ಗಾಂಧೀಜಿ ಹುಟ್ಟಿದ ನಾಡಿನಲ್ಲಿ ವರ್ಣಭೇದ ನೀತಿ ಪೋಷಿಸುತ್ತಿರುವ ಬಿಜೆಪಿ: ಸಚಿವ ಈಶ್ವರ ಖಂಡ್ರೆ ಕಿಡಿ

Update: 2023-08-02 10:00 GMT

ಬೆಂಗಳೂರು ಆಗಸ್ಟ್ 2: ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಯ ವಿರುದ್ಧ ಹೋರಾಡಿದ ಮಹಾತ್ಮಾ ಗಾಂಧೀಜಿ ಹುಟ್ಟಿದ ದೇಶದಲ್ಲಿ ಬಿಜೆಪಿ ವರ್ಣಭೇದ ನೀತಿಯನ್ನು ಪೋಷಿಸುತ್ತಿರುವುದು ನಿಜಕ್ಕೂ ದುರ್ದೈವ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಸಿ ಈಶ್ವರ ಖಂಡ್ರೆ ವಿಷಾದ ವ್ಯಕ್ತಪಡಿಸಿದ್ದಾರೆ.

“ನಮ್ಮ ಭಾಗದ ಜನರು ಸುಟ್ಟು ಕರಕಲಾಗಿರುತ್ತಾರೆ ಖರ್ಗೆ ಅವರನ್ನು ನೋಡಿದರೆ ಇದು ಗೊತ್ತಾಗುತ್ತದೆ’ಎಂದು ಹೇಳುವ ಮೂಲಕ ಆರಗ ಜ್ಞಾನೇಂದ್ರ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮತ್ತು ದಲಿತ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಷ್ಟೇ ಅಲ್ಲದೆ ರಾಜ್ಯದ ಅದರಲ್ಲೂ ಇಡೀ ಕಲ್ಯಾಣ ಕರ್ನಾಟಕದ ಜನತೆಗೆ ಅವಮಾನ ಮಾಡಿದ್ದಾರೆ ಇದು ಮಾಜಿ ಸಚಿವರ ಘನತೆಗೆ ಶೋಭೆ ತರುವುದಿಲ್ಲ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮ ಒಂದರ ಸಂವಾದದ ವೇಳೆ ಕೆಲವರು ಕಸ್ತೂರಿರಂಗನ್ ವರದಿ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ತಾವು ಯಾವುದೇ ಹಂತದಲ್ಲೂ “ಕಸ್ತೂರಿ ರಂಗನ್ ವರದಿ ಜಾರಿಗೆ ಸರ್ಕಾರ ಬದ್ಧ’’ ಎಂದು ತಿಳಿಸಿರುವುದಿಲ್ಲ. ಇದು ತಿರುಚಿದ ಹೇಳಿಕೆ. ಈ ಬಗ್ಗೆ ಭಾನುವಾರವೇ ಬೀದರ್ ನಲ್ಲಿ ನಡೆದ ಪತ್ರಿಕಾ ದಿನಾಚರಣೆಯಲ್ಲಿ ತಾವು ಸ್ಪಷ್ಟೀಕರಣ ನೀಡಿದ್ದೇನೆ. ಸೋಮವಾರ ಮತ್ತೊಮ್ಮೆ ಸ್ಪಷ್ಟೀಕರಣ ಹೇಳಿಕೆ ಬಿಡುಗಡೆ ಮಾಡಿದ್ದು, ಇದು ಎಲ್ಲ ಮಾಧ್ಯಮದಲ್ಲೂ ಪ್ರಕಟವಾಗಿದೆ. ಹೀಗಿದ್ದೂ, ಬಿಜೆಪಿ ರಾಜಕೀಯ ದುರ್ಲಾಭಕ್ಕಾಗಿ ಮಂಗಳವಾರ ಪ್ರತಿಭಟನೆ ನಡೆಸಿರುವುದು ಅರ್ಥಹೀನ ಎಂದು ಹೇಳಿದರು.

