ಈಡಿ, ಐಟಿ ಕ್ರಮ ಎದುರಿಸಿದ್ದ ಕನಿಷ್ಠ 30 ಕಂಪನಿಗಳಿಂದ ಬಿಜೆಪಿಗೆ 335 ಕೋಟಿ ದೇಣಿಗೆ

Update: 2024-02-27 06:56 GMT
Editor : Ismail | Byline : ಆರ್. ಜೀವಿ

ಮೋದಿ ಸರ್ಕಾರದ ಚುನಾವಣಾ ಬಾಂಡ್ ಯೋಜನೆಯನ್ನು ಸುಪ್ರಿಂ ಕೋರ್ಟ್ ರದ್ದುಪಡಿಸಿದೆ. ಅದನ್ನು ಅಸಾಂವಿಧಾನಿಕ ಎಂದು ಕೋರ್ಟ್ ಹೇಳಿದೆ. ಆದರೆ ಮೋದಿ ಸರ್ಕಾರ ​2017-18ರಿಂದ 2022-23ರವರೆಗಿನ ಅವಧಿಯಲ್ಲಿ ಅಂಥದೊಂದು​ ಅತ್ಯಂತ ಅಸಾಂವಿಧಾನಿಕ​, ಅಕ್ರಮ ವ್ಯವಸ್ಥೆಯ ಮೂಲಕವೇ ಬಿಜೆಪಿಗಾಗಿ ಪಡೆದದ್ದು ​6,570 ಕೋಟಿ ರೂ. ಈ ಮೊತ್ತ ಚುನಾವಣಾ ಬಾಂಡ್ಗಳ ಮಾರಾಟದಿಂದ ಸಂಗ್ರಹವಾಗಿದ್ದ ​ಒಟ್ಟು ಮೊತ್ತದ ಅರ್ಧಕ್ಕಿಂತಲೂ ಹೆಚ್ಚು.

ಚುನಾವಣಾ ಬಾಂಡ್ ಬಗ್ಗೆ ಆಕ್ಷೇಪಗಳನ್ನೆತ್ತಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ವೇಳೆ, ರಾಜಕೀಯ ಪಕ್ಷಗಳಿಗೆ ಹಣ ಎಲ್ಲಿಂದ ಬರುತ್ತದೆ ಎಂದು ತಿಳಿಯುವ ಹಕ್ಕು ಜನರಿಗೆ ಇಲ್ಲ ಎಂದು ಸುಪ್ರೀಂ ಕೋರ್ಟ್ನಲ್ಲಿ ಹೇಳಿದ್ದು ಕೂಡ ಇದೇ ಮೋದಿ ಸರ್ಕಾರ. ​ಪ್ರಧಾನ ಮಂತ್ರಿ ಅಲ್ಲ ನಾನು.... ನಾನು ಜನರ ಪ್ರಧಾನ ಸೇವಕ, ನಾನು ಜನರ ಸೊತ್ತು ಜತನದಿಂದ ಕಾಪಾಡುವ ಚೌಕಿದಾರ ಎಂದೆಲ್ಲ ಹೇಳುವ ಮೋದಿ ಸರಕಾರ ಮಾಡಿರೋ ಕೆಲಸ ಇದು.

ಜನರನ್ನು ಕತ್ತಲೆಯಲ್ಲಿಟ್ಟು ಕಾರ್ಪೊರೇಟ್ ವಲಯದಿಂದ​ ಬಿಜೆಪಿಗೆ ಕೋಟಿ ಕೋಟಿ ​ಬಾಚುತ್ತಿತ್ತು ​ಮೋದಿ ಸರ್ಕಾರ. ಹೇಗೆ ಬಿಜೆಪಿಗೆ ಕೋಟಿ ಕೋಟಿ ದೇಣಿಗೆ ಬರುತ್ತಿತ್ತು? ಮತ್ತು ಎಲ್ಲಿಂದ ಬರುತ್ತಿತ್ತು? ಹೀಗೆ ಕೋಟಿ ಕೋಟಿ ದೇಣಿಗೆ ಪಡೆಯುವುದಕ್ಕೂ ಮೋದಿ ಸರ್ಕಾರ ಈಡಿಯಂಥ ತನಿಖಾ ಸಂಸ್ಥೆಗಳನ್ನು ಅಸ್ತ್ರವಾಗಿ ಬಳಸುತ್ತಿತ್ತೆ? ದಿ ನ್ಯೂಸ್ ಮಿನಿಟ್ ಹಾಗು ನ್ಯೂಸ್ ಲಾಂಡ್ರಿ ಜಂಟಿಯಾಗಿ ಮಾಡಿರುವ ತನಿಖಾ ವರದಿ, ​ಈ ಕುರಿತ ಹಲವು ರಹಸ್ಯಗಳನ್ನು ಹೊರಹಾಕಿದೆ.

ಬಿಜೆಪಿ ಬೊಕ್ಕಸಕ್ಕೆ ಹೀಗೆ ಕೋಟಿಗಟ್ಟಲೆ ಹರಿದುಬರುತ್ತಿದ್ದುದರ ಹಿಂದಿನ ಆಟ ಎಂಥದಿತ್ತು ಎಂಬುದನ್ನು ದಾಖಲೆಗಳನ್ನು ಆಧರಿಸಿ ಆ ತನಿಖಾ ವರದಿ ಬಯಲು ಮಾಡಿದೆ.

2018-19ರಿಂದ 2022-23ರವರೆಗಿನ ಅವಧಿಯ ಚುನಾವಣಾ ಆಯೋಗದ ದಾಖಲೆಗಳು, ಕೇಸ್ ಫೈಲ್ಗಳು​, ಹಣಕಾಸು ಸ್ಟೇಟ್ಮೆಂಟ್ಗಳು, ಕೇಂದ್ರೀಯ ಏಜನ್ಸಿಗಳ ಸಮೀಕ್ಷೆಗಳನ್ನು ಈ ತನಿಖಾ ವರದಿ ಉಲ್ಲೇಖಿಸಿದೆ.

ಅವೆಲ್ಲವುಗಳ ವಿಶ್ಲೇಷಣೆಯಲ್ಲಿ ಕಂಡುಕೊಂಡಿರುವ ಸತ್ಯಗಳನ್ನು ಈ ತನಿಖಾ ವರದಿ ಜನ​ರೆದುರು ಇಟ್ಟಿದೆ. ಪ್ರತೀಕ್ ಗೋಯಲ್, ಕೋರಾ ಅಬ್ರಹಾಂ, ನಂದಿನಿ ಚಂದ್ರಶೇಖರ್ ಹಾಗು ಬಸಂತ್ ಕುಮಾರ್ ಅವರು ಜೊತೆಯಾಗಿ ಈ ತನಿಖಾ ವರದಿ ಮಾಡಿದ್ದಾರೆ.

ಮೊದಲಿಗೆ ಕೆಲವು ಮುಖ್ಯ ಅಂಶಗಳನ್ನು ನೋಡುವುದಾದರೆ, ತನಿಖಾ ವರದಿ ಬಹಿರಂಗಪಡಿಸಿರುವಂತೆ, ಬಿಜೆಪಿಗೆ 335 ಕೋಟಿ ದೇಣಿಗೆ ನೀಡಿದ್ದ ಕನಿಷ್ಠ 30 ಕಂಪನಿಗಳು ​ಈಡಿ, ಐಟಿ ಕ್ರಮವನ್ನು ಎದುರಿಸುತ್ತಿದ್ದವು. 2018-19 ಮತ್ತು 2022-23ರ ಅವಧಿಯಲ್ಲಿ ಬಿಜೆಪಿಗೆ ಸುಮಾರು 335 ಕೋಟಿ ರೂ.ಗಳನ್ನು ದೇಣಿಗೆ ನೀಡಿದ 30 ಕಂಪನಿಗಳು ಅದೇ ಅವಧಿಯಲ್ಲಿಯೇ ಕೇಂದ್ರ ​ತನಿಖಾ ಏಜೆನ್ಸಿಗಳ ಕ್ರಮವನ್ನು ಎದುರಿಸಿದ್ದವು.

ಈ 5 ವರ್ಷಗಳ ಅವಧಿಯಲ್ಲಿ ಒಟ್ಟು 187.58 ಕೋಟಿ ರೂ.ಗಳನ್ನು ಬಿಜೆಪಿಗೆ ನೀಡಿದ್ದ 23 ಕಂಪನಿಗಳು, 2014ರಿಂದ ದಾಳಿ ನಡೆದ ವರ್ಷದವರೆಗೆ ಬಿಜೆಪಿಗೆ ಯಾವುದೇ ದೇಣಿಗೆ ನೀಡಿರಲಿಲ್ಲ. ಈ ಪೈಕಿ ಕನಿಷ್ಠ 4 ಕಂಪನಿಗಳು ತನಿಖಾ ಸಂಸ್ಥೆಗಳ ​ದೃಷ್ಟಿ ತಮ್ಮ ಮೇಲೆ ಬಿದ್ದ ಬಳಿಕ 4 ತಿಂಗಳೊಳಗೆ ಒಟ್ಟು 9.05 ಕೋಟಿ ರೂ.ಗಳನ್ನು ದೇಣಿಗೆ ನೀಡಿದವು.

