ಚಿಕ್ಕಮಗಳೂರು | ಸರಣಿ ಅಪಘಾತ: ಶಿವಮೊಗ್ಗ ಮೂಲದ ದಂಪತಿ ಸ್ಥಳದಲ್ಲೇ ಮೃತ್ಯು, ಮಗುವಿಗೆ ಗಂಭೀರ ಗಾಯ

Update: 2023-09-13 12:27 GMT

ಚಿಕ್ಕಮಗಳೂರು, ಸೆ.13: ಟಿಪ್ಪರ್ ಲಾರಿ, ಕಾರು, ಬೈಕ್ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಬೈಕ್‍ನಲ್ಲಿ ತೆರಳುತ್ತಿದ್ದ ದಂಪತಿ ಸ್ಥಳದಲ್ಲೇ ಮೃತಪಟ್ಟು, ದಂಪತಿಯ 14 ತಿಂಗಳ ಮಗುವಿಗೆ ಗಂಭೀರ ಗಾಯವಾಗಿರುವ ಧಾರುಣ ಘಟನೆ ಮಂಗಳವಾರ ರಾತ್ರಿ ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. ಘಟನೆಯಲ್ಲಿ ಕಾರು ಚಾಲಕನಿಗೂ ಗಂಭೀರ ಗಾಯವಾಗಿದೆ.

ಚಿಕ್ಕಮಗಳೂರು ತಾಲೂಕಿ ಹಿರೇಗೌಜ ಸಮೀಪದಲ್ಲಿ ಟಿಪ್ಪರ್ ಲಾರಿ ಕಾರು ಹಾಗೂ ಬೈಕ್‍ಗೆ ಢಿಕ್ಕಿ ಹೊಡೆದ ಪರಿಣಾಮ ಸರಣಿ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಶಿವಮೊಗ್ಗ ಮೂಲದ ಸೈಯದ್ ಆಸೀಫ್ (38) ಹಾಗೂ ಮಜಿನಾ(33) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ 14 ತಿಂಗಳ ಮಗುವನ್ನು ಚಿಕ್ಕಮಗಳೂರು ನಗರದ ಸರಕಾರಿ ಮಲ್ಲೇಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಚಾಲಕ ಹರೀಶ್ ಎಂಬವರಿಗೂ ಗಂಭೀರ ಗಾಯವಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿರುವ ಅವರನ್ನು ಹಾಸನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ.

ಟಿಪ್ಪರ್ ಲಾರಿ ಮೊದಲು ಕಾರಿಗೆ ಢಿಕ್ಕಿ ಹೊಡೆದು ನಂತರ ರಸ್ತೆ ಬದಿಯಲ್ಲಿದ್ದ ಬೈಕ್‍ಗೆ ಢಿಕ್ಕಿ ಹೊಡೆದಿದೆ. ಲಾರಿ ಢಿಕ್ಕಿ ಹೊಡೆದ ರಭಸಕ್ಕೆ ಕಾರು ಹಾಗೂ ಬೈಕ್ ನಜ್ಜುಗುಜ್ಜಾಗಿವೆ. ಘಟನೆಯಲ್ಲಿ ಮೃತ ದಂಪತಿ ಚಿಕ್ಕಮಗಳೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದರೆಂದು ತಿಳಿದು ಬಂದಿದ್ದು, ಅಪಘಾತದ ಬಳಿಕ ಟಿಪ್ಪರ್ ಚಾಲಕ ಪರಾರಿಯಾಗಿದ್ದಾನೆನ್ನಲಾಗಿದೆ.

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News