ಕಲಬುರಗಿ | ಕಟ್ಟಿಗೆಯಿಂದ ಹೊಡೆದು ತಾಯಿಯ ಕೊಲೆ: ಆರೋಪಿ ಪುತ್ರನ ಬಂಧನ

Update: 2024-10-20 07:10 GMT

ಕಲಬುರಗಿ: ತವರು ಮನೆಗೆ ಹೋಗಿದ್ದಕ್ಕೆ ಸಿಟ್ಟಿಗೆದ್ದ ಮಗ ತಾಯಿಯನ್ನೇ ಕೊಲೆಗೈದಿರುವ ಘಟನೆ ಚಿತ್ತಾಪುರ ತಾಲೂಕಿನ ರಾಜೋಳ್ಳಾ ಗ್ರಾಮದಲ್ಲಿ ಶನಿವಾರ ನಡೆದಿದೆ.

ದೇವಕಮ್ಮ ದೊಡ್ಡಬೀರಪ್ಪ ಪೂಜಾರಿ (72) ಕೊಲೆಯಾದ ವೃದ್ಧೆ. ಅವರ ಪುತ್ರ ಜಟ್ಟೆಪ್ಪ ದೊಡ್ಡಬೀರಪ್ಪ ಪೂಜಾರಿ (34) ಕೊಲೆ ಆರೋಪಿ. ಆತನನ್ನು ಪೊಲೀಸರು ಬಂಧಿಸಿದ್ದಾರೆ.

ದೇವಕಮ್ಮ ನಾಲ್ಕೈದು ದಿನಗಳ ಹಿಂದೆ ತಾಲೂಕಿನ ಲಕ್ಷ್ಮೀಪುರವಾಡಿ ಗ್ರಾಮಕ್ಕೆ ಹೋಗಿ ಶನಿವಾರ ಬೆಳಗ್ಗೆ ರಾಜೋಳ್ಳಾ ಗ್ರಾಮಕ್ಕೆ ಬಂದಿದ್ದರು. ಊರಿಗೆ ಏಕೆ ಹೋಗಿದ್ದಿ, ನನ್ನ ಹೊಟ್ಟೆ ಬಟ್ಟೆ ಯಾರು ನೋಡಬೇಕು ಎಂದು ಜಟ್ಟೆಪ್ಪ ತಾಯಿಯೊಂದಿಗೆ ಜಗಳ ಮಾಡಿದ್ದಾನೆ. ಈ ವೇಳೆ ತಾಯಿಗೆ ಕಟ್ಟಿಗೆಯಿಂದ ಹೊಡೆದಿದ್ದಾನೆ. ಭಯದಿಂದ ದೇವಕಮ್ಮ ಮನೆಯಿಂದ ಹೊರಗೆ ಓಡಿದಾಗ ಬೆನ್ನಟ್ಟಿ ಹೊಡೆದು ಸಾಯಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಟ್ಟೆಪ್ಪಗೆ 12 ವರ್ಷಗಳ ಹಿಂದೆ ಹಂದರಕಿ ಗ್ರಾಮದ ಯುವತಿಯೊಂದಿಗೆ ವಿವಾಹವಾಗಿತ್ತು. ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ ಜಟ್ಟೆಪ್ಪನ ಕಿರುಕುಳ ತಾಳದೆ ಪತ್ನಿ ಮಕ್ಕಳನ್ನು ಕರೆದುಕೊಂಡು ತವರಿನಲ್ಲೇ ಉಳಿದಿದ್ದಾರೆ. ತಾಯಿ ಮತ್ತು ಮಗ ಮಾತ್ರ ಮನೆಯಲ್ಲಿ ವಾಸ ಮಾಡುತ್ತಿದ್ದರು. ತಾಯಿಯೇ ಮಗನಿಗೆ ಅಡುಗೆ ಮಾಡುವುದು, ಬಟ್ಟೆ ತೊಳೆಯುವುದು ಮಾಡುತ್ತಿದ್ದರು ಎಂದು ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ ಮಾಹಿತಿ ನೀಡಿದ್ದಾರೆ.

ಆರೋಪಿ ಜಟ್ಟೆಪ್ಪನನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News