ಶಾಂತಲಾ ಕಲಾವಿದರಿಗೆ ಸುವರ್ಣ ಸಂಭ್ರಮ

Update: 2024-05-03 09:41 GMT

ಚಾಮರಾಜನಗರದಲ್ಲಿ ‘ಶಾಂತಲಾ ಕಲಾವಿದರು’ ರಂಗ ತಂಡಕ್ಕೆ ಈಗ ಐವತ್ತರ ಸಂಭ್ರಮ. ಇದರ ರೂವಾರಿಗಳಲ್ಲಿ ಒಬ್ಬರಾದ, ಹಿರಿಯ ರಂಗಕರ್ಮಿ ವೆಂಕಟರಾಜು ಅವರು ತಮ್ಮ ಅನುಭವಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ:

‘‘ನಾವು ಚಾಮರಾಜನಗರದ ಜೆ.ಎಸ್.ಎಸ್. ಕಾಲೇಜಿನ ವಿದ್ಯಾರ್ಥಿಗಳಾಗಿದ್ದೆವು. ಆಗ ಅಂದರೆ ೧೯೬೯-೭೦ ಮತ್ತು ಅದಕ್ಕೂ ಮುಂಚೆ ಈಗಿನಂತಿರಲಿಲ್ಲ. ಪ್ರತೀ ವರ್ಷ ಒಂದೋ ಎರಡೋ ನಾಟಕ ನಮ್ಮ ಮಿತಿಯಲ್ಲಿ ಆಡುತ್ತಿದ್ದೆವು. ನಮ್ಮ ಪ್ರೌಢಶಾಲಾ ವ್ಯಾಸಂಗದ ಸಮಯದಲ್ಲಿಯೂ ಈ ಹವ್ಯಾಸ ಇತ್ತು. ಆಗ ನಮ್ಮೂರಲ್ಲಿ ತುಂಬಾ ಸಕ್ರಿಯವಾಗಿದ್ದ ಹಿಂದಿ ಪ್ರಸಾರ ಸಭಾ ಮತ್ತು ಹೈಸ್ಕೂಲ್, ಮಿಡ್ಲ್ ಸ್ಕೂಲ್‌ಗಳ ವಾರ್ಷಿಕೋತ್ಸವಗಳಲ್ಲಿ ನಾಟಕ ಮಾಡುತ್ತಿದ್ದರು.

ಕಾಲೇಜು ಮುಗಿದ ನಂತರ ಏನು ಎಂಬ ಪ್ರಶ್ನೆ ಎದುರಾದಾಗ ನಾವೆಲ್ಲ ಸೇರಿ ಒಂದು ಹವ್ಯಾಸಿ ತಂಡ ಕಟ್ಟೋಣ ಎಂದು ನಿರ್ಧರಿಸಿ ತಂಡ ಕಟ್ಟಿದೆವು. ನಾವು ಅಂದುಕೊಂಡಿದ್ದಕ್ಕೂ ವಾಸ್ತವವಾಗಿ ತಂಡ ಆರಂಭವಾಗಿದ್ದಕ್ಕೂ ಒಂದೆರಡು ವರ್ಷದ ಅಂತರ. ಅದಕ್ಕೆ ನೆಪ ಬೇಕಾಗಿತ್ತು. ಮೈಸೂರಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಗ ಜಿಲ್ಲಾ ಮಟ್ಟದ ನಾಟಕ ಸ್ಪರ್ಧೆಯನ್ನು (೧೯೭೩ ಜುಲೈ) ಏರ್ಪಡಿಸಿತ್ತು. ಆ ವೇಳೆಗೆ ‘ಪ್ರಜಾವಾಣಿ’ ದೀಪಾವಳಿ ಸಂಚಿಕೆಯಲ್ಲಿ ಟಿ.ಎನ್. ಸೀತಾರಾಮ್ ಅವರ ‘ಬದುಕ ಮನ್ನಿಸು ಪ್ರಭುವೇ’ ನಾಟಕಕ್ಕೆ ಮೊದಲ ಬಹುಮಾನ ಬಂದಿತ್ತು. ಆ ನಾಟಕ ಹುಚ್ಚು ಹಿಡಿಸಿತ್ತು. ನಮ್ಮೆಲ್ಲರ ಮನಸ್ಥಿತಿ ಹಾಗೆಯೇ ಇತ್ತು. ನಾವು ಆ ಸ್ಪರ್ಧೆಗೆ ಈ ನಾಟಕ ಸಿದ್ಧಪಡಿಸಿ ಕೊಂಡು ಮೈಸೂರಿನ ಶತಮಾನೋತ್ಸವ ಭವನದಲ್ಲಿ ಪ್ರದರ್ಶಿಸಿದೆವು. ಬಹುಮಾನ ಬರಲಿಲ್ಲ. ಆದರೆ ನಮ್ಮ ಶಕ್ತಿಶಾಲಿ ಅಭಿನಯ ಎಲ್ಲರ ಮೆಚ್ಚುಗೆ ಗಳಿಸಿತು.

