ಸಿದ್ದರಾಮಯ್ಯ ಅವರ 'ಕರ್ನಾಟಕ ಮಾದರಿ' ಬಜೆಟ್

Update: 2023-07-13 16:59 GMT

Photo: PTI

- ರಾಜಾರಾಂ ತಲ್ಲೂರು

ಮುಖ್ಯಮಂತ್ರಿ ಸಿದ್ಧರಾಮಯ್ಯ ಶುಕ್ರವಾರ ತಮ್ಮ ದಾಖಲೆ 14ನೇ ಬಜೆಟ್ ಅನ್ನು ಮಂಡಿಸಿದ್ದಾರೆ. ಈ ಬಜೆಟ್ ನ ಹೈಲೈಟ್ ಅಂದ್ರೆ, ಅವರು ಬಜೆಟ್ ಭಾಷಣದಲ್ಲಿ ತಮ್ಮ ಸುದೀರ್ಘ ಪೀಠಿಕೆಯನ್ನು ಬಳಸಿಕೊಂಡು, ರಾಜ್ಯದ ಆರ್ಥಿಕ ಸ್ಥಿತಿಯ ಮ್ಯಾಕ್ರೋ ಅಂಶಗಳನ್ನು ಬಿಚ್ಚಿಟ್ಟಿದ್ದಾರೆ. ಕಳೆದ ಕೆಲವು ಬಜೆಟ್‌ಗಳಲ್ಲಿ ಭರಪೂರ “ವರದಾನ” ಘೋಷಣೆಗಳನ್ನೇ ಬಜೆಟ್ ಹೈಲೈಟ್‌ ಎಂದು ಗುರುತಿಸುತ್ತಿದ್ದವರಿಗೆ ಈ ಬಾರಿಯದ್ದು ಹೊಸ ಅನುಭವ.

ಆರ್ಥಿಕತೆಯ ಬಗ್ಗೆ ತಮಗಿರುವ ಹಿಡಿತ ಎಷ್ಟು ಸಮಗ್ರ ಸ್ವರೂಪದ್ದು ಎಂಬುದನ್ನು ಬಿಚ್ಚಿಡಲು ಸಿದ್ಧರಾಮಯ್ಯ ಅವರು ತಮ್ಮ ಈ ಬಜೆಟ್ ಪೀಠಿಕೆಯನ್ನು ಮೀಸಲಿಟ್ಟರು. ಇದು ಅಲ್ಲಿಗೇ ಸೀಮಿತವಾಗಲಿಲ್ಲ. ಪ್ರತಿಯೊಂದು ವಿಭಾಗಕ್ಕೆ ತನ್ನ ಬಜೆಟ್‌ನಲ್ಲಿ ಹೊಸ ಪ್ರಕಟಣೆಗಳನ್ನು ಮಾಡುವ ಮುನ್ನ, 2018ರಲ್ಲಿ ಅಂದ್ರೆ ಅವರ ಹಿಂದಿನ ಅವಧಿಯ ಅಂತ್ಯಕ್ಕೆ , ಆ ವಿಭಾಗದ ಪರಿಸ್ಥಿತಿ ಹೇಗಿತ್ತು ಮತ್ತು ಈಗ ಅದು ಮಿಸ್ ಮ್ಯಾನೇಜ್ಮೆಂಟ್ ಕಾರಣಕ್ಕೆ, ಆಡಳಿತ ವೈಫಲ್ಯದ ಕಾರಣಕ್ಕೆ ಈಗ 2023ರ ಹೊತ್ತಿಗೆ ಎಷ್ಟು ಹದಗೆಟ್ಟಿದೆ ಎಂಬುದನ್ನು ಅಂಕಿ-ಸಂಖ್ಯೆಗಳ ಸಹಿತ ಬಿಚ್ಚಿಡುತ್ತಾ ಬಂದಿದ್ದಾರೆ ಮುಖ್ಯಮಂತ್ರಿಗಳು.

