ಕರ್ನಾಟಕ ಸರಕಾರದ ʼಉದ್ಯೋಗ ಮೀಸಲಾತಿʼ ಕಾನೂನು ಕೋರ್ಟ್‌ನಲ್ಲಿ ನಿಲ್ಲೋದು ಕಷ್ಟ !

Update: 2024-07-17 18:11 GMT
Editor : Thalhath | Byline : -ಶಿವಸುಂದರ್

ಕರ್ನಾಟಕದಲ್ಲಿ ಸ್ಥಾಪನೆಯಾಗಿರುವ ಖಾಸಗಿ ಉದ್ಯಮಗಳಲ್ಲಿ ಕರ್ನಾಟಕದ ನಿವಾಸಿಗಳಿಗೆ ಹಾಗೂ ಕನ್ನಡದ ಅರಿವಿನ ಅರ್ಹತೆ ಇರುವರಿಗೆ ಮೀಸಲಾತಿ ಒದಗಿಸುವ ಕರ್ನಾಟಕದ ಕ್ಯಾಬಿನೆಟ್ ನಿರ್ಧಾರದ ಬಗ್ಗೆ ಪರ-ವಿರೋಧ ನಿಲುವುಗಳು ಏನೇ ಇದ್ದರೂ, ಈ ತೀರ್ಮಾನ ಕಾನೂನಾದರೆ ಕೋರ್ಟಿನಲ್ಲಿ ನಿಲ್ಲುವುದು ಕಷ್ಟ.

ಏಕೆಂದರೆ, 2020 ರಲ್ಲಿ ಹರ್ಯಾಣದಲ್ಲಿ ಇದೇ ರೀತಿಯ The Haryana State Employment of Local Candidates Act, 2020 ಕಾನೂನು ಜಾರಿಯಾಗಿತ್ತು. ಇದನ್ನು ವಿರೋಧಿಸಿ ಹರ್ಯಾಣದ ಕಾರ್ಖಾನೆ ಮಾಲೀಕರು ಹೈಕೋರ್ಟಿನ ಮೆಟ್ಟಿಲೇರಿದ್ದರು. 2023 ರ ನವಂಬರ್ 17 ರಂದು ಹರ್ಯಾಣ ಹೈಕೋರ್ಟ್‌ ಈ ಕಾನೂನು ಸಂವಿಧಾನ ವಿರೋಧಿಯೆಂದು ರದ್ದು ಮಾಡಿತ್ತು.

ಈ ಆದೇಶವನ್ನು ಹರ್ಯಾಣ ಸರ್ಕಾರ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿತ್ತು. ಸುಪ್ರೀಂ ಕೋರ್ಟು 2024 ರ ಫೆಬ್ರವರಿಯಲ್ಲಿ ಹೈಕೋರ್ಟ್ ತನ್ನ ತೀರ್ಪಿಗೆ ಸೂಕ್ತ ಕಾರಣಗಳನ್ನು ಒದಗಿಸಿಲ್ಲ ಎಂದು ಹೈಕೋರ್ಟ್ ಆದೇಶಕ್ಕೆ ತಡೆ ನೀಡಿ ನಾಲ್ಕುವಾರಗಳಲ್ಲಿ ತನ್ನ ತೀರ್ಪನ್ನು ಮರುಪರಿಶೀಲನೇ ಮಾಡಿ ಸೂಕ್ತ ಕಾರಣಗಳನ್ನು ಒದಗಿಸಲು ಆದೇಶಿಸಿತು.

ಅದರಂತೆ ಹರ್ಯಾಣ ಹೈಕೋರ್ಟು 2024 ರ ಮಾರ್ಚ್ ನಲ್ಲಿ ಒಂದು ದೀರ್ಘ ಆದೇಶ ನೀಡಿ ಹರ್ಯಾಣ ಸರ್ಕಾರದ ಸ್ಥಳೀಯರಿಗೆ ಉದ್ಯೋಗ ಆದ್ಯತೆ ನೀಡುವ ಕಾನೂನನ್ನು ರದ್ದು ಮಾಡಿತು.

