ಸಿಎಎ : ​ತಲೆಕೆಳಗಾಗುವುದೇ ಬಿಜೆಪಿ ಲೆಕ್ಕಾಚಾರ ?

Update: 2024-03-18 05:36 GMT
Editor : Ismail | Byline : ಆರ್. ಜೀವಿ

3ನೇ ಅವಧಿಗೆ ಅಧಿಕಾರಕ್ಕೇರಲು ಹಾತೊರೆಯುತ್ತಿರುವ ಮೋದಿ ಎದುರಲ್ಲಿ ಮಂದಿರ ಬಿಟ್ಟರೆ ಧ್ರುವೀಕರಣ ರಾಜಕೀಯಕ್ಕೆ ಬಾಕಿ ಇದ್ದ ಇನ್ನೂ ಒಂದು ಅಸ್ತ್ರವನ್ನು ಈಗ ಪ್ರಯೋಗಿಸಲಾಗಿದೆ. ಚುನಾವಣೆ ಇನ್ನೇನು ಘೋಷಣೆಯಾಗಲಿದೆ ಎನ್ನುವ ಹೊತ್ತಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೆ ಅಧಿಸೂಚನೆ ಹೊರಡಿಸಲಾಗಿದೆ.

ಇದರೊಂದಿಗೆ, 2014ರ ಡಿಸೆಂಬರ್ 31ರವರೆಗೆ ಭಾರತಕ್ಕೆ ವಲಸೆ ಬಂದ ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಅಫ್ಗಾನಿಸ್ತಾನದ ಹಿಂದೂ, ಸಿಖ್, ಜೈನ, ಬೌದ್ಧ, ಪಾರ್ಸಿ ಹಾಗೂ ಕ್ರೈಸ್ತರಿಗೆ ದೇಶದ ಪೌರತ್ವ ನೀಡುವುದಕ್ಕೆ ಮೋದಿ ಸರ್ಕಾರ ಶುರು ಮಾಡಲಿದೆ. ನಾಲ್ಕು ವರ್ಷಗಳ ಹಿಂದೆಯೇ ಅಂಗೀಕಾರಗೊಂಡಿದ್ದ ಈ ಕಾಯ್ದೆಯನ್ನು ಈಗ​ ಸರಿಯಾದ ಹೊತ್ತು ನೋಡಿಕೊಂಡೇ ಜಾರಿಗೊಳಿಸಲು ಮೋದಿ ಸರ್ಕಾರ ಮುಂದಾಗಿದೆ.

​ಅತ್ತ ಸುಪ್ರೀಂ ಕೋರ್ಟ್ ನಲ್ಲಿ ಇಲೆಕ್ಟೊರಲ್ ಬಾಂಡುಗಳ ವಿವರ ನಾಳೆ ಸಂಜೆಯೊಳಗೆ ಕೊಡಬೇಕು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಹೇಳಿದ ಸಂಜೆಯೇ ಇತ್ತ ಸಿಎಎ ಅಧಿಸೂಚನೆ ಹೊರಬಿದ್ದಿದೆ. ಹಾಗಾದರೆ, ಸಿಎಎ ಜಾರಿ ಹಿಂದಿನ ಬಿಜೆಪಿ ಲೆಕ್ಕಾಚಾರಗಳು ಏನೇನು?

ಅದರ ಹೆಸರಲ್ಲಿ ಏನೇನನ್ನೆಲ್ಲ ಮುಚ್ಚಿ ಹಾಕುವ ಹುನ್ನಾರ ಬಿಜೆಪಿ ಸರ್ಕಾರದ್ದಾಗಿದೆ? ನಾಲ್ಕು ವರ್ಷಗಳಿಂದ ಜಾರಿಗೊಳಿಸಲಿಕ್ಕಾಗದ ಈ ಕಾಯ್ದೆಯನ್ನು ಈಗ ಜಾರಿಗೊಳಿಸುವಲ್ಲಿ ಇರಬಹುದಾದ ಸವಾಲುಗಳು ಏನಿರಬಹುದು? ಬಿಜೆಪಿಗೆ ಇದರಿಂದ ರಾಜಕೀಯ ಲಾಭ ಸಿಗಬಹುದೇ?