ಜೊತೆಗೆ ಈ ವರ್ಷಕ್ಕೆ ಹೊಸ ಯೋಜನೆಗಳನ್ನು ಪ್ರಕಟಿಸುವಾಗ ಬಹಳ ಮುನ್ನೆಚ್ಚರಿಕೆ ವಹಿಸಿರುವುದು ಪ್ರತೀ ಹಂತದಲ್ಲಿ ಎದ್ದು ಕಾಣಿಸುತ್ತಿತ್ತು. ತಮ್ಮ ಸರ್ಕಾರದ ಗ್ಯಾರಂಟಿಗಳು ಕೇವಲ ಚುನಾವಣಾ ಗಿಮಿಕ್‌ಗಳಾಗಿರಲಿಲ್ಲ, ಅವು ಬಿಟ್ಟಿ ಭಾಗ್ಯಗಳಲ್ಲ ಎಂಬುದನ್ನು ಸಾಬೀತುಪಡಿಸಲು ಪೀಠಿಕೆಯ ಬಹುಪಾಲು ಭಾಗವನ್ನು ಸಿಎಂ ಸಿದ್ದರಾಮಯ್ಯ ವ್ಯಯಿಸಿದ್ದಾರೆ.

ಸಂಪತ್ತಿನ ಅಸಮಾನ ಹಂಚಿಕೆ ಸೃಷ್ಟಿಸುವ ಬೃಹತ್ ಕಂದರವು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ ಎಂದು ಹೇಳುವ ಮೂಲಕ ರಾಜ್ಯದ ಸುಮಾರು 1.3 ಕೋಟಿ ಕುಟುಂಬಗಳಿಗೆ, ಪ್ರತಿಯೊಂದು ಕುಟುಂಬಕ್ಕೆ ವಾರ್ಷಿಕ 48,000 ರೂ. ನಿಂದ 60,000 ರೂ. ಗಳ ಸಾರ್ವತ್ರಿಕ ಮೂಲ ಆದಾಯ (UBI) ಪರಿಕಲ್ಪನೆಯನ್ನು ಮುಂದಿಟ್ಟು ಅಭಿವೃದ್ಧಿಯ “ಕರ್ನಾಟಕ ಮಾದರಿ”ಯನ್ನು ಅನಾವರಣಗೊಳಿಸಿದ್ದು ಕೂಡ ಈ ಬಜೆಟ್‌ನ ಹೈಲೈಟ್.

ಹಿಂದಿನ ಸರ್ಕಾರಗಳು ಮಂಜೂರು ಮಾಡಿ, ಪೂರ್ಣಗೊಳಿಸಲು ಬಾಕಿ ಇರುವ ಕಾಮಗಾರಿಗಳ ಪ್ರಮಾಣ 2 ಲಕ್ಷದ 55 ಸಾವಿರದ 102 ಕೋಟಿ ರೂ.ಗಳಷ್ಟಿದೆ. ಇದು ಬಹುತೇಕ ರಾಜ್ಯದ ಬಜೆಟ್ ಗಾತ್ರದ್ದೇ ಪ್ರಮಾಣದ್ದಾಗಿರುವುದನ್ನು ಬಹಿರಂಗಪಡಿಸುವ ಮೂಲಕ, ಹಿಂದಿನ ಸರ್ಕಾರಗಳ “ವರದಾನ” ಘೋಷಣೆಗಳ ಪೊಳ್ಳುತನವನ್ನು ಅವರು ಬಹಿರಂಗಪಡಿಸಿದ್ದಾರೆ.

ಈ ಪ್ರಮಾಣದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಇನ್ನು ಆರು ವರ್ಷಗಳೇ ಬೇಕೆಂಬ ವಾಸ್ತವವನ್ನು ಅವರು ಬಜೆಟ್ ಭಾಷಣದ ಮೂಲಕ ನಾಡಿನ ಮುಂದೆ ಬಿಚ್ಚಿಟ್ಟಿದ್ದಾರೆ. ಹಾಗಾಗಿ ಈ ಬಜೆಟ್, ರಾಜ್ಯದ ಆರ್ಥಿಕ ಸ್ಥಿತಿಗೆ ಒಂದು ಶ್ವೇತಪತ್ರ ಕೂಡ ಹೌದು.

