ಸಾಮಾಜಿಕ, ಆರ್ಥಿಕ ಸಮೀಕ್ಷಾ ವರದಿ ಅಧ್ಯಯನಕ್ಕೆ ಸಮಿತಿ ರಚನೆ ಮಾಡಿದ ವೀರಶೈವ ಮಹಾಸಭಾ
ಸಾಂದರ್ಭಿಕ ಚಿತ್ರ | PC : x/grok
ಬೆಂಗಳೂರು: ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿ(ಜಾತಿ ಗಣತಿ) ಅಧ್ಯಯನ ನಡೆಸಿ ವರದಿ ನೀಡಲು ನಿವೃತ್ತ ಐಎಎಸ್ ಅಧಿಕಾರಿ ನೇತೃತ್ವದಲ್ಲಿ ‘ಅಖಿಲ ಭಾರತ ವೀರಶೈವ ಮಹಾಸಭಾ’ ಸಮಿತಿಯೊಂದನ್ನು ರಚಿಸಿದೆ.
ಮಾಧ್ಯಮಗಳಲ್ಲಿ ಸಮೀಕ್ಷಾ ವರದಿಯಲ್ಲಿನ ಅಂಶಗಳು ಬಹಿರಂಗಗೊಂಡ ಹಿನ್ನೆಲೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಸಭೆ ನಡೆಸಿದ್ದು, ಸಂಪುಟದ ಸಚಿವರೊಬ್ಬರನ್ನು ಕರೆಸಿ ಜಾತಿ ಗಣತಿಯ ಪರಿಣಾಮಗಳ ಕುರಿತಂತೆ ಸಮಾಲೋಚನೆ ನಡೆಸಿದೆ.
ನಿವೃತ್ತ ಐಎಎಸ್ ಅಧಿಕಾರಿ ಡಾ.ಜಿ.ಎನ್.ಶಿವಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸಿದೆ. ಈ ಸಮಿತಿಯು ಸಮೀಕ್ಷಾ ಸೋರಿಕೆ ಆಗಿರುವ ವಿಷಯಗಳನ್ನು ಸಂಗ್ರಹಿಸಿ, ಅವುಗಳ ಸತ್ಯಾಸತ್ಯತೆ, ಭವಿಷ್ಯದಲ್ಲಿ ಇದರಿಂದ ಆಗಬಹುದಾದ ಪರಿಣಾಮ ಸೇರಿದಂತೆ ಎಲ್ಲ ಆಯಾಮಗಳಿಂದ ಅಧ್ಯಯನ ನಡೆಸಿ ಮಾಹಿತಿ ನೀಡಲು ತಿಳಿಸಿದೆ.
ಸಮೀಕ್ಷಾ ವರದಿಯ ಕುರಿತು ಎ.17ಕ್ಕೆ ಸಿಎಂ ಅಧ್ಯಕ್ಷತೆಯಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆಯಲಿದ್ದು, ಅದರೊಳಗಾಗಿ ಪ್ರಾಥಮಿಕವಾಗಿ ವರದಿಯನ್ನು ತಯಾರಿಸಿ, ವೀರಶೈವ-ಲಿಂಗಾಯತ ಸಮುದಾಯದ ಎಲ್ಲ ಸಚಿವರಿಗೆ ಈ ಬಗ್ಗೆ ಮನವರಿಕೆ ಮಾಡಿಕೊಡಲು ಮಹಾಸಭಾ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.