ಕಾಂಗ್ರೆಸ್ ಸಹಿತ ಇಂಡಿಯಾ ವಿಪಕ್ಷ ಮೈತ್ರಿಕೂಟದ ನಡೆ ಏನಿರಲಿದೆ? ಮೊದಲಿಗೆ ಸಿಎಎ ಏನು ಎಂಬುದನ್ನು ಸ್ಥೂಲವಾಗಿ ಗಮನಿಸಿದರೆ, ಅದರ ಹಿಂದಿನ ಹಿಕಮತ್ತುಗಳು, ಲೆಕ್ಕಾಚಾರಗಳು ಅರ್ಥವಾಗು​ತ್ತಾ ಹೋಗುತ್ತವೆ. ಬಾಂಗ್ಲಾದೇಶ, ಅಫ್ಗಾನಿಸ್ತಾನ ಹಾಗೂ ಪಾಕಿಸ್ತಾನದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವ ನೀಡುವುದಕ್ಕೆ ಸಂಬಂಧಿಸಿದ ಕಾಯ್ದೆ ಇದು.

1995ರ ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡಿ ಇದನ್ನು ರೂಪಿಸಲಾಗಿದೆ. ಹಳೆಯ ಕಾಯ್ದೆ ಪ್ರಕಾರ, ಅಫ್ಗಾನಿಸ್ತಾನ, ಬಾಂಗ್ಲಾದೇಶ ಹಾಗು ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂ, ಸಿಖ್, ಜೈನ, ಬೌದ್ಧ, ಪಾರ್ಸಿ ಹಾಗು ಕ್ರೈಸ್ತ ಧರ್ಮೀಯ ವಲಸಿಗರು ಭಾರತದಲ್ಲಿ 12 ವರ್ಷ ಅಥವಾ ಅದಕ್ಕಿಂತ ಹೆಚ್ಚು ಸಮಯದಿಂದ ವಾಸವಿದ್ದಲ್ಲಿ ಮಾತ್ರ ಇಲ್ಲಿನ ಪೌರತ್ವ ಪಡೆಯಲು ಅರ್ಹರಾಗಿದ್ದರು.

ಆದರೆ ಹೊಸ ಕಾಯ್ದೆ ಪ್ರಕಾರ, ಅವರೆಲ್ಲ ಭಾರತದಲ್ಲಿ 6 ವರ್ಷ ವಾಸವಿದ್ದರೆ ಇಲ್ಲಿನ ಪೌರತ್ವ ಪಡೆಯಲು ಅರ್ಹರಾಗಿರುತ್ತಾರೆ. ಆದರೆ ಇತರ ರಾಷ್ಟ್ರಗಳ ವಲಸಿಗ ಮುಸ್ಲಿಮರನ್ನು ಈ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ನೆರೆಯ ರಾಷ್ಟ್ರಗಳಲ್ಲಿ ಧರ್ಮದ ಆಧಾರದಲ್ಲಿ ಕಿರುಕುಳಕ್ಕೊಳಗಾಗಿ ಭಾರತಕ್ಕೆ ಬಂದಿರುವ ಮುಸ್ಲಿಮೇತರ ವಲಸಿಗರು 2014ರ ಡಿಸೆಂಬರ್ 31ರೊಳಗೆ ಬಂದವರಾಗಿದ್ದಲ್ಲಿ ಈ ಕಾಯ್ದೆಯಡಿಯಲ್ಲಿ ಪೌರತ್ವಕ್ಕೆ ಅರ್ಹರಾಗುತ್ತಾರೆ.