GST ವ್ಯವಸ್ಥೆ ಬಂದ ಬಳಿಕ, ತೆರಿಗೆ ಸಂಗ್ರಹ ವ್ಯವಸ್ಥೆಯಲ್ಲಿ ಕೇಂದ್ರ-ರಾಜ್ಯ ಸರ್ಕಾರಗಳ ನಡುವೆ ಉಂಟಾಗಿರುವ ಅಸಮತೋಲನವನ್ನೂ ಅವರು ಪಾರದರ್ಶಕವಾಗಿ ಬಿಚ್ಚಿಟ್ಟಿದ್ದಾರೆ. ಇಲ್ಲಿಯ ತನಕ ಭಾರತ ಸರ್ಕಾರವನ್ನು ನಡೆಸುತ್ತಿರುವ NDA ಸರ್ಕಾರಕ್ಕೆ, ಅವರದೇ ರಾಜ್ಯ ಸರ್ಕಾರಗಳಿದ್ದಲ್ಲಿ ಯಾರೂ ಬಾಯಿ ಬಿಟ್ಟು ಮಾತನಾಡುತ್ತಿರಲಿಲ್ಲವಾದರೆ ವಿರೋಧ ಪಕ್ಷಗಳ ಅಧಿಕಾರ ಇರುವಲ್ಲೂ ತಮಿಳುನಾಡು ಬಿಟ್ಟರೆ ಬೇರೆ ರಾಜ್ಯಗಳು ಅಂಕಿ-ಸಂಖ್ಯೆ ಸಹಿತ ಸನ್ನಿವೇಶವನ್ನು ಬಿಚ್ಚಿಟ್ಟದ್ದು ಕಡಿಮೆ.

ಈಗ ಸಿದ್ಧರಾಮಯ್ಯ ಅದನ್ನು ಇಂಚಿಂಚಾಗಿ ಬಜೆಟ್ ಪೀಠಿಕೆಯಲ್ಲಿ ಬಿಚ್ಚಿಡುವ ಮೂಲಕ ತಾನು ಏಕೆ ರಾಜ್ಯ ಕಂಡ ಅತ್ಯುತ್ತಮ ಹಣಕಾಸು ಸಚಿವರಲ್ಲಿ ಒಬ್ಬರೆಂದು ಮತ್ತೊಮ್ಮೆ ಸಾಬೀತುಪಡಿಸಿದರು. ಇದೇ ಫೆಬ್ರವರಿಯಲ್ಲಿ, ಚುನಾವಣೆ ಎದುರಿರುವುದು ಗೊತ್ತಿರುವಂತೆಯೇ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದ್ದ ಬಸವರಾಜ ಬೊಮ್ಮಾಯಿ ಅವರು ಹೆಚ್ಚಿನಂಶ ಅತಿಯಾದ ಆತ್ಮವಿಶ್ವಾಸ ತೋರಿಸಿದ್ದರು. ಅವರು ಹೆಚ್ಚೆಂದರೆ ಮೂರು ತಿಂಗಳಿಗೆ ಲೇಖಾನುದಾನ ಪಡೆದು, ಹೊಸ ಸರ್ಕಾರಕ್ಕೆ ಬಜೆಟ್ ಮಂಡನೆಯನ್ನು ವಹಿಸಿಕೊಡಬೇಕಾಗಿತ್ತು. ಅದರ ಬದಲು ಪೂರ್ಣಪ್ರಮಾಣದ ಬಜೆಟ್ ಮಂಡನೆ ಆಗಿ, ಅದರ ಚರ್ಚೆ-ಅಂಗೀಕಾರವೂ ನಡೆದಿತ್ತು.

ಈಗ ಹೊಸ ಸರ್ಕಾರ ತನ್ನ ನಿಲವುಗಳಿಗೆ ತಕ್ಕಂತಹ ಹೊಸ ಬಜೆಟ್ ಮಂಡಿಸಿದೆ. ವರ್ಷಕ್ಕೆ 55 ಸಾವಿರ ಕೋಟಿ ರೂ.ಗಳಷ್ಟು ಹಣ ಗ್ಯಾರಂಟಿಗಳ ಅನುಷ್ಠಾನಕ್ಕೆ ಬೇಕಾಗಿದ್ದ ಹಿನ್ನೆಲೆಯಲ್ಲಿ ಈ ಬಜೆಟ್ ಕುತೂಹಲ ಕೆರಳಿಸಿತ್ತು. ರಾಜ್ಯದ ಆಯ-ವ್ಯಯ ಮತ್ತು ಸಬ್ಸಿಡಿ ಪ್ರಮಾಣಗಳನ್ನು ಗಮನಿಸಿದರೆ ಇದು ಅಂತಹ ದೊಡ್ಡ ಸವಾಲೇನೂ ಆಗಿರಲಿಲ್ಲ. ಅದನ್ನು ಸಿದ್ಧರಾಮಯ್ಯ ಈ ಬಜೆಟ್ ಮೂಲಕ ಸಾಬೀತು ಮಾಡಿದ್ದಾರೆ.

