ಕೆಐಎಡಿಬಿ ಕಚೇರಿ ಮೇಲೆ ಈಡಿ ದಾಳಿ ಪ್ರಕರಣ : ಮುಂದುವರೆದ ಶೋಧ, ಓರ್ವ ವಶಕ್ಕೆ

Update: 2024-08-10 12:50 GMT

Photo: Facebook/ED

ಬೆಂಗಳೂರು : ನಕಲಿ ಭೂಸ್ವಾಧೀನ ನಡೆಸಿ ಹಣ ಕಬಳಿಸಿದ ಆರೋಪ ಪ್ರಕರಣ ಸಂಬಂಧ ಬೆಂಗಳೂರು ಸೇರಿದಂತೆ ನಾನಾ ಕಡೆಗಳಲ್ಲಿ ಕೆಐಎಡಿಬಿ ಕಚೇರಿಗಳಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಶೋಧ ಮುಂದುವರೆಸಿದ್ದು, ಈ ವೇಳೆ ಓರ್ವನನ್ನು ವಶಕ್ಕೆ ಪಡೆಯಲಾಗಿದೆ.

ಧಾರವಾಡದ ಲಕಮನಹಳ್ಳಿಯಲ್ಲಿರುವ ಕೆಐಎಡಿಬಿ ಕಚೇರಿಯಲ್ಲಿ ತನಿಖೆ ಮುಂದುವರಿದಿದೆ. ಈ ವೇಳೆ ಓರ್ವ ಏಜೆಂಟ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಏನಿದು ಪ್ರಕರಣ?: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ (ಕೆಐಎಡಿಬಿ) ಬಹುಕೋಟಿ ಅವ್ಯವಹಾರ ವಂಚನೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಬೆಂಗಳೂರು ಹಾಗೂ ಧಾರವಾಡದಲ್ಲಿರುವ ಕಚೇರಿಗಳ ಮೇಲೆ ಶುಕ್ರವಾರ ಜಾರಿ ನಿರ್ದೇಶನಾಲಯದ (ಈಡಿ) ಅಧಿಕಾರಿಗಳು ದಾಳಿ ನಡೆಸಿದ್ದರು.

ಒಂದೇ ಭೂಮಿಗೆ ಎರಡೆರಡು ಬಾರಿ ಪರಿಹಾರದ ಹೆಸರಲ್ಲಿ ವಂಚನೆ, ರೈತರ ಹೆಸರಲ್ಲಿ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು ಹಣ ಲೂಟಿ ಮಾಡಿರುವುದು, ಜೊತೆಗೆ ಐಡಿಬಿಐ ಬ್ಯಾಂಕ್ ಒಂದೇ ಶಾಖೆಯಲ್ಲಿ 24 ಖಾತೆಗಳನ್ನು ತೆರೆಯಲಾಗಿತ್ತು. ಹುಬ್ಬಳ್ಳಿ ವಿಮಾನ ನಿಲ್ದಾಣದ ಭೂ ಸ್ವಾಧೀನ ಹೆಸರಲ್ಲಿ ಅಕ್ರಮ ಹಾಗೂ ಧಾರವಾಡ ಕೆಲಗೇರಿ ಹಾಗು ಮುಮ್ಮಿಗಟ್ಟಿ ಗ್ರಾಮಗಳಲ್ಲಿ ಭೂ ಸ್ವಾಧೀನ ಹೆಸರಲ್ಲಿ ಲೂಟಿ ಮಾಡಿರುವ ಆರೋಪ ಕೆಐಎಡಿಬಿ ಮೇಲಿದ್ದು, ಈ ಸಂಬಂಧ ಈಡಿ ತನಿಖೆ ಕೈಗೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News