ಈ ಪರಿ ವಿಪಕ್ಷಗಳ ವಿರುದ್ಧ ಆಕ್ರಮಣದ ಹಿಂದಿರುವ ಕಾರಣವೇನು ?

Update: 2024-04-18 04:28 GMT
Editor : Ismail | Byline : ಆರ್. ಜೀವಿ

ವಿಪಕ್ಷಗಳನ್ನು ಈ ಪರಿ ಕಟ್ಟಿ ಹಾಕಿರುವಾಗ ಮೋದಿ ಸರಕಾರಕ್ಕೆ ಯಾರ ಭಯ ಕಾಡುತ್ತಿದೆ ? ​ಈ ಬಾರಿ 400 ಸೀಟು ಗೆಲ್ಲುತ್ತೇವೆ ಎಂದು ಹೇಳುತ್ತಿರುವ ಮೋದಿ ಸರಕಾರ​ಕ್ಕೆ ಯಾರ ಭಯವಿದೆ ? ಅದ್ಯಾವ ಮಾಹಿತಿ ಬಚ್ಚಿಡಲು ಮೋದಿ ಸರಕಾರ ಈ ಪರಿ ಹೆಣಗಾಡುತ್ತಿದೆ ?

ಏನಾಗುತ್ತಿದೆ ದಿಲ್ಲಿಯಲ್ಲಿ ? ಸುಪ್ರೀಂ ಕೋರ್ಟ್ನಲ್ಲಿ ಕೆಲವು ಪ್ರಕರಣಗಳಲ್ಲಿ ಮಹತ್ವದ ತೀರ್ಪುಗಳು ಹೊರಬರುತ್ತಿದ್ದ ಹಾಗೆ ಮೋದಿ ಸರ್ಕಾರಕ್ಕೆ ನಡುಕ ಹುಟ್ಟಿದೆಯೆ? ಕೇಜ್ರಿವಾಲ್ ಬಂಧನದ ನಂತರ ರಾಜಧಾನಿಯಲ್ಲಿ ನಡೆದಿರುವ ಪ್ರತಿಭಟನೆಗಳ ಕಾರಣದಿಂದಾಗಿ ಮೋದಿ ಸರ್ಕಾರಕ್ಕೆ ಹೆದರಿಕೆ ಆಗಿದೆಯೆ? ಕೇಜ್ರಿವಾಲ್ ಬಂಧನ ವಿಚಾರದಲ್ಲಿ ಅಮೆರಿಕ ಮತ್ತು ಜರ್ಮನಿಗಳು ಆಕ್ಷೇಪ ಎತ್ತಿರುವ ವಿಚಾರಕ್ಕೆ ಮೋದಿ ಸರ್ಕಾರ ​ಬೆದರಿದೆಯೆ?

ಈ ಹಿಂದೆ, ರಾಹುಲ್ ಗಾಂಧಿಯವರಿಗೆ ಮಾನಹಾನಿ ಪ್ರಕರಣದಲ್ಲಿ ಎರಡು ವರ್ಷಗಳ ಶಿಕ್ಷೆ ವಿಧಿಸಲಾಗಿತ್ತು. ಜೊತೆಗೆ ಸಂಸತ್ತಿನಿಂದಲೂ ಅನರ್ಹಗೊಳಿಸಲಾಗಿತ್ತು. ದೆಹಲಿಯ ಸರ್ಕಾರಿ ನಿವಾಸವನ್ನೂ ಅವರು ಖಾಲಿ ಮಾಡಬೇಕಾಗಿ ಬಂತು. ಇದರ ವಿರುದ್ಧ ಅವರು ಹೈಕೋರ್ಟ್ ಮೊರೆ ಹೋದರೂ ಪ್ರಯೋಜನವಾಗಿರಲಿಲ್ಲ. ಕಡೆಗೆ ಸುಪ್ರೀಂ ಕೋರ್ಟ್ ಅವರ ಶಿಕ್ಷೆಗೆ ತಡೆ ನೀಡಿತು. ಅದಾದ ಬಳಿಕ ಅವರು ಮತ್ತೆ ಸಂಸತ್ ಪ್ರವೇಶಿಸುವಂತಾಯಿತು. ಸರ್ಕಾರಿ ನಿವಾಸ ನೀಡುವಂತೆಯೂ ಅವರು ಮತ್ತೆ ಕೇಳಿದರು.

