ಕಾಂಗ್ರೆಸ್‌ನಲ್ಲಿದ್ದಾಗ ಸಿ.ಪಿ.ಯೋಗೇಶ್ವರ್ ಉತ್ತಮ ಕೆಲಸ ಮಾಡಿದ್ದಾರೆ : ಜಿ.ಪರಮೇಶ್ವರ್‌

Update: 2024-10-22 09:10 GMT

ಬೆಂಗಳೂರು : "ಕಾಂಗ್ರೆಸ್‌ನಲ್ಲಿದ್ದಾಗ ಯೋಗೇಶ್ವರ್ ಉತ್ತಮ ಕೆಲಸ ಮಾಡಿದ್ದಾರೆ. ಅವರು ಪಕ್ಷ ಸೇರ್ಪಡೆ ಆಗುವುದು ಕೆಪಿಸಿಸಿ ಅಧ್ಯಕ್ಷರು ಮತ್ತು ಹೈಕಮಾಂಡ್‌ಗೆ ಬಿಟ್ಟಿರುವ ವಿಚಾರ" ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಹೇಳಿದರು.

ಮಂಗಳವಾರ ಸದಾಶಿವನಗರದ ತಮ್ಮ‌ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼಸಿ‌.ಪಿ.ಯೋಗೇಶ್ವರ್ ಪಕ್ಷಕ್ಕೆ ಬರುವ ವಿಚಾರ ಮಾಹಿತಿ ನನಗೆ ಇಲ್ಲ. ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ‌ ಗೆಲ್ಲಲು ರಣನೀತಿ ಮಾಡುತ್ತಿದ್ದೇವೆ. ಸಿ.ಪಿ.ಯೋಗೇಶ್ವರ್ ನನಗೆ ಆತ್ಮೀಯ ಸ್ನೇಹಿತ. ಹಿಂದೆ ನಮ್ಮ ಪಕ್ಷದಲ್ಲಿದ್ದಾಗ ಒಳ್ಳೆ ಕೆಲಸಗಳನ್ನು ಮಾಡಿದ್ದಾರೆ. ಅವರು ಪಕ್ಷ ಸೇರ್ಪಡೆ ಆಗುವುದು ಕೆಪಿಸಿಸಿ ಅಧ್ಯಕ್ಷರು ಮತ್ತು ಹೈಕಮಾಂಡ್‌ಗೆ ಬಿಟ್ಟಿರುವ ವಿಚಾರ. ಡಿ.ಕೆ.ಸುರೇಶ್ ಅವರಿಗೆ ಸ್ಪರ್ಧಿಸುವಂತೆ ನಾವೆಲ್ಲ ಒತ್ತಾಯಿಸಿದ್ದೇವೆ. ಹೈಕಮಾಂಡ್ ಯಾರನ್ನು ಅಭ್ಯರ್ಥಿ ಮಾಡುತ್ತದೆ ಎಂಬುದನ್ನು ನೋಡಬೇಕುʼ ಎಂದು ಹೇಳಿದರು.

ಜಾತಿಗಣತಿಯಲ್ಲಿ ಏನಿದೆ ಎಂಬುದು ಜನರಿಗೆ ಗೊತ್ತಾಗಬೇಕು :

ʼಜಾತಿಗಣತಿ ವರದಿಯನ್ನು ಸಚಿವ‌ ಸಂಪುಟದ ಮುಂದೆ ತಂದು, ಸಾಧಕ-ಬಾಧಕಗಳನ್ನು ಚರ್ಚಿಸಲಾಗುವುದು. ತದನಂತರ ಮುಂದಿನ ತೀರ್ಮಾನ ಮಾಡಲಾಗುವುದು ಎಂದು ಮುಖ್ಯಮಂತ್ರಿಯವರು ಹೇಳಿದ್ದಾರೆ‌. ಜಾತಿಗಣತಿ ವರದಿಗೆ 160 ಕೋಟಿ ರೂ. ಖರ್ಚು ಮಾಡಿ, ಜನಸಮುದಾಯದ ಮುಂದೆ ಇಡದೇ ಹೋದರೆ ಅಷ್ಟು ಹಣ ಖರ್ಚು ಮಾಡಿರುವುದಕ್ಕೆ ಅರ್ಥ ಇರುವುದಿಲ್ಲ. ವರದಿಯಲ್ಲಿ ಏನು ಬಂದಿದೆ ಎಂಬುದರ ಕುರಿತಾದರೂ ಜನರಿಗೆ ಗೊತ್ತಾಗಬೇಕುʼ ಎಂದು ಹೇಳಿದರು.

ʼಜಾತಿಗಣತಿ ವರದಿ ಜಾರಿ ಮಾಡುವುದು ಬೇರೆ ವಿಚಾರ. ಅದರ ಮಾಹಿತಿ ಹೊರಗಡೆ ಬರಬೇಕಲ್ಲವೇ? ಜಾರಿ ಮಾಡಲು ಆಗುವ ತೀರ್ಮಾನಗಳು ಬೇರೆಬೇರೆ ರೀತಿಯಲ್ಲಿ ಆನಂತರ ಆಗುತ್ತವೆ. ಯಾರು ಕೂಡ ಇದರ ಬಗ್ಗೆ ಆತಂಕ‌ಪಡುವ ಅಗತ್ಯವಿಲ್ಲʼ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News