2019ರ ಡಿಸೆಂಬರ್ 11ರಂದು ಇದು ಸಂಸತ್ತಿನಲ್ಲಿ ಅಂಗೀಕಾರಗೊಂಡಿತ್ತು. ಆಗಿನಿಂದ 2020ರ ಫೆಬ್ರವರಿವರೆಗೂ ದೇಶಾದ್ಯಂತ ಸಿಎಎ ವಿರೋಧಿ ಪ್ರತಿಭಟನೆಗಳು ತೀವ್ರ ರೀತಿಯಲ್ಲಿ ನಡೆದಿದ್ದವು. 100ಕ್ಕೂ ಅಧಿಕ ಮಂದಿ ಪ್ರತಿಭಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದರು. ಈಶಾನ್ಯ ದೆಹಲಿ ಗಲಭೆ​ ಹಾಗು ಹತ್ಯಾಕಾಂಡಕ್ಕೂ ಅದು ಕಾರಣವಾಗಿತ್ತು.

​ಅಧಿಸೂಚನೆ ಜಾರಿಗೆ ಕೇಂದ್ರ ಸರ್ಕಾರ 2020ರಿಂದಲೂ ​ಪದೇ ಪದೇ ಕಾಲಾವಕಾಶ ವಿಸ್ತರಣೆಯನ್ನು ಕೇಳಿತ್ತು. ಈ ಕಾಯ್ದೆಯಿಂದ, ಸಂವಿಧಾನದ 6ನೇ ಪರಿಚ್ಛೇದದ ಅಡಿಯಲ್ಲಿ ಬರುವ ಪ್ರದೇಶಗಳಿಗೆ, ಅಂದರೆ ಬುಡಕಟ್ಟು ಪ್ರಾಬಲ್ಯ ಹೊಂದಿರುವ ಸ್ವಾಯತ್ತ ಜಿಲ್ಲಾ ಮಂಡಳಿಗಳಿರುವ ಅಸ್ಸಾಂ, ಮೇಘಾಲಯ, ತ್ರಿಪುರ ಮತ್ತು ಮಿಜೋರಾಂಗಳಿಗೆ ಅನ್ವಯವಾಗುವುದಿಲ್ಲ ಎನ್ನಲಾಗುತ್ತದೆ.

ಹಾಗೆಯೆ, ಒಂದು ರಾಜ್ಯದ ನಿರ್ದಿಷ್ಟ ಪ್ರದೇಶಕ್ಕೆ ಹೊರಗಿನವರು ಪ್ರವೇಶಿಸಲು ಅನುಮತಿ ಪತ್ರ ಪಡೆದುಕೊಳ್ಳಬೇಕಾದ ಇನ್ನರ್ ಲೈನ್ ಪರ್ಮಿಟ್ ವ್ಯವಸ್ಥೆ ಇರುವ ರಾಜ್ಯಗಳಾದ ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ ರಾಜ್ಯಗಳಿಗೂ ಇದು ಅನ್ವಯಿಸುವುದಿಲ್ಲ. ಆದರೆ, ಕಾಯ್ದೆಯಲ್ಲಿ ಹೀಗೆ ಹೇಳಲಾಗಿದ್ದರೂ ಆ ರಾಜ್ಯಗಳ ಎಲ್ಲಾ ಪ್ರದೇಶಗಳು ಈ ವಿನಾಯ್ತಿಯ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂಬುದೂ ಕಾಯ್ದೆಯಲ್ಲಿಯೇ ಇದೆ ಎನ್ನಲಾಗಿದ್ದು. ಹಾಗಾಗಿಯೇ ಈಶಾನ್ಯ ರಾಜ್ಯಗಳಲ್ಲಿ ಈ ಕಾಯ್ದೆ ವಿರುದ್ಧ ಆಕ್ರೋಶ ತೀವ್ರವಾಗಿದೆ.