ಯಾಕೆ ಎಲ್ಲರೂ ಸುಪ್ರೀಂ ಕೋರ್ಟ್ವರೆಗೂ ಹೋಗಬೇಕಾಗಿ ಬರುತ್ತದೆ? ಈ ದೇಶದ ಆಡಳಿತಾರೂಢರು ಎಲ್ಲಿಯವರೆಗೂ ತಮ್ಮ ಪ್ರಭಾವದ ಕೈಚಾಚಿದ್ದಾರೆ? ಹೇಗೆ ಅವರು ಕೇಂದ್ರದ ಏಜನ್ಸಿಗಳ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ? ಹೇಗೆ ಅವುಗಳನ್ನು ವಿಪಕ್ಷಗಳನ್ನು ಸದೆಬಡಿಯಲು ಅಸ್ತ್ರವಾಗಿಸಲಾಗಿದೆ?

ಇದರ ಪರಿಣಾಮವಾಗಿ ವಿಪಕ್ಷ ನಾಯಕರು ​ಒಂದೋ ಜೈಲಿಗೆ ಹೋಗಬೇಕು, ಇಲ್ಲವೆ ಬಿಜೆಪಿ ಸೇರಿ ಸೇಫ್ ಆಗಬೇಕು ಎನ್ನುವಂಥ ಸ್ಥಿತಿಯಿದೆ. ಇದೆಂಥ ದುರವಸ್ಥೆ?

ಈಗ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೂ ಹೈಕೋರ್ಟ್ ಕಡೆಯಿಂದ ರಕ್ಷಣೆ ಸಿಕ್ಕಿಲ್ಲ. ಅವರ ಎದುರಿಗೆ ​ಉಳಿದಿರುವ ನಿರೀಕ್ಷೆ ಕೂಡ ಸುಪ್ರೀಂ ಕೋರ್ಟ್ ಮಾತ್ರ. ​ಈಗ ಕಾಂಗ್ರೆಸ್ ಗೆ ಸಾವಿರದ ಎಂಟು ನೂರು ಕೋಟಿ ರೂಪಾಯಿ ತೆರಿಗೆ ಕಟ್ಟುವಂತೆ ಸೂಚಿಸಿ ಆದಾಯ ತೆರಿಗೆ ಇಲಾಖೆ ನೋಟಿಸ್ ಕಳಿಸಿದೆ. ಈ ಹಿಂದಿನ ವರ್ಷಗಳಲ್ಲಿ ತೆರಿಗೆ ಪಾವತಿಯಲ್ಲಿ ಆಗಿರುವ ಲೋಪದೋಷಗಳಿಗಾಗಿ ಈ ತೆರಿಗೆ ಕಟ್ಟಬೇಕು ಎಂದು ಹೇಳಲಾಗಿದೆ.

ಚುನಾವಣೆ ಹೊಸ್ತಿಲಲ್ಲಿ ಇರುವಾಗ ಮುಖ್ಯ ವಿಪಕ್ಷದ ಬ್ಯಾಂಕ್ ಖಾತೆಗಳನ್ನೂ ಸೀಜ್ಹ್ ಮಾಡಿ, ಅದರ ಬೆನ್ನಿಗೇ 1800 ಕೋಟಿ ತೆರಿಗೆ ಕಟ್ಟಿ ಎಂದು ಹೇಳಲಾಗುತ್ತಿದೆ.

ಮದರ್ ಆಫ್ ಡೆಮಾಕ್ರಸಿಯಲ್ಲಿ ಚುನಾವಣೆ ನಡೆಯೋದು ಇದೇ ರೀತೀನಾ ? ಕಾಂಗ್ರೆಸ್ ಗೆ ಐಟಿ ಇಲಾಖೆ ಕಳಿಸಿರುವ ನೋಟಿಸ್ ನ ಆಧಾರದಲ್ಲೇ ನೋಡಿದರೆ ಬಿಜೆಪಿ 4600 ಕೋಟಿ ದಂಡ ಕಟ್ಟಬೇಕಾಗುತ್ತದೆ ಎಂದು ಕಾಂಗ್ರೆಸ್ ಖಜಾಂಚಿ ಅಜಯ್ ಮಾಕನ್ ಹೇಳಿದ್ದಾರೆ. ಆದರೆ ಅದು ಎಲ್ಲೂ ಸುದ್ದಿಯಾಗೋದಿಲ್ಲ ಬಿಡಿ.

