ಜಮ್ಮು ಕಾಶ್ಮೀರ | ನನ್ನ ಪ್ರಯಾಣದ ವೇಳೆ ಜನರತ್ತ ಲಾಠಿ ಬೀಸಬೇಡಿ : ಪೊಲೀಸರಿಗೆ ಸಿಎಂ ಉಮರ್ ಅಬ್ದುಲ್ಲಾ ಸೂಚನೆ

Update: 2024-10-16 21:24 GMT

 ಉಮರ್ ಅಬ್ದುಲ್ಲಾ | PC : PTI  

ಶ್ರೀನಗರ : ಗಣ್ಯವ್ಯಕ್ತಿಗಳ ಸಂಚಾರದ ವೇಳೆ ಸಾರ್ವಜನಿಕರಿಗೆ ಆಗುವ ತೊಂದರೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ, ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಗಂಟೆಗಳ ಬಳಿಕ ಉಮರ್ ಅಬ್ದುಲ್ಲಾ ಕೇಂದ್ರಾಡಳಿತ ಪ್ರದೇಶದ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

‘‘ನಾನು ರಸ್ತೆಯಲ್ಲಿ ಸಂಚರಿಸುವಾಗ ನೀವು ಜನರತ್ತ ಲಾಠಿ ಬೀಸಬಾರದು ಮತ್ತು ಆಕ್ರಮಣಕಾರಿ ಸಂಜ್ಞೆಗಳನ್ನು ಮಾಡಬಾರದು’’ ಎಂಬುದಾಗಿ ಅವರು ಪೊಲೀಸರಿಗೆ ಸೂಚಿಸಿದ್ದಾರೆ.

ಅದೂ ಅಲ್ಲದೆ, ತನ್ನ ಸುಗಮ ಸಂಚಾರಕ್ಕಾಗಿ  ಗ್ರೀನ್ ಕಾರಿಡಾರ್ ಮಾಡುವುದರಿಂದಲೂ ದೂರ ಸರಿಯುವಂತೆಯೂ ಅವರು ಹೇಳಿದ್ದಾರೆ.

► ಕೇಂದ್ರ ನಿಮ್ಮೊಂದಿಗೆ ನಿಕಟವಾಗಿ ಕೆಲಸ ಮಾಡುವುದು : ಪ್ರಧಾನಿ ಮೋದಿ ಭರವಸೆ

ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನ್ಯಾಶನಲ್ ಕಾನ್ಫರೆನ್ಸ್ ನಾಯಕ ಉಮರ್ ಅಬ್ದಲ್ಲಾರನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಅಭಿನಂದಿಸಿದ್ದಾರೆ.

ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹಾಕಿದ ಸಂದೇಶವೊಂದರಲ್ಲಿ ಅವರು ಅಬ್ದುಲ್ಲಾರಿಗೆ ಶುಭ ಕೋರಿದ್ದಾರೆ ಮತ್ತು ಕೇಂದ್ರ ಸರಕಾರವು ನಿಮ್ಮೊಂದಿಗೆ ನಿಕಟವಾಗಿ ಕೆಲಸ ಮಾಡುವುದು ಎಂಬ ಭರವಸೆಯನ್ನು ನೀಡಿದ್ದಾರೆ.

‘‘ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ಶ್ರೀ ಉಮರ್ ಅಬ್ದುಲ್ಲಾ ಜಿ ಅವರಿಗೆ ಅಭಿನಂದನೆಗಳು. ಜನರ ಸೇವೆ ಮಾಡುವ ಅವರ ಪ್ರಯತ್ನಗಳಿಗೆ ಶುಭ ಕೋರುತ್ತೇನೆ. ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗಾಗಿ ಕೇಂದ್ರ ಸರಕಾರವು ಅವರು ಮತ್ತು ಅವರ ತಂಡದೊಂದಿಗೆ ನಿಕಟವಾಗಿ ಕೆಲಸ ಮಾಡುವುದು’’ ಎಂದು ಅವರು ತನ್ನ ಸಂದೇಶದಲ್ಲಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News