ಈ ನಾಟಕ ಮತ್ತು ಪಿ.ಲಂಕೇಶರ ‘ಗಿಳಿಯು ಪಂಜರದೊಳಿಲ್ಲ’ ನಾಟಕ ಸಿದ್ಧಪಡಿಸಿಕೊಂಡು, ‘ಶಾಂತಲಾ ಹವ್ಯಾಸಿ ಕಲಾವಿದರು’ ಎಂಬ ಹೆಸರಲ್ಲಿ ರಂಗಕ್ಕೆ ಏರಿಸಿದೆವು. ಈಚಿನವರೆಗೂ ರಂಗ ಮಂದಿರ ಇರಲಿಲ್ಲ. ನಮ್ಮೂರಿನ ಗುರುನಂಜಶೆಟ್ಟರ ಛತ್ರದಲ್ಲಿ ನಾಟಕ ಪ್ರದರ್ಶನ. ಒಂದು ರೂಪಾಯಿ ಪ್ರವೇಶ ದರ.

ಗೆಳೆಯರಾದ ಅಬ್ರಹಾಂ ಡಿ’ಸಿಲ್ವಾ, ಶ್ರೀನಿವಾಸರಂಗನ್ ಎಸ್., ಟಿ.ವಾಸನ್, ರಾ.ಶ್ರೀ. ಕುಮಾರಾರಾಧ್ಯ ಮತ್ತು ನಾನು ಸಕ್ರಿಯವಾಗಿ ತೊಡಗಿಸಿಕೊಂಡೆವು. ಹಾಗಾಗಿ ನಾವೇ ಸಂಸ್ಥಾಪಕ ಸದಸ್ಯರು.

ನಾವೇ ಕೆಲವು ನಿಯಮ ಹಾಕಿಕೊಂಡೆವು. ನಮ್ಮ ಸಂಸ್ಥೆಯಲ್ಲಿ ಅಧ್ಯಕ್ಷ, ಕಾರ್ಯದರ್ಶಿ ಇತ್ಯಾದಿ ಪದಾಧಿಕಾರಿಗಳು ಬೇಡ. ಪ್ರತೀ ನಾಟಕಕ್ಕೆ ಕೇವಲ ನಿರ್ದೇಶಕ ಸಾಕು. ಟಿಕೆಟ್‌ನಿಂದ ಹಣ ಸಂಗ್ರಹಣೆ. ನಾಟಕ ಮುಗಿದ ಮೇಲೆ ಲೆಕ್ಕ ಒಪ್ಪಿಸಿ ಅದನ್ನು ಹರಿದು ಹಾಕುವುದು. ನಾಟಕಕ್ಕೆ ಮುನ್ನ ಸಭಾ ಕಾರ್ಯಕ್ರಮ ಬೇಡ ಇತ್ಯಾದಿ ಸ್ವ ಘೋಷಿತ ನಿಯಮಗಳು. ಅದನ್ನು ಅನೇಕ ಲೌಕಿಕ ಮತ್ತು ಸಂಘಟನೆಯ ಕಾರಣಕ್ಕೆ ಸಡಿಲಿಸಬೇಕಾಯಿತು.

