ಇದು ವಿಕಸಿತ ಭಾರತ ಅಲ್ಲ, ವಿನಾಶಕಾರಿ ಭಾರತದ ಬಜೆಟ್: ಸಿಎಂ ಸಿದ್ದರಾಮಯ್ಯ

Update: 2024-02-01 13:14 GMT

ಮುಖ್ಯಮಂತ್ರಿ ಸಿದ್ದರಾಮಯ್ಯ (Photo:X/@siddaramaiah)

ಬೆಂಗಳೂರು: ದೇಶದ ಒಟ್ಟು ಸಾಲವನ್ನು 190 ಲಕ್ಷ ಕೋಟಿ ರೂ.ಗಳಿಗೆ ಏರಿಸಿದ ಬಜೆಟ್ ಇದಾಗಿದ್ದು, ನಿಜವಾದ ಅರ್ಥದಲ್ಲಿ ಇದು ವಿಕಸಿತ ಅಲ್ಲ ಭಾರತದ ವಿನಾಶಕಾರಿ ಬಜೆಟ್ ಆಗಿದೆ ಎಂದು ಕೇಂದ್ರ ಬಜೆಟ್‌ ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಗೃಹ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, "ದೇಶದ ಆರ್ಥಿಕ ಪರಿಸ್ಥಿತಿಯನ್ನು ತಿಳಿಸದೇ ಜನರ ಮುಂದೆ ಮುಚ್ಚಿಟ್ಟಿರುವುದೇ ಹೆಚ್ಚು. ನಿರುದ್ಯೋಗ, ಬೆಲೆಯೇರಿಕೆ, ಬರಗಾಲ, ರೈತರ ಸಮಸ್ಯೆಗಳ ಬಗ್ಗೆ ಪ್ರಸ್ತಾಪ ಇಲ್ಲ. ವಿಕಸಿತ ಭಾರತ ಎಂದು ನರೇಂದ್ರ ಮೋದಿ ಪ್ರಚಾರದಲ್ಲಿ ಹೇಳುತ್ತಾರೆ. ಇದು ನಿಜವಾದ ಅರ್ಥದಲ್ಲಿ ವಿನಾಶಕಾರಿ ಭಾರತ ಮಾಡುವ ಬಜೆಟ್ ಆಗಿದೆ. ಬಡವರು, ಯುವಕರು, ರೈತರು, ಮಹಿಳೆಯರಿಗಾಗಿ ವಿಕಸಿತ ಭಾರತ ಎನ್ನುತ್ತಾರೆ. ಆದರೆ ಈ ಸಮುದಾಯಗಳ ಪ್ರಗತಿಗೆ ಕಾರ್ಯಕ್ರಮಗಳೇ ಬಜೆಟ್‌ ನಲ್ಲಿ ಇಲ್ಲ. ಆದರೆ ನಾವು ಅನ್ನಭಾಗ್ಯ, ಗೃಹಲಕ್ಷ್ಮೀ, ಯುವನಿಧಿ, ಕೃಷಿಭಾಗ್ಯ ಕಾರ್ಯಕ್ರಮಗಳು ಈ ವರ್ಗದ ಜನರಿಗೆ ಕೊಟ್ಟೆವು" ಎಂದು ಹೇಳಿದ್ದಾರೆ.

ಬೆಳೆ ಪರಿಹಾರವನ್ನು ಬಜೆಟ್ ನಲ್ಲಿ ಹೇಳಿಲ್ಲ. ಎಂ.ಎಸ್.ಪಿ ಗೆ ಕೆಲವು ಬೆಳೆಗಳನ್ನು ಮಾತ್ರ ಸೇರಿಸಿದ್ದಾರೆ. ರೈತರ ಎಲ್ಲಾ ಬೆಳೆಗಳು ಎಂ.ಎಸ್.ಪಿ ಅಡಿ ಬರಬೇಕು. ಇದರ ಬಗ್ಗೆ ಏನನ್ನೂ ಬಜೆಟ್ ನಲ್ಲಿ ಹೇಳಿಲ್ಲ. ನಿರ್ಮಲಾ ಸೀತಾರಾಮನ್ ಅವರ 6 ನೇ ಬಜೆಟ್ ಇದು. ತೆರಿಗೆಯನ್ನು ಕಾರ್ಪೊರೇಟ್ ಗಳ ಮೇಲಿನ ಪ್ರಮಾಣ ಶೇ.30 ಕ್ಕೆ ಇಳಿಸಿ ಉಳಿದ ಭಾರವನ್ನು ಬಡವರು, ಮಧ್ಯಮ ವರ್ಗದವರ ಮೇಲೆ ಹೇರಿದ್ದಾರೆ ಮತ್ತು ಹೆಚ್ಚಿಸಿದ್ದಾರೆ. ಬಡವರ,ಮಹಿಳೆಯರ, ಅಲ್ಪಸಂಖ್ಯಾತರ, ದಲಿತರ ವಿರೋಧಿ ಬಜೆಟ್ ಆಗಿದ್ದು, ಕೇಂದ್ರದ ಬಜೆಟ್ ಅತ್ಯಂತ ನಿರಾಶಾದಾಯಕವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