ಅಕ್ರಮವಾಗಿ ವಲಸೆ ಬಂದಿರುವ ಹಿಂದೂಗಳಿಗೆ ಪೌರತ್ವ ನೀಡಿದರೆ ಅಸ್ಸಾಂನಂಥ ರಾಜ್ಯಗಳಲ್ಲಿ ಬುಡಕಟ್ಟು ಸಮುದಾಯದ ಜನರ ಸಂಸ್ಕೃತಿಗೆ ಧಕ್ಕೆಯಾಗುತ್ತದೆ, ಸಂಘರ್ಷ ತಲೆದೋರುತ್ತದೆ ಎಂಬುದು ಈಗ ಎದ್ದಿರುವ ತಕರಾರು. ಈ ಕಾಯ್ದೆಯಡಿ ಪೌರತ್ವ ಬಯಸುವವರು​ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ​ಅವಕಾಶವಿರುತ್ತದೆ.

ಕೇಂದ್ರ ಗೃಹ ಸಚಿವಾಲಯ ಇದಕ್ಕಾಗಿ ಪೋರ್ಟಲ್ ರಚಿಸಿದೆ. ಅರ್ಜಿದಾರರು ತಾವು ಭಾರತಕ್ಕೆ ಬಂದ ವರ್ಷವನ್ನು ಪ್ರಯಾಣದ ದಾಖಲೆಗಳ ಮೂಲಕ ಖಚಿತಪಡಿಸಿದರೆ ಸಾಕು, ಬೇರಾವ ದಾಖಲೆಗಳೂ ಬೇಕಿಲ್ಲ ಎಂದು ಹೇಳಲಾಗಿದೆ. ಸಿಎಎಗೆ ವಿಪಕ್ಷಗಳ ವಿರೋಧವಿರುವುದು ಅದು ಸಂವಿಧಾನದ 14ನೇ ವಿಧಿಯಲ್ಲಿ ಉಲ್ಲೇಖಿಸಿರುವ ಸಮಾನತೆಯ ನಿಯಮವನ್ನು ಉಲ್ಲಂಘಿಸುತ್ತದೆ ಎಂಬ ಕಾರಣಕ್ಕೆ.

ಜಾತ್ಯತೀತ ದೇಶದಲ್ಲಿ ಧರ್ಮದ ಆಧಾರದ ಮೇಲೆ ಪೌರತ್ವ ನಿಡುವುದಕ್ಕೆ ಅವು ಆಕ್ಷೇಪ ಎತ್ತಿವೆ. ಈಗ ಅಧಿಸೂಚನೆ ಜಾರಿ ಹಿನ್ನೆಲೆಯಲ್ಲಿ ಕೂಡ ಕೇಂದ್ರದ ವಿರುದ್ದ ವಿಪಕ್ಷಗಳು ತೀವ್ರ ವಾಗ್ದಾಳಿ ನಡೆಸಿವೆ. ಸಿಎಎ ಜಾರಿಗೆ ಇದೇ ಸಮಯವನ್ನು ಆಯ್ಕೆ ಮಾಡಿಕೊಂಡದ್ದು ಏಕೆ ಎಂಬ ಪ್ರಶ್ನೆಯನ್ನೂ ಅವು ಎತ್ತಿವೆ.

2019ರಲ್ಲಿ ಸಂಸತ್ತು ಅಂಗೀಕರಿಸಿದ ಪೌರತ್ವ ತಿದ್ದುಪಡಿ ಕಾಯ್ದೆಯ ನಿಯಮಗಳನ್ನು ತಿಳಿಸಲು ಮೋದಿ ಸರ್ಕಾರ ನಾಲ್ಕು ವರ್ಷ ಮತ್ತು ಮೂರು ತಿಂಗಳುಗಳನ್ನು ತೆಗೆದುಕೊಂಡಿದೆ. ತಮ್ಮ ಸರ್ಕಾರ ಸಮಯಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಪ್ರಧಾನಿ ಹೇಳಿಕೊಳ್ಳುತ್ತಾರೆ. ಆದರೆ ಸಿಎಎಗೆ ಸಂಬಂಧಿಸಿದ ನಿಯಮಗಳನ್ನು ರೂಪಿಸಲು ತೆಗೆದುಕೊಂಡ ಸಮಯ ಪ್ರಧಾನಿ ಸುಳ್ಳುಗಳ ಮತ್ತೊಂದು ನಿದರ್ಶನ ಎಂದು ಕಾಂಗ್ರೆಸ್‌ ನಾಯಕ ಜೈರಾಮ್ ರಮೇಶ್ ಟೀಕಿಸಿದ್ಧಾರೆ.

