ರಾಮನಗರ | ಆಭರಣ ಅಂಗಡಿ ಮಾಲಕನ ಮನೆಯಿಂದ 4 ಕೆಜಿ ಚಿನ್ನ, 5 ಲಕ್ಷ ರೂ. ನಗದು ಕಳವು

Update: 2024-09-23 06:20 GMT

ರಾಮನಗರ: ಆಭರಣ ಅಂಗಡಿ ಮಾಲಕರೊಬ್ಬರ ಮನೆಗೆ ನುಗ್ಗಿದ ಕಳ್ಳರು ಸುಮಾರು 4 ಕೆಜಿ ಚಿನ್ನಾಭರಣ ಮತ್ತು ಐದು ಲಕ್ಷ ರೂ. ನಗದು ಕಳವುಗೈದ ಘಟನೆ ಪಟ್ಟಣದ ರಾಜಕುಮಾರ್ ಮುಖ್ಯ ರಸ್ತೆಯಲ್ಲಿ ರವಿವಾರ ರಾತ್ರಿ ನಡೆದಿದೆ.

ರಾಜಕುಮಾರ್ ಮುಖ್ಯ ರಸ್ತೆಯಲ್ಲಿರುವ ವಾಸವಾಂಭ ಬಟ್ಟೆ ಹಾಗೂ ಆಭರಣ ಗಿರವಿ ಅಂಗಡಿಯ ಮಾಲಕ ವೇಣುಗೋಪಾಲ್ ಎಂಬವರ ಮನೆಯಲ್ಲಿ ಈ ಕಳ್ಳತನ ನಡೆದಿದ್ದು, ಈ ಬಗ್ಗೆ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೇಣುಗೋಪಾಲ್ ಚನ್ನಪಟ್ಟಣದಲ್ಲಿ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಲು ರವಿವಾರ ಸಂಜೆ 6:30ರ ಸುಮಾರಿಗೆ ಕುಟುಂಬ ಸಮೇತ ತೆರಳಿದ್ದರು. ರಾತ್ರಿ 11ರ ಸುಮಾರಿಗೆ ಮನೆಗೆ ವಾಪಸ್ ಬಂದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

ಮನೆಯ ಹಿಂಬಾಗಿಲಿನಿಂದ ಒಳ ಪ್ರವೇಶಿಸಿರುವ ಕಳ್ಳರು ಕೊಠಡಿಯಲ್ಲಿದ್ದ ಅಲ್ಮೇರಾದ ಬಾಗಿಲು ಒಡೆದು ಚಿನ್ನಾಭರಣಗಳಿದ್ದ ಅದರ ಲಾಕರ್ ನ್ನು ಕದ್ದೊಯ್ದಿದ್ದಾರೆ. ಬೆಳ್ಳಿ ಒಡವೆಗಳನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ.

ಬಟ್ಟೆ ಅಂಗಡಿಯಲ್ಲೇ ಗಿರವಿ ಅಂಗಡಿ ಸಹ ಹೊಂದಿದ್ದ ವೇಣುಗೋಪಾಲ್, ಪಟ್ಟಣದ ಶಕ್ತಿ ದೇವತೆ ವಾಸವಿ ದೇವಿ ದೇವಸ್ಥಾನದ ಖಜಾಂಚಿಯಾಗಿದ್ದರು. ದೇವಸ್ಥಾನದ ಒಡವೆಗಳು ಹಾಗೂ ಗಿರವಿಗೆ ಸಂಬಂಧಿಸಿದ ಒಡವೆಗಳನ್ನು ಮನೆಯಲ್ಲಿ ಇಟ್ಟುಕೊಂಡಿದ್ದರು ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಬೆರಳಚ್ಚು ತಜ್ಞರು ಹಾಗೂ ಶ್ವಾನದಳವನ್ನು ಕರೆಯಿಸಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ಮುಂದುವರಿದಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News