ಸರಕಾರಿ ನೌಕರರು ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಕೆ ಕಡ್ಡಾಯ
ಬೆಂಗಳೂರು : ನಾಗರೀಕ ಸೇವಾ ನಿಯಮಗಳ ಅನ್ವಯ ಪ್ರತಿಯೊಬ್ಬ ಸರಕಾರಿ ನೌಕರರು ಹಾಗೂ ಆತನ ಕುಟುಂಬಸ್ಥರು ಲೋಕಾಯುಕ್ತಕ್ಕೆ ಆಸ್ತಿ ವಿವರವನ್ನು ಕಡ್ಡಾಯವಾಗಿ ಸಲ್ಲಿಸತಕ್ಕದ್ದು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ನಾಗರತ್ನ ವಿ. ಪಾಟೀಲ್ ಅವರು ಸುತ್ತೋಲೆ ಹೊರಡಿಸಿದ್ದು, ಅಗತ್ಯ ಸಂದರ್ಭದಲ್ಲಿ ಇದು ಲೋಕಾಯುಕ್ಕೆ ಲಭ್ಯವಾಗಲು ಇಲಾಖಾ ವೆಬ್ಸೈಟ್ನಲ್ಲಿ ಪ್ರಕಟಿಸಲು ಎಲ್ಲ ಇಲಾಖಾ ಮುಖ್ಯಸ್ಥರಿಗೆ ನಿರ್ದೇಶನ ನೀಡಲಾಗಿದೆ.
ಲೋಕಾಯುಕ್ತ ಸಂಸ್ಥೆ ಅಸ್ತಿತ್ವಕ್ಕೆ ಬರುವ ಪೂರ್ವದಲ್ಲಿ ರಾಜ್ಯದಲ್ಲಿದ್ದ ಜಾಗೃತ ಆಯೋಗ(ವಿಜಿಲೆನ್ಸ್ ಕಮಿಷನ್) ಕೈಗೊಳ್ಳುವ ಇಲಾಖಾ ವಿಚಾರಣೆಗಳಲ್ಲಿ ತನಿಖಾ ಸಂಸ್ಥೆಯು ಕೋರುವ ಮಾಹಿತಿ ಮತ್ತು ದಾಖಲೆಗಳನ್ನು ವಿಳಂಬವಿಲ್ಲದೆ ಒದಗಿಸುವಂತೆ ಹೊರಡಿಸಿರುವ ಸುತ್ತೋಲೆ ಲೋಕಾಯುಕ್ತರ ಪ್ರಕರಣಗಳಿಗೂ ಅನ್ವಯಿಸುತ್ತದೆ ಎಂದು ತಿಳಿಸಲಾಗಿದೆ.
ಲೋಕಾಯುಕ್ತ ಕಾಯ್ದೆ 1984 ಹಾಗೂ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988ರಡಿ ಪ್ರಾಧಿಕಾರಿಸಲ್ಪಟ್ಟ ಲೋಕಾಯುಕ್ತ ಸಂಸ್ಥೆಯ ಅಧಿಕಾರಿಗಳಿಗೆ ಸರಕಾರಿ ನೌಕರರು ಹಾಗೂ ಕುಟುಂಬ ಸದಸ್ಯರ ಚರಾಸ್ತಿ ಹಾಗೂ ಸ್ಥಿರಾಸ್ತಿಗಳ ಮಾಹಿತಿ ನೀಡಬೇಕಿದೆಯಾದರೂ ಇದು ಪಾಲನೆಯಾಗುತ್ತಿಲ್ಲ. ಹಾಗಾಗಿ ಈ ಮಾಹಿತಿ, ದಾಖಲೆ ನಿರ್ವಹಣೆ ಜವಾಬ್ದಾರಿಯಲ್ಲಿ ಲೋಪವಾದಲ್ಲಿ ಇಲಾಖಾ ಮುಖ್ಯಸ್ಥರು ಮತ್ತು ಸಕ್ಷಮ ಪ್ರಾಧಿಕಾರಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸುತ್ತೋಲೆಯಲ್ಲಿ ಎಚ್ಚರಿಕೆ ನೀಡಲಾಗಿದೆ.