ಈಗ ೫೦ ವರ್ಷದ ಹೊತ್ತಿನಲ್ಲಿ ನಾವೇ ಮತ್ತೆ ‘ಬದುಕ ಮನ್ನಿಸು ಪ್ರಭುವೇ’ ನಾಟಕ ಪ್ರದರ್ಶಿಸಿದೆವು. ೭೪ ವರ್ಷದ ನಾವು ಕೆಲವರು ನಮಗಿಂತ ಅತಿ ಚಿಕ್ಕ ವಯಸ್ಸಿನ ಪಾತ್ರ ಮಾಡಿದೆವು!

ಅಂದಿನಿಂದ ಈ ವರೆಗೂ ನಾವು ರಂಗಭೂಮಿಯ ಚಟುವಟಿಕೆಗಳನ್ನು ಮಾಡಿಕೊಂಡೇ ಬರುತ್ತಿದ್ದೇವೆ. ನಾವೇ ನಾಟಕ ಮಾಡಿದ್ದೇವೆ. ಹೊರಗಿನಿಂದ ಬಂದ ನಿರ್ದೇಶಕರು ನಿರ್ದೇಶಿಸಿದ್ದಾರೆ. ನಾ. ಶ್ರೀನಿವಾಸ್, ಪ್ರಮೋದ್ ಶಿಗ್ಗಾಂವ್, ವಿನೋದ್ ಅಂಬೇಕರ್, ರಮೇಶ್ ಪಂಡಿತ್, ಪಿ. ಗಂಗಾಧರಸ್ವಾಮಿ, ಈಗ ಎಸ್. ಸುರೇಂದ್ರನಾಥ್ ನಿರ್ದೇಶಿಸಿದ್ದಾರೆ. ನಮ್ಮ ತಂಡದ ಚಂದ್ರಶೇಖರಾಚಾರ್ ಹೆಗ್ಗೊಠಾರ, ಬರ್ಟಿ ಒಲಿವೆರಾ, ಚಿತ್ರಾ ವಿ. ನಮ್ಮಲ್ಲಿ ಮತ್ತು ಬೇರೆ ತಂಡಕ್ಕೆ ನಿರ್ದೇಶಿಸಿದ್ದಾರೆ.

ನೀನಾಸಮ್ ತಿರುಗಾಟ, ಪಯಣ, ಆಟ ಮಾಟ, ಚಿಣ್ಣ ಬಣ್ಣ, ಪ್ರೊಥಿಯೂ ಶಿಶಿರ ಪಯಣ, ವಸಂತ ಪಯಣ ಮುಂತಾದ ಅನೇಕ ತಂಡಗಳಿಗೆ ಒಂದಲ್ಲ ಹಲವು ಸಲ ಪ್ರಾಯೋಜನೆ ಮಾಡಿದ್ದೇವೆ. ನೀನಾಸಮ್ ಶಾಲಾರಂಗ ಯೋಜನೆಯಲ್ಲಿ ಎರಡು ಸಲ ಮಕ್ಕಳ ನಾಟಕ ಕಾರ್ಯಾಗಾರ ಮಾಡಿದ್ದೇವೆ.

ನಮ್ಮಲ್ಲಿ ಗೆಳೆಯರಾದ ಬಿ.ಎಸ್.ವಿನಯ್, ಚಿತ್ರಾ ನಾಟಕ ಗಳನ್ನು ಬರೆದಿದ್ದಾರೆ. ಕತೆಗಳನ್ನು ನಾಟಕಕ್ಕೆ ರೂಪಾಂತರಿಸಿದ್ದಾರೆ.

ಕುವೆಂಪು, ಲಂಕೇಶ್, ಟಿ.ಎನ್. ಸೀತಾರಾಂ, ಗಿರೀಶ್ ಕಾರ್ನಾಡ್, ತೇಜಸ್ವಿ , ಕೈಲಾಸಂ, ಪ್ರಸನ್ನ, ಎಸ್.ರಾಮನಾಥ, ನಾ. ಶ್ರೀನಿವಾಸ, ಬಿ. ಕೆ. ವೆಂಕಟರಾಜು ಮತ್ತು ಬಿ.ಎಸ್. ವಿನಯ್ ಅವರ ನಾಟಕಗಳನ್ನು ಯಶಸ್ವಿಯಾಗಿ ರಂಗಕ್ಕೆ ತಂದಿದ್ದೇವೆ.