ಬಿಜೆಪಿಗೆ ಆಗಲೇ ದೇಣಿಗೆ ನೀಡುತ್ತಿದ್ದ ಕಂಪನಿಗಳಲ್ಲಿ ಕನಿಷ್ಠ 6 ಕಂಪನಿಗಳು ತನಿಖಾ ಸಂಸ್ಥೆಗಳ ದಾಳಿ ಮತ್ತು ಶೋಧದ ನಂತರದ ತಿಂಗಳುಗಳಲ್ಲಿ ಹೆಚ್ಚಿನ ಮೊತ್ತದ ದೇಣಿಗೆ ನೀಡಿದವು. ಈ ಹಿಂದೆ ಪ್ರತಿ ವರ್ಷವೂ ಬಿಜೆಪಿಗೆ ದೇಣಿಗೆ ನೀಡುತ್ತಿದ್ದ ಬೇರೆ 6 ಕಂಪನಿಗಳು ಒಂದು ವರ್ಷ ದೇಣಿಗೆ ನೀಡುವುದನ್ನು ತಪ್ಪಿಸಿದ್ದ ಕಾರಣಕ್ಕೆ ತನಿಖಾ ಸಂಸ್ಥೆಗಳ ಕ್ರಮವನ್ನು ಎದುರಿಸಬೇಕಾಗಿ ಬಂದಿತ್ತು.

30 ಕಂಪನಿಗಳ ಪಟ್ಟಿಯಲ್ಲಿರದ, ಆದರೆ ಬಿಜೆಪಿಗೆ ​ದೇಣಿಗೆ ನೀಡುವ ಕನಿಷ್ಠ 3 ಕಂಪನಿಗಳು ಅದಕ್ಕೆ ಪ್ರತಿಯಾಗಿ ಕೇಂದ್ರ ಸರ್ಕಾರದಿಂದ ಲಾಭ ಪಡೆದಿವೆ ಎಂಬ ಆರೋಪಗಳಿವೆ. ಬಿಜೆಪಿಗೆ ದೇಣಿಗೆ ನೀಡುತ್ತಿದ್ದ ಇಷ್ಟು ಕಂಪನಿಗಳಲ್ಲಿ 3 ಕಂಪನಿಗಳು ಮಾತ್ರ ಆ 5 ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್‌ಗೆ ದೇಣಿಗೆ ನೀಡಿವೆ ಎಂಬುದನ್ನು ತನಿಖಾ ವರದಿ ಕಂಡುಕೊಂಡಿದೆ.

ತನಿಖಾ ವರದಿ ಪತ್ತೆ ಮಾಡಿರುವಂತೆ, ಒಂದು ವಿಚಾರವಂತೂ ಸ್ಪಷ್ಟ. ಬಿಜೆಪಿ ಇಷ್ಟೊಂದು ಶ್ರೀಮಂತ ಪಕ್ಷವಾದದ್ದು ಸುಮ್ಮಸುಮ್ಮನೆ ಅಲ್ಲ. ಬಿಜೆಪಿಯ ಈ ಏರುಗತಿಯ ಹಿಂದೆ ಚುನಾವಣಾ ಬಾಂಡ್ಗಳಿದ್ದುದು ಮಾತ್ರವಲ್ಲ, ವ್ಯವಸ್ಥಿತವಾಗಿ ಅದು ಕಾರ್ಪೊರೇಟ್ ಕಂಪೆನಿಗಳ ಮೇಲೆ ಹಿಡಿತ ಸಾಧಿಸಿತ್ತು.

ಅವನ್ನು ಮಣಿಸಲು ತನಿಖಾ ಏಜನ್ಸಿಗಳನ್ನು ಅಸ್ತ್ರವಾಗಿ ಬಳಸಿತ್ತು. ಬಿಜೆಪಿಗೆ ಕಾರ್ಪೊರೇಟ್ ದೇಣಿಗೆ ಹರಿದುಬರುವಲ್ಲಿ ಕಾಲಕಾಲಕ್ಕೆ ನಡೆದ ರೇಡ್ ಗಳ ದೊಡ್ಡ ಪಾತ್ರವಿತ್ತು. ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಹಣ ಕೇವಲ ಒಂದು ಪಕ್ಷಕ್ಕೆ ಮಾತ್ರವೇ, ಅಂದರೆ ಬಿಜೆಪಿಗೆ ಮಾತ್ರವೇ ಹರಿದುಬಂದಿತ್ತು. ಕಳೆದ ಕೆಲವು ವರ್ಷಗಳಲ್ಲಿ, ಆಡಳಿತಾರೂಢ ಬಿಜೆಪಿ ನಿರಂತರವಾಗಿ ಇತರ ಪಕ್ಷಗಳಿಗಿಂತ ಹೆಚ್ಚು ದೇಣಿಗೆಯನ್ನು ಪಡೆಯುತ್ತಿರುವುದು ಹೇಗೆ ಎಂಬುದರ ವರದಿಗಳು ಬಂದದ್ದಿದೆ.

ಚುನಾವಣಾ ಬಾಂಡ್ಗಳಿಗೂ ಮುಂಚಿನಿಂದ ಇರುವ ಚುನಾವಣಾ ಟ್ರಸ್ಟ್ ಗಳ ಮೂಲಕವೂ ಹೆಚ್ಚು ಹಣ ಪಡೆದುಕೊಂಡಿರುವುದು ಬಿಜೆಪಿಯೇ.

ಯುಪಿಎ ಅವಧಿಯಲ್ಲಿ 2013ರಲ್ಲಿ ಬಂದಾಗಿನಿಂದಲೂ ಚುನಾವಣಾ ಟ್ರಸ್ಟ್ ಯೋಜನೆ ಮೂಲಕ ಬಿಜೆಪಿಗೇ ಹೆಚ್ಚು ಲಾಭವಾಗಿದೆ. ಕಳೆದ 10 ವರ್ಷಗಳಲ್ಲಿ ವಿವಿಧ ಚುನಾವಣಾ ಟ್ರಸ್ಟ್ಗಳ ಮೂಲಕ ಬಿಜೆಪಿ 1,893 ಕೋಟಿ ರೂ. ಪಡೆದಿದೆ. ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, 2022-23ರಲ್ಲಿ ಚುನಾವಣಾ ಟ್ರಸ್ಟ್ಗಳಿಂದ ಬಂದ ಒಟ್ಟು ದೇಣಿಗೆಯ ಶೇ.70ರಷ್ಟು ಬಿಜೆಪಿಗೇ ಬಂದಿದೆ.

ಚುನಾವಣಾ ಬಾಂಡ್‌ಗಳ ಮೂಲಕವೂ ಬಿಜೆಪಿಯೇ ಹೆಚ್ಚು ಲಾಭ ಗಳಿಸಿದೆ. 2022-23ರಲ್ಲಿ ಇದು ಸುಮಾರು 1,300 ಕೋಟಿ ರೂ.ಗಳನ್ನು ಪಡೆದಿದೆ. ಅಂದರೆ, ಅದೇ ಅವಧಿಯಲ್ಲಿ ಕಾಂಗ್ರೆಸ್ ಪಡೆದಿದ್ದಕ್ಕಿಂತ ಏಳು ಪಟ್ಟು ಹೆಚ್ಚು. ಈ ಅವಧಿಯಲ್ಲಿ ಬಿಜೆಪಿಗೆ ಬಂದ ದೇಣಿಗೆಗಳಲ್ಲಿ ಶೇ.61ರಷ್ಟು ಹಣ ಚುನಾವಣಾ ಬಾಂಡ್‌ಗಳ ಮೂಲಕವೇ ಬಂದಿದೆ.

2018 ಮತ್ತು 2022ರ ಅವಧಿಯಲ್ಲಿ ಚುನಾವಣಾ ಬಾಂಡ್ಗಳ ಮೂಲಕ ನೀಡಲಾದ ಒಟ್ಟು ದೇಣಿಗೆಗಳಲ್ಲಿ ಸುಮಾರು ಶೇ.57ರಷ್ಟು ಬಿಜೆಪಿಯ ಪಾಲಾಗಿದೆ. ಹೀಗೆ ದೇಣಿಗೆಗಳಲ್ಲಿನ ಸಿಂಹಪಾಲನ್ನು ಬಿಜೆಪಿಯೇ ಪಡೆಯು​ತ್ತಾ ಬಂದಿದೆ.

ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಪ್ರಕಾರ, 2022-23ರಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಒಟ್ಟು 850.4 ಕೋಟಿ ದೇಣಿಗೆ ಬಂದಿದ್ದು, ಬಿಜೆಪಿಯೊಂದಕ್ಕೇ 719.8 ಕೋಟಿ ರೂ. ಹೋಗಿದೆ. ಈ ಮಧ್ಯೆ, ಸರ್ಕಾರ ಬಿಡುಗಡೆ ಮಾಡಿದ ಎಲೆಕ್ಟೋರಲ್ ಬಾಂಡ್‌ಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂತು.