ಇದಕ್ಕಾಗಿ ಹರ್ಯಾಣ ಹೈಕೋರ್ಟ್‌ ಪರಿಗಣಿಸಿದ ಅಂಶಗಳು ಮೂರು :

1.ವಾಸ ಪ್ರದೇಶದ ಆಧಾರದ ಮೇಲೆ ತಾರತಮ್ಯ ಮಾಡುವುದು ಸಂವಿಧಾನ ವಿರೋಧಿ.

2. ಉದ್ಯೋಗಗಳನ್ನು ಕೊಡುವುದು ಸರ್ಕಾರದ ಜವಾಬ್ದಾರಿ. ಅದನ್ನು ಖಾಸಗಿ ಸಂಸ್ಥೆಗಳಿಗೆ ವರ್ಗಾಯಿಸಿ ಕಡ್ಡಾಯ ಮಾಡುವುದು ಸಂವಿಧಾನ ವಿರೋಧಿ ನಡೆ.

3. ಖಾಸಗಿ ವ್ಯಕ್ತಿಗಳು ತಮಗಿಷ್ಟ ಬಂದ ಕಡೆ ಇಷ್ಟ ಬಂದ ಉದ್ಯಮವನ್ನು ನಡೆಸುವುದು ಸಂವಿಧಾನದ 19 (1) (g) ಉದ್ಯಮಿಗಳ ಹಕ್ಕು. ಈ ವ್ಯವಹಾರದ ಹಕ್ಕಿನ ಮೇಲೆ ಸರ್ಕಾರ ನಿಯಂತ್ರಣ ಹಾಕುವುದು ಮೂಲಭೂತ ಹಕ್ಕುಗಳ ಉಲ್ಲಂಘನೆ

ಇದೇ ಕಾರಣಕ್ಕೆ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಯನ್ನು ಅಧಿಕೃತವಾಗಿ ವಿಸ್ತರಿಸಲು ಸಾಧ್ಯವಾಗುತ್ತಿಲ್ಲ. ಕರ್ನಾಟಕ ಸರ್ಕಾರದ ಕಾನೂನು ಈ ಅಂಶಗಳಿಗೆ ಉತ್ತರ ಕೊಡುವಂತ ಯಾವುದೇ ಪ್ರತಿ ವಾದವನ್ನು ಹೊಂದಿರುವಂತೆ ಕಾಣುತ್ತಿಲ್ಲ.

ವಾಸ್ತವದಲ್ಲಿ 1991 ರ ನಂತರ:

1) ಆರ್ಥಿಕ ಕ್ಷೇತ್ರದಲ್ಲಿಕೇಂದ್ರ -ರಾಜ್ಯಗಳ ಸಂಬಂಧಗಳ ಸಮತೋಲನದಲ್ಲಿ ರಾಜ್ಯಗಳ ಅಧಿಕಾರವನ್ನು ಕಬಳಿಸುವ ಫೆಡರಲ್ ವಿರೋಧಿ ಕೇಂದ್ರೀಕರಣದ ನೀತಿಗಳು ಹೆಚ್ಚಾಗುತ್ತಿವೆ.

ಆ) ಬಂಡವಾಳ ಮತ್ತು ಕಾರ್ಮಿಕರ ಹಕ್ಕುಗಳ ನಡುವಿನ ಸಮತೋಲನದಲ್ಲಿ ಬಂಡವಾಳಕ್ಕೆ ಸಂಪೂರ್ಣ ಅಧಿಕಾರ ಕೊಡುವ ಕಾರ್ಪೊರೇಟ್ ಪರ ನೀತಿಗಳು ಜಾರಿಯಾಗಿವೆ.

ಸುಪ್ರೀಂಕೋರ್ಟಿನ ಹೆಚ್ಚಿನ ತೀರ್ಪುಗಳು ಆರ್ಥಿಕ ಕ್ಷೇತ್ರದಲ್ಲಿ ಸಾಂವಿಧಾನಿಕ ಆಶಯಗಳನ್ನು ಎತ್ತಿಹಿಡಿಯುವದಕ್ಕಿಂತ ಕಾರ್ಪೊರೇಟ್ ಶಕ್ತಿಗಳ ಹಕ್ಕುಗಳನ್ನು ಎತ್ತಿಹಿಡಿಯುತ್ತ ಬಂದಿವೆ.

