ಕಾರ್ಮಿಕನ ಬಂಧನಕ್ಕೆ ರೈತ ಸಂಘಟನೆಗಳ ಖಂಡನೆ; ಅರಣ್ಯ ಇಲಾಖೆ ವಿರುದ್ಧ ಸಿದ್ದಾಪುರದಲ್ಲಿ ಪ್ರತಿಭಟನೆ

ಸಿದ್ದಾಪುರ: ವಿದ್ಯುತ್ ತಗಲಿ ಕಾಡಾನೆ ಮೃತಪಟ್ಟ ಕಾರಣ ತೋಟದ ಕಾರ್ಮಿಕನನ್ನು ಅರಣ್ಯ ಇಲಾಖೆ ಬಂಧಿಸಿದ ಕ್ರಮವನ್ನು ಖಂಡಿಸಿ ರೈತ, ಕಾರ್ಮಿಕ ಸಂಘಟನೆಗಳು ಸಿದ್ದಾಪುರ ಪಟ್ಟಣದಲ್ಲಿ ಶುಕ್ರವಾರ ಸಂಜೆ ಮಾನವ ಸರಪಳಿ ರಚಿಸಿ ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿತು.
ರೈತ ಸಂಘದ ಜಿಲ್ಲಾ ಅಧ್ಯಕ್ಷ ಮನುಸೋಮಯ್ಯ ಮಾತನಾಡಿ, ವನ್ಯಜೀವಿಗಳ ಉಪಟಳ ತಡೆಗಟ್ಟಲು ವೈಜ್ಞಾನಿಕ ಚಿಂತನೆ ನಡೆಯಬೇಕಿದೆ. ಆನೆ ಸಂರಕ್ಷಣಾ ಪಡೆ, ಹುಲಿ ಸಂರಕ್ಷಣಾ ಪಡೆ, ಆರ್ಆರ್ಟಿ ಪಡೆಸೇರಿದಂತೆ ಇಲಾಖೆಯಲ್ಲಿ ಪ್ರತ್ಯೇಕ ಸಿಬ್ಬಂದಿ ಇದ್ದರೂ ಇವರು ಕಚೇರಿಗೆ ಸೀಮಿತವಾಗಿದ್ದು, ಇವುಗಳ ನಿಯಂತ್ರಣ ಕೆಲಸ ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕ ಬೆಳೆಗಾರನ ಮೇಲೆನ ಪ್ರಕರಣ ಹಿಂಪಡೆಯಲು ಒತ್ತಾಯಿಸಿ ಹಾಗೂ ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟಲು ಅರಣ್ಯ ಇಲಾಖೆ ವಿಫಲವಾಗಿರುವುದನ್ನು ಖಂಡಿಸಿ ಮಾ.18ರಂದು ಜಿಲ್ಲೆಯ ರೈತ ಮತ್ತು ಕಾರ್ಮಿಕ ಸಂಘಟನೆಯಲ್ಲಿ ಜಿಲ್ಲಾ ಅರಣ್ಯ ಭವನದ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಹೇಳಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ವೀರಾಜಪೇಟೆ ತಾಲೂಕು ಅಧ್ಯಕ್ಷ ಮಂಡೇಪಂಡ ಪ್ರವೀಣ್ ಬೋಪಯ್ಯ ಮಾತನಾಡಿ, ಕಾಡಾನೆ ತೋಟಕ್ಕೆ ಬಾರದಂತೆ ತಡೆಗಟ್ಟಬೇಕು ಹಾಗೂ ವನ್ಯಮೃಗಗಳು ಮೃತಪಟ್ಟರೆ ಆಧಾರ ರಹಿತ ಸುಳ್ಳು ಮೊಕದ್ದಮೆ ಸೃಷ್ಟಿಸಿ ರೈತ ಕಾರ್ಮಿಕರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಕ್ರಮವಾಗುತ್ತಿದೆ. ಕಾಡಾನೆ ವಿದ್ಯುತ್ ಸ್ಫರ್ಶದಿಂದ ಸಾವನ್ನಪಿದ ಘಟನೆಗೆ ಸಂಬಂಧಿಸಿದಂತೆ ತೋಟದ ಕಾರ್ಮಿಕನನ್ನು ಬಂಧಿಸಿ ಹಲ್ಲೆನಡೆಸಿರುವ ಅರಣ್ಯ ಇಲಾಖೆ ತಕ್ಷಣ ಆತನನ್ನು ಬಿಡುಗಡೆ ಮಾಡಿ ಆತನ ಮೇಲಿನ ಮೊಕದ್ದಮೆ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಅಮ್ಮತ್ತಿ ಹೋಬಳಿ ಅಧ್ಯಕ್ಷ ಬಿ.ಸಿ.ಬೋಪಣ್ಣ, ಕಾರ್ಮಿಕ ಮುಖಂಡ ಭರತ್, ಎಚ್.ಬಿ.ರಮೇಶ್, ವಿಕ್ರಮ್ ಬಿದ್ದಪ್ಪ ಸಜೀವನ್, ಲಿಖಿತ್ ಸೋಮಣ್ಣ, ಸಂಚಾಲಕರಾದ ಸಿ.ಬಿ.ಪೂಣಚ್ಚ, ಹರೀಶ್ ಸೋಮಯ್ಯ ಹಾಗೂ ಕಾರ್ಮಿಕರು, ಬೆಳೆಗಾರರು, ಮುಂತಾದವರು ಹಾಜರಿದ್ದರು.