ಮಾರ್ಚ್ 2022ರಿಂದ ಮಾರ್ಚ್ 2023ರವರೆಗಿನ ವಿತ್ತೀಯ ವರ್ಷದಲ್ಲಿ ಒಟ್ಟು 2,800 ಕೋಟಿ ರೂ. ಮೌಲ್ಯದ ಎಲೆಕ್ಟೋರಲ್ ಬಾಂಡ್‌ಗಳನ್ನು ಮಾರಾಟ ಮಾಡಲಾಗಿತ್ತು. ಸಂಸತ್ತಿನಲ್ಲಿ ಸರ್ಕಾರ ನೀಡಿರುವ ಅಂಕಿಅಂಶಗಳ ಪ್ರಕಾರ, 2018ರಿಂದ 16,518 ಕೋಟಿ ರೂ ಮೌಲ್ಯದ ಬಾಂಡ್‌ಗಳನ್ನು ಮಾರಾಟ ಮಾಡಲಾಗಿದೆ.

ಈ ಬಾಂಡ್‌ಗಳನ್ನು ಖರೀದಿಸಿದವರು ಯಾರು? 2018ರಿಂದ ಡಿಸೆಂಬರ್ 2022ರವರೆಗೆ, 1,000 ರೂ. ಮುಖಬೆಲೆಯ ಬಾಂಡ್‌ಗಳ ಮಾರಾಟದ ಪ್ರಮಾಣ ಶೇ.0.01 ಮಾತ್ರ. ಆದರೆ 1 ಕೋಟಿ ಮೌಲ್ಯದ ಬಾಂಡ್ಗಳು ಶೇ.94.41ರಷ್ಟು ಮಾರಾಟವಾಗಿವೆ. ಲೋಕೇಶ್ ಬಾತ್ರಾ ಅವರು RTI ಮೂಲಕ ಪಡೆದಿರುವ ಮಾಹಿತಿ ಇದು. ಈ ದೇಣಿಗೆಗಳ ಹಿಂದೆ ಕಾರ್ಪೊರೇಟ್ ಸಂಸ್ಥೆಗಳು, ವ್ಯಕ್ತಿಗಳು ಅಥವಾ ಶೆಲ್ ಕಂಪನಿಗಳು ಇರುವ ಸಾಧ್ಯತೆಯಿದೆ ಎನ್ನುತ್ತದೆ ತನಿಖಾ ವರದಿ.

ಚುನಾವಣಾ ಬಾಂಡ್​ ಗೂ ಹಿಂದಿದ್ದ ಚುನಾವಣಾ ಟ್ರಸ್ಟ್ ವ್ಯವಸ್ಥೆ ಬಹುತೇಕ ಅಳಿವಿನ ಹಾದಿಯಲ್ಲಿದ್ದರೂ, ಭಾರ್ತಿ ಗ್ರೂಪ್ ಸ್ಥಾಪಿಸಿದ ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್ ಮಾತ್ರ ಇನ್ನೂ ಉಳಿದುಕೊಂಡಿದೆ. ದೊಡ್ಡ ದೊಡ್ಡ ಕಂಪನಿಗಳು ಪ್ರುಡೆಂಟ್‌ಗೆ ನೂರಾರು ಕೋಟಿ ದೇಣಿಗೆ ನೀಡಿದ್ದು, ಆ ಹಣದ ಬಹುಪಾಲು ಕೂಡ ಬಿಜೆಪಿಗೇ ಹೋಗಿದೆ. ಇತರ ಚುನಾವಣಾ ಟ್ರಸ್ಟ್ ಗಳು ನಿಷ್ಕ್ರಿಯವಾಗಿರುವಾಗ, ಪ್ರುಡೆಂಟ್ ಮಾತ್ರವೇ ಏಕೆ ಇನ್ನೂ ದೇಣಿಗೆ ಸ್ವೀಕರಿಸುವುದನ್ನು ಮುಂದುವರಿಸಿದೆ?

ಮತ್ತು ಚುನಾವಣಾ ಬಾಂಡ್‌ ವ್ಯವಸ್ಥೆ ಬಂದ ನಂತರವೂ ಕೆಲವು ಕಂಪನಿಗಳು ಚುನಾವಣಾ ಟ್ರಸ್ಟ್ಗಳನ್ನೇ ದೇಣಿಗೆ ನೀಡಲು ಆಯ್ಕೆ ಮಾಡಿಕೊಳ್ಳುತ್ತಿದ್ದದ್ದು ಏಕೆ? ಈ ಹಲವು ಪ್ರಶ್ನೆಗಳಿಗೂ ತನಿಖಾ ವರದಿ ಉತ್ತರ ಹುಡುಕಿದೆ.

ಇದನ್ನೆಲ್ಲ ನೋಡುತ್ತ ಹೋದಾಗ, ಇಷ್ಟು ದೊಡ್ಡ ಮೊತ್ತದ ದೇಣಿಗೆ ಬಿಜೆಪಿಗೆ ಹರಿದುಬಂದದ್ದರ ಹಿಂದೆ ಸುಲಿಗೆಗಿಂತ ಯಾವ ಲೆಕ್ಕದಲ್ಲೂ ಕಡಿಮೆಯಿಲ್ಲದ ನಡೆಯೇ ಇದ್ದುದು ಗಮನಕ್ಕೆ ಬರುತ್ತದೆ. ಮೋದಿ ಸರ್ಕಾರ ತಂದಿದ್ದ ಚುನಾವಣಾ ಬಾಂಡ್‌ ಯೋಜನೆ ಪಾರದರ್ಶಕವಾಗಿಲ್ಲ ಎಂಬ ಆತಂಕ ಮೊದಲಿಂದಲೂ ಇತ್ತು. ಯೋಜನೆಯನ್ನು ಫೆಬ್ರವರಿ 15ರಂದು ರದ್ದು ಮಾಡುವಾಗ ಸುಪ್ರಿಂ ಕೋರ್ಟ್ ಕೂಡ, ಇದು ​"ಕ್ವಿಡ್ ಪ್ರೊ ಕೋ​" ಗೆ​ ಅಂದ್ರೆ ಕೊಡು ಕೊಳ್ಳುವಿಕೆಗೆ ಕಾರಣವಾಗಬಹುದು ಎಂದು ಎಚ್ಚರಿಸಿದೆ.

ಕಳೆದ 10 ವರ್ಷಗಳಲ್ಲಿ 1 ಕೋಟಿ ಅಥವಾ ಅದಕ್ಕಿಂತ ಹೆಚ್ಚು ದೇಣಿಗೆ ನೀಡಿದ ಕಂಪನಿಗಳ ಪಟ್ಟಿಯನ್ನು ನ್ಯೂಸ್‌ಲಾಂಡ್ರಿ ಮತ್ತು ದಿ ನ್ಯೂಸ್ ಮಿನಿಟ್ ಪರಿಶೀಲನೆಗೆ ಒಳಪಡಿಸಿವೆ. ಹಾಗೆ ಪರಿಶೀಲಿಸಿದಾಗ ಎರಡು ಟ್ರೆಂಡ್‌ಗಳು ಕಂಡುಬಂದಿವೆ. ಒಂದು, ಬಿಜೆಪಿಗೆ ಬಹು ದೊಡ್ಡ ಮೊತ್ತದ ದೇಣಿಗೆ ನೀಡಿದ್ದ ಕಂಪನಿಗಳ ಮೇಲೂ ಈಡಿ, ಐಟಿಯಂಥವುಗಳ ತೂಗುಗತ್ತಿ ಇದ್ದೇ ಇತ್ತು.

ಎರಡನೆಯದು, ಆ ಕಂಪನಿಗಳ ಮೇಲೆ ಈಡಿ, ಐಟಿ ರೇಡ್ ನಡೆದ ಬಳಿಕ ಅವು ಕೊಡುವ ದೇಣಿಗೆಯ ಮೊತ್ತದಲ್ಲಿ ಹೆಚ್ಚಳವಾಯಿತು ಹಾಗೂ ದೇಣಿಗೆ ನಿಲ್ಲಿಸಿದ್ದ ಕಂಪನಿಗಳು ಈಡಿ, ಐಟಿ ರೇಡ್​ ಗೆ ಒಳಗಾಗುವಂತಾಯಿತು. ಬಿಜೆಪಿಗೆ ದೇಣಿಗೆ ನೀಡಿಯೂ ಈಡಿ, ಐಟಿ ಭಯದಲ್ಲಿಯೇ ಇದ್ದಂಥ ಆ 30 ಕಂಪನಿಗಳು ಯಾವುವು? ಅವುಗಳ ಮೇಲೆ ಬಂದಿದ್ದ ಆರೋಪಗಳೇನಿದ್ದವು?

1.ಸೋಮ್ ಡಿಸ್ಟಿಲರೀಸ್ - ಮಧ್ಯಪ್ರದೇಶ ಮೂಲದ ಜೆಕೆ ಅರೋರಾ ಮತ್ತು ಎಕೆ ಅರೋರಾ ಒಡೆತನದ ಈ ಕಂಪನಿ 2018-19ರಲ್ಲಿ ಬಿಜೆಪಿಗೆ ರೂ 4.25 ಕೋಟಿ ದೇಣಿಗೆ ನೀಡಿತ್ತು. ಆದರೆ ಮುಂದಿನ ಹಣಕಾಸು ವರ್ಷದಲ್ಲಿ ಯಾವುದೇ ದೇಣಿಗೆ ನೀಡಿರಲಿಲ್ಲ.

