ಮಂಡ್ಯ: ಕಾರು ಢಿಕ್ಕಿಯಾಗಿ ಅಜ್ಜಿ, ಮೊಮ್ಮಗು ಮೃತ್ಯು

Update: 2024-09-16 14:13 GMT

ಮಂಡ್ಯ: ಗಣಪತಿ ಪ್ರಸಾದ ಸ್ವೀಕರಿಸಿ ಮನೆಗೆ ಹಿಂತಿರುಗುತಿದ್ದ ಅಜ್ಜಿ ಮತ್ತು ಒಂದು ವರ್ಷದ ಮೊಮ್ಮಗು ಕಾರು ಢಿಕ್ಕಿಯಿಂದ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮದ್ದೂರು ತಾಲೂಕಿನ ಹುಣ್ಣನದೊಡ್ಡಿ ಬಳಿ ರವಿವಾರ ತಡರಾತ್ರಿ ನಡೆದಿದೆ.

ಹುಣ್ಣನದೊಡ್ಡಿಯ ನಿವಾಸಿ ಸಾಕಮ್ಮ(65), ಒಂದು ವರ್ಷದ ಮಗು ಧನಿಕ ಎಸ್.ಗೌಡ ಸಾವನ್ನಪ್ಪಿದ್ದು, ಗಾಯಗೊಂಡಿರುವ ಮೂರು ವರ್ಷದ ನಂದನ್.ಎಸ್‍ಗೌಡನನ್ನು ಕೆ.ಎಂ.ದೊಡ್ಡಿ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶನನ್ನು ಸಂಜೆ ವಿಸರ್ಜಿಸುವ ವೇಳೆ ಭಕ್ತರಿಗೆ ಪ್ರಸಾದ ವಿನಿಯೋಗವಿತ್ತು. ಅಂಜಲಿ-ಶಂಕರ್ ದಂಪತಿ ಮಕ್ಕಳಾದ ಧನಿಕ ಮತ್ತು ನಂದನ್ ಅವರನ್ನು ಅಜ್ಜಿ ತನ್ನ ಜತೆ ಸ್ವೀಕರಿಸಲು ತೆರಳಿದ್ದರು ಎನ್ನಲಾಗಿದೆ.

ಅಜ್ಜಿ ಸಾಕಮ್ಮ, ಒಂದು ವರ್ಷದ ಮೊಮ್ಮಗುವನ್ನು ಎತ್ತಿಕೊಂಡು ಮತ್ತೊಂದು ಮಗುವನ್ನು ನಡೆಸಿಕೊಂಡು ಪ್ರಸಾದ ಸ್ವೀಕರಿಸಿ ರಸ್ತೆ ದಾಟುತ್ತಿದ್ದಾಗ ಮದ್ದೂರು-ಮಳವಳ್ಳಿ ಹೆದ್ದಾರಿಯಲ್ಲಿ ವೇಗವಾಗಿ ಬಂದ ಕಾರು ಢಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ.

ಅಪಘಾತ ಮಾಡಿದ ಚಾಲಕ ಕಾರು ಸಮೇತ ಪರಾರಿಯಾಗಿದ್ದು, ಆತನ ಪತ್ತೆಗೆ ಕೆ.ಎಂ.ದೊಡ್ಡಿ ಪೊಲೀಸರು ಕ್ರಮವಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News