​ಒಂಬತ್ತು ಬಾರಿ ಕಾಲಾವಕಾಶ ವಿಸ್ತರಣೆ ಪಡೆದ ಬಳಿಕ ಈಗ ಚುನಾವಣೆಗೆ ಮೊದಲು ಇದು ಬರುವಂತೆ ಮಾಡಿರುವುದು ಸ್ಪಷ್ಟವಾಗಿಯೂ ಚುನಾವಣೆಯ​ನ್ನು ಧ್ರುವೀಕರಣಗೊಳಿಸುವುದಕ್ಕೆ ಆಗಿದೆ. ವಿಶೇಷವಾಗಿ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಖಂಡಿತ ಹಾಗಾಗಲಿದೆ. ಚುನಾವಣಾ ಬಾಂಡ್ ವಿವರ ಸಲ್ಲಿಕೆಗೆ ಸಮಯಾವಕಾಶ ಕೇಳಿದ್ದ ಎಸ್‌ಬಿಐ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ ಬಳಿಕ ಕೇಂದ್ರ ಸರ್ಕಾರ ಜನರ ಗಮನವನ್ನು ಬೇರೆಡೆ ಸೆಳೆಯಲು ಯತ್ನಿಸುತ್ತಿದೆ ಎಂದು ಜೈರಾಂ ರಮೇಶ್ ಆರೋಪಿಸಿದ್ದಾರೆ.

ಸಿಎಎ ಯಾವುದೇ ರೀತಿಯಲ್ಲಿ ಜನರ ಹಕ್ಕುಗಳನ್ನು ಉಲ್ಲಂಘಿಸಿದರೆ ಅದನ್ನು ಟಿಎಂಸಿ ವಿರೋಧಿಸಲಿದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಇದು ಬಿಜೆಪಿಯ ಚುನಾವಣಾ ಗಿಮಿಕ್ ಅಲ್ಲದೆ ಬೇರೇನೂ ಅಲ್ಲ. ಚುನಾವಣೆಗೂ ಮುನ್ನ ಯಾವುದೇ ಹೊಸ ಗೊಂದಲ ನಮಗೆ ಬೇಡ. ಬಿಜೆಪಿ ಯಾವುದೇ ರೀತಿಯ ಪ್ರಚೋದನೆಯಲ್ಲಿ ತೊಡಗುವುದನ್ನು ನಾನು ಬಯಸುವುದಿಲ್ಲ. ರಂಜಾನ್ ತಿಂಗಳು ಪ್ರಾರಂಭವಾಗುತ್ತಿರುವ ದಿನವನ್ನೇ ಅಧಿಸೂಚನೆ ಜಾರಿಗೆ ಏಕೆ ಆಯ್ಕೆ ಮಾಡಲಾಗಿದೆ ಎಂದು ನನಗೆ ತಿಳಿದಿದೆ ಎಂದು ಮಮತಾ ಹೇಳಿದ್ದಾರೆ.

ಮುಸ್ಲಿಂ ಸಮುದಾಯದ ಸಾಕಷ್ಟು ವಿರೋಧದ ಕಾರಣದಿಂದ ಜಾರಿಯಾಗದೇ ಇದ್ದ ಕಾಯ್ದೆಯನ್ನು ಈಗ ಚುನಾವಣೆ ಹೊತ್ತಿನ ಅಸ್ತ್ರವಾಗಿ ಮೋದಿ ಸರ್ಕಾರ ತೆಗೆದುಕೊಂಡಿದೆಯೆ?

