ಮುಡಾ ಪ್ರಕರಣ | ಕೋರ್ಟ್ ತೀರ್ಮಾನದ ಮೇಲೆ ಸಿಎಂ ಭವಿಷ್ಯ ನಿರ್ಧಾರವಾಗಲಿದೆ : ಬಸವರಾಜ ಬೊಮ್ಮಾಯಿ

Update: 2024-09-01 11:13 GMT

ಮಂಡ್ಯ : ಮುಡಾ ಹಗರಣದ ವಿಚಾರ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಕೋರ್ಟ್ ಆದೇಶದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದುವರೆಯುತ್ತಾರೆಯೋ ಇಲ್ಲವೋ ಎನ್ನುವುದು ತೀರ್ಮಾನ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿ ಅವರು, "ಒಂದು ಪ್ರಕರಣವನ್ನು ಪ್ರಾಸಿಕ್ಯೂಷನ್‌ಗೆ ಕೊಟ್ಟಿರುವುದು ಇದೇ ಮೊದಲ ಅಲ್ಲ. ಹಲವಾರು ರಾಜ್ಯಗಳಲ್ಲಿ ಹಲವಾರು ಪ್ರಕರಣಗಳು ಆಗಿವೆ. ರಾಜ್ಯದಲ್ಲಿಯೂ ಆಗಿದ್ದು, ಇದೊಂದು ಸ್ಥಾಪಿತ ವ್ಯವಸ್ಥೆಯಾಗಿದೆ. ಹಲವಾರು ಸುಪ್ರೀಂ ಕೋರ್ಟ್ ತೀರ್ಪುಗಳು ಇವೆ. 2018 ರಲ್ಲಿ ಒಂದು ತಿದ್ದುಪಡಿ ಆಗಿದೆ. ಸಂವಿಧಾನದ ಕಲಂ 17/2 ತಿದ್ದುಪಡಿ ಆದ ನಂತರ ಏನು ಬದಲಾವಣೆ ಆಗಿದೆ ಎನ್ನುವುದನ್ನು ಗಮನಿಸಬೇಕು" ಎಂದರು.

ʼಕಾಂಗ್ರೆಸ್ ಮಿತ್ರರು ಯಾಕೆ ಅಷ್ಟೊಂದು ಆತಂಕಕ್ಕೆ ಒಳಗಾಗಿದ್ದಾರೊ ಗೊತ್ತಿಲ್ಲ. ರಾಜ್ಯಪಾಲರು ಒಂದು ತನಿಖೆ ನಡೆಸುವಂತೆ ಆದೇಶ ಮಾಡಿದ್ದಾರೆ. ಯಡಿಯೂರಪ್ಪ ಅವರ ಪ್ರಕರಣದಲ್ಲಿ ಹಾಗೆ ಆಗಿರಲಿಲ್ಲ. ತನಿಖೆ ಅಂತ ಇರಲಿಲ್ಲ. ಪ್ರಾಸಿಕ್ಯೂಷನ್ ಮಾಡಿ ಅಂಥ ಹೇಳಿದ್ದರು. ಎಫ್‌ಐಆರ್ ಆಗಿ ತನಿಖೆಯಾಗಿ, ಚಾರ್ಜ್‌ ಶೀಟ್ ಆದ ನಂತರ ಪ್ರಾಸಿಕ್ಯೂಷನ್ ಮಾಡಲಾಗುತ್ತದೆ. ಅದು ಯಾವುದನ್ನೂ ಮಾಡದೇ ನೇರವಾಗಿ ಸೆಷನ್ಸ್ ಕೋರ್ಟ್‌ಗೆ ಸಮನ್ಸ್ ಮಾಡುವ ಅಧಿಕಾರವನ್ನು ನೀಡಲಾಗಿತ್ತು. ಅವತ್ತಿನ ರಾಜ್ಯಪಾಲರ ಆದೇಶದ ಬಗ್ಗೆ ಹಲವಾರು ಕೋರ್ಟ್‌ಗಳಲ್ಲಿ ಟೀಕೆ ಟಿಪ್ಪಣಿ ಆಗಿ, ಆದೇಶಗಳೂ ಆಗಿವೆ. ಇವತ್ತು ರಾಜ್ಯಪಾಲರು ಕೇವಲ ತನಿಖೆ ನಡೆಸಲು ಹೇಳಿದ್ದಾರೆ. ಕೋರ್ಟ್‌ನಲ್ಲಿ ನಡೆಯುತ್ತಿದೆ. ಅಂತಿಮ ಘಟಕ್ಕೆ ಬಂದಿದೆ. ಏನಾಗುತ್ತದೆಯೋ ಕಾದು ನೋಡೋಣʼ ಎಂದರು.

ಕೊವಿಡ್ ಹಗರಣ ಆರೋಪ ; ತನಿಖೆ ನಡೆಸಲು ಯಾವುದೇ ಅಡ್ಡಿಯಿಲ್ಲ :

ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಕೊವಿಡ್ ಹಗರಣದ ಕುರಿತು ಪ್ರತಿಕ್ರಿಯಿಸಿದ ಅವರು,"ಈ ಸರ್ಕಾರ ಕೊವಿಡ್ ವಿಚಾರದಲ್ಲಿ ತನಿಖೆ ನಡೆಸಲು ಆಯೋಗ ರಚನೆ ಮಾಡಿದ್ದರು. ಆ ಆಯೋಗ ಸಿಎಂಗೆ ವರದಿ ಸಲ್ಲಿಸಿದೆ. ಅದರಲ್ಲಿ ಏನಿದೆಯೋ ಗೊತ್ತಿಲ್ಲ. ಎಲ್ಲವೂ ಹೊರಗೆ ಬರಲಿ ಅದಕ್ಕೆ ಉತ್ತರ ಕೊಡುತ್ತೇವೆ. ನಮ್ಮ ಕಾಲದ ಹಗರಣದ ಕುರಿತು ತನಿಖೆ ನಡೆಸಲು ಯಾವುದೇ ಅಡ್ಡಿಯಿಲ್ಲ. ಯಾರು ರಾಜಕೀಯವಾಗಿ ಆರೋಪ ಮಾಡಿ ಮಸಿ ಬಳಿಯುವ ಕೆಲಸ ಮಾಡಿದ್ದಾರೆ ಅವರಿಗೂ ಶಿಕ್ಷೆಯಾಗಲಿ" ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News