ರಾಯಚೂರು | ಬೆಲೆ ಏರಿಕೆ, ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಪ್ರತಿಭಟನೆ

Update: 2025-04-16 13:12 IST
Photo of Protest
  • whatsapp icon

ರಾಯಚೂರು : ಕೇಂದ್ರದ ಎನ್.ಡಿ.ಎ ಮತ್ತು ರಾಜ್ಯ ಕಾಂಗ್ರೆಸ್ ಸರಕಾರ ಮೇಲಿಂದ ಮೇಲೆ ಪೆಟ್ರೋಲ್, ಡೀಸೆಲ್, ಗ್ಯಾಸ್ ,ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರುವುದನ್ನು ಸಿಪಿಐಎಂಎಲ್ ಲಿಬರೇಷನ್ ಸಿಂಧನೂರು ತಾಲೂಕು ಘಟಕದಿಂದ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ರಾಷ್ಟ್ರಪತಿಗಳಿಗೆ ಬುಧವಾರ ಮನವಿ ಸಲ್ಲಿಸಿದರು.

ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ನಿರಂತರ ಏರಿಕೆಯಾಗಿದ್ದು, ಕೇಂದ್ರ ಸರಕಾರ ಮತ್ತು ರಾಜ್ಯ ಸರ್ಕಾರ ಇಂಧನದ ಬೆಲೆ ಏರಿಕೆ ಮೂಲಕ ಮತ್ತೊಮ್ಮೆ ಬರೆ ಎಳೆದಿದೆ. ಇಷ್ಟು ಪ್ರಮಾಣದ ಬೆಲೆ ಏರಿಕೆಯಾಗಿರುವುದು ಇದುವರೆಗಿನ ಇತಿಹಾಸದಲ್ಲಿಯೇ ಇಲ್ಲ. ಪೆಟ್ರೋಲ್ ಇಂದಿನ ದರ 102.92 ಪೈಸ್, ಡೀಸೆಲ್ ಇಂದಿನ ದರ 91.02 ಪೈಸೆ ಇದ್ದು, ಪ್ರತಿ ಲೀಟರ್ 2 ರೂಪಾಯಿ ಹೆಚ್ಚಿಸಲಾಗಿದೆ. ಮನಬಂದಂತೆ ಇಂಧನ ಬೆಲೆ ಹೆಚ್ಚಿಸುವುದರಿಂದ ಸಾರಿಗೆ, ಸರಕು ಸಾಗಣೆ, ವ್ಯಾಪಾರ ವಹಿವಾಟು, ಕೃಷಿ, ಕೈಗಾರಿಕೆ ಸೇರಿ ಇನ್ನಿತರೆ ವಲಯಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರಿಂದ ಜನಸಾಮಾನ್ಯರು ಮತ್ತಷ್ಟು ಸಂಕಷ್ಟ ಎದುರಿಸಬೇಕಿದೆ ಎಂದು ಸಿಪಿಐಎಂಎಲ್ ಲಿಬರೇಶನ್ ಮುಖಂಡ ಬಸವರಾಜ ಕೊಂಡೆ ಆಪಾದಿಸಿದರು.

ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಹಾಲು, ನೀರು, ವಿದ್ಯುತ್, ಡೀಸೆಲ್ ಮತ್ತು ಮೆಟ್ರೋ ದರ ಸೇರಿದಂತೆ ಹಲವಾರು ಅಗತ್ಯ ಸೇವೆಗಳ ಬೆಲೆ ಏರಿಕೆ ಮಾಡಿದೆ. ತ್ಯಾಜ್ಯ ಸಂಗ್ರಹ, ಟೋಲ್ ಶುಲ್ಕ ಮತ್ತು ಆಸ್ತಿ ತೆರಿಗೆಯ ಮೇಲಿನ ತೆರಿಗೆಗಳನ್ನೂ ಸಹ ಹೆಚ್ಚಿಸಲಾಗಿದೆ. ಬೆಲೆ ಏರಿಕೆಯಿಂದ ಸರ್ಕಾರಗಳು ಬಡವರು ಮತ್ತು ಮಧ್ಯಮ ವರ್ಗದವರನ್ನು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ. ಆರ್ಥಿಕ ನೀತಿಗಳು ಜಾರಿ ಮಾಡವ ವಿಷಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು ರಾಜ್ಯದಲ್ಲಿ ನಿರಂತರ ವಿಪರೀತ ಬೆಲೆ ಏರಿಕೆ, ಗಗನಕ್ಕೇರುತ್ತಿರುವ ನಿರುದ್ಯೋಗ, ಕೆಳಕ್ಕೆ ಉರುಳುತ್ತಿರುವ ರೂಪಾಯಿ, ಅಭೂತಪೂರ್ವ ವ್ಯಾಪಾರ ಕೊರತೆ ಮತ್ತು ಜಿಡಿಪಿ ಮುಗ್ಗರಿಸುತ್ತಿರುವ ಸನ್ನಿವೇಶದಲ್ಲಿ ಜನರ ಜೀವನೋಪಾಯದ ಮೇಲೆ ಈ ಕ್ರೂರ ಪ್ರಹಾರ ನಡೆಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಏರಿಕೆಗಳು ಜನರ ಜೀವನೋಪಾಯವನ್ನು ಮತ್ತಷ್ಟು ಹಾಳು ಮಾಡುತ್ತವೆ. ಸರ್ಕಾರದ ಈ ನೀತಿ ಬಡ, ಮಧ್ಯಮ ವರ್ಗದವರ ಬದುಕುವ ಹಕ್ಕನ್ನು ಬಲವಂತವಾಗಿ ಕಿತ್ತುಕೊಳ್ಳುವುದಾಗಿದೆ. ಅಲ್ಲದೇ ಬಡವರ ಮೇಲೆ ಹೆಚ್ಚು ತೆರಿಗೆ ಹೇರಿ, ಶ್ರೀಮಂತರ ತೆರಿಗೆ ಮತ್ತು ಸಾಲ ಮನ್ನಾ ಮಾಡುವ ಹುನ್ನಾರದ ಭಾಗವಾಗಿದೆ. ಈ ಕೂಡಲೇ ಜನದ್ರೋಹಿ ನೀತಿಗಳನ್ನು ಕೈ ಬೀಡಬೇಕು. ಸರಕಾರಿ ಒಡೆತನದ ಉಹಿಸಿ, ಬಿಪಿಸಿಎಲ್, ಎಚ್ ಪಿಸಿಎಲ್ ಕಂಪನಿಗಳ ಷೇರುಗಳು ಮಾರುಕಟ್ಟೆಯಲ್ಲಿದ್ದು, ಖಾಸಗಿ ಕಂಪನಿಗಳು ಇಂಧನ ಮಾರಾಟ ಉದ್ಯಮದಲ್ಲಿರುವುದರಿಂದ ಕಚ್ಚಾತೈಲ ಬೆಲೆ ಕುಸಿದಾಗ ಅವೈಜ್ಞಾನಿಕ ಬೆಲೆ ಏರಿಕೆಯಿಂದ ದೇಶದ ಜನರ ಹಣವನ್ನು ಲೂಟಿ ಹೊಡೆಯುತ್ತವೆ. ಈ ನಡುವೆ ಕಚ್ಚಾ ತೈಲ ಬೆಲೆ ಕುಸಿದಾಗಲೂ ಜನಸಾಮಾನ್ಯರಿಗೆ ಯಾವುದೇ ಲಾಭ ಇಲ್ಲ, ಹೆಚ್ಚಾದಾಗ ಮಾತ್ರ ಅವರ ಮೇಲೆ ಹೊರೆ ಹಾಕುತ್ತ ಬರಲಾಗುತ್ತಿದೆ. ಕೊರೊನಾದಂತಹ ಬಿಗುವಿನ ವಾತಾವರಣದ ದುರ್ಲಾಭ ಪಡೆದು ಮನಬಂದಂತೆ ಇಂಧನ ಬೆಲೆ ಏರಿಕೆ ಮಾಡಿದ್ದಲ್ಲದೇ, ಕೇಂದ್ರದ ಎನ್ ಡಿ ಎ ಮತ್ತು ರಾಜ್ಯ ಸರಕಾರ ಜನವಿರೋಧಿ ನೀತಿಗಳನ್ನು ಜಾರಿಗೆಗೊಳಿಸಿದೆ. ಇದು ಖಂಡನಾರ್ಹ. ಹಾಗಾಗಿ ರೈತರು, ಕಾರ್ಮಿಕರು ಹಾಗೂ ಜನಸಾಮಾನ್ಯರಿಗೆ ಮಾರಕವಾಗಿರುವ ನೀತಿಗಳನ್ನು ಕೈಬಿಡಬೇಕು ಹಾಗೂ ಇಂಧನ ಬೆಲೆ ಏರಿಕೆಯನ್ನು ಸರಕಾರ ಇಳಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಬಸವರಾಜ ಕೊಂಡೆ ಸಿಪಿಐಎಂಎಲ್ ಲಿಬರೇಶನ್ ತಾಲೂಕು ಮುಖಂಡರು, ಆರ್.ಎಚ್ ಕಲಮಂಗಿ, ಶ್ರೀನಿವಾಸ ಬುಕ್ಕನ್ನಟ್ಟಿ, ಅಜು, ಸಾದಿಕ್, ಹುಸೇನ್, ರಹೀಮ್ ಬಸವರಾಜ ಅರಳಹಳ್ಳಿ, ಹುಸೇನಪ್ಪ, ರಮೇಶ್, ಯಮನೂರಪ್ಪ, ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News