ಮಾಧ್ಯಮಗಳು, ಪ್ರತಿಪಕ್ಷಗಳ ಸತತ ಗದ್ದಲದಿಂದಾಗಿಯೇ ಈ “ಗ್ಯಾರಂಟಿಗೆ ಹಣ ಹೊಂದಿಕೆ” ದೊಡ್ಡ ಸವಾಲೆಂದು ಬಿಂಬಿತವಾಗಿತ್ತು. ಬೊಮ್ಮಾಯಿ ಅವರು ಫೆಬ್ರವರಿಯಲ್ಲಿ 2 ಲಕ್ಷ 86 ಸಾವಿರ 740. 91 ಲಕ್ಷ ರೂ.ಗಳ ವೆಚ್ಚ ಮತ್ತು 2 ಲಕ್ಷ 26 ಸಾವಿರದ 159.81 ರೂ.ಗಳ ಜಮೆ ಇರುವ, 402.43 ಕೋಟಿ ಮಿಗತೆಯ ಬಜೆಟ್ ಮಂಡಿಸಿದ್ದರು.

ಈಗ ಸಿದ್ಧರಾಮಯ್ಯ 3ಲಕ್ಷ 5 ಸಾವಿರದ 306.03 ಲಕ್ಷ ರೂ.ಗಳ ವೆಚ್ಚ ಮತ್ತು 2 ಲಕ್ಷ 38 ಸಾವಿರದ 659.81 ರೂ.ಗಳ ಜಮೆ ಇರುವ, 12,522.69 ಕೋಟಿ ರೂ. ಆದಾಯ ಕೊರತೆಯ ಬಜೆಟ್ ಮಂಡಿಸಿದ್ದಾರೆ. ಅಂದರೆ, ಸ್ಥೂಲವಾಗಿ ಸುಮಾರು 13,000 ಕೋಟಿ ರೂ.ಗಳಷ್ಟು ಆದಾಯ ಕೊರತೆ ಕಾಣಸಿಕೊಂಡಿದೆ.

ಇದು ರಾಜ್ಯದ ತಲಾ ಆದಾಯದ ಅಂದ್ರೆ GSDP ಯ 0.49% ಆಗಿದ್ದು, ಕರ್ನಾಟಕ ಹಣಕಾಸು ಜವಾಬ್ದಾರಿ ಕಾಯಿದೆಯ ಮಿತಿಗಳ ಒಳಗೇ ಇದೆ. ಇದರಲ್ಲಿ ಸಾಲ ಮತ್ತಿತರ ಬಂಡವಾಳ ಜಮೆಯ ಪಾಲು 86 ಸಾವಿರದ 45.50 ಕೋಟಿ ರೂ. ಬೊಮ್ಮಾಯಿಯವರ ಬಜೆಟ್‌ನಲ್ಲಿ ಅದು ತೀರಾ ಕಡಿಮೆಯೇನೂ ಇರಲಿಲ್ಲ. ಅದು ರೂ. 77 ಸಾವಿರದ 977.50 ಕೋಟಿಯಷ್ಟಿತ್ತು.

