ಸರಕಾರಗಳು ಜಾತೀಯತೆ, ಇಸ್ಲಾಮೋಫೋಬಿಯಾ ಪ್ರೋತ್ಸಾಹಿಸುತ್ತಿವೆ: ವಿನಯ್‍ಶ್ರೀನಿವಾಸ್

Update: 2023-09-02 18:16 GMT

ಬೆಂಗಳೂರು, ಸೆ.2: ‘ಸರಕಾರಗಳು ಜಾತೀಯತೆ ಮತ್ತು ಇಸ್ಲಾಮೋಫೋಬಿಯಾವನ್ನು ಪ್ರೋತ್ಸಾಹಿಸುತ್ತಿವೆ. ಪ್ರಭುತ್ವದ ಪ್ರತಿಕ್ರಿಯೆಯು ಇವೆರಡನ್ನೂ ಕುಗ್ಗಿಸುವ ಬದಲು ಉತ್ತೇಜಿಸುವಂತಿದೆ’ ಎಂದು ವಕೀಲ ವಿನಯ್ ಶ್ರೀನಿವಾಸ್ ದೂರಿದ್ದಾರೆ.

ಶನಿವಾರ ನಗರದ ಪುರಭವನದ ಬಳಿ ಆಲ್ ಇಂಡಿಯಾ ಸ್ಟುಡೆಂಟ್ ಅಸೋಸಿಯೇಶನ್, ಪ್ರಭುತ್ವ ಕರ್ನಾಟಕ, ಆಪ್ ಪಕ್ಷ ಕರ್ನಾಟಕ ಸೇರಿದಂತೆ ಹಲವರು ಸಂಘಟನೆಗಳಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಜಾತೀಯತೆ ಮತ್ತು ಇಸ್ಲಾಮೋಫೋಬಿಯಾ ವಿರುದ್ಧ ನಾವೆಲ್ಲರೂ ಪ್ರತಿಜ್ಞೆ ಮಾಡಬೇಕು. ಈ ಎರಡೂ ಮನಸ್ಥಿತಿಗಳು ನಮ್ಮ ಸಾಂವಿಧಾನಿಕ ಮೌಲ್ಯಗಳಾದ ಸಮಾನತೆ, ಘನತೆ ಮತ್ತು ಬಂದುತ್ವ ವಿರುದ್ಧವಾಗಿದೆ ಎಂದರು.

ನಮ್ಮ ಪ್ರಧಾನಿ, ಗೃಹ ಸಚಿವ ಅಥವಾ ರೈಲ್ವೆ ಸಚಿವರಾಗಲಿ ಜೈಪುರ್-ಮುಂಬೈ ರೈಲು ಗುಂಡಿನ ದಾಳಿಯನ್ನು ಖಂಡಿಸಲಿಲ್ಲ. ಸಾರ್ವಜನಿಕ ಒತ್ತಡ ಹೆಚ್ಚಾಗುವವರೆಗೂ ಆರ್‍ಪಿಎಫ್ ಸಿಬ್ಬಂದಿ ವಿರುದ್ಧದ ಎಫ್‍ಐಆರ್ ದ್ವೇಷದ ಅಪರಾಧಗಳ ನಿಬಂಧನೆಗಳನ್ನು ಒಳಗೊಂಡಿರಲಿಲ್ಲ. ಇದನ್ನು ದ್ವೇಷದ ಅಪರಾಧವಲ್ಲ ಬದಲಿಗೆ ಮಾನಸಿಕ ಅಸ್ವಸ್ಥತೆಯಿಂದ ಕೊಲೆ ಎಂದು ರವಾನಿಸುವ ಪ್ರಯತ್ನಗಳು ನಡೆಯುತ್ತಿವೆ. ಇನ್ನು ಹರಿಯಾಣದಲ್ಲಿ, ರಾಜ್ಯದ ಗೃಹ ಸಚಿವರು, ಡಿಸಿಗಳು ಮತ್ತು ಇತರ ಅಧಿಕಾರಿಗಳು ಎಲ್ಲಾ ಕಾನೂನು ಮತ್ತು ನೀತಿಗಳನ್ನು ಉಲ್ಲಂಘಿಸಿ ಮುಸ್ಲಿಮರ ಮನೆಗಳನ್ನು ಕೆಡವಲು ಬಹಿರಂಗವಾಗಿ ಕರೆ ನೀಡಿದ್ದರು ಎಂದು ವಿನಯ್‍ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿದರು.

