ಅರಣ್ಯ, ಸರಕಾರಿ, ಪಟ್ಟಾ ಭೂಮಿಯಲ್ಲಿರುವ ಮರಗಳಿಗೆ ಜಿಯೋ ಟ್ಯಾಗ್ ಅಳವಡಿಕೆ: ಸಚಿವ ಈಶ್ವರ್ ಖಂಡ್ರೆ

Update: 2024-01-20 14:40 GMT

ಬೆಂಗಳೂರು: ಮರಗಳ ಅಕ್ರಮ ಕಡಿತಲೆ ತಡೆಯಲು ಮತ್ತು ಅಮೂಲ್ಯ ವೃಕ್ಷ ಸಂಪತ್ತು ಉಳಿಸಲು ಸಂಕಲ್ಪ ಮಾಡಿರುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಅವರು, ಬೀಟೆ, ಶ್ರೀಗಂಧ, ತೇಗದ ಮರಗಳ ಜಿಯೋ ಟ್ಯಾಗ್ ಮಾಡಲು ಅಪರ ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಟಿಪ್ಪಣಿಯಲ್ಲಿ ಸೂಚನೆ ನೀಡಿದ್ದಾರೆ.

ಕಾಡನಂಚಿನಲ್ಲಿರುವ ಎಲ್ಲ ಜಮೀನಿನಲ್ಲಿ ಅಂದರೆ ಗ್ರಾಮಗಳಿಗೆ ಹೊಂದಿಕೊಂಡ ವನಪ್ರದೇಶ, ಪಟ್ಟಾಭೂಮಿ ಮತ್ತು ಸರಕಾರಿ ಜಮೀನಿನಲ್ಲಿರುವ ಬೀಟೆ (ರೋಸ್ ವುಡ್), ತೇಗ (ಟೀಕ್) ಮತ್ತು ಶ್ರೀಗಂಧ (ರಕ್ತ ಚಂದನ) ಮರಗಳಿಗೆ 3 ತಿಂಗಳ ಅವಧಿಯೊಳಗೆ ಜಿಯೋ ಟ್ಯಾಗ್ ಮಾಡಿ ಇಲಾಖೆಗೆ ವಲಯವಾರು ಪಟ್ಟಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದ್ದಾರೆ.

ಇತ್ತೀಚೆಗೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ನಂದಗೋಡನಹಳ್ಳಿ, ಸಕಲೇಶಪುರದ ಕೌಡಳ್ಳಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಇಡಗುಂದಿ ಮೊದಲಾದ ಕಡೆಗಳಲ್ಲಿ ಅಕ್ರಮವಾಗಿ ನೂರಾರು ಅಮೂಲ್ಯ ಮನ್ನಾ ಜಾತಿಯ ವೃಕ್ಷಗಳನ್ನು ಕಡಿದ ಪ್ರಕರಣಗಳು ಬೆಳಕಿಗೆ ಬಂದಿದ್ದು, ಶುಂಠಿ ಬೆಳೆಯ ಹೆಸರಲ್ಲಿ ಮರಗಳ ಮಾರಣ ಹೋಮ ತಪ್ಪಿಸಲು ಶ್ರೀಗಂಧ, ತೇಗ ಮತ್ತು ಬೀಟೆ ಮರಗಳ ಜಿಯೋ ಟ್ಯಾಗ್ ಮಾಡಿಸುವಂತೆ ಅವರು ತಿಳಿಸಿದ್ದಾರೆ.

ಅರಣ್ಯದೊಳಗೆ ಬೆಲೆ ಬಾಳುವ ಮರ ಕಡಿದು ಸಾಗಾಟ ಮಾಡಲು ಸಾಧ್ಯವಾಗದಂತೆ ಕಳ್ಳಬೇಟೆ ನಿಗ್ರಹ ತಂಡಗಳನ್ನು ನಿಯೋಜಿಸಲಾಗಿದೆ. ಆದರೆ ಕಾಡಿನಂಚಿನಲ್ಲಿ ಮತ್ತು ಸರಕಾರಿ ಭೂಮಿಯಲ್ಲಿ, ಅರಣ್ಯ ಇಲಾಖೆ ಗುತ್ತಿಗೆ ನೀಡಿರುವ ಎಸ್ಟೇಟ್ ಹಾಗೂ ಪಟ್ಟಾ ಜಮೀನಿನಲ್ಲಿರುವ ಬೆಲೆಬಾಳುವ ವೃಕ್ಷಗಳ ಸಂರಕ್ಷಣೆ ಇಲಾಖೆಗೆ ಸವಾಲಾಗಿದೆ ಎಂದು ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಜಿಯೋ ಟ್ಯಾಗ್ ಮಾಡಿದರೆ ವೃಕ್ಷ ಸಂರಕ್ಷಣಾ ಕಾಯಿದೆ ಅಡಿ ಪೂರ್ವಾನುಮತಿ ಪಡೆಯದೆ ಮರ ಕಡಿಯಲು ಸಾಧ್ಯವಾಗುವುದಿಲ್ಲ ಎಂದು ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News