ಆ ಮಟ್ಟಿಗೆ ಗ್ಯಾರಂಟಿಗಳ ಜವಾಬ್ದಾರಿಯ ಹೊರತಾಗಿಯೂ ಸಿದ್ಧರಾಮಯ್ಯನವರು ರಾಜ್ಯಕ್ಕೆ ಎಲ್ಲರೂ ನಿರೀಕ್ಷಿಸಿದಷ್ಟು ದೊಡ್ಡ ಹೊರೆಯನ್ನೇನೂ ಹೊರಿಸಿಲ್ಲ. ರಾಜ್ಯದ ಒಟ್ಟು ಸಾಲ ಬೊಮ್ಮಾಯಿ ಬಜೆಟ್ ಅನ್ವಯ 4 ಲಕ್ಷದ 80 ಸಾವಿರದ 759.80 ಕೋಟಿ ರೂ. ಆದರೆ ಸಿದ್ಧರಾಮಯ್ಯ ಬಜೆಟ್ ಅನ್ವಯ ಅದು 4 ಲಕ್ಷದ 88 ಸಾವಿರದ 827.80 ಕೋಟಿ ರೂ. ಸರ್ಕಾರ ಇಲಾಖಾವಾರು ಹಂಚಿಕೆಗಳಲ್ಲೂ ಹಿಂದಿನ ಬೊಮ್ಮಾಯಿ ಅವರ ಸರ್ಕಾರದ ಹಂಚಿಕೆಗಳಿಗೆ ಹೋಲಿಸಿದರೆ ದೊಡ್ಡ ಏರುಪೇರುಗಳನ್ನು ಮಾಡಿಲ್ಲ

ಯಾಕೆಂದರೆ, ಬಜೆಟ್ ಮೇಲಿನ ಚರ್ಚೆಯ ವೇಳೆ ದೊಡ್ಡ ಆಕ್ಷೇಪಗಳು ಅಲ್ಲಿಂದಲೇ ಹೊರಡಬಹುದು ಎಂಬುದನ್ನು ಮುಖ್ಯಮಂತ್ರಿಗಳು ತಿಳಿಯದವರೇನಲ್ಲ. ಎಲ್ಲ ಹಂಚಿಕೆಗಳನ್ನು ಬಹುತೇಕ ಹಳೆಯ ಪ್ರಮಾಣದಲ್ಲೇ ಇರಿಸಿಕೊಂಡು, ಗ್ಯಾರಂಟಿ ಅನುಷ್ಠಾನಕ್ಕೆ ಬೇಕಾದ ಹೆಚ್ಚುವರಿ ಸಂಪನ್ಮೂಲಕ್ಕೆ ಮಾತ್ರ ತಲೆ ಕೆಡಿಸಿಕೊಳ್ಳಲಾಗಿದೆ.

ಸರ್ಕಾರ ಅಧಿಕಾರಕ್ಕೆ ಬಂದು ಇನ್ನೂ ತಿಂಗಳು ಪೂರೈಸುತ್ತಿದೆಯಾದುದರಿಂದ ಇದು ಸರಿಯಾದ ನಿರ್ಧಾರ. ಮುಂದಿನ ವರ್ಷದ ಹೊತ್ತಿಗೆ ತನ್ನ ನಿಲುವುಗಳಿಗೆ ತಕ್ಕಂತೆ ಕಾರ್ಯಕ್ರಮ ಅನುಷ್ಟಾನ ಮಾಡುವುದಕ್ಕೆ ಸಾಕಷ್ಟು ಸಮಯ ಅವರಿಗಿದೆ. ಸರ್ಕಾರ ಇಲಾಖಾವಾರು ಸಬ್ಸಿಡಿಗಳಲ್ಲಿ ಮಾಡಿರುವ ಹಂಚಿಕೆಗಳನ್ನು ಗಮನಿಸಿದರೆ, ಬೊಮ್ಮಾಯಿ ಸರ್ಕಾರ ಮಾಡಿರುವ ಹಂಚಿಕೆಯಲ್ಲಿ ದೊಡ್ಡ ಏರುಪೇರುಗಳೇನೂ ಆಗಿಲ್ಲ.

ಗಮನಾರ್ಹವಾಗಿ ಹಂಚಿಕೆ ಕಡಿಮೆ ಆಗಿರುವುದು ಕೄಷಿ, ಸಹಕಾರ, ಸಮಾಜ ಕಲ್ಯಾಣ, ವಸತಿ ಇಲಾಖೆಗಳಿಗೆ. ಗಮನಾರ್ಹವಾಗಿ ಹೆಚ್ಚಳ ಆಗಿರುವುದು ಒಳಾಡಳಿತ ಮತ್ತು ಸಾರಿಗೆ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಇಂಧನ ಇಲಾಖೆಗಳಿಗೆ. ಇದಕ್ಕೆ ಕಾರಣಗಳು ಸ್ವಯಂವೇದ್ಯ.