ಉತ್ತರ ಪ್ರದೇಶದಲ್ಲಿ ಮುಸ್ಲಿಮ್ ಮಗುವಿನ ಮೇಲೆ ಶಿಕ್ಷಕಿಯ ದೌರ್ಜನ್ಯ, ಹಿಂಸಾಚಾರವನ್ನು ಪ್ರಚೋದಿಸುವ ಯಾವುದೇ ಆರೋಪಗಳನ್ನು ನಮ್ಮ ಪ್ರಭುತ್ವ ವ್ಯವಸ್ಥೆ ಎದುರಿಸಲಿಲ್ಲ, ಬದಲಿಗೆ ಈ ಬಗ್ಗೆ ಟ್ವೀಟ್ ಮಾಡಿದ ಅನೇಕರಲ್ಲಿ ಒಬ್ಬರಾದ ಪತ್ರಕರ್ತ ಮುಹಮ್ಮದ್ ಝುಬೈರ್ ಅವರನ್ನು ಗುರಿಯಾಗಿಸಿ ಎಫ್‍ಐಆರ್ ದಾಖಲಿಸಲಾಗಿದೆ ಎಂದು ವಿನಯ್‍ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಮತ್ತು ಕೇಂದ್ರ ಸರಕಾರಗಳು ಮರ್ಯಾದೆಗೇಡು ಹತ್ಯೆಗಳನ್ನು ತಡೆಯುವ ಮಾರ್ಗಗಳ ಕುರಿತು ಸರಕಾರಗಳು ಸಾರ್ವಜನಿಕ ಸಮಾಲೋಚನೆಯನ್ನು ಆಯೋಜಿಸಬೇಕು. ದಲಿತ ಸಮುದಾಯಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಚರ್ಚಿಸಲು ವಿಶೇಷ ಅಧಿವೇಶನ ಮತ್ತು ಸಂಸತ್ತಿನ ಅಧಿವೇಶನ ನಡೆಸಲು ದಲಿತ ಗುಂಪುಗಳ ಬೇಡಿಕೆಗಳಿಗೆ ಗಮನ ಕೊಡಬೇಕು. ಹೆಚ್ಚುತ್ತಿರುವ ಇಸ್ಲಾಮೋಫೆÇೀಬಿಯಾವನ್ನು ಕೇಂದ್ರ ಸರಕಾರ ಗುರುತಿಸಿ ಅದರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ವಿನಯ್‍ಶ್ರೀನಿವಾಸ್ ಒತ್ತಾಯಿಸಿದರು.

ಆಪ್ ಪಕ್ಷದ ರಾಜ್ಯ ಉಪಾಧ್ಯಕ್ಷ ಡಾ.ರಮೇಶ್‍ಬೆಲ್ಲಮ್‍ಕೊಂಡ ಮಾತನಾಡಿ, ಜಾತೀಯತೆ ಮತ್ತು ಇಸಾಮೋಫೋಬಿಯಾ ದ್ವೇಷದ ಅಪರಾಧಗಳಿಗೆ ಕಾರಣವಾಗುತ್ತಿದೆ ಮತ್ತು ನಮ್ಮ ಸಮಾಜವನ್ನು ಛಿದ್ರಗೊಳಿಸುತ್ತಿದೆ. ನಾವು ಇದರ ವಿರುದ್ಧ ಹೋರಾಡಬೇಕು ಎಂದರು.

ದೇಶದಲ್ಲಿ ನಡೆಯುತ್ತಿರುವ ದ್ವೇಷದ ಅಪರಾಧಗಳು ಆತಂಕ ಸೃಷ್ಟಿಪಡಿಸುತ್ತಿದೆ. ಜಾತಿ, ಧರ್ಮದ ತಾರತಮ್ಯ ಹೆಚ್ಚಾಗಿ ದುಷ್ಕøತ್ಯಗಳು ಹೆಚ್ಚುತ್ತಿವೆ. ದೇಶದ ಆಡಳಿತ ವ್ಯವಸ್ಥೆ ಸತ್ತು ಹೋಗಿದೆ. ನಾವೆಲ್ಲರೂ ಎಚ್ಚೆತ್ತುಕೊಂಡು ಸರಿಯಾದ ಸಾಂವಿಧಾನಿಕ ಆಡಳಿತವನ್ನು ರೂಪಿಸಬೇಕಿದೆ ಎಂದು ಡಾ.ರಮೇಶ್‍ಬೆಲ್ಲಮ್‍ಕೊಂಡ ಕರೆ ನೀಡಿದರು. ಪ್ರತಿಭಟನೆಯಲ್ಲಿ ಆಲ್ ಇಂಡಿಯಾ ಸ್ಟುಡೆಂಟ್ ಅಸೋಸಿಯೇಶನ್ ಮುಖಂಡ ಶರತ್, ಆಪ್ ಪಕ್ಷದ ಸುರಭಿ ರೇಣುಕಾಂಭಿಕೆ ಸೇರಿದಂತೆ ಹಲವರು ಭಾಗವಹಿಸಿದ್ದರು.

 

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News