ʼಕಚೇರಿ ಬಾಗಿಲು ಮುಚ್ಚಿ ಮನೆಗೆ ಹೋಗಿʼ: ರೈತರಿಂದ ನೀರಾವರಿ ಇಲಾಖೆ ಇಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನ

Update: 2023-08-23 11:11 GMT

ಮೈಸೂರು,ಆ.23: ಕಬಿನಿ ಕಾವೇರಿ ನೀರು ತಮಿಳುನಾಡಿಗೆ ಹರಿಸುತ್ತಿರುವುದನ್ನು ಖಂಡಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ಆಮ್ ಆದ್ಮಿ ಪಕ್ಷದ ವತಿಯಿಂದ ಖಾಲಿ ಬಿಂದಿಗೆ ಹಿಡಿದು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಲಾಯಿತು.

ನಗರದ ಗನ್ ಹೌಸ್ ಬಳಿ ಇರುವ ಕುವೆಂಪು ಉದ್ಯಾನವನದಲ್ಲಿ ಬುಧವಾರ ಜಮಾಯಿಸಿದ ಪ್ರತಿಭಟನಾಕಾರರು. ಮೊದಲಿಗೆ ಸಭೆ ನಡೆಸಿ ರಾಜ್ಯ ಸರ್ಕಾರದ ನಡೆಯ ವಿರುದ್ಧ ಖಂಡನೆ ವ್ಯಕ್ತಪಡಿಸಿದರು. ನಂತರ ಕಾಲಿ ಬಿಂದಿಗೆಗಳನ್ನು ತಲೆಯ ಮೇಲೆ ಹೊತ್ತುಕೊಂಡು ಕಾಡಾ ಕಚೇರಿಯಲ್ಲಿರುವ ನೀರಾವರಿ ಇಲಾಖೆ ಮುಖ್ಯ ಇಂಜಿನಿಯರ್ ಕಚೇರಿವರೆಗೆ ಮೆರವಣಿಗೆ ಮೂಲಕ ತೆರಳಿ ಕಚೇರಿ ಮುತ್ತಿಗೆ ಹಾಕುವ ಪ್ರಯತ್ನ ಮಾಡಿದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು.

ತಮಿಳುನಾಡಿಗೆ ನದಿ ಮೂಲಕ ಹರಿಸುತ್ತಿರುವ ನೀರು ನಿಲ್ಲಿಸಿ ರಾಜ್ಯದ ರೈತರನ್ನು ಉಳಿಸಿ ಕಾವೇರಿ ಭಾಗದ ರೈತರ ಮರಣ ಶಾಸನ ತಪ್ಪಿಸಿ ರಾಜ್ಯ ಸರ್ಕಾರ ರೈತರಿಗೆ ದ್ರೋಹವೆಸಗಿ ರೈತ ಮುಖಂಡರನ್ನು ಹೊರಗಿಟ್ಟು ನಾಟಕೀಯವಾಗಿ ಸರ್ವ ಪಕ್ಷ ಸಭೆ ನಡೆಸುವ ಕಾರ್ಯಕ್ಕೆ ಧಿಕ್ಕಾರವಿರಲಿ ಕೂಡಲೇ ನೀರು ನಿಲ್ಲಿಸದಿದ್ದರೆ ರಾಜ್ಯ ವ್ಯಾಪಿ ಚಳುವಳಿ ನಡೆಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು.

ಇದೇವೇಳೆ ಪ್ರತಿಭನಾಕಾರರನ್ನುದ್ದೇಶಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ರೈತ ಮುಖಂಡ ಕುರುಬೂರು ಶಾಂತಕುಮಾರ್ ಮಾತನಾಡಿ, ನಾವೇನು ಮುಖ್ಯ ಇಂಜಿನಿಯರ್ ಕಚೇರಿ ದರೋಡೆ ಮಾಡಲು ಬಂದಿಲ್ಲ ಇದು ರಾಜ್ಯದ ರೈತರ ಹಿತ ಶಕ್ತಿ ಕಾಪಾಡುವ ಕಚೇರಿಯಾಗಿದ್ದರೆ ಕೂಡಲೇ ನದಿಗೆ ಹರಿಸುವ ನೀರು ನಿಲ್ಲಿಸಿ ಇಲ್ಲವೇ ಕಚೇರಿ ಬಾಗಿಲು ಮುಚ್ಚಿ ಮನೆಗೆ ಹೋಗಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರು ಹೋರಾಟ ನಡೆಸುತ್ತಿದ್ದರು ರಾಜ್ಯ ಸರ್ಕಾರ ಕಣ್ಣು ಮುಚ್ಚಿ ಕುಳಿತಂತೆ ಕಾಣುತ್ತಿದೆ ನೀರು ಖಾಲಿಮಾಡಿ ಸಭೆ ನಡೆಸುವ ನಾಟಕವಾಡುತ್ತಿದೆ ಮಂತ್ರಿಗಳು ರೈತರಿಗೆ ಕಟ್ಟು ನೀರು ಹರಿಸುತ್ತೇವೆ ಎಂದು ಪಾಠ ಹೇಳುತ್ತಾರೆ ಆದರೆ ತಮಿಳುನಾಡಿಗೆ ನಿರಯಾಸವಾಗಿ ನೀರು ಬಿಡುತ್ತಿದ್ದಾರೆ ಇದು ರಾಜ್ಯದ ರೈತರಿಗೆ ಬಗೆದ ದ್ರೋಹ ಎಂದು ಕಿಡಿಕಾರಿದರು.

ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾತನಾಡಿ,  ರಾಜ್ಯ ಸರ್ಕಾರ ತುಳಿತಕ್ಕೆ ಒಳಗಾದ ರೈತ ಮುಖಂಡರನ್ನು ಹೊರಗಿಟ್ಟು ರೈತರಿಗೆ ಅನ್ಯಾಯ ಮಾಡುವವರೇ ಸರ್ವ ಪಕ್ಷದ ಸಭೆ ನಡೆಸುವುದು ಎಷ್ಟು ಸಮಂಜಸ? ಎಲ್ಲ ಪಕ್ಷಗಳು ನೀರಿನ ವಿಚಾರದಲ್ಲಿ ರೈತರಿಗೆ ವಂಚನೆ ಮಾಡುತ್ತಲೆ ಬಂದಿದ್ದಾರೆ. ಅಂತಹವರೇ ಇಂದು ಸಭೆ ನಡೆಸುತ್ತಿದ್ದಾರೆ ಇವರಿಂದ ರಾಜ್ಯದ ರೈತರಿಗೆ ನ್ಯಾಯ ಸಿಗಲು ಸಾಧ್ಯವೇ? ರಾಷ್ಟ್ರೀಯ ಜಲನೀತಿಗಾಗಿ ಬಹಳ ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ ರಾಜ್ಯದ ನೆಲ ಜಲ ವಿಷಯ ಬಂದಾಗ ಒಂದಾಗಿ ಹೋರಾಡುವುದು ರಾಜ್ಯದ ಹಿತರಕ್ಷಣೆಗೆ ಅನುಕೂಲವಾಗುತ್ತದೆ ಈ ದಿಕ್ಕಿನಲ್ಲಿ ಸರ್ಕಾರ ಯೋಚನೆ ಮಾಡಬೇಕು ಎಂದು ಹೇಳಿದರು.

ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಕನ್ನಡಪರ ಸಂಘಟನೆಗಳು, ಆಮ್ ಆದ್ಮಿ ಪಕ್ಷದ ಮುಖಂಡರುಗಳು ಇಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ತಡೆದು ಡೆಪ್ಯೂಟಿ ಚೀಫ್ ಇಂಜಿನಿಯರ್ ರಂಗನಾಥ್ ರವರನ್ನು ಪ್ರತಿಭಟನೆ ಸ್ಥಳಕ್ಕೆ ಕರೆತಂದರು. ಅವರು ಮಾತನಾಡಿ ಈಗಾಗಲೇ ಕಬಿನಿ ಕಾವೇರಿಯಿಂದ ನೀರು ಬಿಡುವುದನ್ನ ಕಡಿಮೆ ಮಾಡಿದ್ದೇವೆ ಇವತ್ತಿನ ನಿಮ್ಮ ಹೋರಾಟದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು

ಇಪ್ರತಿಭಟನೆಯಲ್ಲಿ ಚನ್ನರಾಯಪಟ್ಟಣದ ರೈತ ಮುಖಂಡ. ಮೀಸೆ ಮಂಜಣ್ಣ , ಹತ್ತಳಿ ದೇವರಾಜ್, ಪಿ. ಸೋಮಶೇಖರ್, ಬರಡನಫುರ ನಾಗರಾಜು, ಹಳಿಕರೆಹುಂಡಿ ಬಾಗ್ಯರಾಜ್, ಕಿರಗಸೂರಶಂಕರ ಕಮಲಮ್ಮ ಸಿದ್ದೇಶ. ವೆಂಕಟೇಶ ,ರವಿ ಕನ್ನಡ ಸಂಘಟನೆಗಳ ಮಂಜುನಾಥ್, ಅಮ್ಮ್ ಅದ್ಮೀ ಪಕ್ಷದ ಮೋಹನ್ ದಾಸರಿ, ಕುಶಾಲಸ್ವಾಮಿ, ನಂಜಪ್ಪ ಕಾಳೇಗೌಡ, ಮಾಳವಿಕಾ,ರಂಗಯ್ಯ, ರಾಜಶ್ರೀ, ಸಿದ್ಧರಾಜು ಸೇರಿದಂತೆ ಹಲವರು ಭಾಗವಹಸಿದ್ದರು.

ʼಕೋಟೆ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದತು ಎಂಬ ಹಳ್ಳಿ ಗಾದೆಯಂತೆ ತಮಿಳುನಾಡಿಗೆ ನೀರು ಹರಿಸಿದ ಮೇಲೆ ರಾಜ್ಯ ಸರ್ಕಾರ ಸರ್ವ ಪಕ್ಷ ಸಭೆ ಕರೆದಿರುವುದು ನಾಡಿನ ರೈತರಿಗೆ ಮಾಡಿದ ದ್ರೋಹʼ

- ಕುರುಬೂರು ಶಾಂತಕುಮಾರ್, ರೈತ ಮುಖಂಡ.

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News