ಕರ್ನಾಟಕ ಒಳಗೆ ಹಿಂದುಳಿದ ಪ್ರದೇಶಗಳಿಂದ ಬೆಂಗಳೂರಿನಂತ ಕೇಂದ್ರಗಳಿಗೆ ಆಗುತ್ತಿರುವ ಬಡವರ ವಲಸೆ, ಅಥವಾ ಭಾರತದೊಳಗೆ ಹಿಂದುಳಿದ ರಾಜ್ಯಗಳಿಂದ ಕರ್ನಾಟಕದಂಥ ಸಾಪೇಕ್ಷವಾಗಿ ಮುಂದುವರೆದ ಪ್ರದೇಶಗಳಿಗೆ ಆಗುತ್ತಿರುವ ವಲಸೆಯು ಭಾರತವು ಅನುಸರಿಸುತ್ತಿರುವ ಕಾರ್ಪೊರೇಟ್ ಬಂಡವಾಳಶಾಹಿಗಳ ಪರವಾದ ಆರ್ಥಿಕ ನೀತಿಗಳ ಪರಿಣಾಮಗಳು.

ವಲಸೆಯು ರಾಜ್ಯಗಳ ಸಂಪನ್ಮೂಲಗಳ ಮೇಲೆ ರಾಜ್ಯದ ವಾಸಿಗಳ ಪ್ರಥಮ ಆದ್ಯತೆ ಎಂಬ ಸಹಜ ಪ್ರಜಾತಾಂತ್ರಿಕ ನಿಲುವನ್ನು ಸಮಸ್ಯಾತ್ಮಕಗೊಳಿಸುತ್ತದೆ. ಅದು ದುಡಿದು ಬದುಕುವ ಕಾರ್ಮಿಕರನ್ನು ಸ್ಥಳೀಯ ಮತ್ತು ಹೊರಗಿನವ ಎಂದು ಅನಗತ್ಯವಾಗಿ ಒಡೆಯುತ್ತದೆ. ಇದರ ಲಾಭವನ್ನು ಕರ್ನಾಟಕದ ಹಾಗೂ ಕರ್ನಾಟಕದ ಹೊರಗಿನ ಬಂಡವಾಳಶಾಹಿಗಳು ಪಡೆದುಕೊಳ್ಳುತ್ತಾರೆ.

ಹಾಗೆ ನೋಡಿದರೆ ಈಗ ಉತ್ತರ ಭಾರತದಿಂದ ವಲಸೆ ಬರುತ್ತಿರುವ ಅಗ್ಗದ ಕಾರ್ಮಿಕರನ್ನು ಕರ್ನಾಟಕದ ಮೂಲದ ಉದ್ಯಮಿಗಳು ಮತ್ತು ವ್ಯಾಪಾರಿಗಳು ಆದ್ಯತೆಯ ಮೇಲೆ ಕೆಲಸಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ. ಕಾರಣ ಸ್ಥಳೀಯ ಕರ್ನಾಟಕ ಕಾರ್ಮಿಕರಿಗಿಂತ ಅವರು ಅಗ್ಗ. ಮತ್ತು ಪರ ರಾಜ್ಯ ಅಥವಾ ಪರ ಊರಿನಿಂದ ಕೆಲಸಕ್ಕೆ ಬಂದು ಅಭದ್ರತೆ ಎದುರಿಸಿತ್ತಿರುವ ಈ ಕಾರ್ಮಿಕರಿಂದ ಹೆಚ್ಚಿನ ಕಿರಿಕಿರಿ ಇರುವುದಿಲ್ಲ ಎಂಬ ಲಾಭದ ಲೆಕ್ಕಾಚಾರ.

