ಸರ್ವಿಸ್ ರಸ್ತೆಗೆ ಬರದಿದ್ದ ಬಸ್‌ಗೆ 500 ಮೀ. ಹಿಮ್ಮುಖವಾಗಿ ಚಲಿಸುವ ಶಿಕ್ಷೆ!

Update: 2023-11-11 23:47 IST
ಸರ್ವಿಸ್ ರಸ್ತೆಗೆ ಬರದಿದ್ದ ಬಸ್‌ಗೆ 500 ಮೀ. ಹಿಮ್ಮುಖವಾಗಿ ಚಲಿಸುವ ಶಿಕ್ಷೆ!

Photo: Instagram/@sreeharickpoyyakkara video grab

  • whatsapp icon

ಕಾಸರಗೋಡು : ಸರ್ವಿಸ್ ರಸ್ತೆ ಬಿಟ್ಟು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾತ್ರ ಸಂಚರಿಸುತ್ತಿದ್ದ ಕರ್ನಾಟಕ ಸಾರಿಗೆ ಬಸ್‌ಗೆ, 500 ಮೀ. ಹಿಮ್ಮುಖವಾಗಿ ಚಲಿಸಿ ಸರ್ವಿಸ್ ರಸ್ತೆಯ ಮೂಲಕ ಸಂಚರಿಸುವಂತೆ ಮಾಡಿದ ಘಟನೆ ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಕುಂಜತ್ತೂರು ಬಳಿ ವರದಿಯಾಗಿದೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಂಗಳೂರಿನಿಂದ ಕೇರಳದ ಕಾಸರಗೋಡಿಗೆ ತೆರಳುತ್ತಿದ್ದ ಕರ್ನಾಟಕ ಸಾರಿಗೆ ಬಸ್, ಪ್ರತೀ ದಿನ ಸರ್ವಿಸ್ ರಸ್ತೆ ಬಿಟ್ಟು ರಾಷ್ಟ್ರೀಯ ಹೆದ್ದಾರಿ ಮುಖಾಂತರ ತೆರಳುತ್ತಿತ್ತು. ಇದು ಪ್ರಯಾಣಿಕರಿಗೆ ತಮಗೆ ಇಳಿಯ ಬೇಕಿದ್ದ ನಿಲ್ದಾಣಗಳಿಂದ ದೂರದಲ್ಲಿ ನಿಲ್ಲುತ್ತಿದ್ದರಿಂದ ತೊಂದರೆಯಾಗುತ್ತಿತ್ತು. ಸಾಕಷ್ಟು ಬಾರೀ ಸರ್ವಿಸ್ ರಸ್ತೆಯಲ್ಲೇ ಸಂಚರಿಸಿ ಎಂದು ಪ್ರಯಾಣಿಕರು ಮನವಿಮಾಡಿದ್ದರೂ ತಲೆಕೆಡಿಸಿಕೊಳ್ಳದ ಚಾಲಕ ರಾಷ್ಟ್ರೀಯ ಹೆದ್ದಾರಿಯ ಮೂಲಕವೇ ಸಂಚರಿಸುತ್ತಿದ್ದರು. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿತ್ತು.