ಜುಲೈ 2020ರಲ್ಲಿ, ಜಿಎಸ್‌ಟಿ ಗುಪ್ತಚರ ಅಧಿಕಾರಿಗಳು ಅರೋರಾ ಸೋದರರನ್ನು ಬಂಧಿಸಿದರು. 8 ಕೋಟಿ ರೂ.ಗಳ ತೆರಿಗೆ ವಂಚನೆ ಆರೋಪ ಹೊರಿಸಲಾಗಿತ್ತು.

ಜಾಮೀನು ಅರ್ಜಿಯನ್ನು ಎರಡು ಬಾರಿ ತಿರಸ್ಕರಿಸಿದ ನಂತರ ಜಾಮೀನು ನೀಡಲಾಯಿತು.

ಬಿಡುಗಡೆಯಾದ ಹತ್ತೇ ದಿನಗಳಲ್ಲಿ ಕಂಪನಿ ಬಿಜೆಪಿಗೆ 1 ಕೋಟಿ ರೂ.ಗಳ ದೇಣಿಗೆ ನೀಡಿತು, ಅದೇ ಹಣಕಾಸು ವರ್ಷದಲ್ಲಿ ಮತ್ತೆ 1 ಕೋಟಿಯನ್ನು ಎರಡು ಕಂತುಗಳಲ್ಲಿ ಕೊಟ್ಟಿತ್ತು.

ಮೇ 2021ರಲ್ಲಿ ಮತ್ತೆ 2 ಕೋಟಿ ದೇಣಿಗೆಯನ್ನು ಬಿಜೆಪಿಗೆ ನೀಡಿತು.

ಆದರೆ ಐದು ತಿಂಗಳ ನಂತರ, ಭಾರತೀಯ ಸ್ಪರ್ಧಾತ್ಮಕ ಆಯೋಗದ ರೇಡ್ ಆಯಿತು. ಬೆಲೆ ನಿಗದಿಯಲ್ಲಿ ಅಕ್ರಮವೆಸಗಿದ ಆರೋಪ ಮಾಡಲಾಯಿತು.

2022ರ ಜೂನ್‌ನಲ್ಲಿ ಬಿಜೆಪಿಗೆ ಇನ್ನೂ 1 ಕೋಟಿ ರೂಪಾಯಿಗಳನ್ನು ಕಂಪನಿ ದೇಣಿಗೆ ನೀಡಿತು. ಆದರೂ 2023ರ ನವೆಂಬರ್‌ನಲ್ಲಿ ವಿಧಾನಸಭೆ ಚುನಾವಣೆಯ ನಡುವೆಯೇ ಐಟಿ ಇಲಾಖೆಯಿಂದ ಶೋಧ ನಡೆಯಿತು. ಕಂಪನಿ ವಿರುದ್ಧದ ಪ್ರಕರಣದ ತನಿಖೆ ಬಾಕಿ ಇದೆ. ಸೋಮ್ ಡಿಸ್ಟಿಲರೀಸ್ 2019-2020ರಲ್ಲಿ ಕಾಂಗ್ರೆಸ್‌ಗೆ 1 ಕೋಟಿ ರೂ. ದೇಣಿಗೆ ನೀಡಿತ್ತು.

2. SNJ ಡಿಸ್ಟಿಲರೀಸ್ – ಡಿಎಂಕೆಯ ಎಂ ಕರುಣಾನಿಧಿಗೆ ಆಪ್ತರಾಗಿದ್ದ ಎಸ್‌ಎನ್ ಜಯಮುರುಗನ್ ಒಡೆತನದ ಈ ಕಂಪನಿ ಮೇಲೆ 2019ರ ಆಗಸ್ಟ್ನಲ್ಲಿ ಐಟಿ ದಾಳಿ ನಡೆಯಿತು. ನಾಲ್ಕು ತಿಂಗಳ ನಂತರ ಅದು ಬಿಜೆಪಿಗೆ 1.05 ಕೋಟಿ ರೂ. ದೇಣಿಗೆ ನೀಡಿತು.

ಮಾರ್ಚ್ 2021 ರಲ್ಲಿ ಬಿಜೆಪಿಗೆ ಮತ್ತೆ 6 ಕೋಟಿ ರೂ.ಗಳನ್ನು ನೀಡಿತು. ತಮಿಳುನಾಡು ಚುನಾವಣೆಗೆ ಸ್ವಲ್ಪ ಮೊದಲು ಏಪ್ರಿಲ್ 2021ರಲ್ಲಿ ಐಟಿ ಶೋಧ ನಡೆಯಿತು. 2022-23ರಲ್ಲಿ ಕಂಪನಿ ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್​ ಗೆ 5 ಕೋಟಿ ರೂ. ನೀಡಿತು. ಪ್ರುಡೆಂಟ್ ಟ್ರಸ್ಟ್ ತನ್ನ ಬಹುಪಾಲು ಹಣವನ್ನು ಬಿಜೆಪಿಗೆ ದೇಣಿಗೆ ನೀಡುತ್ತದೆ.

3. IRB ಇನ್ಫ್ರಾಸ್ಟ್ರಕ್ಚರ್ ಡೆವಲಪರ್ಸ್ ಲಿಮಿಟೆಡ್ - ಮುಂಬೈ ಮೂಲದ ಕಂಪನಿ ಕಳೆದ ದಶಕದಲ್ಲಿ ಬಿಜೆಪಿಗೆ ಹೆಚ್ಚು ದೇಣಿಗೆ ನೀಡಿದೆ​. 2013-14 ರಲ್ಲಿ 2.3 ಕೋಟಿ ಮತ್ತು 2014-15 ರಲ್ಲಿ 14 ಕೋಟಿ ರೂ. ನೀಡಿದೆ.

ಭೂಕಬಳಿಕೆ ಮತ್ತು ವಂಚನೆ ಆರೋಪದಲ್ಲಿ ಸಿಬಿಐ ಪುಣೆ ಮತ್ತು ಮುಂಬೈನಲ್ಲಿ ಕಂಪನಿಯ ಮೇಲೆ ರೇಡ್ ಮಾಡಿದ ಮೇಲಂತೂ ಅದೇ ವರ್ಷದಲ್ಲಿ ದೇಣಿಗೆಯಲ್ಲಿ ತೀವ್ರ ಏರಿಕೆಯಾಯಿತು.

ಕಂಪನಿಯ ಎರಡು ಅಂಗಸಂಸ್ಥೆಗಳಾದ ಮಾಡರ್ನ್ ರೋಡ್ ಮೇಕರ್ಸ್ ಮತ್ತು ಐಡಿಯಲ್ ರೋಡ್ ಬಿಲ್ಡರ್ಸ್ ಕೂಡ ಬಿಜೆಪಿಗೆ 84 ಕೋಟಿ ರೂ. ನೀಡಿವೆ. ಮಾಡರ್ನ್ ರೋಡ್ ಮೇಕರ್ಸ್ ಕಾಂಗ್ರೆಸ್ಗೆ ಕೂಡ 2014-15ರಲ್ಲಿ 5 ಕೋಟಿ ರೂ. ನೀಡಿತ್ತು.

4. ಆಸ್ಟ್ರಲ್ ಲಿ. - ಅಹಮದಾಬಾದ್ ಮೂಲದ ಕಂಪನಿಯ ಮೇಲೆ ನವೆಂಬರ್ 2021ರಲ್ಲಿ ರೇಡ್ ಆದ ಎರಡು ತಿಂಗಳ ನಂತರ, ಅದು ಬಿಜೆಪಿಗೆ 1 ಕೋಟಿ ರೂ. ನೀಡಿತು

5. ಶ್ರೀ ಸಿಮೆಂಟ್ಸ್ - ಕೋಲ್ಕತ್ತಾ ಮೂಲದ ಕಂಪನಿ 2020-21 ಮತ್ತು 2021-22ರಲ್ಲಿ ಬಿಜೆಪಿಗೆ 12 ಕೋಟಿ ರೂ.ಗಳನ್ನು ನೀಡಿದೆ.

ಆದರೆ 2022-23ರಲ್ಲಿ ಯಾವುದೇ ದೇಣಿಗೆ ನೀಡಿರಲಿಲ್ಲ. ಕಳೆದ ವರ್ಷ ಜೂನ್‌ನಲ್ಲಿ ಐಟಿ ರೇಡ್ ಆಯಿತು. 23,000 ಕೋಟಿ ರೂ. ತೆರಿಗೆ ವಂಚನೆ ಆರೋಪ ಮಾಡಲಾಯಿತು.

ಒಂದು ತಿಂಗಳ ನಂತರ, ಜುಲೈ 11 ರಂದು ಕಂಪನಿ ವಿರುದ್ದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ತನಿಖೆ ಆದೇಶ ಹೊರಡಿಸಿತು.

ಕಂಪನಿಯನ್ನು ಅದಾನಿ ಒಡೆತನದ ಅಂಬುಜಾ ಸಿಮೆಂಟ್ ಸ್ವಾಧೀನಪಡಿಸಿಕೊಂಡಿತು.

