ಶಿವಮೊಗ್ಗ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಅವರ ಪರ ನಟ ಶಿವರಾಜ್‌ ಕುಮಾರ್ ಭರ್ಜರಿ ಪ್ರಚಾರ

Update: 2024-03-20 17:32 GMT

ಶಿವಮೊಗ್ಗ: ಗೀತಾ ಅವರನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ. ಅವರಿಗೆ ಒಂದೇ ಒಂದು ಅವಕಾಶ ಕೊಡಿ ಎಂದು ನಟ ಶಿವರಾಜ್‌ ಕುಮಾರ್ ತಮ್ಮ ಪತ್ನಿ ಗೀತಾ ಪರ ಬಾವುಕವಾಗಿ ಮತದಾರರಲ್ಲಿ ಮನವಿ ಮಾಡಿದರು.

ನಗರದ ಲಗಾನ್ ಕಲ್ಯಾಣ ಮಂದಿರದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಗೀತಾ ಬಂಗಾರಪ್ಪ ಅವರ ಮಗಳಾಗಿ, ರಾಜಕುಮಾರ್ ಅವರ ಸೊಸೆಯಾಗಿ, ಶಿವರಾಜ್ ಕುಮಾರನ ಹೆಂಡತಿಯಾಗಿ ಸಾಕಷ್ಟು ಅನುಭವವನ್ನು ಹೊಂದಿದ್ದಾರೆ. ಶಿವಮೊಗ್ಗ ಜಿಲ್ಲೆಯ ಮಹಿಳೆಯರ, ಮಕ್ಕಳ ಧ್ವನಿಯಾಗಿ ಕೆಲಸ ಮಾಡಲಿದ್ದಾರೆ. ಅವರನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇನೆ. ಅವರನ್ನು ಸಂಸದರನ್ನಾಗಿ ಯಾಕೆ ಆಯ್ಕೆ ಮಾಡಬಾರದು, ಗೀತಾ ಅವರಿಗೆ ಒಂದು ಅವಕಾಶ ಕೊಡಿ ಎಂದು ಮನವಿ ಮಾಡಿಕೊಂಡರು.

2014ರ ಚುನಾವಣೆಯಲ್ಲಿ ಸೋತಿದ್ದರೂ ಅದರ ಬಗ್ಗೆ ಧೃತಿಗೆಟ್ಟಿಲ್ಲ. ಸ್ಪರ್ಧೆ ಎಂದ ಮೇಲೆ ಸೋಲು – ಗೆಲುವು ಇದ್ದಿದ್ದೆ. ಆದರೆ ಚುನಾವಣೆಯಲ್ಲಿ ಜನರಿಗೆ ಭರವಸೆಗಳನ್ನು ನೀಡುವುದು ಮುಖ್ಯ. ಜನರಿಗೆ ಕೇವಲ ಭರವಸೆಗಳನ್ನು ನೀಡಬಾರದು ಆಗುವ ಕೆಲಸವನ್ನು ಆಗುತ್ತದೆ. ಆಗದ ಕೆಲಸವನ್ನು ಆಗುವುದಿಲ್ಲ ಎಂದು ನೇರವಾಗಿ ಹೇಳಬೇಕು ಅದುವೇ ನಿಜವಾದ ರಾಜಕಾರಣ ಎಂದರು.

ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಮಾತನಾಡಿ, "ಮನೆಯ ಮಗಳನ್ನು ಬರಿಗೈಯಲ್ಲಿ ಕಳಿಸಬೇಡಿ. ನಾನು ಗೆದ್ದು ಸಂಸತ್ತಿನಲ್ಲಿ ಶಿವಮೊಗ್ಗದ ಧ್ವನಿಯಾಗಿರುತ್ತೇನೆ. ಜಿಲ್ಲೆಗೆ, ಪಕ್ಷಕ್ಕೆ ,ಪಕ್ಷದ ನಾಯಕರಿಗೆ ಎಂದಿಗೂ ಕೆಟ್ಟ ಹೆಸರು ತರಲಾರೆ. ತಂದೆಯಂತೆ ಜನರಿಗಾಗಿ ದುಡಿಯುತ್ತೇನೆ ಎಂದು ಭಾವುಕರಾಗಿ ಮನವಿ ಮಾಡಿಕೊಂಡರು.

ನನ್ನ ತಂದೆ ಮೊದಲ ಬಾರಿಗೆ ಶಾಸಕರಾಗಿದ್ದಾಗಿನಿಂದ ಇಲ್ಲಿಯವರೆಗೂ ರಾಜಕಾರಣವನ್ನು ನೋಡಿಕೊಂಡು ಬಂದಿದ್ದೇನೆ. ನನ್ನ ತಂದೆ ನನ್ನನ್ನು ನಿಮ್ಮಂತೆ ಸಾಮಾನ್ಯಳನ್ನಾಗಿ ಬೆಳೆಸಿದರು. ನಾನು ಈ ಜಿಲ್ಲೆಯ ಮನೆ ಮಗಳು ನನಗೆ ನೀವು ವೋಟು ಕೊಡಲೇಬೇಕು ಎಂದು ಮನವಿ ಮಾಡಿಕೊಂಡರು.

ಸಚಿವ ಮಧು ಬಂಗಾರಪ್ಪ ಮಾತನಾಡಿ, "ಸಂಸದರಾಗಿರುವ ರಾಘವೇಂದ್ರ ಯಾವತ್ತಾದರೂ ವಿಐಎಸ್ಎಲ್ ಮತ್ತು ಶರಾವತಿ ಸಂತ್ರಸ್ತರ ಬಗ್ಗೆ ಸಂಸತ್ತಿನಲ್ಲಿ ಮಾತನಾಡಿದ್ದಾರೆಯೇ?. ಸಂಸದರಾಗಿ ನೀವು ಏನು ಮಾಡಿದ್ದೀರಿ" ಎಂದು ಪ್ರಶ್ನಿಸಿದರು.

ಸಭೆಯಲ್ಲಿ ಮಾಜಿ ಸಂಸದ ಆಯನೂರು ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್, ಮುಖಂಡರಾದ ಎಂ.ಶ್ರೀಕಾಂತ್, ಆರ್ ಪ್ರಸನ್ನಕುಮಾರ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಎನ್.ರಮೇಶ್, ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷ ಎಸ್ ರವಿಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News