ಹೀಗಾಗಿ ಲಾಭ ಲಾಲಸೆಯ ಬಂಡವಾಳಕ್ಕೆ ಕನ್ನಡ- ಕನ್ನಡಿಗ-ಕರ್ನಾಟಕ ಎಂಬ ರಾಷ್ಟ್ರೀಯ ಭಾವನೆಗಿಂತ ʼಅಗ್ಗದ ಶ್ರಮ ಹೆಚ್ಚಿನ ಲಾಭʼ ಎಂಬುದೊಂದೇ ಪ್ರಮುಖವಾಗುತ್ತದೆ. ಕರ್ನಾಟಕದವರಾದರೂ, ಹೊರ ರಾಜ್ಯದ ಉದ್ಯಮಿಯಾದರೂ, ಬಹುರಾಷ್ಟ್ರೀಯ ಕಂಪೆನಿಯಾದರೂ, ಯಾವುದೇ ಬಂಡವಾಳಶಾಹಿಯಾದರೂ ಅಷ್ಟೇ.

ಹಾಗೆ ನೋಡಿದರೆ ಬಂಡವಾಳ ವಲಸೆಯನ್ನು ಸ್ವಾಗತಿಸುವವರು ಕಾರ್ಮಿಕರ ವಲಸೆಯನ್ನು ವಿರೋಧಿಸುವಂತಾಗುತ್ತಿರುವುದು ಇವತ್ತಿನ ಬಂಡವಾಳಶಾಹಿ ವ್ಯವಸ್ಥೆಯೇ ಸೃಷ್ಟಿಸಿರುವ ದುರಂತ. ಹೀಗಾಗಿ ಇದೊಂದು ಕಪ್ಪು ಬಿಳುಪಿನ ಸಮಸ್ಯೆಯಾಗಿ ನೋಡಲು ಬರುವುದಿಲ್ಲ.

ವಾಸ್ತವದಲ್ಲಿ ಕಾರ್ಪೊರೇಟ್ ಬಂಡವಾಳಶಾಹಿ ವರ್ಗ ಮತ್ತು ಸರ್ಕಾರ ಗಳು ಸ್ಥಳೀಯ ಹಾಗೂ ವಲಸಿಗ ಕಾರ್ಮಿಕರ ನಡುವೆ ಎದುರಾಗುವ ಈ ದುರಂತ ವೈರುಧ್ಯವನ್ನು, ಬಂಡವಾಳಶಾಹಿ ವಿರೋಧಿ ಹೋರಾಟವಾಗಿ ರೂಪುಗೊಳ್ಳದಂತೆ ತಡೆಯಲೆಂದೇ ಅದನ್ನು ಭಾಷಾ ದುರಭಿಮಾನವಾಗಿ ಮಾರ್ಪಡಿಸಿ ಸ್ಥಳೀಯ ಮತ್ತು ವಲಸಿಗ ಇಬ್ಬರನ್ನು ದಾರಿ ತಪ್ಪಿಸುತ್ತವೆ.

ಕಾರ್ಮಿಕರ ಕೇಂದ್ರವಾಗಿದ್ದ ಮುಂಬೈನಲ್ಲಿ ಶಿವಸೇನಾ ಹುಟ್ಟಿಕೊಂಡಿದ್ದು, ಅಥವಾ ಇಂದು ಯುರೋಪ್ ಮತ್ತು ಅಮೆರಿಕದಲ್ಲಿ ವಲಸಿಗ ವಿರೋಧಿ ಹೆಸರಿನಲ್ಲಿ ಸ್ಥಳೀಯ ಕಾರ್ಮಿಕರಿಗೂ ವಿರೋಧಿಯಾಗಿರುವ ಬಂಡವಾಳಶಾಹಿ ಪರ ಬಲಪಂಥೀಯ ಶಕ್ತಿಗಳು ಬಲಪಡೆಯುತ್ತಿರುವುದು ಇದೆ ಕಾರಣಕ್ಕೆ.

ಹಾಗಾಗಿ, ಮೊದಲಿಗೆ ಈ ಸ್ಥಳೀಯರಿಗೆ ಆದ್ಯತೆಯೆಂಬ ಪ್ರಜಾತಾಂತ್ರಿಕ ವಿಷಯವನ್ನು ಭಾವನಾತ್ಮಕಗೊಳಿಸಿ ವಲಸಿಗ ಕಾರ್ಮಿಕ ವಿರೋಧಿಯಾಗಿಸಿ ದುರ್ಬಳಕೆ ಮಾಡಿಕೊಳ್ಳದಂತೆ ಅಪಾರ ಎಚ್ಚರ ವಹಿಸಬೇಕು.

