ಸಿಎಂ ಸಿದ್ದರಾಮಯ್ಯಗೆ ತಾತ್ಕಾಲಿಕ ರಿಲೀಫ್ | ಆ.29ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್‌

Update: 2024-08-20 05:31 GMT

ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧದ ವಿಚಾರಣೆಯನ್ನು ಆಗಸ್ಟ್ 29ರವರೆಗೆ ಮುಂದೂಡುವಂತೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ಗೆ ಹೈಕೋರ್ಟ್ ನಿರ್ದೇಶನ ನೀಡಿದೆ. ಆ ಮೂಲಕ ಸಿದ್ದರಾಮಯ್ಯ ಅವರು ಸದ್ಯಕ್ಕೆ ನಿರಾಳರಾದಂತಾಗಿದೆ.

ತನ್ನ ವಿರುದ್ಧ ಕಾನೂನು ಕ್ರಮ(ಪ್ರಾಸಿಕ್ಯೂಷನ್)ಕ್ಕೆ ಅನುಮತಿ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠವು ಪ್ರಕರಣದ ವಿಚಾರಣೆ ನಡೆಸುತ್ತಿರುವ ಜನಪ್ರತಿನಿಧಿಗಳ ವಿಶೇಷ ಕೋರ್ಟ್ (ಸೆಶನ್ಸ್ ನ್ಯಾಯಾಲಯ) ನಾಳೆ ಆದೇಶ ನೀಡಿದಲ್ಲಿ ಹೈಕೋರ್ಟ್ ಪ್ರಕ್ರಿಯೆ ನಿಷ್ಫಲವಾಗಲಿದೆ ಎಂದರು. ಅರ್ಜಿಯ ಆಲಿಕೆಯನ್ನು ತಾನು ಕೂಡ ಆಗಸ್ಟ್ 29ರವರೆಗೆ ಮುಂದೂಡುವುದಾಗಿ ಅವರು ಮಧ್ಯಂತರ ಆದೇಶದಲ್ಲಿ ತಿಳಿಸಿದ್ದಾರೆ.

ಈ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದ್ದು, ವಾದ ಇನ್ನಷ್ಟೇ ಪೂರ್ಣಗೊಳ್ಳಬೇಕಾಗಿದೆ. ಅಲ್ಲಿಯವರೆಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ತನ್ನ ಪ್ರಕ್ರಿಯೆಯನ್ನು ಮುಂದೂಡಬೇಕು ಹಾಗೂ ಯಾವುದೇ ಆತುರದ ನಿರ್ಧಾರವನ್ನು ಕೈಗೊಳ್ಳಬಾರದು ಎಂದು ನ್ಯಾಯಾಧೀಶರು ತಿಳಿಸಿದರು.

ಸಿಎಂ ಸಲ್ಲಿಸಿದ್ದ ಅರ್ಜಿ ವಿಚಾರಣೆ ಆರಂಭದಲ್ಲಿ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪರ ವಕೀಲ ತುಷಾರ್ ಮೆಹ್ತಾ, ಇಂದು ಬೆಳಗ್ಗೆ ಅರ್ಜಿಯ ಪ್ರತಿ ರಾಜ್ಯಪಾಲರಿಗೆ ನೀಡಿದ್ದಾರೆ. ಹೀಗಾಗಿ ಅರ್ಜಿ ವಿಚಾರಣೆಗೆ ಕಾಲಾವಕಾಶಬೇಕು ನಾಳೆಗೆ ನಿಗದಿಪಡಿಸಲು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ, ನಾಳೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಲ್ಲಿ ವಿಚಾರಣೆ ಇದೆ. ಮಧ್ಯಂತರ ಆದೇಶ ಬೇಕಿರುವುದರಿಂದ ಇಂದೇ ವಿಚಾರಣೆ ನಡೆಸಬೇಕು. ರಾಜ್ಯಪಾಲರ ಕಚೇರಿಗೆ ಅರ್ಜಿಯ ಪ್ರತಿ ನೀಡಿದ ಮಾತ್ರಕ್ಕೆ ಅವರ ವಾದ ಕೇಳಬೇಕೆಂದಿಲ್ಲ ಎಂದು ವಾದಿಸಿದರು.