Full View

ಈ ಬಗ್ಗೆ, ಹಸೈನಾರ್ ಎಂಬವರು ಬಸ್‌ ನಿರ್ವಾಹಕರ ಗಮನಕ್ಕೆ ತಂದಿದ್ದರು. ಆದರೆ ಅವರ ಮನವಿಗೂ ಕ್ಯಾರೇ ಎನ್ನದೇ, ಬಸ್ಸಿನ ಸಿಬ್ಬಂದಿ ಹಳೇ ಚಾಳಿ ಮುಂದುವರಿಸಿದ್ದರು. ಕೆಲ ದಿನಗಳ ಹಿಂದೆ ಹಸೈನಾರ್ ಅವರು ಸಿನಿಮೀಯ ರೀತಿಯಲ್ಲಿ ರಸ್ತೆಯಲ್ಲಿ ಕುರ್ಚಿ ಹಾಕಿ ಕುಳಿತು ಬಸ್ಸನ್ನು ತಡೆದಿದ್ದಾರೆ. ಸಿಬ್ಬಂದಿಯೊಂದಿಗೆ ಏನೂ ಮಾತನಾಡದೇ ತನ್ನಷ್ಟಕ್ಕೇ ಸುಮ್ಮನೇ ಕುಳಿತಿದ್ದಾರೆ. ಇದರಿಂದ ಮುಜುಗರಕ್ಕೊಳಗಾದ ಬಸ್ ಚಾಲಕ ಬೇರೆ ದಾರಿಯಿಲ್ಲದೇ 500 ಮೀ. ಹಿಮ್ಮುಖವಾಗಿ ಚಲಿಸಿ, ಸರ್ವಿಸ್ ರಸ್ತೆಗೆ ತೆರಳಿದ್ದಾರೆ. ಈ ಎಲ್ಲಾ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿದ್ದು, ವೀಡಿಯೋ ವೈರಲಾಗಿದೆ. ಹಸೈನಾರ್ ಅವರ ನಡೆಗೆ ಮೆಚ್ಚುಗೆ ಸಿಕ್ಕಿದೆ!

ಶ್ರೀಹರಿ ಸಿ ಕೆ ಪೊಯ್ಯಕರ ಎಂಬ ಇನ್ಸ್ಟಾಗ್ರಾಂ ಬಳಕೆದಾರರು ಈ ವೀಡಿಯೋ ಶೇರ್ ಮಾಡಿದ್ದಾರೆ. ಈಗಾಗಲೇ ಈ ವೀಡಿಯೋ 84 ಸಾವಿರ ಲೈಕ್ ಪಡೆದಿವೆ. 1077 ಕಮೆಂಟ್ ಬಂದಿದೆ. 43,900 ಬಾರಿ ಇದನ್ನು ಶೇರ್ ಮಾಡಲಾಗಿದೆ.

ವೈರಲ್ ವೀಡಿಯೊಗೆ ಹಲವು ಪ್ರತಿಕ್ರಿಯೆಗಳು ಬಂದಿವೆ. ಕೆಲವರಂತೂ ಸಿನಿಮಾ ನಟರಿಗೆ, ಸಿನಿಮಾಗಳಿಗೆ ಹೋಲಿಸಿದ್ದಾರೆ. ಶ್ರೀಹರಿ ಎನ್ನುವ ಬಳಕೆದಾರರು, ಮಾರಮಂಡ ಬಸ್ ನಿಲ್ದಾಣದಲ್ಲಿ ಕೇವಲ ಜನರಿಗೆ ಬಸ್ ಹತ್ತಲು ಮಾತ್ರವಲ್ಲದೆ ಇಳಿಯಲು ಕೂಡ ಇರುತ್ತದೆ. ಆರು ಲೈನ್ ಆಗಿರುವುದರಿಂದ ರಸ್ತೆ ಮಧ್ಯದಲ್ಲಿ ಬಸ್ ನಿಂದ ಇಳಿದರೆ ಕಿಲೋಮೀಟರ್ ಗಟ್ಟಲೆ ನಡೆದುಕೊಂಡು ವೃದ್ಧರು, ಮಕ್ಕಳು ಸರ್ವೀಸ್ ರಸ್ತೆಗೆ ಬರಬೇಕು ಎಂದಿದ್ದಾರೆ.

ಶಿಹಾದ್ ಎನ್ನುವವರು, ಡೆಡ್ಲಿ ಮಾಸ್ ಇದು....ಇವನು ರೀಲ್ ಹೀರೋ ಅಲ್ಲ, ನಿಜವಾದ ಹೀರೋ ಎಂದಿದ್ದಾರೆ. ಅಖಿಲ್ ಎಂಬವರು, ಈ ರೀತಿಯ ಮಾಸ್ ಪತ್ರಿಕ್ರಿಯೆ ಸಿನಿಮಾ ನಟರು ತೋರಿಸಿಲ್ಲ ಎಂದಿದ್ದಾರೆ. ರಾಬಿಹ್ ಎಂಬವರು ಈ ಘಟನೆಯನ್ನು ಪುಷ್ಪ 3 ರೀಲೋಡೆಡ್ ಎಂದು ಸಿನಿಮಾಗೆ ಹೋಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News