ಬೆಂಗಳೂರು | ಮೊಬೈಲ್ ಚಾರ್ಜಿಂಗ್ ವೇಳೆ ವಿದ್ಯುತ್ ಪ್ರವಹಿಸಿ ವಿದ್ಯಾರ್ಥಿ ಮೃತ್ಯು

Update: 2024-07-06 13:48 GMT
ಸಾಂದರ್ಭಿಕ ಚಿತ್ರ ( PC: Meta AI)

ಬೆಂಗಳೂರು : ಮೊಬೈಲ್ ಚಾರ್ಜ್ ಮಾಡುವ ವೇಳೆ ವಿದ್ಯುತ್ ಪ್ರವಹಿಸಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ಇಲ್ಲಿನ ಬಸವೇಶ್ವರ ಠಾಣಾ ವ್ಯಾಪ್ತಿಯ ಮಂಜುನಾಥ ನಗರದಲ್ಲಿ ವರದಿಯಾಗಿದೆ.

ಬೀದರ್ ಮೂಲದ ಶ್ರೀನಿವಾಸ್(24) ಎಂಬಾತ ಮೃತಪಟ್ಟ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.

ನಗರದಲ್ಲಿ ಸಾಫ್ಟ್‌ ವೇರ್ ಕೋರ್ಸ್ ಮಾಡುತ್ತಿದ್ದ ಶ್ರೀನಿವಾಸ್, ಮಂಜುನಾಥ ನಗರದ ಪಿ.ಜಿಯಲ್ಲಿ ವಾಸವಿದ್ದ ಎನ್ನಲಾಗಿದೆ. ಜು.5ರ ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ರೂಮಿನಲ್ಲಿದ್ದ ಶ್ರೀನಿವಾಸ್, ಮೊಬೈಲ್ ಚಾರ್ಜ್ ಹಾಕುವಾಗ ವಿದ್ಯುತ್ ಪ್ರವಹಿಸಿದೆ. ಪರಿಣಾಮ ಶ್ರೀನಿವಾಸ್ ಮೃತಪಟ್ಟಿದ್ದಾನೆ. ರೂಮ್ ಹೊರಗಿದ್ದ ಆತನ ಸ್ನೇಹಿತ ಸ್ವಲ್ಪ ಸಮಯದ ಬಳಿಕ ಶ್ರೀನಿವಾಸ್‍ನನ್ನು ಊಟಕ್ಕೆ ಕರೆಯಲು ಹೋದಾಗ ಆತ ನೆಲಕ್ಕೆ ಬಿದ್ದಿರುವುದನ್ನು ಗಮನಿಸಿ ಶ್ರೀನಿವಾಸ್‍ನನ್ನು ಎಬ್ಬಿಸಲು ಯತ್ನಿಸುವಾಗ ಸ್ನೇಹಿತನಿಗೂ ವಿದ್ಯುತ್ ಶಾಕ್ ಪ್ರವಹಿಸಿದೆ. ಆದರೆ, ಅದೃಷ್ಟವಶಾತ್ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.

ಘಟನೆಯ ಬಗ್ಗೆ ಪಿ.ಜಿ. ಸಿಬ್ಬಂದಿ ಮಾಹಿತಿ ನೀಡಿದ ಬಳಿಕ ಬಸವೇಶ್ವರ ನಗರ ಠಾಣಾ ಒಇಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News