ಅದೇ ರೀತಿ ತೆರಿಗೆ ಸಂಗ್ರಹದಲ್ಲೂ ಗಮನಾರ್ಹ ಬದಲಾವಣೆಗಳನ್ನು ಮಾಡಿಲ್ಲ. ವಾಣಿಜ್ಯ ತೆರಿಗೆಗಳಲ್ಲಿ ಬೊಮ್ಮಾಯಿ ಸರ್ಕಾರ 92,000 ಕೋಟಿ ಸಂಗ್ರಹ ಗುರಿ ಹೊಂದಿದ್ದರೆ, ಈ ಸರ್ಕಾರ 1 ಲಕ್ಷದ 1 ಸಾವಿರ ಕೋಟಿ ಸಂಗ್ರಹದ ಗುರಿ ಹಂದಿದೆ. ನೋಂದಣಿ-ಮುದ್ರಾಂಕ ಇಲಾಖೆಯಲ್ಲಿ ಸ್ಥಿರಾಸ್ತಿ ಮಾರ್ಗಸೂಚಿ ದರಗಳನ್ನು ಪರಿಷ್ಕರಿಸುವ ಮೂಲಕ ಬೊಮ್ಮಾಯಿ ಅವರಿಗಿಂತ 6000 ಕೋಟಿ ಹೆಚ್ಚುವರಿ ಆದಾಯ ಅಂದ್ರೆ 25,000 ಕೋಟಿ ಸಂಗ್ರಹಿಸುವ ಗುರಿ ವಿಧಿಸಲಾಗಿದೆ.

ಸಾರಿಗೆ ಇಲಾಖೆಯಲ್ಲಿ 1000 ಕೋಟಿ ಮತ್ತು ಗಣಿ ಇಲಾಖೆಯಲ್ಲಿ ಬೊಮ್ಮಾಯಿ ಅವರಿಗಿಂತ 1500 ಕೋಟಿ ರೂ. ಹೆಚ್ಚು ಸಂಗ್ರಹದ ಗುರಿ ಹಾಕಿಕೊಳ್ಳಲಾಗಿದೆ. ಸಬ್ಸಿಡಿ ಮರುಹೊಂದಾಣಿಕೆ, ಸಾಲ ಮತ್ತು ಇಲಾಖಾವಾರು ಹಂಚಿಕೆಗಳಲ್ಲಿ ಪುಟ್ಟ ಏರುಪೇರುಗಳ ಮೂಲಕವೇ ಐದು ಗ್ಯಾರಂಟಿಗಳಿಗೆ ಹಣಕಾಸಿನ ಹೊಂದಾಣಿಕೆ ಮಾಡುವ ಮೂಲಕ ಸಿದ್ಧರಾಮಯ್ಯ ಅವರ ಹಣಕಾಸು ನಿರ್ವಹಣೆಯ ಅನುಭವ ಮತ್ತು ಚತುರತೆಗಳು ಒರೆಗಲ್ಲಿನ ಪರೀಕ್ಷೆಗೆ ಒಳಗಾಗಿ ಯಶಸ್ಸು ಕಂಡಿವೆ.

ಇದು ಬಜೆಟ್ ಮೇಲಿನ ಚರ್ಚೆಗಳ ವೇಳೆ ಪ್ರತಿಪಕ್ಷಗಳಿಗೆ ನಿರಾಶೆ ತರಬಹುದು.

ಇನ್ನು ಹೊಸ ಯೋಜನೆಗಳು

ಸರ್ಕಾರದ ಬೊಕ್ಕಸಕ್ಕೆ ಹೊರೆ ಆಗಬಲ್ಲ ಯಾವುದೇ ಹೊಸ ಯೋಜನೆಗಳನ್ನು ಮುಖ್ಯಮಂತ್ರಿಗಳು ಪ್ರಕಟಿಸಲಿಲ್ಲ. ಜನರ ಮೇಲಿನ ಹೊರೆಯನ್ನೂ ಗಮನಾರ್ಹವಾಗಿ ಹೆಚ್ಚಿಸಲಿಲ್ಲ. ಆದರೆ ಪ್ರತಿಯೊಂದು ಇಲಾಖೆಗೆ ಸಂಬಂಧಿಸಿ ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದ ದುರಾಡಳಿತಗಳನ್ನು, ವೈಫಲ್ಯಗಳನ್ನು ಅಂಕಿಸಂಖ್ಯೆಗಳ ಸಮೇತ ಬಿಚ್ಚಿಡುವುದನ್ನು ಮರೆಯಲಿಲ್ಲ.

