ಶಿವಮೊಗ್ಗ| ಪತಿಯಿಂದಲೇ ಪತ್ನಿಯ ಹತ್ಯೆ

Update: 2024-01-21 12:18 GMT

ಶಿವಮೊಗ್ಗ: ಕೌಟುಂಬಿಕ ಕಲಹಕ್ಕೆ ಮಾರಕಾಸ್ತ್ರದಿಂದ ದಾಳಿ ನಡೆಸಿ ಪತಿಯೇ ಪತ್ನಿಯನ್ನು ಹತ್ಯೆಗೈದಿರುವ ಘಟನೆ ಸಾಗರ ತಾಲೂಕು ಕರೂರು ಹೋಬಳಿಯ ಕುದರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆವಿಗೆ ಗ್ರಾಮದಲ್ಲಿ ನಡೆದಿದೆ.

 ಮೃತ ಪತ್ನಿಯನ್ನು ನೀಲಾವತಿ (29) ಎಂದು ಗುರುತಿಲಾಗಿದೆ. ಪತಿ ಲೋಕೇಶ್ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದು, ಗಂಭೀರ ಗಾಯಗೊಂಡಿದ್ದ ನೀಲಾವತಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಕೌಟುಂಬಿಕ ಕಲಹದಿಂದ ಬೇಸತ್ತು ನೀಲಾವತಿ ತನ್ನ ಮೂರು ಹೆಣ್ಣು ಮಕ್ಕಳೊಂದಿಗೆ ತವರು ಮನೆಗೆ ಹೋಗಿದ್ದರು. ಶನಿವಾರ ಬೆಳಗ್ಗೆ ಬಟ್ಟೆ ಕೊಂಡೊಯ್ಯಲು ಗಂಡನ ಮನೆಗೆ ವಾಪಾಸಾಗಿದ್ದರು. ಆ ಸಂದರ್ಭ ಲೋಕೇಶ್ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ರಕ್ತದ ಮಡುವಿನಲ್ಲಿದ್ದ ನೀಲಾವತಿ ಅವರನ್ನು ಅಕ್ಕ-ಪಕ್ಕದ ಮನೆಯವರು ತುಮರಿಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ  ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ  ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆ ಸಂಬಂಧ ಕಾರ್ಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News