ಮಂಡ್ಯ | ಕಾರು -ಗೂಡ್ಸ್ ಟೆಂಪೋ ಢಿಕ್ಕಿ: ಹಲವರಿಗೆ ಗಾಯ

Update: 2024-09-19 09:05 GMT

ಮಂಡ್ಯ: ಕಾರು ಮತ್ತು ಗೂಡ್ಸ್ ಟೆಂಪೋ ನಡುವೆ ಮುಖಾಮುಖಿ ಢಿಕ್ಕಿಯಾಗಿ ಹಲವರು ಗಾಯಗೊಂಡಿರುವ ಘಟನೆ ಮದ್ದೂರು ತಾಲೂಕು ಮಣಿಗೆರೆ ಬಳಿ ಗುರುವಾರ ಬೆಳಗ್ಗೆ ನಡೆದಿದೆ.

 ಟೆಂಪೋ ಚಾಲಕ ದುರ್ಗೇಶ್ (21), ಕಾರು ಚಾಲಕ ರಾಜೇಶ್ (28), ಕಾರಿನಲ್ಲಿದ್ದ,ಅಭಿ, ಚಂದನ್, ಮೋಹನ, ಬಾಲ, ಟೆಂಪೋದಲ್ಲಿದ್ದ ಕಾಂತರಾಜೇ ಅರಸ್, ವರಲಕ್ಷ್ಮೀ, ಶೆಟ್ಟಮ್ಮಣ್ಣಿ, ನಾಗರಾಜೇ ಅರಸ್, ಕಾಂಚನ ಅವರಿಗೆ ಗಂಭೀರ ಗಾಯಗಳಾಗಿವೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಾಳಾಗಿದ್ದು, ಯಾವುದೇ ಸಾವು ಸಂಭವಿಸಿಲ್ಲ.

ಮದ್ದೂರು ತಾಲೂಕಿನ ಮಡೇನಹಳ್ಳಿ ಗ್ರಾಮದ ದುರ್ಗೇಶ್ ತನ್ನ ಗೂಡ್ಸ್ ಟೆಂಪೋದಲ್ಲಿ ತೊರೆ ಬೊಮ್ಮನಹಳ್ಳಿ ಗ್ರಾಮದಿಂದ 25 ಮಂದಿಯನ್ನು ಮೂಗನಕೊಪ್ಪಲು ಗ್ರಾಮಕ್ಕೆ ಸಾವಿನ ಕಾರ್ಯಕ್ಕೆ ಕರೆದೊಯ್ಯುತ್ತಿದ್ದು, ಮಲೈ ಮಹದೇಶ್ವರ ಬೆಟ್ಟಕ್ಕೆ ಹೋಗಿ ವಾಪಸ್ಸಾಗುತ್ತಿದ್ದ ಬೆಂಗಳೂರು ಬನಶಂಕರಿ ನಿವಾಸಿಗಳಿದ್ದ ಕಾರಿಗೆ ಮಣಿಗೆರೆ ಬಳಿ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಗೂಡ್ಸ್‌ ಟೆಂಪೋ ರಸ್ತೆ ಮಧ್ಯ ಭಾಗದಲ್ಲಿ ಮಗುಚಿ ಬಿದಿದ್ದು, ಟೆಂಪೋದೊಳಗೆ ಕುಳಿತಿದ್ದವರಿಗೆ ಗಾಯಗಳಾಗಿದೆ. ಕಾರು ಸಹ ಜಖಂಗೊಂಡಿದ್ದು, ಕಾರಿನಲ್ಲಿದ್ದ 5 ಮಂದಿಗೂ ಗಂಭೀರ ಸ್ವರೂಪದ ಪೆಟ್ಟಾಗಿದೆ. ತಕ್ಷಣವೇ ಸ್ಥಳಕ್ಕಾಗಮಿಸಿದ ಕೆ.ಎಂ.ದೊಡ್ಡಿ ಪೊಲೀಸ್‌ ಠಾಣೆ ಪೊಲೀಸರು ಹಾಗೂ ಸಿಬ್ಬಂದಿ ಗಾಯಳುಗಳನ್ನು ಆಂಬುಲೆನ್ಸ್‌ ಮೂಲಕ ಕೆ.ಎಂ.ದೊಡ್ಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ಕಳುಹಿಸಿದರು ಎಂದು ತಿಳಿದು ಬಂದಿದೆ.

ಅಪಘಾತ ನಡೆದ ಸ್ಥಳ ಮತ್ತು ಮಿಮ್ಸ್ ಆಸ್ಪತ್ರೆಗೆ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ತಹಸೀಲ್ದಾ‌ರ್ ಡಾ.ಸ್ಮಿತಾರಾಮ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂಬಂಧ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News