ಕನ್ವಾರಿಯಾ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಟ್ರಕ್ ಗೆ ವಿದ್ಯುತ್ ಸ್ಪರ್ಶ: ಐವರು ಸಜೀವ ದಹನ
Update: 2023-07-16 05:52 GMT
ಮೀರಠ್: ಕನ್ವಾರಿಯಾ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಟ್ರಕ್, ಹೈಟೆನ್ಷನ್ ವಿದ್ಯುತ್ ತಂತಿ ಸ್ಪರ್ಶಿಸಿ ಸಂಭವಿಸಿದ ದುರಂತದಲ್ಲಿ ಐದು ಮಂದಿ ಭಕ್ತರು ಸುಟ್ಟು ಕರಕಲಾದ ಘಟನೆ ಉತ್ತರ ಪ್ರದೇಶದ ಮೀರಠ್ ನಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.
ಹದಿನಾರು ಮಂದಿ ಯಾತ್ರಿಕರ ಗುಂಪು ಹರಿದ್ವಾರದಿಂದ ತಮ್ಮ ಸ್ವಗ್ರಾಮ ರಾಲಿ ಚೌಹಾಣ್ಗೆ ವಾಪಸ್ಸಾಗುತ್ತಿದ್ದಾಗ ಭವಾನ್ಪುರ ಬಳಿ ಈ ದುರಂತ ಸಂಭವಿಸಿದೆ. "ಹತ್ತು ಮಂದಿ ಕನ್ವಾರಿಯಾಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಪೈಕಿ ಐದು ಮಂದಿ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ. ತನಿಖೆ ನಡೆಯುತ್ತಿದೆ" ಎಂದು ಮೀರಠ್ ಜಿಲ್ಲಾಧಿಕಾರಿ ಡಿ.ಎಂ.ದೀಪಕ್ ಮೀನಾ ಹೇಳಿದ್ದಾರೆ.
ವಿದ್ಯುತ್ ಪ್ರವಹಿಸುತ್ತಿದ್ದ ಹೈಟೆನ್ಷನ್ ಲೈನ್ ಸ್ಪರ್ಶದಿಂದ ಈ ದುರಂತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿ ರಾಮ್ ರತನ್ ಸೈನಿ ಹೇಳಿದ್ದಾರೆ.