ನಟ ದರ್ಶನ್ ಮನೆಯ ನಾಯಿ ಕಚ್ಚಿದ ಆರೋಪ: ದೂರು ದಾಖಲು

Update: 2023-10-31 15:45 GMT

ಬೆಂಗಳೂರು, ಅ.31: ನಟ ದರ್ಶನ್ ಅವರ ಮನೆಯ ನಾಯಿಯು ಮಹಿಳೆಯೊಬ್ಬರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ ಆರೋಪದಡಿ ಮಹಿಳೆಯು ನಟ ದರ್ಶನ್ ಹಾಗೂ ಇತರರ ವಿರುದ್ಧ ಆರ್.ಆರ್.ನಗರ ಠಾಣೆಯ ಪೊಲೀಸರಿಗೆ ದೂರು ನೀಡಿರುವ ಬಗ್ಗೆ ವರದಿಯಾಗಿದೆ.

ಅ.31ರಂದು ನಟ ದರ್ಶನ್ ಅವರ ಆರ್ ಆರ್ ನಗರದ ನಿವಾಸದ ಬಳಿ ಘಟನೆ ನಡೆದಿದ್ದು, ಘಟನೆಗೂ ಮುನ್ನ ದರ್ಶನ್‍ರ ಮನೆ ಸಿಬ್ಬಂದಿಯು ಮಹಿಳೆಯೊಂದಿಗೆ ವಾಗ್ವಾದ ನಡೆಸಿದ್ದರು ಎನ್ನಲಾಗಿದೆ.

ಆರ್.ಆರ್ ನಗರದಲ್ಲಿ ಆಸ್ಪತ್ರೆ ಕಾರ್ಯಕ್ರಮವೊಂದಕ್ಕೆ ಮಹಿಳೆ ಆಗಮಿಸಿದ್ದರು. ದರ್ಶನ್ ಮನೆಯ ಬಳಿ ಖಾಲಿ ಜಾಗದಲ್ಲಿ ತಮ್ಮ ಕಾರನ್ನು ಮಹಿಳೆ ನಿಲ್ಲಿಸಿದ್ದರು. ಕಾರ್ಯಕ್ರಮ ಮುಗಿಸಿ ಮರಳಿ ಬಂದಾಗ ಕಾರು ನಿಲ್ಲಿಸಿದ್ದ ಜಾಗದಲ್ಲಿ ಮೂರು ನಾಯಿಗಳು ಇದ್ದವು. ದರ್ಶನ್‍ರ ಮನೆ ಸಿಬ್ಬಂದಿಗೆ ನಾಯಿಗಳನ್ನು ಪಕ್ಕಕ್ಕೆ ಕರೆದುಕೊಳ್ಳುವಂತೆ ಮಹಿಳೆ ಕೇಳಿದ್ದಾರೆ. ಆಗ ವಾಗ್ವಾದ ನಡೆಸಿರುವ ದರ್ಶನ್ ಮನೆಯ ಸಿಬ್ಬಂದಿ, ಈ ಜಾಗದಲ್ಲಿ ನೀವು ಕಾರು ಪಾರ್ಕ್ ಮಾಡುವಂತಿಲ್ಲ ಎಂದಿದ್ದಾರೆ. ಮಹಿಳೆ ಹಾಗೂ ದರ್ಶನ್‍ರ ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ. ಬಳಿಕ ನಾಯಿಗಳು ಮಹಿಳೆಯ ಮೇಲೆ ದಾಳಿ ನಡೆಸಿ ಹೊಟ್ಟೆ ಹಾಗೂ ಕೈಗೆ ಕಡಿದು ಗಾಯಗೊಳಿಸಿವೆ ಎಂದು ತಿಳಿದುಬಂದಿದೆ.

ಗಾಯಗೊಂಡ ಮಹಿಳೆಯು ಆರ್‍ಆರ್ ನಗರ ಪೊಲೀಸ್ ಠಾಣೆಗೆ ತೆರಳಿ ಘಟನೆ ಸಂಬಂಧ ದೂರು ದಾಖಲಿಸಿದ್ದಾರೆ. ನಟ ದರ್ಶನ್‍ರನ್ನು ಎರಡನೇ ಆರೋಪಿಯನ್ನಾಗಿಸಿ ದೂರನ್ನು ನೀಡಲಾಗಿದೆ ಎಂದು ಗೊತ್ತಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News