ಚಾಮರಾಜ ನಗರದ ಅಭಿವೃದ್ಧಿ ಪ್ರಾಧಿಕಾರದಿಂದ ಒಂದು ನಿವೇಶನ ಗುತ್ತಿಗೆ ಆಧಾರದ ಮೇಲೆ ಲಭ್ಯವಾಗಿದೆ. ನಮ್ಮದೇ ಆದ ಒಂದು ಸರಳ ರಂಗ ಮಂದಿರ ಕಟ್ಟಿಕೊಳ್ಳಬೇಕು. ಸದ್ಯ ಹಣ ಇಲ್ಲ. ಕನಸಿದೆ. ಈ ರಂಗ ಮಂದಿರ ಸರಳವಿದ್ದು ಶಾಲೆಯಂತೆ, ಆಸ್ಪತ್ರೆಯಂತೆ ಸಮುದಾಯದ ಜತೆ ಇರಬೇಕು.

***

೧೯೭೪ರ ಫೆಬ್ರವರಿಯಲ್ಲಿ ವೃತ್ತಿಕಂಪೆನಿಯವರಿಗಾಗಿ ಹಾಕಿದ್ದ ನಂದಿನಿ ಕಲಾಕ್ಷೇತ್ರದಲ್ಲಿ ‘ಪೋಲಿ ಕಿಟ್ಟಿ’ ಮತ್ತು ‘ಮುಖಗಳು’ ನಾಟಕಗಳನ್ನು ಪ್ರದರ್ಶಿಸಿದೆವು. ಅದರಲ್ಲಿ ಉಳಿಸಿದ ಸುಮಾರು ೬೦೦ ರೂಪಾಯಿಯಲ್ಲಿ ಒಂದು ಒಳ್ಳೆಯ ನೀಲಿ ಪರದೆ ಮಾಡಿಕೊಂಡೆವು. ಅದು ಎಷ್ಟು ಸೊಗಸಾಗಿತ್ತು ಎಂದರೆ ಮೈಸೂರಿನ ಗೆಳೆಯರು ಡಾ.ರಾಜಕುಮಾರ್ ಸಂಗೀತ ಕಾರ್ಯಕ್ರಮ ನಡೆದಾಗ ಕೂಡಾ ನಮ್ಮಿಂದ ಪಡೆದು ಬಳಸಿದರು. ಅದೇ ರೀತಿ ಕುಮಾರಸ್ವಾಮಿಯವರ ನಾಟಕ ಕಂಪೆನಿ ಮೊಕ್ಕಾಂ ಮಾಡಿದಾಗ ‘ಜೋ ಕುಮಾರಸ್ವಾಮಿ’ ನಾಟಕ ಅಭಿನಯಿಸಿದೆವು. ಉಳಿದಂತೆ ನಮ್ಮೂರಿನ ಅನೇಕ ಕಡೆ ನಾಟಕ ಮಾಡಿ ಅದಕ್ಕೆ ನಾವೇ ನಾಮಕರಣ ಮಾಡಿದ್ದೇವೆ. ಈಗ ಜಿಲ್ಲಾ ಆಡಳಿತ ಭವನದ ಪಕ್ಕದ ಜಾಗ ಕೈಲಾಸಂ ಬಯಲು ರಂಗ. ಅದರಿಂದ ಸ್ವಲ್ಪ ಮುಂದೆ ರಂಗ ದೇಗುಲ, ರಿಪಬ್ಲಿಕ್ ಸಾಮಿಲ್‌ನ ಆವರಣ ನಿಸರ್ಗ ರಂಗ ಹೀಗೆ. ಒಮ್ಮೆ ನಮ್ಮೂರಿನ ರೋಟರಿ ಕ್ಲಬ್ ಹೊರ ಆವರಣ ಮತ್ತು ಒಳಗೂ ನಾಟಕ ಮಾಡಿದ್ದೇವೆ. ಇದು ಜಿಲ್ಲಾ ಕೇಂದ್ರವಾಗಿ ಜಿಲ್ಲಾ ಆಡಳಿತ ಭವನ ನಿರ್ಮಾಣ ಆದ ಮೇಲೆ ಅವರು ಇಲಾಖೆಗಳ ಸಭೆ, ಸಮಾರಂಭ ಮತ್ತು ಚುನಾವಣಾ ಕೆಲಸಗಳಿಗಾಗಿ ನಿರ್ಮಿಸಿಕೊಂಡ ಜೆ.ಎಚ್.ಪಟೇಲ್ ಸಭಾಂಗಣವನ್ನು ೨೦೦೬ರಿಂದ ಬಳಸಿಕೊಳ್ಳುತ್ತಿದ್ದೇವೆ. ಈಗ ಜಿಲ್ಲಾ ರಂಗ ಮಂದಿರಗಳ ಯೋಜನೆಯಲ್ಲಿ ಡಾ. ರಾಜಕುಮಾರ್ ರಂಗಮಂದಿರವೇನೋ ಆಗಿದೆ. ಆದರೆ ದುಬಾರಿ ಬಾಡಿಗೆ, ಲೈಟ್ ವ್ಯವಸ್ಥೆ ಮತ್ತು ಸೂಕ್ತ ಸೌಂಡ್ ವ್ಯವಸ್ಥೆ ಇಲ್ಲದಿರುವುದು, ಕೆಟ್ಟ ನಿರ್ವಹಣೆ ಇತ್ಯಾದಿಗಳಿಂದ ಇದ್ದೂ ಇಲ್ಲದಂತಾಗಿದೆ.

