ಕಾಂಗ್ರೆಸ್ಸಿಗರಲ್ಲೇ ಹತಾಶ ಮನೋಭಾವ ಸೃಷ್ಟಿಯಾಗಿದೆ : ಬಿ.ವೈ.ವಿಜಯೇಂದ್ರ

Update: 2023-12-19 14:32 GMT

ಬೆಂಗಳೂರು: ಕಾಂಗ್ರೆಸ್ ಪಕ್ಷ ಮತ್ತು ಆ ಪಕ್ಷದ ಸರಕಾರದ 6 ತಿಂಗಳ ಬೆಳವಣಿಗೆಗಳಿಂದ ಆ ಪಕ್ಷದ ಕಾರ್ಯಕರ್ತರಲ್ಲಿ ಹತಾಶ ಮನೋಭಾವನೆ ಸೃಷ್ಟಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.

ಮಂಗಳವಾರ ಬಿಜೆಪಿ ಕಾರ್ಯಾಲಯದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ದಿನೇದಿನೇ ರಾಜ್ಯ ಸರಕಾರದ ವೈಫಲ್ಯಗಳು ಬೆಳಕಿಗೆ ಬರುತ್ತಿವೆ. ಬೆಳಗಾವಿಯಲ್ಲಿ ಪರಿಶಿಷ್ಟ ಮಹಿಳೆ ವಿವಸ್ತ್ರಗೊಳಿಸಿದ ಘಟನೆ, ಮಾಲೂರಿನ ಘಟನೆಗಳು ಕಪ್ಪು ಚುಕ್ಕಿಯಂತಿವೆ. ಜೊತೆಗೆ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಚಿತ್ರದುರ್ಗದ ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ನುಗ್ಗಿ ಗಲಾಟೆ ಮಾಡಿದ್ದಾರೆ, ಇದು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ತಾಳ್ಮೆ ಕಳೆದುಕೊಳ್ಳುವುದರ ನಿದರ್ಶನ ಎಂದು ವಿಶ್ಲೇಷಿಸಿದರು.

136 ಶಾಸಕರ ಸ್ಥಾನದೊಂದಿಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಜನರ ವಿಶ್ವಾಸ ಕಳೆದುಕೊಳ್ಳುತ್ತಿರುವುದು ಇದೀಗ ಅವರಿಗೆ ಗೊತ್ತಾಗುತ್ತಿದೆ. ಹಾಗಾಗಿ ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯನವರು ಪ್ರಧಾನಿ ಭೇಟಿ ಮಾಡಿದ್ದಾರೆ. ರಾಜ್ಯದ ಪರವಾಗಿ ಮನವಿಯನ್ನೂ ಕೊಟ್ಟು ಬಂದಿದ್ದಾರೆ. ಮತ್ತೊಂದೆಡೆ ಮುಖ್ಯಮಂತ್ರಿ ಮನವಿ ಕೊಟ್ಟು ಅರ್ಧಗಂಟೆ ಆಗುವುದಕ್ಕಿಂತ ಮೊದಲೇ ಕಾಂಗ್ರೆಸ್ ವಕ್ತಾರ ಉಗ್ರಪ್ಪನವರು ಕೇಂದ್ರ ಸರಕಾರವನ್ನು ಟೀಕೆ ಮಾಡುತ್ತಿದ್ದಾರೆ. ಅಂದರೆ ಕಾಂಗ್ರೆಸ್ ಸರಕಾರ, ಮುಖಂಡರ ಉದ್ದೇಶ ಕೇಂದ್ರದ ಪರಿಹಾರ ಪಡೆಯುವುದೇ ಅಥವಾ ರಾಜಕಾರಣ ಮಾಡುವುದೇ ಎಂಬುದನ್ನು ಅವರು ತೀರ್ಮಾನ ಮಾಡಬೇಕು ಎಂದು ಆಕ್ಷೇಪಿಸಿದರು.

ಉಗ್ರಪ್ಪ ಹೇಳಬೇಕಿಲ್ಲ: ದೇಶದ ಪ್ರಧಾನಿ ನಡವಳಿಕೆಯನ್ನು ಉಗ್ರಪ್ಪನವರನ್ನು ಕೇಳಿ ತೀರ್ಮಾನ ಮಾಡಲಾಗದು. ಅವರು ನಮ್ಮ ಹೆಮ್ಮೆಯ ಪ್ರಧಾನಿ. ಕೇವಲ ಬಿಜೆಪಿ ಮಾತ್ರವಲ್ಲ, ದೇಶದ ಪ್ರತಿಯೊಬ್ಬ ಪ್ರಜೆಯೂ ಅವರ ಬಗ್ಗೆ ಹೆಮ್ಮೆ ಪಡುತ್ತಿದ್ದಾರೆ. ಉಗ್ರಪ್ಪ, ರಾಮಪ್ಪ, ಸೋಮಪ್ಪನನ್ನು ಕೇಳಿ ತೀರ್ಮಾನ ಮಾಡುವುದಲ್ಲ ಎಂದು ಬಿ.ವೈ.ವಿಜಯೇಂದ್ರ ಅವರು ಸ್ಪಷ್ಟಪಡಿಸಿದರು.

ರಾಜ್ಯದ ಹಣಕಾಸಿನ ಪರಿಸ್ಥಿತಿ ಏನಾಗಿದೆ? ಈ ಸರಕಾರ ಅಧಿಕಾರಕ್ಕೆ ಬಂದು 6 ತಿಂಗಳಿನಲ್ಲಿ ಏನಾದರೂ ಒಂದು ಹೊಸ ಯೋಜನೆಯನ್ನು ರಾಜ್ಯಕ್ಕೆ ಕೊಟ್ಟಿದೆಯೇ? ವಿಪಕ್ಷ ಶಾಸಕರನ್ನು ಬಿಟ್ಟರೂ ಆಡಳಿತ ಪಕ್ಷದ ಶಾಸಕರ ಪರಿಸ್ಥಿತಿ ಏನಾಗಿದೆ?, ಒಂದು ಬಿಡಿಗಾಸು ಅನುದಾನ ಸಿಗದೆ ಶಾಸಕರು ಗೌರವಯುತವಾಗಿ ಓಡಾಡದೆ ಇರುವ ಸ್ಥಿತಿ ನಿರ್ಮಾಣ ಆಗಿದೆ ಎಂದು ವಿವರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News