ಮುಂದುವರಿಸಿ ರಾಜ್ಯಪಾಲರ ಶೋಕಾಸ್ ನೋಟಿಸ್‌ಗೆ ಉತ್ತರ ನೀಡಲಾಗಿತ್ತು. ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ದೂರುಗಳು ದುರುದ್ದೇಶಪೂರಿತವಾಗಿದೆ. ಹೀಗಾಗಿ ಶೋಕಾಸ್ ನೋಟಿಸ್ ಹಿಂಪಡೆಯುವಂತೆ ಕ್ಯಾಬಿನೆಟ್ ಸಲಹೆ ನೀಡಿದೆ. ಕ್ಯಾಬಿನೆಟ್ ಸಲಹೆ ಪರಿಗಣಿಸದೇ ರಾಜ್ಯಪಾಲರು ಆದೇಶಿಸಿದ್ದಾರೆ. ನೂರು ಪುಟಗಳ ಕ್ಯಾಬಿನೆಟ್ ಸಲಹೆಗೆ ಎರಡು ಪುಟಗಳ ಉತ್ತರ ನೀಡಿದ್ದಾರೆ ಎಂದು ಕೋರ್ಟ್‌ಗೆ ಮಾಹಿತಿ ನೀಡಿದರು

ಅಲ್ಲದೆ ರಾಜ್ಯಪಾಲರು ಒಂದೇ ಒಂದು ಕಾನೂನಿನ ಅಂಶಕ್ಕೆ ಉತ್ತರಿಸಿಲ್ಲ. ಮುಖ್ಯಮಂತ್ರಿ ವಿರುದ್ಧ ಕಾನೂನುಕ್ರಮಕ್ಕೆ ಅನುಮತಿ ನೀಡಿದ್ದೇಕೆಂದು ಕಾರಣ ನೀಡಿಲ್ಲ. ಸರಕಾರವನ್ನು ಅಸ್ಥಿರಗೊಳಿಸಲು ಇಂತಹ ಕ್ರಮಗಳನ್ನು ನಡೆಸಲಾಗುತ್ತಿದೆ. ಸಿಎಂ ರಾಜೀನಾಮೆ ಪಡೆಯಲು ಈಗ ರಾಷ್ಟ್ರಪತಿ ಆಳ್ವಿಕೆ ಅಗತ್ಯವಿಲ್ಲ. ಕೇವಲ ಇಂತಹ ದೂರುಗಳ ಮೂಲಕ ಉದ್ದೇಶ ಈಡೇರಿಸುವ ಪ್ರಯತ್ನ ನಡೆಸಲಾಗುತ್ತಿದೆ. ಸರಕಾರಿ ಸೇವಕನಾಗಿ ಸಿಎಂ ಯಾವುದೇ ಶಿಫಾರಸು ಮಾಡಿಲ್ಲ. ಮುಡಾ ಫೈಲ್‌ಗೆ ಸಂಬಂಧಿಸಿದಂತೆ ಯಾವುದೇ ನಿರ್ಧಾರವನ್ನು ಸಿಎಂ ಮಾಡಿಲ್ಲ. ಹೊಸ ಬಿಎನ್‌ಎಸ್ ಕಾಯ್ದೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ತಮ್ಮ ಕರ್ತವ್ಯದ ಭಾಗವಾಗಿ ಸಿಎಂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಆದರೂ ವಿವೇಚನಾರಹಿತರಾಗಿ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಕ್ಯಾಬಿನೆಟ್ ಸಲಹೆ ತಿರಸ್ಕರಿಸಿ ರಾಜ್ಯಪಾಲರು