6. USV ಪ್ರೈವೇಟ್ ಲಿಮಿಟೆಡ್ - ಮುಂಬೈ ಮೂಲದ ಔಷಧೀಯ ಮತ್ತು ಜೈವಿಕ ತಂತ್ರಜ್ಞಾನ ಕಂಪನಿ. ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕ ಮತ್ತು ಉದ್ಯಮಿ ವಿಠಲ್ ಬಾಲಕೃಷ್ಣ ಗಾಂಧಿ ಪ್ರಾರಂಭಿಸಿದ್ದ ಕಂಪನಿಯನ್ನು ಈಗ ಅವರ ಮೊಮ್ಮಗಳು, ದೇಶದ ಎರಡನೇ ಶ್ರೀಮಂತ ಮಹಿಳೆ ಲೀನಾ ಗಾಂಧಿ ತಿವಾರಿ ನಡೆಸುತ್ತಿದ್ದಾರೆ.

ಸೆಪ್ಟೆಂಬರ್ 2017ರಲ್ಲಿ ಕಂಪನಿಗೆ ಸಂಬಂಧಿಸಿದ 20 ಕಡೆಗಳಲ್ಲಿ ಐಟಿ ದಾಳಿಯಾಯಿತು. ಅದಾಗಿ ಒಂದು ತಿಂಗಳೊಳಗೆ ಕಂಪನಿ ಬಿಜೆಪಿಗೆ 9 ಕೋಟಿ ರೂ.ಗಳನ್ನು ನೀಡಿತು.

7. ಕ್ರಿಸ್ಟಿ ಫ್ರೈಡ್​ ಗ್ರಾಮ್ - ಆಹಾರ ಸಂಸ್ಕರಣಾ ಕಂಪನಿ ತಮಿಳುನಾಡಿನಾದ್ಯಂತ ಶಾಲೆಗಳಲ್ಲಿ ಮಧ್ಯಾಹ್ನದ ಊಟಕ್ಕೆ ಆಹಾರ ಪದಾರ್ಥಗಳನ್ನು ಪೂರೈಸುತ್ತದೆ. ಇದು 2017-18ರಲ್ಲಿ ಬಿಜೆಪಿಗೆ 1 ಕೋಟಿ ರೂ. ನೀಡಿತ್ತು.

ಜುಲೈ 2018 ರಲ್ಲಿ ಐಟಿ ರೇಡ್ ಆಯಿತು. 1,300 ಕೋಟಿ ರೂ.ಗಿಂತ ಹೆಚ್ಚಿನ ಅಘೋಷಿತ ಆದಾಯ ಜಪ್ತಿ ಮಾಡಲಾಯಿತು.

ಕಂಪನಿ ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ 2,400 ಕೋಟಿ ರೂ. ಕಿಕ್ ಬ್ಯಾಕ್ ನೀಡಿದೆ ಎಂದು ಅರೋಪಿಸಲಾಯಿತು.

2020ರಲ್ಲಿ ಕಂಪನಿ ಬಿಜೆಪಿಗೆ 1.96 ಕೋಟಿ ರೂ. ನೀಡಿತು, 2021-22 ಮತ್ತು 2022-23 ರಲ್ಲಿ ಮತ್ತೆ ಒಟ್ಟು 3.82 ಕೋಟಿ ರೂ. ನೀಡಿತು.

ಕಂಪನಿ ವಿರುದ್ಧದ ಪ್ರಕರಣಗಳ ಕುರಿತ ವಿಚಾಣೆ ಮುಗಿದಿದ್ದು, ತೀರ್ಪು ಬಾಕಿಯಿದೆ.

8. ಯಶೋದಾ ಆಸ್ಪತ್ರೆಗಳು - ಹೈದರಾಬಾದ್ ಮೂಲದ ಆಸ್ಪತ್ರೆ ಸಮೂಹ ತೆಲಂಗಾಣದ ಮಾಜಿ ಸಿಎಂ ಕೆ ಚಂದ್ರಶೇಖರ ರಾವ್ ಅವರ ಸಂಬಂಧಿಗಳದ್ದು.

ಕೆಸಿಆರ್ ಸರ್ಕಾರವಿದ್ದಾಗ ಅದರ ಕೃಪಾಕಟಾಕ್ಷದ ಆರೋಪ ಹೊತ್ತಿದ್ದ ಕಂಪನಿ 2019-20ರಲ್ಲಿ ಬಿಜೆಪಿಗೆ 2.5 ಲಕ್ಷ ರೂ. ನೀಡಿತ್ತು. ಡಿಸೆಂಬರ್ 2020ರಲ್ಲಿ ಕಂಪನಿ ಮೇಲೆ ರೇಡ್ ಆಯಿತು. 2021-22 ರಲ್ಲಿ 10 ಕೋಟಿ ಮತ್ತು 2022-23 ರಲ್ಲಿ 5 ಲಕ್ಷ ರೂ. ದೇಣಿಗೆಯನ್ನು ಅದು ಬಿಜೆಪಿಗೆ ನೀಡಿದೆ.

9. ಹೆಟೆರೊ ಫಾರ್ಮಾ - ಹೈದರಾಬಾದ್ ಮೂಲದ ಕಂಪನಿ 2019-20ರಲ್ಲಿ ಹೆಟೆರೊ ಡ್ರಗ್ಸ್ ಮೂಲಕ ಬಿಜೆಪಿಗೆ 25 ಲಕ್ಷ ರೂ. ನೀಡಿತ್ತು.

ಹೆಟೆರೊ ಲ್ಯಾಬ್ಸ್ ಮೂಲಕ 2014ರಲ್ಲಿ 50 ಲಕ್ಷ ಮತ್ತು 2017ರಲ್ಲಿ 2 ಲಕ್ಷ ನೀಡಿತ್ತು.

ಅಕ್ಟೋಬರ್ 2021ರಲ್ಲಿ ತೆರಿಗೆ ದಾಳಿ ನಡೆಯಿತು. ದಾಳಿಗೆ ಮುನ್ನ ಮತ್ತು ನಂತರ ಎರಡು ದೇಣಿಗೆಗಳಲ್ಲಿ ಬಿಜೆಪಿಗೆ ಅದು 1 ಕೋಟಿ ರೂ. ನೀಡಿತ್ತು.

ಪ್ರುಡೆಂಟ್ ಟ್ರಸ್ಟ್ ಮೂಲಕ ಫೆಬ್ರವರಿ 2022ರಲ್ಲಿ 5 ಕೋಟಿ ಮತ್ತು 2022-23ರಲ್ಲಿ 5.25 ಕೋಟಿ ರೂ. ನೀಡಿತು. ಅಲ್ಲದೆ, 2022-23ರಲ್ಲಿ ಕಂಪನಿ ಹೆಟೆರೊ ಲ್ಯಾಬ್ಸ್ ಮೂಲಕ 4.2 ಕೋಟಿ ದೇಣಿಗೆ ನೀಡಿತ್ತು.

ಐಟಿ ಅಧಿಕಾರಿಗಳು 550 ಕೋಟಿ ಅಘೋಷಿತ ಆದಾಯ ಪತ್ತೆಹಚ್ಚಿದ್ದು, 142 ಕೋಟಿಗೂ ಹೆಚ್ಚು ಹಣವನ್ನು ವಶಪಡಿಸಿಕೊಂಡಿದ್ದಾರೆ.

10. ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ ಸರ್ವಿಸಸ್ ಪ್ರೈ. ಲಿ - ಮೇ 2019ರಲ್ಲಿನ ಐಟಿ ದಾಳಿಯ ನಂತರ ಈ ಕಂಪನಿ ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್ಗೆ ಅತಿ ದೊಡ್ಡ ದೇಣಿಗೆ ನೀಡಿತು. ಮಾರ್ಚ್ 2021 ರಲ್ಲಿ ಅದು ನೀಡಿದ ದೇಣಿಗೆ ಮೊತ್ತ 100 ಕೋಟಿ. ಪ್ರುಡೆಂಟ್ ಆ ವರ್ಷ ತನ್ನಲ್ಲಿನ ಒಟ್ಟು ಮೊತ್ತವಾದ 245 ಕೋಟಿ ರೂ.ಗಳಲ್ಲಿ ಶೇ.84ರಷ್ಟನ್ನು ಬಿಜೆಪಿಗೆ ನೀಡಿತು. 2022-23 ರಲ್ಲಿ ಕಂಪನಿ ಬಿಜೆಪಿಗೆ ನೇರವಾಗಿ 5 ಕೋಟಿ ರೂ. ನೀಡಿತು,

ಇದರ ಮಾಲೀಕ ವಿವಾದಿತ ಉದ್ಯಮಿ ​ಸ್ಯಾಂಟಿಗೊ ಮಾರ್ಟಿನ್ ವಿರುದ್ಧ ಸಾವಿರಾರು ಕೋಟಿ ರೂ ವಂಚನೆಯ ಹಲವಾರು ಪ್ರಕರಣಗಳು ಇವೆ.​ ವಿಶೇಷ ಅಂದ್ರೆ ಇಷ್ಟೆಲ್ಲಾ ಆರೋಪ ಹೊತ್ತಿರುವ ಸ್ಯಾಂಟಿಗೊ ಅವರ ಮಗ ಚಾರ್ಲ್ಸ್ ಜೋಸೆಫ್ ಮಾರ್ಟಿನ್ 2015ರಲ್ಲಿ ಬಿಜೆಪಿ ಸೇರಿಕೊಂಡಿದ್ದಾರೆ.

