ರಾಯಚೂರು | ಕವಿ ಸಮಾಜಿಕ ಚಳವಳಿಯ ಭಾಗವಾಗಬೇಕು : ಶರೀಫ್ ಹಸ್ಮಕಲ್ ಸಲಹೆ

ರಾಯಚೂರು : ಸಮಾಜದಲ್ಲಿ ಕವಿ, ಸಾಹಿತಿಯ ಸಾಮಾಜಿಕ ಚಳವಳಿಯ ಭಾಗವಾಗಬೇಕು. ಸಾಹಿತ್ಯ ಮತ್ತು ಚಳುವಳಿ ಎರಡೂ ಪೂರಕವಾಗಿರಬೇಕು ಎಂದು ಕವಿ ಶರೀಫ್ ಹಸ್ಮಕಲ್ ಹೇಳಿದರು
ನಗರದ ಸರಕಾರಿ ನೌಕರರ ಸಭಾ ಭವನದಲ್ಲಿ ಎಐಡಿಎಸ್ಒ, ಎಐಡಿವೈಒ, ಎಐಎಂಎಸ್ಎಸ್ ಮತ್ತು ಪಂ. ತಾರಾನಾಥ್ ಸಾಂಸ್ಕೃತಿಕ ವೇದಿಕೆಯ ವತಿಯಿಂದ ನಡೆದ ಸಾಂಸ್ಕೃತಿಕ ಜಾನೋತ್ಸವದ ಭಾಗವಾಗಿ ಆಯೋಜಿಸಿದ್ದ ಕವಿಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾಜದಲ್ಲಿ ಒಂದು ಅನಿಷ್ಟ ನಡೆದಾಗ ಧರ್ಮಗುರುವಿಗೆ ಹತ್ತೇಟು, ರಾಜಕಾರಣಿಗೆ ಹತ್ತೇಟು ಕೊಟ್ಟರೆ ಕವಿಗೆ ನೂರೇಟು ಕೊಡಬೇಕಂತೆ. ಬದುಕು ಅತಂತ್ರವಾಗಿರುವಾಗ, ಗಂಗಾಳದಲ್ಲಿ ಅಂಗಳದಲ್ಲಿ ಕಷ್ಟ ಎದುರಾಗಿರುವಾಗ ನಾವು ನಿದ್ರೆ ಮಾಡುತಿರಬಾರದು ಎಂದು ನುಡಿದರು.
ಕವಿ ಗೌರೀಶ ಅವರು 'ಆಸ್ತಿಕ ನಾಸ್ತಿಕತನದ ತಾಕಲಾಟ' ಕವನ ಹೇಳಿದರೆ, ಅಭಿಲಾಷ್ ಅವರು ಭಗತ್ ಕನಸಿನ ಭಾರತ ಕಟ್ಟುವ ಕುರಿತು ಕವನ ವಾಚನ ಮಾಡಿದರು.
ಕೊನೆಯಲ್ಲಿ ಶರೀಫ್ ಹಸ್ಮಕಲ್ ಹಾಗೂ ಚನ್ನಬಸವ ಅವರು ಸಹ ಕವನ ವಾಚಿಸಿದರು. ಚನ್ನಬಸವ ಜಾನೇಕಲ್ ಆಶಯ ನುಡಿ ಮಾಡಿದರು. ವೇದಿಕೆ ಮೇಲೆ AIDSO ಕಾರ್ಯದರ್ಶಿ ಬಸವರಾಜ್ ಹಾಗೂ ಸರೋಜ ಉಪಸ್ಥಿತರಿದ್ದರು. ಭಾಗ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು..ಗೌಸಿಯ ಸ್ವಾಗತಿಸಿದರು