ಪಶ್ಚಿಮ ಬಂಗಾಳದಂಥ ರಾಜ್ಯದಲ್ಲಿ ಚುನಾವಾಣ ಲಾಭ ಮಾಡಿ​ಕೊಳ್ಳುವುದು ಬಿಜೆಪಿಯ ಹಿಕಮತ್ತುಗಳಲ್ಲಿ ಒಂದಾಗಿದೆಯೆ? ಈ ಸಲ ಸಿಎಎ ಜಾರಿ ವಿಚಾರವನ್ನು ಅಮಿತ್ ಶಾ ಮೊದಲು ಎತ್ತಿದ್ದು ಪಶ್ಚಿಮ ಬಂಗಾಳದ ರ್ಯಾಲಿಯಲ್ಲಿಯೇ ಎಂಬುದನ್ನು ಕೂಡ ಇಲ್ಲಿ ಗಮನಿಸಬೇಕು. ಈ ಕಾಯ್ದೆ ತಾರತಮ್ಯ ನೀತಿಯಿಂದ ಕೂಡಿದ್ದು, ವಾಪಾಸ್‌ ಪಡೆಯಬೇಕು ಎಂದು ಮುಸ್ಲಿಂ ಸಮುದಾಯ ಹಾಗೂ ಪ್ರತಿಪಕ್ಷಗಳಿಂದ ದೊಡ್ಡ ಪ್ರಮಾಣದ ಪ್ರತಿಭಟನೆಗಳು ನಡೆದಿದ್ದವು.

ನೂರಾರು ಜನರ ಸಾವಿಗೆ ಕಾರಣವಾದ ವಿದ್ಯಮಾನಗಳ ನಂತರ ಸಿಎಎ ಜಾರಿ ನೆನೆಗುದಿಗೆ ಬಿದ್ದಿತ್ತು. ಇದೀಗ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಗೆ ಕೆಲವೇ ದಿನ ಇರುವ ಹೊತ್ತಲ್ಲಿ ಕೇಂದ್ರ ಸರ್ಕಾರ ಸಿಎಎ ಜಾರಿಗೆ ಅಧಿಸೂಚನೆ ಪ್ರಕಟಿಸಿರುವುದು ಕಡೇ ಹೊತ್ತಿನ ಆಟದಂತೆ ತೋರುತ್ತಿದೆ.

ಇದು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಇಂಡಿಯಾ ಒಕ್ಕೂಟದ ಪಾಲಿಗೆ ಇಕ್ಕಟ್ಟು ಒಡ್ಡುವ ಬಿಜೆಪಿ ತಂತ್ರದ ಭಾಗದಂತೆಯೂ ಕಾಣಿಸುತ್ತಿದೆ.

​ರಾಹುಲ್ ಗಾಂಧಿ ನ್ಯಾಯ ಯಾತ್ರೆಯ ಮೂಲಕ ಉತ್ತರ ಭಾರತದಾದ್ಯಂತ ಪ್ರವಾಸ ಮಾಡಿ ಮೋದಿ ಸರಕಾರದ ಒಂದೊಂದೇ ವೈಫಲ್ಯಗಳನ್ನು ಎತ್ತಿ ತೋರಿಸುತ್ತಿದ್ದಾರೆ. ಅಖಿಲೇಶ್, ತೇಜಸ್ವಿ ಯಾದವ್ ರಂತಹ ನಾಯಕರೂ ಹೋದಲ್ಲೆಲ್ಲ ದೊಡ್ಡ ದೊಡ್ಡ ಸಂಖ್ಯೆಯಲ್ಲಿ ಸೇರುತ್ತಿರುವ ಜನರಿಗೆ ಮೋದಿ ಸರಕಾರದ ಜನವಿರೋಧಿ ನೀತಿಗಳ ಬಗ್ಗೆ, ಅದರ ಹಲವು ವೈಫಲ್ಯಗಳ ಬಗ್ಗೆ ತಿಳಿಸುತ್ತಿದ್ದಾರೆ.