2004 -14 ರವರೆಗೆ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರು. ಆಗ ಬೆಳವಣಿಗೆ ದರ ಶೇ.13.79 ಇತ್ತು. ಈಗ ಬಜೆಟ್ ಬೆಳವಣಿಗೆ ಶೇ.9.6ಕ್ಕೆ ಕುಸಿತ ಕಂಡಿದೆ. ವಿಕಸಿತ ಎಂದು ಹೇಳಿಕೊಂಡು ಶೇ.9.6 ಗೆ ತಂದಿದ್ದಾರೆ. ಶೇ.4.19 ಕಡಿಮೆಯಾಗಿದೆ. ಜಿ.ಡಿ.ಪಿ ಬೆಳವಣಿಗೆ ಯುಪಿಎ ಸರಕಾರದಲ್ಲಿ ಶೇ.11.14 ಇತ್ತು ಎನ್.ಡಿ.ಎ ಕಾಲದಲ್ಲಿ ಶೇ.6.4 ಕ್ಕೆ ಕುಸಿತವಾಗಿದೆ. ಆದ್ದರಿಂದ ಇದು ವಿಕಸಿತವಲ್ಲ. ದೇಶದ ವಿನಾಶಕಾರಿ ಕುಸಿತದ ಬಜೆಟ್ ಎಂದು ಮುಖ್ಯಮಂತ್ರಿ ವ್ಯಾಖ್ಯಾನಿಸಿದರು.

ಕೇಂದ್ರ ಸರಕಾರದಿಂದ ರಾಜ್ಯ ಸರಕಾರಕ್ಕೆ ಬರಬೇಕಾದ ಅನುದಾನ ಬಂದಿಲ್ಲ. 15ನೇ ಹಣಕಾಸು, ಫೆರಿಫೆರಲ್ ರಿಂಗ್ ರೋಡಿಗೆ ಹಣ ಬಂದಿಲ್ಲ. ಬರಗಾಲದ ಪರಿಹಾರಕ್ಕೂ ಒಂದು ಪೈಸೆಯೂ ಬಂದಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.

ದೇಶದಲ್ಲಿ ಸಾರ್ವಭೌಮತೆ ಇರಬೇಕು. ರಾಜ್ಯಗಳಿಗೆ ಅವರ ಪಾಲು ಕೊಡಬೇಕು. ಕೇಂದ್ರ ಸರಕಾರ ರಾಜ್ಯಗಳ ಪಾಲನ್ನು ಕೊಡುತ್ತಿಲ್ಲ. ನಮ್ಮಿಂದ 4 ಲಕ್ಷ ಕೋಟಿ ರೂ. ತೆರಿಗೆ ವಸೂಲಿ ಮಾಡುವ ಕೇಂದ್ರ ಸರಕಾರ ನಮಗೆ, ನಮ್ಮ ನಾಡಿಗೆ ನಿರಂತರವಾಗಿ ಅನ್ಯಾಯ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಾವು ಅಮಿತ್ ಶಾ ಅವರನ್ನು ಭೇಟಿಯಾದಾಗ ಸಭೆ ನಡೆಸಿ ಅನುದಾನ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಆದರೆ ಅವರು ಸಭೆಯನ್ನೇ ಕರೆದಿಲ್ಲ. ಕರ್ನಾಟಕದ ಬಗ್ಗೆ ಇವರಿಗೆ ಮಲತಾಯಿ ಧೋರಣೆಯಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News