ಎರಡನೆಯದಾಗಿ , ಕಾರ್ಪೋರೇಟ್ ಬಂಡವಾಳಶಾಹಿ ಆಸಕ್ತಿಗಳ ಪರವಾಗಿ ದೇಶದ ನೀತಿ ಕಾನೂನುಗಳು ಬದಲಾಗಿರುವ ಸಂದರ್ಭದಲ್ಲಿ ಮತ್ತು ಹರ್ಯಾಣದಲ್ಲಿ ಇಂಥದೇ ಕಾನೂನು ಅನೂರ್ಜಿತಗೊಂಡಿರುವ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಜಾರಿ ಮಾಡ ಬಯಸುತ್ತಿರುವ ಕಾನೂನಿಗೆ ಹೆಚ್ಚಿನ ಆಯಸ್ಸು ಇರುವುದಿಲ್ಲ, ಹೆಚ್ಚೆಂದರೆ ಅದು ಸರ್ಕಾರವು ಈಗ ಎದುರಿಸುತ್ತಿರುವ ರಾಜಕೀಯ ಬಿಕ್ಕಟ್ಟಿನಿಂದ ಪಾರಾಗಲು ಮಾರ್ಗ ಮಾತ್ರ ಓದಗಿಸಬಹುದು ಎಂದು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕು.

ಮೂರನೆಯದಾಗಿ ಬಂಡವಾಳವು ಈ ನೆಲದ ಸಂವಿಧಾನಕ್ಕೆ ಬದ್ಧವಾಗಿ ನಡೆದುಕೊಳ್ಳುವಂತೆ ಮಾಡುವುದಕ್ಕೆ ಮತ್ತು ಸಾಮಾಜಿಕ ನ್ಯಾಯದ ನೀತಿಗಳನ್ನು ಅನುಸರಿಸುವುದು ಸರ್ಕಾರದ ಮಾತ್ರವಲ್ಲ ಉದ್ಯಮಿಗಳ ಸಾಂವಿಧಾನಿಕ ಜವಾಬ್ದಾರಿ ಎಂದು ತಾಕೀತು ಮಾಡುವ ಸಂವಿಧಾನಾತ್ಮಕ ಬದಲಾವಣೆಗೆ ಐಕ್ಯ ಹೋರಾಟ ಕಟ್ಟಬೇಕು.

ನಾಲ್ಕನೆಯದಾಗಿ ಮತ್ತು ದೀರ್ಘ ಕಾಲೀನವಾಗಿ ಕರ್ನಾಟಕದ ಕುಗ್ರಾಮಗಳಿಂದ ಅಥವಾ ಬೇರೆ ರಾಜ್ಯಗಳಿಂದ ಬೆಂಗಳೂರಿನಂತ ನಗರಗಳಿಗೆ ಬಂದು ತುತ್ತುಕೂಲಿಗಾಗಿ ವಲಸೆ ಬಂದು ಅಮಾನುಷ, ಅಪಮಾನದ ಹಾಗೂ ಅಭದ್ರ ಬದುಕು ಮಾಡುವಂತೆ ಮಾಡುವ ಭಾರತದ ಕಾರ್ಪೊರೇಟ್ ಬಂಡವಾಳಶಾಹಿ ಪರ ಆರ್ಥಿಕತೆಯನ್ನು ಬದಲಾಯಿಸಿ ಸಂವಿಧಾನದ ಆಶಯವಾಗಿರುವ ಮನುಷ್ಯ ಘನತೆಯನ್ನು ನೀಡುವ ಆರ್ಥಿಕತೆಯನ್ನು ರೂಪಿಸಲು ಹೋರಾಡಬೇಕು. ಈ ಹೆಜ್ಜೆಗಳು ಮಾತ್ರ ವಲಸೆ ಮತ್ತು ಸ್ಥಳೀಯ ಎಂಬ ದುರಂತ ವೈರುಧ್ಯವನ್ನು ಬಗೆಹರಿಸಬಹುದು.

Writer - ವಾರ್ತಾಭಾರತಿ

contributor

Editor - Thalhath

contributor

Byline - -ಶಿವಸುಂದರ್

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!