ಮೀಸಲು ದಾಸ್ತಾನಿಗಾಗಿ ಕೇಂದ್ರದಿಂದ ಮೂರು ಲಕ್ಷ ಟನ್ ಈರುಳ್ಳಿ ಖರೀದಿ‌

Update: 2023-07-16 16:35 GMT

ಹೊಸದಿಲ್ಲಿ: ಕೇಂದ್ರ ಸರಕಾರವು ಈ ವರ್ಷ ಮೀಸಲು ದಾಸ್ತಾನಿಗಾಗಿ ಮೂರು ಲಕ್ಷ ಟನ್ ಈರುಳ್ಳಿಯನ್ನು ಖರೀದಿಸಿದ್ದು,ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ.20ರಷ್ಟು ಅಧಿಕವಾಗಿದೆ. ಇದೇ ವೇಳೆ ಭಾಭಾ ಅಣು ಸಂಶೋಧನಾ ಕೇಂದ್ರ (BARC)ದ ನೆರವಿನೊಂದಿಗೆ ವಿಕಿರಣಕ್ಕೊಳಪಡಿಸುವ ಮೂಲಕ ಈರುಳ್ಳಿಯ ಬಾಳಿಕೆ ಅವಧಿಯನ್ನು ಹೆಚ್ಚಿಸಲು ಪ್ರಾಯೋಗಿಕ ಪ್ರಯತ್ನವನ್ನೂ ಸರಕಾರವು ನಡೆಸಲಿದೆ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತಕುಮಾರ ಸಿಂಗ್ ಅವರು ರವಿವಾರ ತಿಳಿಸಿದರು.

2022-23ನೇ ವಿತ್ತವರ್ಷದಲ್ಲಿ ಸರಕಾರವು 2.51 ಲ.ಟ.ಗಳಷ್ಟು ಈರುಳ್ಳಿ ಮೀಸಲು ದಾಸ್ತಾನನ್ನು ಕಾಯ್ದುಕೊಂಡಿತ್ತು. ಕಡಿಮೆ ಪೂರೈಕೆಯ ಅವಧಿಯಲ್ಲಿ ಬೆಲೆಗಳು ಗಣನೀಯವಾಗಿ ಏರಿಕೆಯಾದರೆ ತುರ್ತು ಅಗತ್ಯಗಳನ್ನು ಪೂರೈಸಲು ಬೆಲೆ ಸ್ಥಿರೀಕರಣ ನಿಧಿಯಡಿ ಮೀಸಲು ದಾಸ್ತಾನನ್ನು ನಿರ್ವಹಿಸಲಾಗುತ್ತದೆ.

ಹಬ್ಬಗಳ ಋತುವಿನಲ್ಲಿ ಯಾವುದೇ ಸಂದರ್ಭವನ್ನು ಎದುರಿಸಲು ಈ ವರ್ಷ ಮೂರು ಲಕ್ಷ ಟನ್ ಈರುಳ್ಳಿಯನ್ನು ಮೀಸಲು ದಾಸ್ತಾನಿರಿಸಲಾಗಿದೆ. ಈರುಳ್ಳಿ ಬಗ್ಗೆ ಯಾವುದೇ ಸಮಸ್ಯೆಯಿಲ್ಲ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸಿಂಗ್ ತಿಳಿಸಿದರು.

ಮೀಸಲು ದಾಸ್ತಾನಿಗಾಗಿ ಈರುಳ್ಳಿಯನ್ನು ಈಗಷ್ಟೇ ಕೊಯ್ಲಿಗಿರುವ ಹಿಂಗಾರು ಬೆಳೆಯಿಂದ ಸಂಗ್ರಹಿಸಲಾಗಿದೆ. ಮುಂಗಾರು ಬೆಳೆಗಾಗಿ ಈಗ ಬಿತ್ತನೆ ಕಾರ್ಯ ನಡೆಯುತ್ತಿದ್ದು, ಅಕ್ಟೋಬರ್ ನಲ್ಲಿ ಕೊಯ್ಲಿಗೆ ಬರಲಿದೆ.

ಸಾಮಾನ್ಯವಾಗಿ ತಾಜಾ ಮುಂಗಾರು ಬೆಳೆ ಮಾರುಕಟ್ಟೆಗೆ ಬರುವವರೆಗೆ ಸುಮಾರು 20 ದಿನಗಳ ಕಾಲ ಈರುಳ್ಳಿಯ ಚಿಲ್ಲರೆ ಮಾರಾಟ ಬೆಲೆಗಳು ಹೆಚ್ಚುತ್ತವೆ. ಆದರೆ ಈ ಬಾರಿ ಅಂತಹ ಸಮಸ್ಯೆಯಿರುವುದಿಲ್ಲ ಎಂದು ಸಿಂಗ್ ತಿಳಿಸಿದರು. ಈ ನಡುವೆ BARC ನೆರವಿನೊಂದಿಗೆ ಈರುಳ್ಳಿಯ ದಾಸ್ತಾನಿಗಾಗಿ ತಂತ್ರಜ್ಞಾನ ಬಳಸಿಕೊಳ್ಳಲು ಗ್ರಾಹಕ ವ್ಯವಹಾರಗಳ ಇಲಾಖೆಯು ಪ್ರಯತ್ನಿಸುತ್ತಿದೆ.

‘ಪ್ರಾಯೋಗಿಕವಾಗಿ ಮಹಾರಾಷ್ಟ್ರದ ಲಸಲಗಾಂವ್ ನಲ್ಲಿ 150 ಟನ್ ಈರುಳ್ಳಿಯನ್ನು ಕೋಬಾಲ್ಟ್-60ರ ಮೂಲಕ ಗಾಮಾ ವಿಕಿರಣಕ್ಕೊಳಪಡಿಸಲು ನಾವು ಉದ್ದೇಶಿಸಿದ್ದೇವೆ. ಇದು ಈರುಳ್ಳಿಯ ಬಾಳಿಕೆ ಅವಧಿಯನ್ನು ಹೆಚ್ಚಿಸುತ್ತದೆ ’ಎಂದು ಸಿಂಗ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News