ಸರಕಾರದೊಂದಿಗಿನ ಮಾತುಕತೆ ವಿಫಲ: ರೈತರ ʼದಿಲ್ಲಿ ಚಲೋʼ ಪ್ರತಿಭಟನೆ ಆರಂಭ

Update: 2024-02-13 06:23 GMT

Photo: PTI

ಹೊಸದಿಲ್ಲಿ: ಇಂದು ಬೆಳಗ್ಗೆ 10 ಗಂಟೆಗೆ ರೈತರ ದಿಲ್ಲಿ ಚಲೊ ಪ್ರತಿಭಟನೆ ಪ್ರಾರಂಭಗೊಂಡಿದ್ದು, ಪಂಜಾಬ್‌ನ ಸಂಗೂರ್‌ನಿಂದ 2,500 ಟ್ರ್ಯಾಕ್ಟರ್‌ಗಳಲ್ಲಿ ಹರ್ಯಾಣದ ಮೂಲಕ ದಿಲ್ಲಿಯತ್ತ ರೈತರು ಹೊರಟಿದ್ದಾರೆ.

ಸೋಮವಾರ ರಾತ್ರಿ ರೈತ ನಾಯಕರು ಹಾಗೂ ಕೇಂದ್ರ ಸಚಿವರ ನಡುವೆ ನಡೆದ ಮಹತ್ವದ ಮಾತುಕತೆ ಯಾವುದೇ ಪರಿಹಾರ ಕಾಣದೆ ವಿಫಲಗೊಂಡಿಗೆ.

ರೈತರ ದಿಲ್ಲಿ ಚಲೊ ಪ್ರತಿಭಟನೆ ಪ್ರಾರಂಭಗೊಂಡಿರುವ ಹಿನ್ನೆಲೆ ದಿಲ್ಲಿಯಾದ್ಯಂತ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ. ಇದರಿಂದ ದಿಲ್ಲಿ ನಗರ ಮತ್ತು ದಿಲ್ಲಿ ಗಡಿಗಳು ಅಭೇದ್ಯ ಕೋಟೆಯಾಗಿ ರೂಪುಗೊಂಡಿವೆ. ಮಾರ್ಚ್ 12ರವರೆಗೆ ಯಾವುದೇ ದೊಡ್ಡ ಸಾರ್ವಜನಿಕ ಸಭೆಗಳನ್ನು ಸೇರಕೂಡದು ಎಂದು ಆದೇಶಿಸಿರುವ ದಿಲ್ಲಿ ಪೊಲೀಸ್ ಆಯುಕ್ತ ಸಂಜಯ್ ಅರೋರಾ ಸಮಾವೇಶಗಳು, ಟ್ರ್ಯಾಕ್ಟರ್‌ಗಳ ಪ್ರವೇಶ ಹಾಗೂ ಶಸ್ತ್ರ್ರಾಸ್ತ್ರ ಮತ್ತು ಸ್ಫೋಟಕ ವಸ್ತುಗಳನ್ನು ಜೊತೆಯಲ್ಲಿ ಕೊಂಡೊಯ್ಯುವುದನ್ನೂ ನಿರ್ಬಂಧಿಸಿದ್ದಾರೆ.

ಗಮನಾರ್ಹ ಪ್ರಮಾಣದ ರಸ್ತೆ ಭಾಗವನ್ನು ಕಾಂಕ್ರೀಟ್ ತಡೆಗೋಡೆ ಮೂಲಕ ಅಡ್ಡಗಟ್ಟಿ, ಮುಳ್ಳು ತಂತಿಯನ್ನು ಅಳವಡಿಸಲಾಗಿರುವ ಸಿಂಘು, ಟಿಕ್ರಿ ಹಾಗೂ ಗಾಝಿಯಾಬಾದ್ ಗಡಿಗಳನ್ನು ದೊಡ್ಡ ಪ್ರಮಾಣದ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ಆದರೆ, ದಿಲ್ಲಿ ಗಡಿಗಳಲ್ಲಿ ದೊಡ್ಡ ಪ್ರಮಾಣದ ತಡೆಗೋಡೆಗಳನ್ನು ನಿರ್ಮಿಸಿದ್ದರೂ ಎದೆಗುಂದದ ರೈತರು, ಆ ತಡೆಗೋಡೆಗಳನ್ನು ಕೇವಲ ಮೂವತ್ತು ನಿಮಿಷಗಳಲ್ಲಿ ಕಿತ್ತೊಗೆಯುತ್ತೇವೆ ಎಂದು ಸವಾಲು ಹಾಕಿದ್ದಾರೆ.

ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ದಿಲ್ಲಿ ಗಡಿಗಳ ಸುತ್ತಮುತ್ತ ವಾಣಿಜ್ಯ ವಾಹನಗಳ ಸಂಚಾರ ಮಾರ್ಗವನ್ನು ಬದಲಿಸಲಾಗಿದೆ. ಖಾಸಗಿ ವಾಹನಗಳ ಪ್ರವೇಶಕ್ಕೆ ಇಂದಿನಿಂದ ನಿರ್ಬಂಧ ವಿಧಿಸಲಾಗಿದೆ. ಗಡಿ ಭಾಗದ ಸಂಚಾರವನ್ನು ತಪ್ಪಿಸಿಕೊಳ್ಳಯವಂತೆ ನಿಮ್ಮ ಪ್ರಯಾಣದ ಯೋಜನೆಯನ್ನು ರೂಪಿಸಿಕೊಳ್ಳಿ ಎಂದು ವಾಹನ ಸವಾರರಿಗೆ ಪೊಲೀಸರು ಸಲಹೆ ನೀಡಿದ್ದಾರೆ. ರವಿವಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿರುವ ದಿಲ್ಲಿ ಪೊಲೀಸರು, ವಾಹನ ಸವಾರರಿಗೆ ಪರ್ಯಾಯ ಮಾರ್ಗಗಳಲ್ಲಿ ಪ್ರಯಾಣಿಸಲು ಸಲಹೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News