ಕಾಂಗ್ರೆಸ್ ಕೂಡ ಈಗ ನ್ಯಾಯಕ್ಕಾಗಿ ಸುಪ್ರೀಂ ಕೋರ್ಟ್ ಕದ ತಟ್ಟುತ್ತಿದೆ. ಆ​ ಕಡೆ , ಸುಪ್ರೀಂ ಕೋರ್ಟ್ ಸಂವಿಧಾನವನ್ನು ರಕ್ಷಿಸುವ ಮಹತ್ವದ ಹೊಣೆಯನ್ನು ನಿಭಾಯಿಸುತ್ತ, ಎಲ್ಲ ಅಸಾಂವಿಧಾನಿಕ ನಡೆಗಳನ್ನು ತಡೆಯುತ್ತಿರುವಾಗಲೇ, ಈಗ ಕೆಲವು ವಕೀಲರಿಗೆ ಸುಪ್ರೀಂ ಕೋರ್ಟ್ ಮೇಲೆ ಪ್ರಭಾವ ಬೀರಲಾಗುತ್ತಿದೆ ಎಂಬ ಅನುಮಾನಗಳು ಮೂಡಿರುವುದು ವಿಚಿತ್ರ.

ಒಬ್ಬಿಬ್ಬರಲ್ಲ, 600 ವಕೀಲರು ಸಹಿ ಹಾಕಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದಾರೆ. ಕೇಜ್ರಿವಾಲ್ ಮೊದಲಾದ ವಿಪಕ್ಷ ನಾಯಕರ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿ ಜೈಲಿಗೆ ಕಳಿಸಲಾಗಿರುವ ಮತ್ತು ಅವರ ಪ್ರಕರಣದ ವಿಚಾರಣೆ ಕೋರ್ಟ್ನಲ್ಲಿ ನಡೆಯುತ್ತಿರುವ ಹೊತ್ತಿನಲ್ಲಿ ವಕೀಲರ ಪತ್ರ ದೇಶದ ಮುಖ್ಯ ನ್ಯಾಯಮೂರ್ತಿಗಳಿಗೆ ಹೋಗಿದೆ.

ಕೆಲವು ಮಹತ್ವದ ತೀರ್ಪುಗಳನ್ನು ಸುಪ್ರೀಂ ಕೋರ್ಟ್ ನೀಡಿದ ಬೆನ್ನಲ್ಲೇ ಇಂಥದೊಂದು ಪತ್ರವನ್ನು ಮುಖ್ಯ ನ್ಯಾಯಮೂರ್ತಿಗಳಿಗೆ ಬರೆಯಲಾಗಿದೆ. ರಾಜಕೀಯ ನಾಯಕರು ಆರೋಪಿಗಳಾಗಿರುವ ಪ್ರಕರಣಗಳಲ್ಲಿ ನ್ಯಾಯಾಂಗದ ಮೇಲೆ ಪ್ರಭಾವ ಬೀರುವ ಯತ್ನಗಳು ನಡೆಯುತ್ತಿವೆ, ನ್ಯಾಯಾಂಗ ಇದನ್ನು ತಡೆಯಬೇಕಿದೆ ಎಂದು ಮೊದಲಾಗಿ ಪತ್ರದಲ್ಲಿ ಹೇಳಲಾಗಿದೆ.