ಆದೇಶ ನೀಡುವಂತಿಲ್ಲ. ಇದಕ್ಕೆ ವಿವರಣೆಯಾಗಿ ಮಧ್ಯಪ್ರದೇಶದ ಕೇಸ್‌ನ ತೀರ್ಪನ್ನು ಉಲ್ಲೇಖಿಸಿದ್ದಾರೆ. ರಾಜ್ಯಪಾಲರ ಶೋಕಾಸ್ ನೋಟಿಸ್‌ನಲ್ಲಿ ಸ್ನೇಹಪ್ರಿಯ ಕೃಷ್ಣ, ಪ್ರದೀಪ್ ಕುಮಾರ್ ದೂರಿನ ಪ್ರಸ್ತಾವವಿಲ್ಲ. ಟಿ.ಜೆ. ಅಬ್ರಹಾಂ ದೂರಿಗೆ ಸಂಬಂಧಿಸಿದಂತೆ ಮಾತ್ರ ಶೋಕಾಸ್ ನೋಟಿಸ್ ನೀಡಲಾಗಿದೆ. ಆಯ್ಕೆಯಾದ ಸರಕಾರದ ವಿರುದ್ಧ ರಾಜ್ಯಪಾಲರು ಅಂದೇ ತೀರ್ಮಾನ ಕೈಗೊಳ್ಳುತ್ತಾರೆ. ಆದರೆ ಬಾಕಿಯಿದ್ದ 12 ದೂರುಗಳ ಬಗ್ಗೆ ರಾಜ್ಯಪಾಲರು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಕ್ಯಾಬಿನೆಟ್ ನೀಡಿರುವ ಸಲಹೆ ತುಂಬಾ ಕಾನೂನಾತ್ಮಕವಾಗಿದೆ ಮತ್ತು ಎಲ್ಲಾ ಕಾನೂನಿನ ಪಾಂಡಿತ್ಯ ಇರುವ ಉತ್ತರ ನೀಡಲಾಗಿದೆ ಎಂದು ಸಿಂಘ್ವಿ ವಾದಕ್ಕೆ ತುಷಾರ್ ಮೆಹ್ತಾ ವ್ಯಂಗ್ಯ ಮಾಡಿದರು.ಇದಕ್ಕೆ ಉತ್ತರ ನೀಡಿದ ಸಿಂಘ್ವಿ, ಕಾನೂನು ತಜ್ಞರ ಸಲಹೆ ಪಡೆದರೆ ತಪ್ಪೇನಿಲ್ಲ ಎಂದರು. ವಾದ ಮುಂದುವರಿಸಿ ಸ್ವತಂತ್ರವಾಗಿ ನಿರ್ಧರಿಸಿದ್ದೇನೆಂದು ಹೇಳುವ ರಾಜ್ಯಪಾಲರು ಒಂದೂ ಕಾರಣ ಕೊಟ್ಟಿಲ್ಲ. ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದೇಕೆಂದು ಮಾತ್ರ ಹೇಳಿಲ್ಲ. ಸಂವಿಧಾನದ ಆರ್ಟಿಕಲ್ 163 ಅಡಿ ಕ್ಯಾಬಿನೆಟ್ ತೀರ್ಮಾನ ಒಪ್ಪಬೇಕು. ಆದರೆ ಅದನ್ನು ಒಪ್ಪದೇ ರಾಜ್ಯಪಾಲರು ತೀರ್ಮಾನಿಸಿದ್ದಾರೆಂದೇ ನಂಬೋಣ. ಆದರೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲು ಅವರು ಕಾರಣಗಳನ್ನೇ ನೀಡಿಲ್ಲ ಎಂದು ನ್ಯಾಯಪೀಠಕ್ಕೆ ವಿವರಣೆ ನೀಡಿದರು.