11. KALS ಡಿಸ್ಟಿಲರೀಸ್ – ತಮಿಳುನಾಡಿನ ಕಂಪನಿ. 2019ರ ಆಗಸ್ಟ್ನಲ್ಲಿ ಐಟಿ ದಾಳಿ ನಡೆಯಿತು, ನಂತರದ ವರ್ಷದಲ್ಲಿ ಅದು ಬಿಜೆಪಿಗೆ 5 ಕೋಟಿ ರೂ. ದೇಣಿಗೆ ನೀಡಿತು. 2021-22ರಲ್ಲೂ 3 ಕೋಟಿ ರೂ. ನೀಡಿತು. ಕೆಎಎಲ್‌ಎಸ್ ಡಿಸ್ಟಿಲರೀಸ್‌ಗೆ ಸಂಬಂಧಿಸಿದ ರೆಂಗಾನಾಯಕಿ ಏಜೆನ್ಸಿ 2021-22ರಲ್ಲಿ ಎರಡು ಕಂತುಗಳಲ್ಲಿ ಬಿಜೆಪಿಗೆ 2 ಕೋಟಿ ರೂ. ನೀಡಿತು. 2022-23ರಲ್ಲಿ 2 ಲಕ್ಷವನ್ನಷ್ಟೇ ನೀಡಿತು.

12. ಚಿರಿಪಾಲ್ ಇಂಡಸ್ಟ್ರೀಸ್ ಲಿಮಿಟೆಡ್ - ಅಹಮದಾಬಾದ್ ಮೂಲದ ಕಂಪನಿ 2019-20ರಲ್ಲಿ ಬಿಜೆಪಿಗೆ 2.25 ಕೋಟಿ ರೂ. ನೀಡಿದೆ.

ಆದರೆ ನಂತರ ಎರಡು ವರ್ಷ ದೇಣಿಗೆ ನೀಡಿರಲಿಲ್ಲ. ಜುಲೈ 2022ರಲ್ಲಿ ರೇಡ್ ನಡೆಸಿ, 10 ಕೋಟಿ ಹಣ ವಶಪಡಿಸಿಕೊಳ್ಳಲಾಯಿತು. ಅನಂತರ ಕಂಪನಿ 2022-23ರಲ್ಲಿ ಬಿಜೆಪಿಗೆ 2.61 ಕೋಟಿ ರೂ. ದೇಣಿಗೆ ನೀಡಿತು.

13. ಲಲಿತಾ ಜುವೆಲರಿ - ಚೆನ್ನೈ ಮೂಲದ ಕಂಪನಿ 2021-22ರಲ್ಲಿ ಬಿಜೆಪಿಗೆ 1 ಕೋಟಿ ರೂ. ನೀಡಿತ್ತು.

ಅಘೋಷಿತ ಆದಾಯದ ಆರೋಪದ ಮೇಲೆ ಮಾರ್ಚ್ 2021ರಲ್ಲಿ ಐಟಿ ರೇಡ್ ಬಳಿಕ ಈ ದೇಣಿಗೆ ಬಿಜೆಪಿ ಹೋಯಿತು.

14. ಅರಬಿಂದೋ ರಿಯಾಲ್ಟಿ ಮತ್ತು ಇನ್ಫ್ರಾಸ್ಟ್ರಕ್ಚರ್ ಪ್ರೈ. ಲಿಮಿಟೆಡ್ - ಹೈದರಾಬಾದ್ ಮೂಲದ ಫಾರ್ಮಾ ಕಂಪನಿ 2020-21ರಲ್ಲಿ ಬಿಜೆಪಿಗೆ 9 ಕೋಟಿ ರೂ. ದೇಣಿಗೆ ನೀಡಿತ್ತು.

ಆದರೆ ಮುಂದಿನ ವರ್ಷದಲ್ಲಿ ಯಾವುದೇ ದೇಣಿಗೆ ನೀಡಿರಲಿಲ್ಲ. ನವೆಂಬರ್ 2022ರಲ್ಲಿ ಈಡಿ ರೇಡ್ ಆಯಿತು. ಕಂಪನಿ ನಿರ್ದೇಶಕ ಶರತ್ ಚಂದ್ರ ರೆಡ್ಡಿ ಪೆನಕಾ ಅವರನ್ನು ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧಿಸಲಾಯಿತು.

ಕಂಪನಿಯ ಅಂಗಸಂಸ್ಥೆ ಆರೋ ಇನ್ಫ್ರಾ ಪ್ರೈವೇಟ್ ಲಿಮಿಟೆಡ್ 2021-22ರಲ್ಲಿ ಬಿಜೆಪಿಗೆ 1 ಕೋಟಿ ರೂ. ನೀಡಿದೆ.

15. ಸಿಂಟೆಕ್ಸ್ ಇಂಡಸ್ಟ್ರೀಸ್ ಲಿಮಿಟೆಡ್ - ಅಹಮದಾಬಾದ್ ಮೂಲದ ಕಂಪನಿ ಮೇಲೆ ಡಿಸೆಂಬರ್ 2017ರಲ್ಲಿ ಈಡಿ ರೇಡ್ ಅಯಿತು. 48 ಕೋಟಿ ಮೌಲ್ಯದ ಆಸ್ತಿ ವಶಪಡಿಸಿಕೊಳ್ಳಲಾಯಿತು,

2019-20ರಲ್ಲಿ ಕಂಪನಿ ಬಿಜೆಪಿಗೆ 1 ಕೋಟಿ ರೂ. ನೀಡಿತು.

16. ಹಲ್ದಿರಾಮ್ ಸ್ನ್ಯಾಕ್ಸ್ ಪ್ರೈ. ಲಿಮಿಟೆಡ್ – 150 ಕೋಟಿ ರೂ. ತೆರಿಗೆ ವಂಚನೆ ಆರೋಪದ ಮೇಲೆ ಡಿಸೆಂಬರ್ 2018ರಲ್ಲಿ ಐಟಿ ದಾಳಿ. ಕಂಪನಿ 2019-20ರಲ್ಲಿ ಬಿಜೆಪಿಗೆ 31.11 ಲಕ್ಷ ಮತ್ತು 2020-21ರಲ್ಲಿ 25 ಲಕ್ಷ ರೂ.ದೇಣಿಗೆ ನೀಡಿದೆ.

17. SPML ಓಂ ಮೆಟಲ್ಸ್ - ಜುಲೈ 2020ರಲ್ಲಿ ಐಟಿ ದಾಳಿ. ಅಣೆಕಟ್ಟು ನಿರ್ಮಾಣ ಒಪ್ಪಂದದಲ್ಲಿ ಅಕ್ರಮದ ಆರೋಪ.

2021-22ರಲ್ಲಿ ಕಂಪನಿ ಬಿಜೆಪಿಗೆ 5 ಕೋಟಿ ರೂ.ನೀಡಿತು.

18. ಮಹಾಲಕ್ಷ್ಮಿ ಗ್ರೂಪ್ - ಅಸ್ಸಾಂ ಮೂಲದ ಕಂಪನಿ ವಿರುದ್ಧ ಅಕ್ರಮಗಳ ಆರೋಪ. 2011ರಲ್ಲಿ ಸಿಬಿಐ ದಾಳಿ. ಕಲ್ಲಿದ್ದಲು ವ್ಯವಹಾರದಲ್ಲಿನ ಅಕ್ರಮ ಪ್ರಕರಣಗಳ ವಿಚಾರಣೆ ಬಾಕಿ ಇದೆ.

2020-21ರಲ್ಲಿ ಬಿಜೆಪಿಗೆ ಕಂಪನಿ 2.85 ಕೋಟಿ ರೂ., 2021-22ರಲ್ಲಿ 7.45 ಕೋಟಿ ರೂ., 2022-23ರಲ್ಲಿ 1.49 ಕೋಟಿ ರೂ. ನೀಡಿದೆ.

ಕಲ್ಲಿದ್ದಲು ಅಕ್ರಮಗಳ ಕೇಸುಗಳ ನಡುವೆಯೂ ಕಂಪನಿಗೆ ಅರುಣಾಚಲ ಪ್ರದೇಶದ ಅತಿ ದೊಡ್ಡ ಕಲ್ಲಿದ್ದಲು ಗಣಿ ಯೋಜನೆ ನೀಡಲಾಗಿದೆ.

19. ಪೆಸಿಫಿಕ್ ರಫ್ತು - ಉದಯಪುರ ಮೂಲದ ಕಂಪನಿ ವಿರುದ್ಧ ಅಕ್ರಮಗಳ ಆರೋಪ. ಆಗಸ್ಟ್ 2015ರಲ್ಲಿ ಐಟಿ ದಾಳಿ.

2021-22ರಲ್ಲಿ ಕಂಪನಿಯ ಎರಡು ಅಂಗಸಂಸ್ಥೆಗಳ ಮೂಲಕ ಬಿಜೆಪಿಗೆ 12 ಕೋಟಿ ರೂ. ದೇಣಿಗೆ.

ಮಾರ್ಚ್ 2022ರಲ್ಲಿ ದಾಖಲಾತಿಗಳು ಮತ್ತು ಹಣಕಾಸು ಅಕ್ರಮಗಳ ಆರೋಪದ ಮೇಲೆ ಸಿಬಿಐ ದಾಳಿ.