ಆದರೆ, ಕೇಜ್ರಿವಾಲ್ ಪ್ರಕರಣದಲ್ಲಿ ಏನಾಗುತ್ತಿದೆ? ಅವರೇ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ನಲ್ಲಿ ಆರೋಪಿಸಿರುವಂತೆ, ಅವರನ್ನು ಜೈಲಿನಲ್ಲಿಡಲಾಗಿದ್ದರೂ, ಅವರ ವಿರುದ್ಧ ಆರೋಪ ಸಾಬೀತು ಮಾಡಲು ಸಾಧ್ಯವಾಗಿಲ್ಲ. ಅಲ್ಲದೆ ನಾಲ್ವರ ಹೇಳಿಕೆಗಳನ್ನು ಮಾತ್ರ ಆಧರಿಸಿ ಅವರನ್ನು ಬಂಧಿಸಲಾಗಿದೆ. ಇದೇ ವೇಳೆ, ತಮ್ಮನ್ನೇಕೆ ಬಂಧಿಸಲಾಗಿದೆ ಎಂಬ ಅವರ ಪ್ರಶ್ನೆಗೆ ಉತ್ತರಿಸಲು, ಅವರ ಮಧ್ಯಂತರ ಜಾಮೀನು ವಿಚಾರವಾಗಿ ಪ್ರತಿಕ್ರಿಯಿಸಲು ಈಡಿ ವಿಳಂಬ ತಂತ್ರವನ್ನು ಅನುಸರಿಸುತ್ತಿದೆ.

ಇವಿಷ್ಟೂ ಒಂದೆಡೆಯಾದರೆ, ಇನ್ನೊಂದೆಡೆ ವಕೀಲರ ಪತ್ರದ ವಿಚಾರವಾಗಿ ​ತಕ್ಷಣ ಪ್ರತಿಕ್ರಿಯೆ ಕೊಟ್ಟಿರುವ ​ಪ್ರಧಾನಿ ಮೋದಿ, ಬೇರೆಯವರನ್ನು ಹೆದರಿಸುವುದು, ಬೊಬ್ಬೆ ಹೊಡೆಯುವುದು ಕಾಂಗ್ರೆಸ್ ಸಂಸ್ಕೃತಿಯಾಗಿದೆ ಎಂದಿದ್ದಾರೆ. ತಮ್ಮ ಟ್ವೀಟ್ ಜೊತೆ ಮೋದಿ 600 ವಕೀಲರು ಸಿಜೆಐಗೆ ಬರೆದ ಪತ್ರವನ್ನು ​ಮೋದಿ ಟ್ಯಾಗ್ ಮಾಡಿರುವುದು ಏನನ್ನು ಸೂಚಿಸುತ್ತದೆ?

ವಕೀಲರ ಪತ್ರದ ಮೂಲಕ ವ್ಯಕ್ತವಾಗಿರುವುದು ನಿಜವಾಗಿಯೂ ಯಾರ ಭಾವನೆ ಎಂಬ ಪ್ರಶ್ನೆಯೂ ಏಳುತ್ತದೆ, ಅಲ್ಲವೆ? ಕೇಜ್ರಿವಾಲ್ ಬಂಧನದ ನಂತರ ರಾಷ್ಟ್ರ ರಾಜಧಾನಿಯಲ್ಲಿ ಭುಗಿಲೆದ್ದಿದ್ದ ಪ್ರತಿಭಟನೆಗಳ ನಂತರ ಜರ್ಮನಿ ಹೇಳಿಕೆ ನೀಡಿತ್ತು. ಅದರ ಬೆನ್ನಲ್ಲೇ ಅಮೆರಿಕ ಕೂಡ ತನ್ನ ಪ್ರತಿಕ್ರಿಯೆ ನೀಡಿತ್ತು.

ಕೇಜ್ರಿವಾಲರಂತೆ ಯಾರೇ ಆರೋಪಗಳನ್ನು ಎದುರಿಸುತ್ತಿದ್ದರೂ ನ್ಯಾಯೋಚಿತ ಹಾಗೂ ನಿಷ್ಪಕ್ಷಪಾತ ವಿಚಾರಣೆ ನಡೆಸಬೇಕು ಎಂದು ಜರ್ಮನಿಯ ವಿದೇಶಾಂಗ ಇಲಾಖೆ ವಕ್ತಾರ ಸೆಬಾಸ್ಟಿನ್ ಫಿಸ್ಚೇರ್ ಹೇಳಿದ್ದರು. ಆ ಹೇಳಿಕೆಯ ನಂತರ ಭಾರತ ಸರ್ಕಾರ ಜರ್ಮನಿ ರಾಯಭಾರಿ ಕಚೇರಿಯ ಉಪ ಮುಖ್ಯಸ್ಥ ಜಾರ್ಜ್ ಎಂಜ್ವೇಲಿಯರ್ ಅವರನ್ನು ಕರೆಸಿಕೊಂಡು ಮಾತಾಡಿತ್ತು.

