ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯಡಿ 5,551 ಕೋಟಿ ರೂ. ಜಪ್ತಿ; ಅಗತ್ಯದ ಬಗ್ಗೆ ಹೇಳಿಕೆ ನೀಡಿಲ್ಲ ಎಂದು ಹೈಕೋರ್ಟ್‌ನಲ್ಲಿ ಶಿಯೋಮಿ ವಾದ

Update: 2023-11-21 18:12 GMT

ಬೆಂಗಳೂರು, ನ.21: ಶಿಯೋಮಿ ಬ್ಯಾಂಕ್ ಖಾತೆಗಳಿಂದ 5,551 ಕೋಟಿ ರೂ. ವಶಕ್ಕೆ ಪಡೆದಿದ್ದು, ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ(ಫೆಮಾ) ಸೆಕ್ಷನ್ 37ಎ ಅಡಿ ಏಕೆ ಅದು ಅಗತ್ಯ ಎಂಬುದರ ಬಗ್ಗೆ ಹೇಳಿಕೆ ನೀಡಲಾಗಿಲ್ಲ ಎಂದು ಶಿಯೋಮಿ ಕಂಪೆನಿ ಹೈಕೋರ್ಟ್‌ನಲ್ಲಿ ಜಾರಿ ನಿರ್ದೇಶನಾಲಯದ(ಈ.ಡಿ) ಜಪ್ತಿ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿತು.

ಚೀನಾದ ಶಿಯೋಮಿ ತಂತ್ರಜ್ಞಾನ ಸಂಸ್ಥೆಗೆ ಸೇರಿದ್ದ 5,551 ಕೋಟಿ ರೂ. ಜಪ್ತಿ ಮಾಡಿದ ಆದೇಶವನ್ನು ಎತ್ತಿ ಹಿಡಿದಿದ್ದ ಹೈಕೋರ್ಟ್‌ನ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಶಿಯೋಮಿ ಟೆಕ್ನಾಲಜಿ ಪ್ರೈವೆಟ್ ಲಿಮಿಟೆಡ್ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಶಿಯೋಮಿ ಪರ ವಾದಿಸಿದ ವಕೀಲರು, ಫೆಮಾದ ಸೆಕ್ಷನ್ 37ಎ ಸ್ವೇಚ್ಛೆಯಿಂದ ಕೂಡಿದೆ. ಯಾವಾಗ ಮತ್ತು ಹೇಗೆ ಆ ಅಧಿಕಾರವನ್ನು ಬಳಕೆ ಮಾಡಬೇಕು ಎಂಬುದಕ್ಕೆ ಯಾವುದೇ ಮಾರ್ಗಸೂಚಿಗಳನ್ನು ಪ್ರಾಧಿಕಾರಗಳಿಗೆ ರೂಪಿಸಲಾಗಿಲ್ಲ. ಇದು ಪ್ರಾಧಿಕಾರಗಳಿಗೆ ಅನಿಯಂತ್ರಿತ ಅಧಿಕಾರ ನೀಡಿದೆ ಎಂದು ಪೀಠಕ್ಕೆ ತಿಳಿಸಿದರು.

ಜಪ್ತಿಮಾಡಲು ಅಥವಾ ತಾತ್ಕಾಲಿಕವಾಗಿ ಆಸ್ತಿಯನ್ನು ಜಪ್ತಿಮಾಡಲು ಇತರ ಶಾಸನದಲ್ಲಿ ಅಧಿಕಾರ ನೀಡಲಾಗಿದ್ದು, ಇವುಗಳಲ್ಲಿ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಅಡಕಗೊಳಿಸಲಾಗಿದೆ. ಜಪ್ತಿಆದೇಶಕ್ಕೂ ಮುನ್ನ ಇದನ್ನು ಪೂರೈಸಬೇಕು.ಆದರೆ, ಫೆಮಾ ಸೆಕ್ಷನ್ 37ಎ ಅಡಿ ಯಾವಾಗ ಜಪ್ತಿ ಆದೇಶ ಮಾಡುವುದು ಅಗತ್ಯ ಎಂಬುದಕ್ಕೆ ಸಂಬಂಧಿಸಿದ ಮಾರ್ಗಸೂಚಿ ಇಲ್ಲ ಎಂದು ಪೀಠಕ್ಕೆ ಹೇಳಿದರು.