ಆರಗ ಜ್ಞಾನೇಂದ್ರ ಅವರು ನಮ್ಮ ಕಲ್ಯಾಣ ಕರ್ನಾಟಕದಲ್ಲಿ ಮರಗಳಿಲ್ಲ ನೆರಳಿಲ್ಲ ನಮ್ಮ ತಲೆಕೂದಲೇ ನೆರಳು ಎಂದೆಲ್ಲಾ ತುಚ್ಛವಾಗಿ ಮಾತನಾಡಿರುವುದು ಅವರ ಕೀಳು ಅಭಿರುಚಿಗೆ ಹಿಡಿದ ಕನ್ನಡಿಯಾಗಿದೆ. ಗೃಹ ಮಂತ್ರಿಯಾಗಿ ಸೇವೆ ಸಲ್ಲಿಸಿದ ವ್ಯಕ್ತಿ ಮನುಷ್ಯರ ಬಣ್ಣದ ಮೇಲೆ ಟೀಕೆ ಮಾಡಿ, ಈ ರೀತಿ ನಾಡಿನ ಒಂದು ಕಾಲು ಕೋಟಿ ಜನತೆಗೆ ಅವಮಾನ ಮಾಡಿರುವುದು ನಿಜಕ್ಕೂ ದುರ್ದೈವ ಎಂದು ತಿಳಿಸಿದ್ದಾರೆ.

ಆರಗ ಜ್ಞಾನೇಂದ್ರ ಅವರು ಮಲ್ಲಿಕಾರ್ಜುನ ಖರ್ಗೆ ಹಾಗೂ ತಮಗಷ್ಟೇ ಅಲ್ಲದೆ ಇಡೀ ಕಲ್ಯಾಣ ಕರ್ನಾಟಕದ ಜನತೆಯ ಬೇಷರತ್ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದ್ದಾರೆ.

ತಾವು ಅರಣ್ಯ ಇಲ್ಲದ ಪ್ರದೇಶದಿಂದ ಬಂದಿರಬಹುದು. ಆದರೆ ಹಸಿರಿನ ಮಹತ್ವ ತಮಗೆ ತಿಳಿದಿದೆ. ಅರಣ್ಯ ಸಚಿವನಾಗಿ ರಾಜ್ಯದ ಹಸಿರು ವ್ಯಾಪ್ತಿಯನ್ನು ಹೆಚ್ಚಿಸಲು ಶಕ್ತಿಮೀರಿ ಶ್ರಮಿಸುತ್ತಿದ್ದು, ಕಲ್ಯಾಣ ಕರ್ನಾಟಕವನ್ನು ಹಸಿರುಮಯಗೊಳಿಸಲು ಮುಂದಾಗಿದ್ದೇನೆ. ಈ ಕಾರ್ಯವನ್ನು ಬಿಜೆಪಿ ಸರ್ಕಾರ ಮಾಡಿರಲಿಲ್ಲ ಎಂದು ಹೇಳಿದ್ದಾರೆ.

ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಇದೆ ಜೊತೆಗೆ ರಾಜ್ಯದಲ್ಲೂ ಬಿಜೆಪಿ ಸರ್ಕಾರ ಇತ್ತು ಆಗ ಇವರು ಏಕೆ ಕಸ್ತೂರಿರಂಗನ್ ವರದಿಯನ್ನು ರದ್ದು ಮಾಡಲಿಲ್ಲ ಎಂದು ಪ್ರಶ್ನಿಸಿರುವ ಈಶ್ವರ ಖಂಡ್ರೆ, ಈಗಲೂ ಮಲೆನಾಡಿನ ಮತ್ತು ಕರಾವಳಿಯ ಬಿಜೆಪಿ ಶಾಸಕರು, ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಕಸ್ತೂರಿರಂಗನ್ ವರದಿಯನ್ನು ರದ್ದುಪಡಿಸಲಿ ಎಂದು ಸವಾಲು ಹಾಕಿದ್ದಾರೆ.

ಈಗ ಕೇಂದ್ರ ಸರ್ಕಾರವೇ ನಿವೃತ್ತ ಐಎಫ್ಎಸ್ ಅಧಿಕಾರಿ ಸಂಜಯ್ ಕುಮಾರ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ ಎಲ್ಲ ಪಶ್ಚಿಮ ಘಟ್ಟದ ರಾಜ್ಯಗಳಿಗೆ ಅಧ್ಯಯನಕ್ಕೆ ಕಳಿಸಿದೆ, ವರದಿ ಜಾರಿಗೆ ಪಟ್ಟು ಹಿಡಿದಿರುವುದು ಕೇಂದ್ರ ಸರ್ಕಾರವೇ ಹೊರತು ರಾಜ್ಯ ಸರ್ಕಾರವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News