ಇದಾದ ಬಳಿಕ ಅಮೆರಿಕ ರಾಯಭಾರಿ ಕಚೇರಿಯ ವಕ್ತಾರರು, ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಅರವಿಂದ್ ಕೇಜ್ರಿವಾಲ್ ಬಗ್ಗೆ ನ್ಯಾಯೋಚಿತ ಹಾಗೂ ಪಾರದರ್ಶಕ ನ್ಯಾಯ ಪ್ರಕ್ರಿಯೆಯನ್ನು ನಿರೀಕ್ಷಿಸುವುದಾಗಿ ಹೇಳಿದ್ದರು. ಅದರ ಹಿನ್ನೆಲೆಯಲ್ಲಿ ಭಾರತದ ರಾಯಭಾರಿ ಕಚೇರಿ ಅಮೆರಿಕ ರಾಯಭಾರಿ ಕಚೇರಿಯ ಉಪಮುಖ್ಯ ಅಧಿಕಾರಿ ಗ್ಲೋರಿಯಾ ಬಾರ್ಬೇನಾ ಅವರಿಗೆ ಸಮನ್ಸ್ ನೀಡಿತ್ತು.

ಅಮೆರಿಕ ಕೇಜ್ರಿವಾಲ್ ಬಂಧನ ವಿಚಾರಕ್ಕೆ ಪ್ರತಿಕ್ರಿಯಿಸಿರುವುದರ ಜೊತೆಗೇ ಕಾಂಗ್ರೆಸ್ ಬ್ಯಾಂಕ್ ಖಾತೆ ಸ್ಥಗಿತ ವಿಚಾರದ ಬಗ್ಗೆಯೂ ಮಾತಾಡಿದೆ.

ಭಾರತದ ಪ್ರತಿಕ್ರಿಯೆ ಏನೇ ಇದ್ದರೂ, ಕೇಜ್ರಿವಾಲ್ ಪ್ರಕರಣದ ಕುರಿತಾಗಿ ಭಾರತ ಸರ್ಕಾರದ ಕ್ರಮಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಇರುವುದಾಗಿ ಹೇಳಿರುವ ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರ ಮ್ಯಾಥ್ಯೂ ಮಿಲ್ಲರ್, ಕಾಂಗ್ರೆಸ್ ಬ್ಯಾಂಕ್ ಖಾತೆ ಸ್ಥಗಿತ ವಿಚಾರವನ್ನೂ ಎತ್ತಿದ್ದಾರೆ.

ಕಾಂಗ್ರೆಸ್ ಪಕ್ಷದ ಆರೋಪಗಳ ಕುರಿತು ನಮಗೆ ಅರಿವಿದೆ. ಕಾಂಗ್ರೆಸ್ ಪಕ್ಷದ ವಿರುದ್ಧ ತೆರಿಗೆ ವಂಚನೆ ಆರೋಪ ಮಾಡಲಾಗಿದೆ. ಪಕ್ಷದ ಬ್ಯಾಂಕ್ ಖಾತೆಗಳನ್ನು ಸ್ಥಗಿತ ಮಾಡಲಾಗಿದೆ. ಹೀಗಾಗಿ ಚುನಾವಣೆಯಲ್ಲಿ ಪರಿಣಾಮಕಾರಿಯಾಗಿ ಪ್ರಚಾರ ಮಾಡಲು ಪಕ್ಷಕ್ಕೆ ಅಡೆತಡೆ ಎದುರಾಗಿದೆ ಎಂದು ಮಿಲ್ಲರ್ ಹೇಳಿದ್ದಾರೆ.