ಸೆಕ್ಷನ್ 37ಎ ಅಡಿ ಏಕೆ ಅಧಿಕಾರ ಚಲಾಯಿಸಲಾಗಿದೆ? ಏನನ್ನೂ ಉಲ್ಲೇಖಿಸಲಾಗಿಲ್ಲ. ಇದನ್ನು ಪ್ರಾಧಿಕಾರದ ವಿವೇಚನೆಗೆ ಬಿಡಲಾಗಿದೆ. ಸೆಕ್ಷನ್ 37ಎ ಚಲಾಯಿಸುವಾಗ ಸ್ವತಂತ್ರ ಮತ್ತು ಪ್ರಬಲವಾದ ಕಾರಣ ಇರಬೇಕು. ನಮ್ಮ ಖಾತೆಯಲ್ಲಿನ 5,551 ಸಾವಿರ ಕೋಟಿ ಹಣವನ್ನು ಜಪ್ತಿ ಮಾಡಲಾಗಿದೆ. ಇದನ್ನು ಹೇಗೆ ಮರಳಿಸುತ್ತಾರೆ? ಇದರಿಂದಾಗಿ ಈ ದೇಶದಲ್ಲಿ ನಾನು ಉದ್ಯಮ ನಡೆಸಲಾಗುತ್ತಿಲ್ಲ ಎಂದರು.

ಜಪ್ತಿ ಆದೇಶ ಮಾಡುವಾಗ ಸರಕಾರದ ಪ್ರಾಧಿಕಾರಗಳು ಉಲ್ಲೇಖಿಸಿರುವ ಎಲ್ಲ ಜಮೆಗಳು ಕಾನೂನುಬದ್ಧ ಜಮೆಗಳಾಗಿವೆ. ಹೀಗಾಗಿ, ಅದು ಸೆಕ್ಷನ್ 4ರ ಅಡಿ ಉಲ್ಲಂಘನೆಯಲ್ಲ. ಏನನ್ನೂ ರಹಸ್ಯವಾಗಿ ಮಾಡಿಲ್ಲ ಎಂದರು.

ಶಿಯೋಮಿ ಬ್ಯಾಂಕ್ ಖಾತೆಯನ್ನು ಏಕೆ ಜಪ್ತಿ ಮಾಡಲಾಗುತ್ತಿದೆ ಎಂಬುದಕ್ಕೆ ಒಂದೇ ಒಂದು ವಿಚಾರವನ್ನು ಹೇಳಲಾಗಿಲ್ಲ. ಫೆಮಾದ ಸೆಕ್ಷನ್ 4ಅನ್ನು ಉಲ್ಲಂಘಿಸಿರುವ ಆರೋಪ ಬಂದ ಎಲ್ಲ ಪ್ರಕರಣಗಳಲ್ಲೂ ಸೆಕ್ಷನ್ 37ಎ ಚಲಾಯಿಸಬಹುದೇ? ಎಂದರು.

ಆಗ ಪೀಠವು ಆ ಪ್ರಶ್ನೆಯನ್ನು ನೀವು ನಮಗೆ ಹಾಕಿದರೆ ಅದು ಆಗಬಹುದು. ಅದು ಸಾಧ್ಯವಿದೆ ಎಂದು ಹೇಳುತ್ತೇವೆ ಎಂದಿತು. ಇದಕ್ಕೆ ಶಿಯೋಮಿ ಪರ ವಕೀಲರು, ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿರುವ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಪರಿಣಾಮ ಬೀರಬಲ್ಲ ಗಂಭೀರ ಕಾನೂನು ಪಿಎಂಎಲ್‌ಎದಲ್ಲೂ ಸುರಕ್ಷತಾ ಕ್ರಮಗಳಿವೆ ಎಂದರು. ವಾದ ಆಲಿಸಿದ ಪೀಠವು ವಿಚಾರಣೆಯನ್ನು ಡಿ.12ಕ್ಕೆ ಮುಂದೂಡಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News