗಳಿಗೆ ಹಾನಿಯಾಗಿದ್ದು 2000 ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News