ಅಲ್ಲಿಗೆ, ಭಾರತದಲ್ಲಿನ ಚುನಾವಣೆ ಮೇಲೆ ಮತ್ತು ಚುನಾವಣೆ ಹೊತ್ತಿನಲ್ಲಿ ಮೋದಿ ಸರ್ಕಾರ ಆಡುತ್ತಿರುವ ಆಟಗಳ ಮೇಲೆ ಅಮೆರಿಕ, ಜರ್ಮನಿಯಂಥ ದೇಶಗಳೂ ಕಣ್ಣಿಟ್ಟಿವೆ ಎಂದಾಯಿತು,

ಯಾರ ವಿಷಯದಲ್ಲಿಯೇ ಆಗಲಿ ಪಾರದರ್ಶಕ ಮತ್ತು ನಿಷ್ಪಕ್ಷಪಾತ ನ್ಯಾಯ ಪ್ರಕ್ರಿಯೆ ನಡೆಯಲಿ ಎಂದು ಅವೆರಡೂ ದೇಶಗಳು ಒತ್ತಿ ಹೇಳಿರುವುದು ಕೂಡ ಮೋದಿ ಸರ್ಕಾರಕ್ಕೆ ಮುಜುಗರ ತಂದಿರಬೇಕು. ​ಈ ಎರಡೂ ಪ್ರಮುಖ ದೇಶಗಳ ಬೆನ್ನಿಗೆ ಈಗ ವಿಶ್ವಸಂಸ್ಥೆಯೇ ಕೇಜ್ರಿವಾಲ್ ಬಂಧನದ ಕುರಿತು ಮಾತಾಡಿಬಿಟ್ಟಿದೆ.

" ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿಯ ವಕ್ತಾರರು "ಚುನಾವಣೆ ನಡೆಯುವ ಬೇರೆ ಯಾವುದೇ ದೇಶಗಳಂತೆ ಭಾರತದಲ್ಲೂ ಪ್ರತಿಯೊಬ್ಬ ರಾಜಕೀಯ ಹಾಗು ನಾಗರೀಕ ವ್ಯಕ್ತಿಯ ಹಕ್ಕುಗಳ ರಕ್ಷಣೆಯಾಗಲಿದೆ, ಹಾಗು ಪ್ರತಿಯೊಬ್ಬರೂ ಮುಕ್ತ ಹಾಗು ನ್ಯಾಯಯುತ ವಾತಾವರಣದಲ್ಲಿ ಮತ ಚಲಾಯಿಸುವಂತೆ ಆಗಲಿದೆ " ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಹೇಳಿದ್ದಾರೆ.

ಚುನಾವಣೆ ಹೊತ್ತಿನಲ್ಲಿ ವಿಪಕ್ಷಗಳಾದ ಕಾಂಗ್ರೆಸ್ ಮತ್ತು ಎಎಪಿ ವಿಚಾರವಾಗಿ ಮೋದಿ ಸರ್ಕಾರ ಹೇಗೆ ನಡೆದುಕೊಳ್ಳುತ್ತಿದೆ ಎಂಬುದ​ನ್ನು ವಿಶ್ವ ಸಂಸ್ಥೆ ಸಹಿತ ಜಗತ್ತಿನ ಪ್ರಮುಖ ದೇಶಗಳು ಸೂಕ್ಷ್ಮವಾಗಿ ಗಮನಿಸಿವೆ.ಮತ್ತು ಭಾರತದ ಪ್ರತಿಕ್ರಿಯೆ ಏನೇ ಇದ್ದರೂ ತಾವು ಸೂಕ್ಷ್ಮವಾಗಿ ಇದನ್ನೆಲ್ಲ ಗಮನಿಸುವುದನ್ನು ಮುಂದುವರಿಸುವುದಾಗಿ ಹೇಳಿರುವುದು ಮೋದಿ ಸರ್ಕಾರಕ್ಕೆ ಉಂಟಾಗಿರುವ ಮತ್ತೊಂದು ಮುಜುಗರ.

ವಿದೇಶಗಳೂ ​ಹೇಳಿಕೆ ಕೊಡುವ ಮಟ್ಟಿಗೆ ಮೋದಿ ಸರ್ಕಾರ ಈ ದೇಶದ ಪ್ರಜಾಸತ್ತೆಗೆ ಏಟು ಕೊಡುವಂಥ ಕೆಲಸಗಳಲ್ಲಿ ಮುಳುಗಿದೆ ಮತ್ತು ಅದನ್ನು ನಿರ್ಲಜ್ಜವಾಗಿ ಮಾಡುತ್ತಲೇ ಬಂದಿದೆ.ಈಗ ಇವೆಲ್ಲ ಒತ್ತಡಗಳನ್ನು ತಡೆದುಕೊಳ್ಳಲಾರದ ಸ್ಥಿತಿ ಅದಕ್ಕೆ ಎದುರಾದ ಹಾಗಿದೆ.