ಎಲ್ಲಕ್ಕಿಂತ ಮುಖ್ಯವಾಗಿ ಈ ಸರಕಾರದ ಅವಧಿಯಲ್ಲಿ ಬೃಹತ್ ಸಮಸ್ಯೆಯಾಗಿ ಬೆಳೆದಿರುವ ನಿರುದ್ಯೋಗದ ಬಗ್ಗೆ ಯುವಜನರಲ್ಲಿ ಭಾರೀ ಆಕ್ರೋಶ ಕಾಣುತ್ತಿದೆ. ಅತ್ತ ರೈತರು ಕನಿಷ್ಠ ಬೆಂಬಲ ಬೆಲೆ ಕೊಡಲೇಬೇಕು ಎಂದು ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ.

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಗ್ರಹಿಣಿಯರು ತತ್ತರಿಸಿದ್ದಾರೆ. ಹೀಗೇ ಆದರೆ ಮನೆ ನಡೆಸೋದು ಹೇಗೆ ಎಂದು ಚಿಂತೆಗೆ ಬಿದ್ದಿದ್ದಾರೆ. ಈ ದೇಶದ ಮಹಿಳೆಯರು, ರೈತರು, ಯುವಜನರು, ಕಾರ್ಮಿಕರು ಕೇಳುತ್ತಿರುವ ಪ್ರಶ್ನೆಗಳಿಗೆ ಮೋದಿ ಸರಕಾರದ ಬಳಿ ಉತ್ತರವಿಲ್ಲ. ಅದಕ್ಕಾಗಿಯೇ ಕೊನೆ ಕ್ಷಣದಲ್ಲಿ ಸಿಎಎ ಬಾಣವನ್ನು ಬಿಡಲಾಗಿದೆ.

ಚುನಾವಣೆವರೆಗೆ ಎಲ್ಲ ಚರ್ಚೆಗಳೂ ಅದರ ಸುತ್ತವೇ ಸುತ್ತುತ್ತಿರಲಿ ಎಂಬುದು ಮೋದಿ ಸರಕಾರ ಹಾಗು ಬಿಜೆಪಿಯ ಲೆಕ್ಕಾಚಾರ. ಅಲ್ಲದೆ, ಮುಸ್ಲಿಂರು ಈ ಹಿಂದಿನಂತೆ ಕಾಯ್ದೆ ಜಾರಿ ವಿರೋಧಿಸಿ ಪ್ರತಿಭಟನೆ ನಡೆಸಲಿ ಮತ್ತು ಅದನ್ನು ತನ್ನ ಚುನಾವಣಾ ಲಾಭಕ್ಕೆ ಬಳಸಿಕೊಳ್ಳಬಹುದು ಎಂಬ ಧೂರ್ತ ಲೆಕ್ಕಾಚಾರವೂ ಇಲ್ಲದೆ ಇಲ್ಲ.

ಹಾಗಾಗಿಯೇ ಇದು ವಿಪಕ್ಷಗಳು ಮತ್ತು ಅಲ್ಪಸಂಖ್ಯಾತರ ಪರ ದನಿಯಾಗಿರುವವರು ಬಹಳ ಸೂಕ್ಷ್ಮವಾಗಿ ಮತ್ತು ಅಷ್ಟೇ ತಾಳ್ಮೆಯಿಂದ ನಿಭಾಯಿಸಬೇಕಾಗಿರುವ ಸಂದರ್ಭವಾಗಿದೆ. ಒಂದು ಸಣ್ಣ ಮಟ್ಟಿನ ವಿವೇಚನಾ ರಹಿತ ನಡೆಯನ್ನು ಕೂಡ ಬಿಜೆಪಿ ತನ್ನ ಲಾಭಕ್ಕೆ ಅನುಕೂಲವಾಗುವಂತೆ ತಿರುಗಿಸಿಕೊಳ್ಳಬಲ್ಲುದು ಎಂಬುದನ್ನು ಯಾರೂ ಮರೆಯಕೂಡದು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!