ಶಾಸಕರ ಅಮಾನತಿಗೆ ಸಿಎಂ ಸುಳಿವು ನೀಡಿಲ್ಲ..: ಸ್ಪೀಕರ್ ಯು.ಟಿ.ಖಾದರ್ ಸ್ಪಷ್ಟನೆ

Update: 2023-08-08 13:46 GMT

ಸ್ಪೀಕರ್ ಯು.ಟಿ.ಖಾದರ್

ಬೆಂಗಳೂರು, ಆ.8:  ʼಶಾಸಕರ ಅಮಾನತು ವಿಚಾರ ಈಗಾಗಲೇ ಮುಗಿದು ಹೋಗಿರುವ ವಿಷಯವಾಗಿದೆ. ಶಾಸಕರನ್ನು ಅಮಾನತು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ಸೂಚನೆ ಅಥವಾ ಸನ್ನೆಯನ್ನು ನೀಡಿಲ್ಲʼ ಎಂದು ಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಸ್ಪಷ್ಟನೆ ನೀಡಿದ್ದಾರೆ. 

ಮಂಗಳವಾರ ಬೆಂಗಳೂರು ಪ್ರೆಸ್ ಕ್ಲಬ್ ಏರ್ಪಡಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚುನಾಯಿತ ಪ್ರತಿನಿಧಿಗಳು ಸಂವಿಧಾನಕ್ಕೆ ವಿರುದ್ಧವಾಗಿ ವರ್ತಿಸಿದಾಗ ಸ್ಪೀಕರ್ ಆಗಿ ನಾನು ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಯಿತು. ಇದು ಪಕ್ಷಪಾತಿ ಕ್ರಮವಲ್ಲ. ಶಾಸಕರ ಘನತೆ ಕಾಪಾಡಲು ನನ್ನ ಸಂಪೂರ್ಣ ಬೆಂಬಲವಿದೆ.ಸದನದಲ್ಲಿ ಆರೋಪ-ಪ್ರತ್ಯಾರೋಪ ಸಹಜ. ಈ ನಡುವೆ ಕಲಾಪವನ್ನು ನಿರ್ದಿಷ್ಟ ಗುರಿಯತ್ತ ತಲುಪಿಸುವ ಗುರಿ ಸ್ಪೀಕರ್ ಮೇಲಿರುತ್ತದೆ, ಮಸೂದೆಯ ಬಗ್ಗೆ ಉತ್ತಮ ರೀತಿಯ ಚರ್ಚೆ ನಡೆದು, ಅದು ಕಾನೂನು ಆಗಿ ಜಾರಿಯಾದರೆ ಪ್ರಜೆಗಳಿಗೆ ಅನುಕೂಲವಾಗುತ್ತದೆ ಎಂದರು.

ʼʼಎಲ್ಲ ಸಂದರ್ಭದಲ್ಲಿಯೂ ನನಗೆ ಸಂವಿಧಾನವೇ ಮುಖ್ಯವಾಗುತ್ತದೆ. ನಮ್ಮ ಮತ್ತು ಶಾಸಕರ ಜಗಳ ಅಧಿವೇಶನ ಮುಗಿಯುವ ತನಕ ಮಾತ್ರ ಆಗಿರುತ್ತದೆ. ಈಗ ಪರಿಸ್ಥಿತಿ ತಿಳಿಯಾಗಿದೆಯೋ ಇಲ್ಲವೋ ಮುಂದಿನ ಅಧಿವೇಶನ ಸಂದರ್ಭದಲ್ಲಿ ಗೊತ್ತಾಗಲಿದೆʼʼ ಎಂದು ಖಾದರ್ ಹೇಳಿದರು.

ವಿರೋಧ ಪಕ್ಷದ ನಾಯಕನಾಗಿ ಆಯ್ಕೆ ಮಾಡುವುದು ಬಿಜೆಪಿ ಆಂತರಿಕ ವಿಚಾರ.ಆದರೆ, ವಿಧಾನಸಭಾಧ್ಯಕ್ಷನಾಗಿ ಪ್ರತಿಪಕ್ಷದ ಧ್ವನಿಯಾಗುವ ಜೊತೆಗೆ, ಜನರ ಸಮಸ್ಯೆ ಸರಕಾರದ ಗಮನಕ್ಕೆ ತೆಗೆದುಕೊಂಡು ಹೋಗುವ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆ ಬಲಿಷ್ಠಗೊಳ್ಳಬೇಕಾದರೆ ವಿಧಾನಸಭಾ ಕಲಾಪಗಳು ಪರಿಣಾಮಕಾರಿಯಾಗಬೇಕು. ಆಗ ಉತ್ತಮ ಶಾಸನಗಳು ಜಾರಿಯಾಗಬಹುದು. ಸರಕಾರ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ವಿಪಕ್ಷಗಳು ಕಲಾಪದಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುವುದು ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸ್ಪೀಕರ್ ಪಾತ್ರವೂ ಮಹತ್ವದ್ದಾಗಿದೆ. ವಿಧಾನಸಭಾ ಕಲಾಪ ವ್ಯರ್ಥವಾಗದಂತೆ ನಿಭಾಯಿಸುವ ಹೊಣೆಗಾರಿಕೆ ಇದೆ ಎಂದು ಅವರು ನುಡಿದರು.

ಕನ್ನಡ ಭಾಷೆಯ ಬಗ್ಗೆ ಕೆಲವರು ಸಾಮಾಜಿಕ ಜಾಲತಾಣದಗಳಲ್ಲಿ ಟ್ರೋಲ್ ಮಾಡಿದ್ದ ಕುರಿತು ಪ್ರತಿಕ್ರಿಯಿಸಿದ ಅವರು, ದೊಡ್ಡ ಸ್ಥಾನಕ್ಕೆ ನಾವು ಹೋಗಬೇಕಾದರೆ ಟ್ರೋಲ್ ಮಾಡುವವರ ಪಾತ್ರ ಇರುತ್ತದೆ. ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳವುದಿಲ್ಲ.ಅಲ್ಲದೆ, ನಮಗೆ ಕನ್ನಡ ಭಾಷೆ ಪುಸ್ತಕದಲ್ಲಿದೆ. ಹೊರಗಡೆ ಹೆಚ್ಚಾಗಿ ತುಳು ಭಾಷೆಯನ್ನೆ ಆವಲಂಬಿತವಾಗಿದ್ದೇವೆ. ಟೀಕೆಗಳಿಂದ ಕನ್ನಡ ಇನ್ನಷ್ಟು ಗಟ್ಟಿಯಾಗಲಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಅಧ್ಯಕ್ಷ ಶ್ರೀಧರ್, ಪ್ರಧಾನ ಕಾರ್ಯದರ್ಶಿ ಬಿ.ಪಿ.ಮಲ್ಲಪ್ಪ ಸೇರಿದಂತೆ ಪ್ರಮುಖರಿದ್ದರು.




 


Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News