ಮಧ್ಯಪ್ರದೇಶ ಕೇಸ್ ತೀರ್ಪನ್ನು ತಪ್ಪಾಗಿ ಉಲ್ಲೇಖಿಸುತ್ತಿದ್ದಾರೆ ಎಂದು ಮೆಹ್ತಾ ಮಧ್ಯಪ್ರವೇಶಿದರು. ತಪ್ಪು ಮಾಡುವ ಮೂಲಭೂತ ಹಕ್ಕೂ ನನಗಿದೆ ಎಂದು ಸಿಂಘ್ವಿ ಕೌಂಟರ್ ನೀಡಿದರು. ಈ ವೇಳೆ ಮಧ್ಯಪ್ರವೇಶಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಭ್ರಷ್ಟಾಚಾರ ತಡೆ ಕಾಯ್ದೆಗೆ 17 ಎ ಅನ್ನು ಇತ್ತೀಚೆಗೆ ಸೇರಿಸಲಾಗಿದೆ. ನೀವು ಓದುತ್ತಿರುವ ತೀರ್ಪು ಬರುವಾಗ ಈ ತಿದ್ದುಪಡಿ ಆಗಿರಲಿಲ್ಲ ಸಿಂಘ್ವಿ ವಾದಕ್ಕೆ ಅಭಿಪ್ರಾಯ ವ್ಯಕ್ತಪಡಿಸಿದರು.ಅಲ್ಲದೆ 17ಎ ಕೇವಲ ಅನುಮತಿ ಅಷ್ಟೇ, 19 ಅಡಿಯ ಸಮ್ಮತಿಯಲ್ಲ. ಸಿಂಘ್ವಿ ವಾದಕ್ಕೆ ನ್ಯಾ. ಎಂ. ನಾಗಪ್ರಸನ್ನ ಪ್ರತಿಕ್ರಿಯಿಸಿದರು.ಯಾವುದೂ ತರಾತುರಿಯಲ್ಲಿ ಆಗಿಲ್ಲ. ರಾಜ್ಯಪಾಲರಂತೆ ತರಾತುರಿಯಲ್ಲಿ ಪ್ರಕ್ರಿಯೆ ನಡೆದಿಲ್ಲ. 2020 ರಲ್ಲಿ ಭೂಮಿಗೆ ಪರಿಹಾರವಾಗಿ ನಿವೇಶನ ಹಂಚಲಾಗಿದೆ.2022 ರಲ್ಲಿ ನಿವೇಶನಗಳಿಗೆ ಕ್ರಯಪತ್ರವಾಗಿದೆ. 1992ರಲ್ಲಿ ಮುಡಾ ಸ್ವಾಧೀನ 1998 ಡಿನೋಟಿಫಿಕೇಷನ್ ಆಗಿದೆ. 2004 ರಲ್ಲಿ ಸಿಎಂ ಮೈದುನ ನಿಗೆ ಮಾರಾಟವಾಗಿದೆ. 2005ರಲ್ಲಿ ಕೃಷಿ ಜಮೀನಾಗಿ ಪರಿವರ್ತಿಸಲಾಗಿದೆ. 2010 ರಂದು ಸಿಎಂ ಪತ್ನಿಗೆ ಸಹೋದರ ದಾನಪತ್ರ ನೀಡಿದ್ದಾರೆ. ಬಹುತೇಕ ಸಂದರ್ಭಗಳಲ್ಲಿ ಸಿದ್ದರಾಮಯ್ಯ ಅಧಿಕಾರದಲ್ಲಿರಲಿಲ್ಲ. ಯಾವುದೂ ತರಾತುರಿಯಲ್ಲಿ ಆಗಿಲ್ಲ. ರಾಜ್ಯಪಾಲರಂತೆ ತರಾತುರಿಯಲ್ಲಿ ಪ್ರಕ್ರಿಯೆ ನಡೆದಿಲ್ಲ. 2020ರಲ್ಲಿ ಭೂಮಿಗೆ ಪರಿಹಾರವಾಗಿ ನಿವೇಶನ ಹಂಚಲಾಗಿದೆ. 2022ರಲ್ಲಿ ನಿವೇಶನಗಳಿಗೆ ಕ್ರಯಪತ್ರವಾಗಿದೆ. ದೂರುದಾರನ ಹಿನ್ನೆಲೆಯನ್ನು ಪರಿಶೀಲನೆ ಮಾಡಬೇಕಿತ್ತು. ಟಿ.ಜೆ. ಅಬ್ರಹಾಂಗೆ ಸುಪ್ರೀಂ ಕೋರ್ಟ್ ದಂಡ ವಿಧಿಸಿದೆ. ಈ ಎಲ್ಲವನ್ನೂ ಕ್ಯಾಬಿನೆಟ್ ರಾಜ್ಯಪಾಲರಿಗೆ ನೀಡಿದೆ. ಶಶಿಕಲಾ ಜೊಲ್ಲೆ, ಜನಾರ್ದನ ರೆಡ್ಡಿ, ಮುರುಗೇಶ್ ನಿರಾಣಿ ಇವರ ಮೇಲಿನ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿಯನ್ನು ನೀಡಿಲ್ಲ. ಹೊಸ ಬಿಎನ್ ಎಸ್ ಕಾಯ್ದೆಯಡಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ನೀಡಿದ್ದಾರೆ ಎಂದು ಸಿಂಘ್ವಿ ವಾದ ಮಂಡಿಸಿದರು. ಈ ವೇಳೆ ಹೊಸ ಕಾಯ್ದೆಯ ಒಂದು ಬದಲಾವಣೆ ಎಂದರೆ 420 ಈಗ ವಂಚನೆಯಲ್ಲ. ಚಾರ್ ಸೋ ಬೀಸ್ ಅನ್ನು ಈಗ ನಿಂದನೆಯಾಗಿ ಪರಿಗಣಿಸುವಂತಿಲ್ಲ ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಪ್ರತಿಕ್ರಿಯೆ ನೀಡಿದರು. ಜುಲೈ 14ರಂದು ನ್ಯಾ. ಪಿ.ಎನ್. ದೇಸಾಯಿ ನೇತೃತ್ವದಲ್ಲಿ ಆಯೋಗ ರಚಿಸಲಾಗಿದೆ. ಮುಡಾ ಸಂಬಂಧ ರಾಜ್ಯಪಾಲರು ಕೇಳಿದ್ದ ಪ್ರಶ್ನೆಗಳಿಗೆ ಉತ್ತರಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು. ರಾಜ್ಯಪಾಲರ ಅನುಮತಿಗೆ ಮಧ್ಯಂತರ ತಡೆಯಾಜ್ಞೆ ನೀಡದಂತೆ ದೂರದಾರರ ಪರ ವಕೀಲರು ಕೋರ್ಟ್ ಗೆ ಮನವಿ ಮಾಡಿದರು. ವಾದ ಪ್ರತಿವಾದ ಆಲಿಸಿದ ಪೀಠ ಮೇಲಿನ ಆದೇಶ ನೀಡಿ ವಿಚಾರಣೆಯನ್ನು ಆಗಸ್ಟ್ 29ರ ಮಧ್ಯಾಹ್ನ 2:30ಕ್ಕೆ ಮುಂದೂಡಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News