***

ಈ ನಮ್ಮ ಪಯಣದಲ್ಲಿ ಒಂದೇ ನಾಟಕವನ್ನು ಬೇರೆ ಅವಧಿಗಳಲ್ಲಿ ಮತ್ತೆ ತಯಾರಿಸಿದ್ದೇವೆ. ಕೈಲಾಸಂ ಅವರ ‘ಪೋಲಿಕಿಟ್ಟಿ’, ಲಂಕೇಶರ ‘ಗಿಳಿಯು ಪಂಜರದೊಳಿಲ್ಲ’, ಜಯಂತ ಕಾಯ್ಕಿಣಿ ಅವರ ‘ಸೇವಂತಿ ಪ್ರಸಂಗ’, ಕೆ. ವೆಂಕಟರಾಜು ಅವರ ‘ತಲೆ ಬಾಗದ ಜನ’ ಈ ನಾಟಕಗಳನ್ನು ಬೇರೆ ಬೇರೆ ಕಲಾವಿದರಿಗೆ, ತಂಡಕ್ಕೆ ಸಿದ್ಧ ಮಾಡಿದ್ದೇವೆ.

‘ತಲೆ ಬಾಗದ ಜನ’(ನಿ: ನಾ.ಶ್ರೀನಿವಾಸ್), ‘ಅರಹಂತ’( ನಿ: ಪಿ.ಗಂಗಾಧರಸ್ವಾಮಿ), ‘ಸದ್ಯಕ್ಕಿದು ಹುಚ್ಚರ ಸಂತೆ’ (ನಿ: ಬಿ.ಎಸ್.ವಿನಯ್), ‘ಅಶ್ವಘೋಷ’(ನಿ: ವಿ.ಚಿತ್ರ), ‘ಜನಶತ್ರು ( ನಿ.ಎಸ್.ಸುರೇಂದ್ರನಾಥ್ ) ಸರಸ್ವತಿಯ ಫೇಸ್ ಬುಕ್ ಪ್ರಸಂಗ ( ನಿ. ವಿ.ಚಿತ್ರ) ಇವು ಒಂದು ರೀತಿಯಲ್ಲಿ ಧನ್ಯತೆ ಮತ್ತು ಸಂತೋಷ ತಂದುಕೊಟ್ಟ ನಾಟಕಗಳು.

ಕಳೆದ ವರ್ಷ ನಾವು ಧೈರ್ಯ ಮಾಡಿ ವರ್ಷ ಪೂರ್ತಿ ತಿಂಗಳಿಗೊಂದು ಕಾರ್ಯಕ್ರಮ ಮಾಡಿದ್ದೆವು.