ಹಿಂದಿನ ಬಜೆಟ್‌ಗಳಿಗೆ ಎದುರುಬದುರಾಗಿ ತನ್ನ ಬಜೆಟ್‌ನ್ನು ಇರಿಸಿ ಹೋಲಿಸಿ ನೋಡಿ, ತಮ್ಮ ಬಜೆಟ್‌ನ ಪ್ರತಿಯೊಂದೂ ಅಂಶಗಳನ್ನು ಅನುಷ್ಠಾನ ಮಾಡಲಾಗುವುದು. ಹಾಗಾಗಿ ತನ್ನದು “ಅಭಿವೃದ್ಧಿ ಗ್ಯಾರಂಟೀಡ್ ಬಜೆಟ್” ಎಂದು ಹೇಳಿ ಅವರು ತನ್ನ ಸುದೀರ್ಘ ಭಾಷಣಕ್ಕೆ ಪೂರ್ಣವಿರಾಮ ಹಾಕಿದ್ದರು.

ಆರ್ಧ ಹಾದಿಯಲ್ಲಿರುವ ಯೋಜನೆಗಳನ್ನು ಪೂರ್ಣಗೊಳಿಸುವುದು ಆದ್ಯತೆ ಎಂದು ಪ್ರಕಟಿಸುವ ಮೂಲಕ ಸಿದ್ಧರಾಮಯ್ಯ ಪ್ರತಿಪಕ್ಷಗಳ ಬಾಯಿಯನ್ನೂ ಮುಚ್ಚಿಸಿದಂತಾಗಿದೆ. ಯಾಕೆಂದರೆ ಅದನ್ನೆಲ್ಲ ಪ್ರಕಟಿಸಿದವರೇ ಅವರು!. ರೈತರಿಗೆ ಹೊಡೆತ ನೀಡಿರುವ APMC ಕಾಯಿದೆ ರದ್ಧತಿಯನ್ನು ಈ ಬಜೆಟ್ ಮೂಲಕ ಪ್ರಕಟಿಸಿದ ಸಿದ್ಧರಾಮಯ್ಯ, ಇಂದಿರಾ ಕ್ಯಾಂಟೀನ್ ಬಲವರ್ಧನೆ, ಅನುಗೃಹ ಇತ್ಯಾದಿ ತಮ್ಮ ಹಿಂದಿನ ಆಡಳಿತಾವಧಿಯ ಕೆಲವು ಜನಪ್ರಿಯ ಕಾರ್ಯಕ್ರಮಗಳಿಗೆ ಮತ್ತೆ ಬಲ ನೀಡುವ ಇರಾದೆಯನ್ನು ಪ್ರಕಟಿಸಿದರು.

ಆದರೆ, ಮೂಲಸೌಕರ್ಯಗಳಿಗೆ ಸಂಬಂಧಿಸಿದಂತೆ ವಿಮಾನ ನಿಲ್ದಾಣ, ಬಂದರು ಇತ್ಯಾದಿಗಳ ಅಭಿವೃದ್ಧಿಯಲ್ಲಿ, ಕೃಷಿ-ತೋಟಗಾರಿಕೆ, ಮೀನುಗಾರಿಕೆಯಂತಹ ರಂಗಗಳಲ್ಲಿ ಖಾಸಗೀಕರಣದ ಧಾವಂತದಂತಹ ಹಾಲೀ ಸನ್ನಿವೇಶದಲ್ಲಿ ಸರ್ಕಾರ ಹೊಸದಾಗಿ ತನ್ನ ನೀತಿಗಳನ್ನು ಹೇಗೆ ರೂಪಿಸಿಕೊಳ್ಳಲಿದೆ ಎಂಬುದು ಈ ಸರ್ಕಾರದ “ಸಮಪಾಲು-ಸಮಬಾಳು” ಸಿದ್ಧಾಂತಕ್ಕೆ ದಿಕ್ಸೂಚಿಗಳಾಗಲಿವೆ.

