ದಿಲ್ಲಿ ಸಿಎಂ ಕೇಜ್ರಿವಾಲ್‌ಗೆ ಕೊಲೆ ಬೆದರಿಕೆ ಗೋಡೆ ಬರಹ: ಆರೋಪಿಯ ಬಂಧನ

Update: 2024-05-22 06:18 GMT

 ಆರೋಪಿ ಅಂಕಿತ್ ಗೋಯಲ್ | PC : ANI 

ಹೊಸದಿಲ್ಲಿ: ಮೆಟ್ರೊ ನಿಲ್ದಾಣವೊಂದರ ಬಳಿ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರನ್ನು ಗುರಿಯಾಗಿಸಿಕೊಂಡು ಕೊಲೆ ಬೆದರಿಕೆಯ ಗೋಡೆ ಬರಹಗಳು ಬರೆದಿದ್ದ ಆರೋಪಿ ಅಂಕಿತ್ ಗೋಯಲ್ ನನ್ನು ಬುಧವಾರ ದಿಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಕೊಲೆ ಬೆದರಿಕೆ ಸಂದೇಶವನ್ನು ಗೀಚುತ್ತಿರುವ ವ್ಯಕ್ತಿಯೊಬ್ಬನ ಚಹರೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಮಂಗಳವಾರ ದಿಲ್ಲಿ ಪೊಲೀಸರು ತಿಳಿಸಿದ್ದ ಬೆನ್ನಿಗೇ ಈ ಬಂಧನ ನಡೆದಿದೆ.

ಈ ಸಂಬಂಧ ಸೋಮವಾರ ಎಫ್ಐಆರ್ ದಾಖಲಿಸಿಕೊಂಡಿದ್ದ ದಿಲ್ಲಿ ಪೊಲೀಸರು, ತನಿಖೆಯ ಸಂದರ್ಭದಲ್ಲಿ ಆಪ್ ಸಂಚಾಲಕರೂ ಆದ ಅರವಿಂದ್ ಕೇಜ್ರಿವಾಲ್ ರನ್ನು ಗುರಿಯಾಗಿಸಿಕೊಂಡು ಮೆಟ್ರೊ ನಿಲ್ದಾಣಗಳು ಹಾಗೂ ಮೆಟ್ರೊ ರೈಲುಗಳಲ್ಲಿ ಆರೋಪಿಯು ಕೊಲೆ ಬೆದರಿಕೆಯ ಸಂದೇಶಗಳನ್ನು ಗೀಚಿರುವುದನ್ನು ಪತ್ತೆ ಹಚ್ಚಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿಯೊಬ್ಬರು, “ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದ್ದ ನಾಮಫಲಕಗಳ ಮೇಲೆ ಹಾಗೂ ಬೋಗಿಗಳಲ್ಲಿ ಬರೆಯುತ್ತಿರುವ ಯುವಕನೊಬ್ಬನನ್ನು ಸೆರೆ ಹಿಡಿಯಲಾಗಿದೆ. ಈ ಗೀಚು ಬರಹಗಳನ್ನು ತನ್ನ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದ ವ್ಯಕ್ತಿಯೇ ಈ ಬಂಧಿತ ವ್ಯಕ್ತಿ ಎಂಬ ಅನುಮಾನವಿದೆ” ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News