ಈಗ ಈ ವರ್ಷದ ಕೊನೆಯಲ್ಲಿ ನಾಟಕೋತ್ಸವ, ಗೆಳೆಯರ ಸಮ್ಮಿಲನ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಒಳಗೊಂಡ ಸುವರ್ಣ ಸಮಾರಂಭ ಮಾಡುವ ಯೋಚನೆ ಇದೆ. ಒಂದು ಸಣ್ಣ ರಂಗ ಮಂದಿರ ನಿರ್ಮಿಸಬೇಕಿದೆ. ಆ ನಂತರ ಚಟುವಟಿಕೆ ನಿರಂತರ ನಡೆಯಲು ಅನುಕೂಲವಾಗುವಂತೆ ಒಂದು ದೃಢತಾ ನಿಧಿ ಕೂಡಿಸಬೇಕಾಗಿದೆ.

ಅಂದರೆ ಹನ್ನೆರಡು ವರ್ಷಗಳ ಕೆಳಗೆ ಟ್ರಸ್ಟ್ ಮಾಡಿಕೊಂಡಿದ್ದೇವೆ. ಅದಕ್ಕೂ ಮುನ್ನ ಹವ್ಯಾಸಿ ಶಬ್ದ ತೆಗೆದು ಕೇವಲ ‘ಶಾಂತಲಾ ಕಲಾವಿದರು’ ಅಂತ ಕರೆದು ಕೊಂಡಿದ್ದೇವೆ. ನಮ್ಮ ಸಂಸ್ಥೆ ಆರಂಭಿಸಿದಾಗ ಐವತ್ತು ವರ್ಷಕ್ಕೂ ಹೆಚ್ಚು ಕಾಲ ಇರುತ್ತದೆ ಎಂಬ ಮಹತ್ವಾಕಾಂಕ್ಷೆ ಇರಲಿಲ್ಲ. ಆದರೆ ಈಗ ಯುವ ಜನಾಂಗದವರು ಇದರ ಚುಕ್ಕಾಣಿ ಹಿಡಿಯುತ್ತಿರುವ ಕಾರಣ ಇನ್ನಷ್ಟು ಕಾಲ ಇರಲಿದೆ ಎಂಬ ಭರವಸೆ ಇದೆ.

ಕನ್ನಡ ರಂಗಭೂಮಿ ಅದರಲ್ಲಿಯೂ ಹವ್ಯಾಸಿ ರಂಗಭೂಮಿ ಸಂಕ್ರಮಣ ಸ್ಥಿತಿಯಲ್ಲಿದೆ. ಇದು ಒಮ್ಮೆ ವೃತ್ತಿ ರಂಗಭೂಮಿಯಂತೆ, ಅರೆವೃತ್ತಿ ರಂಗಭೂಮಿಯಂತೆ ತೂಗಾಡುತ್ತಿದೆ. ಎಪ್ಪತ್ತರ ದಶಕದಲ್ಲಿ ಪೂರ್ಣಾವಧಿಯ ಸವಾಲೆನಿಸುವ ನಾಟಕಗಳನ್ನು ಹವ್ಯಾಸಿ ರಂಗಭೂಮಿ ಅಪ್ಪಿಕೊಂಡಿತ್ತು. ಈಗ ನಾಟಕಗಳ ಆಯ್ಕೆಯೇ ಬೇರೆಯಾಗಿದೆ. ಕೆಲವು ತಂಡಕ್ಕೆ, ವ್ಯಕ್ತಿಗಳಿಗೆ ಸರಕಾರ ಮತ್ತು ಕಾರ್ಪೊರೇಟ್‌ಗಳ ಲಕ್ಷಾಂತರ ರೂಪಾಯಿ ನೆರವು ಹರಿದುಬರುತ್ತಿದೆ. ಸರಕಾರ ಯಾವು ಯಾವುದಕ್ಕೋ ಕೊಡುತ್ತೆ ಕೊಡಲಿ ಬಿಡಿ ಎಂಬ ಬೇಜವಾಬ್ದಾರಿ ಹೇಳಿಕೆಗಳು ಬರುತ್ತಿವೆ.

ಈ ಎಲ್ಲದರ ನಡುವೆ ನಾವು ಕೆಲಸಮಾಡಬೇಕಿದೆ.

Writer - ವಾರ್ತಾಭಾರತಿ

contributor

Editor - Thouheed

contributor

Byline - ಗಣೇಶ ಅಮೀನಗಡ

contributor

Similar News