2022-23ರಲ್ಲಿ ಕಂಪನಿಯಿಂದ ಬಿಜೆಪಿಗೆ 6 ಕೋಟಿ ರೂ. ದೇಣಿಗೆ. ಅನಂತರವೂ ಮತ್ತೆ ರೇಡ್.

20. ಮೇಘಾಲಯ ಸಿಮೆಂಟ್ಸ್ ಲಿಮಿಟೆಡ್ - ಅಸ್ಸಾಂ ಮೂಲದ ಕಂಪನಿ. 2018-19ರಲ್ಲಿ ಬಿಜೆಪಿಗೆ 1.38 ಕೋಟಿ ರೂ. ದೇಣಿಗೆ.

ಅದೇ ವರ್ಷ ಇನ್ನೆರಡು ಕಂಪನಿಗಳ ಜೊತೆ ಸೇರಿ ಒಂದೇ ವರ್ಷದಲ್ಲಿ ಬಿಜೆಪಿಗೆ ಒಟ್ಟು 4.27 ಕೋಟಿ ರೂ. ದೇಣಿಗೆ.

2019-20ರಲ್ಲಿ ಬಿಜೆಪಿಗೆ 1.5 ಕೋಟಿ ರೂ. ಹಾಗೂ 2020-21ರಲ್ಲಿ 50 ಲಕ್ಷ ರೂ. ದೇಣಿಗೆ.

ನವೆಂಬರ್ 2021ರಲ್ಲಿ ಐಟಿ ರೇಡ್. ಅದೇ ವರ್ಷ ಕಂಪನಿ ಬಿಜೆಪಿಗೆ 1.5 ಕೋಟಿ ರೂ. ನೀಡಿತು. ಮುಂದಿನ ಹಣಕಾಸು ವರ್ಷದಲ್ಲಿ 10 ಲಕ್ಷ ರೂ. ನೀಡಿತು. ಮೇಘಾಲಯ ಸಿಮೆಂಟ್ಸ್ 2019-2021ರ ಅವಧಿಯಲ್ಲಿ ಕಾಂಗ್ರೆಸ್‌ಗೆ 50 ಲಕ್ಷ ರೂ. ನೀಡಿದೆ.

21. ILABS ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ - ಹೈದರಾಬಾದ್ ಮೂಲದ ಕಂಪನಿ. ಮೇ 2019ರಲ್ಲಿ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ (ಎನ್‌ಸಿಎಲ್‌ಟಿ) ಆದೇಶಗಳ ಉಲ್ಲಂಘನೆ ಆರೋಪ ಕೇಳಿಬಂತು. 2004ರಲ್ಲಿ ಐಲ್ಯಾಬ್ಸ್ನಿಂದ ಬಿಜೆಪಿಗೆ 5 ಕೋಟಿ ರೂ.ದೇಣಿಗೆ.

22. ಮೈಕ್ರೋ ಲ್ಯಾಬ್ಸ್ - ಬೆಂಗಳೂರು ಮೂಲದ ಫಾರ್ಮಾಸ್ಯುಟಿಕಲ್ ಕಂಪನಿ 2015-16ರಲ್ಲಿ ಬಿಜೆಪಿಗೆ 21 ಲಕ್ಷ ರೂ. ನೀಡಿತ್ತು.

2017-18ರಲ್ಲಿ ದೇಣಿಗೆ ಮೊತ್ತ ಸುಮಾರು 43 ಪಟ್ಟು ಹೆಚ್ಚಾಗಿತ್ತು. 9 ಕೋಟಿ ರೂ. ನೀಡಲಾಯಿತು. 2018-19ರಲ್ಲಿ 3 ಕೋಟಿ ಹಾಗೂ 2019-20ರಲ್ಲಿ 50 ಲಕ್ಷ ರೂ. ದೇಣಿಗೆ ನೀಡಿದೆ. 2020-21 ಮತ್ತು 2021-22ರಲ್ಲಿ ಬಿಜೆಪಿಗೆ ಯಾವುದೇ ದೇಣಿಗೆ ನೀಡಿರಲಿಲ್ಲ. ಜುಲೈ 2022ರಲ್ಲಿ ಕಂಪನಿಗೆ ಸಂಬಂಧಿಸಿದ 40ಕ್ಕೂ ಹೆಚ್ಚು ಕಡೆಗಳಲ್ಲಿ ಐಟಿ ದಾಳಿ. 300 ಕೋಟಿ ರೂ. ತೆರಿಗೆ ವಂಚನೆ ಆರೋಪ. ಅದಾದ ಬಳಿಕ ಒಂದೇ ವರ್ಷದಲ್ಲಿ ಕಂಪನಿ ಬಿಜೆಪಿಗೆ 2 ಕೋಟಿ ರೂ. ನೀಡಿತು. ಸೆಪ್ಟೆಂಬರ್ 2022 ರಲ್ಲಿ ಕಂಪನಿಯನ್ನು ಆರೋಪ ಮುಕ್ತಗೊಳಿಸಲಾಯಿತು.

23. ಸಲಾರ್ಪುರಿಯಾ ಸತ್ವ – ಬೆಂಗಳೂರು ಮೂಲದ ಕಂಪನಿ 2020-21ರಲ್ಲಿ ತನ್ನ ಎರಡು ಅಂಗಸಂಸ್ಥೆಗಳ ಮೂಲಕ ಬಿಜೆಪಿಗೆ 3 ಕೋಟಿ 60 ಲಕ್ಷ ರೂ ನೀಡಿದೆ. 2021-22 ರಲ್ಲಿ ಇದರ ಮತ್ತೊಂದು ಅಂಗಸಂಸ್ಥೆಯಿಂದ ಬಿಜೆಪಿಗೆ 4 ಕೋಟಿ ರೂ. ಹೋಗಿದೆ.

ಅದೇ ವರ್ಷ ಪಾಲುದಾರಿಕೆಯಿರುವ ಮತ್ತೊಂದು ಕಂಪನಿ ಮೂಲಕ ಬಿಜೆಪಿಗೆ 50 ಲಕ್ಷ ರೂ. ದೇಣಿಗೆ.

ನವೆಂಬರ್ 2022ರಲ್ಲಿ ಕಂಪನಿ ಮೇಲೆ ಈಡಿ ರೇಡ್. 316 ಬ್ಯಾಂಕ್ ಖಾತೆಗಳ ಸೀಝ್. ಅದೇ ವರ್ಷದಲ್ಲಿ ಮತ್ತೆರಡು ಕಂಪನಿಗಳಿಂದ 4 ಕೋಟಿ ಹಾಗೂ 1.25 ಕೋಟಿ ಮೊತ್ತದ ಎರಡು ದೇಣಿಗೆಗಳು ಬಿಜೆಪಿಗೆ ಹೋದವು.

24. ರಾಮ್ಕೋ ಗ್ರೂಪ್ - ತಮಿಳುನಾಡು ಮೂಲದ ಕಂಪನಿ 2015ರಲ್ಲಿ ಸಿಬಿಐ ರೈಲ್ವೆ ಸರಕು ಸಾಗಣೆ ಹಗರಣದಲ್ಲಿ ಆರೋಪ ಹೊರಿಸಿತ್ತು.

2020ರಲ್ಲಿ ಕಂಪನಿ ಮೇಲೆ CCI ರೇಡ್ ಆಯಿತು. ಮೂರು ತಿಂಗಳ ನಂತರ, ಮಾರ್ಚ್ 2021ರಲ್ಲಿ ಕಂಪನಿ ಬಿಜೆಪಿಗೆ 2 ಕೋಟಿ ರೂ. ಹಾಗೂ 2022-23ರಲ್ಲಿ ಮತ್ತೆ 50 ಲಕ್ಷ ರೂ. ದೇಣಿಗೆ ನೀಡಿತು.

25. KPC ಪ್ರಾಜೆಕ್ಟ್ಸ್ ಲಿಮಿಟೆಡ್ - ಆಂಧ್ರ ಮೂಲದ ಕಂಪನಿ. 2021-22ರಲ್ಲಿ ಬಿಜೆಪಿಗೆ 1 ಕೋಟಿ ರೂ.ದೇಣಿಗೆ. 2022-23ರಲ್ಲೂ ಅದು ಮತ್ತೆ ಬಿಜೆಪಿಗೆ ದೇಣಿಗೆ ನೀಡಿದೆ. ಆದರೆ ಬರೀ 5 ಲಕ್ಷವನ್ನಷ್ಟೇ ನೀಡಿತ್ತು. ಡಿಸೆಂಬರ್ 2023ರಲ್ಲಿ ಕಂಪನಿ ಮೇಲೆ ಐಟಿ ರೇಡ್ ನಡೆಯಿತು

26. ಬ್ರಿಗೇಡ್ ಎಂಟರ್‌ಪ್ರೈಸಸ್ ಲಿಮಿಟೆಡ್ - ಬೆಂಗಳೂರಿನಲ್ಲಿರುವ ಕಂಪನಿ ಮೇಲೆ ನವೆಂಬರ್ 2017 ರಲ್ಲಿ ಐಟಿ ರೇಡ್. 2018ರಲ್ಲಿ ಬಿಜೆಪಿಗೆ ಕಂಪನಿಯಿಂದ 1.6 ಕೋಟಿ ಮತ್ತು 2019ರಲ್ಲಿ 2 ಕೋಟಿ ದೇಣಿಗೆ.