ಕ್ಯಾಪೆಕ್ಸ್ ಹೂಡಿಕೆಗಳಲ್ಲಿ, ಕೃಷಿ ಚಟುವಟಿಕೆಗಳಲ್ಲಿ ಖಾಸಗಿಯವರ ಪಾತ್ರ ಅಸಹಜವೆನ್ನಿಸುವಷ್ಟು ಹಿಗ್ಗುತ್ತಿರುವುದೇ ದೇಶದಲ್ಲಿ ಆರ್ಥಿಕ ಅಸಮತೋಲನಕ್ಕೆ ದಾರಿ ಮಾಡಿಕೊಡುತ್ತಿರುವುದು. ಆ ನಿಟ್ಟಿನಲ್ಲಿ ಸರ್ಕಾರದ ನಿಲುವುಗಳನ್ನು ಕಾದು ನೋಡಬೇಕಿದೆ. ಅದಕ್ಕೆ ಕ್ರಿಯಾ ಯೋಜನೆಗಳನ್ನು ರೂಪಿಸುವುದಾಗಿ ಬಜೆಟ್ ಹೇಳಿದೆ. ಇನ್ನು ಬಾಕಿ ಉಳಿದಿರುವ, ಅರೆಬರೆ ಆಗಿರುವ ಕಾಮಗಾರಿಗಳನ್ನು-ಕಾರ್ಯಕ್ರಮಗಳನ್ನು ತುದಿ ಮುಟ್ಟಿಸುವ ಕೆಲಸಕ್ಕೆ ಸಿದ್ಧರಾಮಯ್ಯ ಅವರು ಆದ್ಯತ ನೀಡಿರುವುದು ಬಹಳ ಸೆನ್ಸಿಬಲ್ ಆದ ತೀರ್ಮಾನ.

ಬಜೆಟ್ ಮಂಡನೆ ಸರ್ಕಾರದ ಗ್ಯಾರಂಟಿಗಳ ಮೇಲೆ ಅತಿಯಾದ ಅವಲಂಬನೆ ಆಗದಂತೆ ಎಚ್ಚರ ವಹಿಸಿರುವ ಸಿದ್ಧರಾಮಯ್ಯ ಅವರು ನೀರಾವರಿ, ದುರ್ಬಲ ವರ್ಗಗಳ ಕಲ್ಯಾಣ, ಶಿಕ್ಷಣ, ಆರೋಗ್ಯ, ಗ್ರಾಮೀಣ ಮತ್ತು ನಗರಾಭಿವೃದ್ಧಿಗೆ ಸಂಬಂಧಿಸಿದಂತೆ ಗಮನಾರ್ಹವಾದ ಹಲವು ಕಾರ್ಯಕ್ರಮಗಳನ್ನು ಪ್ರಕಟಿಸಿದ್ದು, ಬಜೆಟ್ ಗಾತ್ರದಲ್ಲಿ ದೊಡ್ಡ ಕಾರ್ಯಕ್ರಮಗಳಲ್ಲದಿದ್ದರೂ, ಅವೆಲ್ಲವೂ ಕೂಡ ಹಿಂದಿನ ಸರ್ಕಾರದ ನಿಲುವು-ಚಿಂತನಕ್ರಮಗಳಿಗೆ ಹೋಲಿಸಿದರೆ ಸಂಪೂರ್ಣ ಹೊಸ ಹಾದಿಯಲ್ಲಿರುವುದು ಕಾಣಿಸುತ್ತದೆ.

ಹೆಚ್ಚಿನಂಶ ಇವಕ್ಕೆಲ್ಲ ಮುಂದಿನ ಬಜೆಟ್ ಹೊತ್ತಿಗೆ ಸ್ಥೂಲ ರೂಪ ಸಿಗಬಹುದು. ಒಟ್ಟಿನಲ್ಲಿ, ಬಹಳ ಕಾಲದ ಬಳಿಕ ಒಂದು ಸೆನ್ಸಿಬಲ್, ಪ್ರಾಕ್ಟಿಕಲ್ ಮತ್ತು ಚಲಿಸಬೇಕಾದ ದಿಕ್ಕಿನ ಸ್ಪಷ್ಟತೆ ಇರುವ ಬಜೆಟ್ ಒಂದು ಕಾಣಸಿಕ್ಕಿತು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News