ರಾಯಚೂರು | ನೀರಿಗಾಗಿ ಗ್ರಾಮಸ್ಥರಿಂದ ಗ್ರಾಮ ಪಂಚಾಯತ್ಗೆ ಮುತ್ತಿಗೆ ಹಾಕಿ ಪ್ರತಿಭಟನೆ

ರಾಯಚೂರು : ಲಿಂಗಸುಗೂರು ತಾಲ್ಲೂಕಿನ ನಾಗಲಾಪುರ ಗ್ರಾಮದ ಒಂದನೇ ವಾರ್ಡ್ ನಲ್ಲಿ ತಿಂಗಳಿಂದ ನೀರು ಬಾರದೆ ಇರುವುದರಿಂದ ಗ್ರಾಮದ ಮಹಿಳೆಯರು ಖಾಲಿ ಕೊಡಗಳನ್ನು ಹಿಡಿದು ಗ್ರಾಮ ಪಂಚಾಯತ್ಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಗ್ರಾಮದ ಒಂದನೇ ವಾರ್ಡ್ ನಲ್ಲಿ ತಿಂಗಳಿಂದ ನೀರು ಬಾರದೆ ಕಾರ್ಯ ಚಟುವಟಿಕೆಗಳಿಗೆ ಅಡೆತಡೆಯಾಗಿದೆ. ನಮ್ಮ ಸಮಸ್ಯೆಗೆ ಯಾವ ಅಧಿಕಾರಿಗಳು ಕೂಡ ಬಗೆಹರಿಸುತ್ತಿಲ್ಲ. ಕೆಲವು ದಿನಗಳಿಂದ ಹಲವು ಬಾರಿ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಗಮನಕ್ಕೆ ತಂದರೂ, ತಮಗೆ ಸಂಬಂಧವಿಲ್ಲದಂತೆ ಬೇಜವಾಬ್ದಾರಿತನ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ, ಮೇಲಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಕುಂದು ಕೊರತೆಗಳ ಸಭೆ ನಡೆಸಿ ಸಮಸ್ಯೆಗಳು ಬಗೆಹರಿಸಬೇಕೆಂದು ಆಗ್ರಹಿಸಿದ್ದರು.
ಪ್ರತಿಭಟನೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಧಿಕಾರಿಗಳು ದೌಡಾಯಿಸಿ ಪ್ರತಿಭಟನಾಕಾರರನ್ನ ಮನವೊಲಿಸುವಲ್ಲಿ ಪ್ರಯತ್ನ ನಡೆಸಿದ್ದಾರೆ. ನೀರಿನ ಸಮಸ್ಯೆ ಈಡೇರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಈ ವೇಳೆ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಹನುಮಂತ ಛಲವಾದಿ ,ಗಂಗಪ್ಪ, ಆಂಜನೇಯ ಇನ್ನಿತರರು ಹಾಜರಿದ್ದರು.