27. ಬಿಜಿಆರ್ ಮೈನಿಂಗ್ ಇನ್ಫ್ರಾ - ಹೈದರಾಬಾದ್ ಮೂಲದ ಕಂಪನಿ ಮೇಲೆ 2017ರಲ್ಲಿ ಸಿಬಿಐ ಕಣ್ಣು. ಜುಲೈ 2019ರಲ್ಲಿ ಅದರ ಗಣಿಗಾರಿಕೆ ಒಪ್ಪಂದ ಕೊನೆಗೊಳಿಸಲಾಯಿತು. ಐದು ತಿಂಗಳ ನಂತರ ಕಂಪನಿಯಿಂದ ಬಿಜೆಪಿಗೆ 5 ಕೋಟಿ ರೂ. ದೇಣಿಗೆ.

ಕಳೆದ ವರ್ಷ ಫೆಬ್ರವರಿಯಲ್ಲಿ ಕಂಪನಿಗೆ ಸುಮಾರು 20,400 ಕೋಟಿ ಮೌಲ್ಯದ ಗುತ್ತಿಗೆ ಸರ್ಕಾದಿಂದ ದೊರೆಯಿತು.

28. ಚೆನ್ನೈ ಗ್ರೀನ್ ವುಡ್ಸ್ ಪ್ರೈ. ಲಿಮಿಟೆಡ್ - ಜುಲೈ 2021ರಲ್ಲಿ ಐಟಿ ದಾಳಿ. 2022-23ರಲ್ಲಿ ಕಂಪನಿಯಿಂದ ಬಿಜೆಪಿಗೆ 1 ಕೋಟಿ ರೂ. ದೇಣಿಗೆ.

29. MGM ಗ್ರೂಪ್ – ಚೆನ್ನೈ ಮೂಲದ ಕಂಪನಿ. ಡಿಸೆಂಬರ್ 2021ರಲ್ಲಿ ಈಡಿ ದಾಳಿ. 293.91 ಕೋಟಿ ಮೌಲ್ಯದ ಆಸ್ತಿ ವಶ.

ಏಪ್ರಿಲ್ 2021 ರಲ್ಲಿ ಕಂಪನಿಯಿಂದ ಬಿಜೆಪಿಗೆ 1 ಕೋಟಿ ರೂ. ದೇಣಿಗೆ.

30. ವಿಶಾಕಾ ಇಂಡಸ್ಟ್ರೀಸ್ - ಮಾಜಿ ಕಾಂಗ್ರೆಸ್ ನಾಯಕ ಜಿ ವಿವೇಕ್ ವೆಂಕಟಸ್ವಾಮಿ ಒಡೆತನದ ಕಂಪನಿ. 2019ರಲ್ಲಿ ಬಿಜೆಪಿ ಸೇರಿದ್ದ ಅವರು, 2023ರಲ್ಲಿ ಬಿಜೆಪಿ ತೊರೆದ ಬಳಿಕ ಈಡಿ ದಾಳಿ.

ವಿವೇಕ್ ಬಿಜೆಪಿಯಲ್ಲಿದ್ದ ವೇಳೆ ಕಂಪನಿಯಿಂದ 2020-21ರಲ್ಲಿ ಬಿಜೆಪಿಗೆ 3 ಕೋಟಿ ಮತ್ತು 2021-22ರಲ್ಲಿ 3 ಕೋಟಿ ರೂ. ದೇಣಿಗೆ.

ಕೆಲವು ಕಂಪನಿಗಳು ಸರ್ಕಾರದಿಂದ ಲಾಭ ಪಡೆದಿದ್ದು, ಬಿಜೆಪಿಗೆ ದೇಣಿಗೆ ನೀಡಿವೆ ಎಂಬ ಆರೋಪವೂ ಇದೆ. ಮಣಿಪುರದ ಸೇನಾಪತಿ ಜಿಲ್ಲೆಯ ಎಸ್‌ಎನ್ ಪಾವೆ ಮತ್ತು ಗುಜರಾತ್‌ನ ಅಗ್ರೋಸೆಲ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಅಂತಹ ಕಂಪನಿಗಳು.

ರಸ್ತೆ ನಿರ್ಮಾಣ ಗುತ್ತಿಗೆಗೆ ನಕಲಿ ಬ್ಯಾಂಕ್ ಗ್ಯಾರಂಟಿ ಸಲ್ಲಿಸಿದ್ದಕ್ಕಾಗಿ 2016ರಲ್ಲಿ 5 ವರ್ಷಗಳ ಮಟ್ಟಿಗೆ ಬ್ಯಾನ್ ಆಗಿದ್ದ ಎಸ್‌ಎನ್ ಪಾವೆಗೆ 2019 ರಲ್ಲಿಯೇ ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆ ಅಡಿಯಲ್ಲಿ ಎಂಟು ಗುತ್ತಿಗೆಗಳನ್ನು ನೀಡಲಾಯಿತು. 2021-22ರಲ್ಲಿ ಬಿಜೆಪಿಗೆ ಕಂಪನಿ 3.47 ಕೋಟಿ ರೂ. ನೀಡಿತು.

ಇನ್ನು ಆಗ್ರೋಸೆಲ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ 2019 ರಿಂದ ಸತತವಾಗಿ ಬಿಜೆಪಿಗೆ ದೇಣಿಗೆ ನೀಡುತ್ತಿದೆ.

2019-20ರಲ್ಲಿ 95 ಲಕ್ಷ ರೂ. 2020-21ರಲ್ಲಿ 5 ಲಕ್ಷ ರೂ. 2021-22ರಲ್ಲಿ 3 ಕೋಟಿ ರೂ., 2022-23ರಲ್ಲಿ ಬಿಜೆಪಿಗೆ 1.72 ಕೋಟಿ ರೂ. ನೀಡಿದೆ.

ಕಚ್‌ನಲ್ಲಿ 18,000 ಎಕರೆ ಜಮೀನು ಹಂಚಿಕೆಯಲ್ಲಿ ಅದಕ್ಕೆ ಸರ್ಕಾರದಿಂದ ಅನುಕೂಲವಾಗಿದೆ ಎಂಬ ಆರೋಪವಿದೆ.

ಇದು ಕೇವಲ ೩೦ ಕಾರ್ಪೊರೇಟ್ ಕಂಪನಿಗಳಿಂದ ಬಿಜೆಪಿಗೆ ಮೋದಿ ಸರಕಾರ ಪಡೆದುಕೊಂಡಿರುವ ದೇಣಿಗೆಗಳ ವಿವರ. ನ್ಯೂಸ್ ಲಾಂಡ್ರಿ ಹಾಗು ನ್ಯೂಸ್ ಮಿನಿಟ್ ತನಿಖೆಯಲ್ಲಿ ಸಿಕ್ಕಿರುವ ವಿವರಗಳು ಇವು. ಇನ್ನೂ ವಿವರ ಸಿಗದೇ ಇರುವ ಅದೆಷ್ಟು ಕಂಪೆನಿಗಳಿವೆ ಗೊತ್ತಿಲ್ಲ.

ನ್ಯೂಸ್ ಲಾಂಡ್ರಿ ಹಾಗು ದಿ ನ್ಯೂಸ್ ಮಿನಿಟ್ - ಇವೆರಡೂ ಸ್ವತಂತ್ರ ಮಾಧ್ಯಮ ಸಂಸ್ಥೆಗಳು. ದೊಡ್ಡ ದೊಡ್ಡ ಚಾನಲ್ ಗಳು, ಪತ್ರಿಕೆಗಳು ಮಾಡಬೇಕಾದ ತನಿಖಾ ವರದಿಯನ್ನು ತೀರಾ ಸೀಮಿತ ಸಂಪನ್ಮೂಲ ಇರುವ ಈ ಎರಡು ಮಾಧ್ಯಮ ಸಂಸ್ಥೆಗಳು ಮಾಡುತ್ತಿವೆ.

ನೀವು ತಿಳಿದುಕೊಳ್ಳಲೇ ಬೇಕಾದ ಕಟು ಸತ್ಯವನ್ನು ತಂದು ನಿಮ್ಮ ಮುಂದಿಡುತ್ತಿವೆ. ಅದಕ್ಕಾಗಿ ಆ ಎರಡು ಸಂಸ್ಥೆಗಳು ತಿಂಗಳು ಗಟ್ಟಲೆ ಶ್ರಮ ಹಾಕಿವೆ, ಖರ್ಚು ಮಾಡಿವೆ. ಇಂತಹ ಮಾಧ್ಯಮ ಸಂಸ್ಥೆಗಳನ್ನು ಆರ್ಥಿಕವಾಗಿ ಬೆಂಬಲಿಸುವುದು ಅದರ ಓದುಗರು, ವೀಕ್ಷಕರ ಜವಾಬ್ದಾರಿಯಾಗಿದೆ. ದಯವಿಟ್ಟು ನಿಮ್ಮ ಸಾಮರ್ಥ್ಯಕ್ಕೆ ಅನುಸಾರವಾಗಿ ಚಂದಾ ಕೊಟ್ಟು ಅವುಗಳ ಮೆಂಬರ್ ಆಗಿ ಸಹಕರಿಸಿ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!