ಚುನಾವಣಾ ಬಾಂಡ್ ವಿವರಗಳನ್ನು ಕೊಡಲು ನಾಟಕವಾಡುತ್ತಿದ್ದ ಎಸ್ಬಿಐ ಅದಕ್ಕಾಗಿ ಕೇಳಿದಷ್ಟು ಸಮಯವನ್ನು ಕೋರ್ಟ್ ನೀಡಿದ್ದಿದ್ದರೆ ಸಾಳ್ವೆ ನೇತೃತ್ವದಲ್ಲಿ 600 ವಕೀಲರು ಇಂಥದೊಂದು ಪತ್ರವನ್ನು ಸಿಜೆಐಗೆ ಬರೆಯುತ್ತಿದ್ದರೆ?

ಇದ್ದಕ್ಕಿದ್ದಂತೆ ಅವರಿಗೆ ಏಕೆ, ನ್ಯಾಯಾಂಗದ ಮೇಲೆ ಒತ್ತಡ ಹೇರಲಾಗುತ್ತಿದೆ, ಪ್ರಭಾವ ಬೀರಲಾಗುತ್ತಿದೆ ಎಂಬೆಲ್ಲ ಅನುಮಾನಗಳು ಬಂದವು?

ಯಾರಿಗೋಸ್ಕರ ಅವರು ಈ ಮಾತುಗಳನ್ನೆಲ್ಲ ​ದೇಶದ ಮುಖ್ಯ ನ್ಯಾಯಾಧೀಶರ ಎದುರು ಇಡಲು ಮುಂದಾದರು? ರಾಜಕೀಯ ನಾಯಕರಿರುವ ಪ್ರಕರಣಗಳಲ್ಲಿ ನ್ಯಾಯಾಂಗದ ಮೇಲೆ ಪ್ರಭಾವ ಬೀರುವ ಯತ್ನ ನಡೆಯುತ್ತಿದೆ ಎಂದು ಹೇಳುತ್ತಿರುವ ಸಾಳ್ವೆ ಮತ್ತಿತರ 600 ವಕೀಲರು, ಯಾವ ರಾಜಕೀಯದ ನೆರಳಿನಲ್ಲಿ ಹಾಗೆ ಹೇಳುತ್ತಿದ್ದಾರೆ?

ವಕೀಲರ ಪತ್ರ ಅತ್ತ ಹೋಗುತ್ತಿದ್ದಂತೆ ಇತ್ತ ಮೋದಿ ಅದನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡುವುದರ ಮರ್ಮ ಏನು? ತನ್ನದೇ ಕಾಲ್ಪನಿಕ ವಕೀಲರ ಗುಂಪೊಂದನ್ನು ಉಲ್ಲೇಖಿಸಿ ಪತ್ರದುದ್ದಕ್ಕೂ ಆರೋಪ ಮಾಡಿರುವ ಸಾಳ್ವೆ ಮತ್ತಿತರರ ಈ ಗುಂಪಿನದ್ದು ನಿಜವಾಗಿಯೂ ಯಾರ ಪರ ವಕಾಲತ್ತು?

ಮೋದಿ ಸರ್ಕಾರಕ್ಕೆ ಸುತ್ತಲಿಂದಲೂ ಎದುರಾಗುತ್ತಿರುವ ಭಯ ಇಂಥ ಏನೇನನ್ನೆಲ್ಲ ಯಾರ್ಯಾರ ಕಡೆಯಿಂದ ಮಾಡಿಸುವುದು ಇನ್ನೂ ಬಾಕಿಯಿದೆಯೊ ಗೊತ್ತಿಲ್ಲ. ಅದು ಆರಾಮವಾಗಿಯಂತೂ ಇಲ್ಲ ಎಂಬುದು ಮಾತ್ರ ಈ ಹೊತ್ತಿನಲ್ಲಿ ಖಚಿತವಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!