ಜನರ ಸಮಸ್ಯೆಗಳನ್ನು ಸರಕಾರದ ಮುಖಕ್ಕೆ ಹಿಡಿಯಿರಿ...: ಅಧಿವೇಶನಕ್ಕೆ ಮುನ್ನ ಹೊಸ ಶಾಸಕರನ್ನು ಹುರಿದುಂಬಿಸಿದ ಎಚ್.ಡಿ.ದೇವೆಗೌಡ

Update: 2023-07-02 14:15 GMT

ಫೋಟೊ- ಜೆಡಿಎಸ್ ಸಭೆಯಲ್ಲಿ ನಾಯಕರು

ಬೆಂಗಳೂರು: 'ಕಾಲವೂ ಕೂಡಿ ಬರುತ್ತದೆ, ರಾಜ್ಯದಲ್ಲಿ ಜೆಡಿಎಸ್ ಸರಕಾರವೂ ಬರುತ್ತದೆ. ಪಕ್ಷದಲ್ಲಿ ನಿಷ್ಠರಾಗಿರುವ ಉಳಿಯುವ ಎಲ್ಲರಿಗೂ ಅಧಿಕಾರ, ಜನರ ಸೇವೆ ಮಾಡುವ ಅವಕಾಶ ಸಿಗುತ್ತದೆ' ಎಂದು ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೆಗೌಡ ಹೇಳಿದ್ದಾರೆ. 

ವಿಧಾನಮಂಡಲ ಅಧಿವೇಶನ, ಪಕ್ಷದ ಬಲವರ್ಧನೆ, ತಾಲೂಕು, ಜಿಲ್ಲಾ ಹಾಗೂ ರಾಜ್ಯ ಘಟಕಗಳ ಪುನಾರಚನೆ, ನೂತನ ಕೋರ್ ಕಮಿಟಿ ರಚನೆ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಅನುಸರಿಸಬೇಕಾದ ಕಾರ್ಯತಂತ್ರದ ಬಗ್ಗೆ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹತ್ವದ ಸಭೆಯನ್ನು ಉದ್ದೆಶಿಸಿ ಅವರು ಮಾತನಾಡಿದರು.

ತಮ್ಮ ಭಾಷಣದಲ್ಲಿ ಕೆಲ ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ಉಲ್ಲೇಖ ಮಾಡಿದ ಮಾಜಿ ಪ್ರಧಾನಿಗಳು, ''ಜನರು ಅನುಭವಿಸುತ್ತಿರುವ ಸಂಕಷ್ಟಗಳ ಬಗ್ಗೆ ಮಾಧ್ಯಮಗಳು ನಿರಂತರವಾಗಿ ವರದಿ ಮಾಡುತ್ತಿವೆ. ಪತ್ರಿಕೆಗಳನ್ನು ಗಂಭೀರವಾಗಿ ಓದಿ, ಸುದ್ದಿ ಮಾಧ್ಯಮಗಳನ್ನು ಗಮನಿಸಿ. ಜನರ ಸಮಸ್ಯೆಗಳನ್ನು ಸರಕಾರದ ಮುಖಕ್ಕೆ ಹಿಡಿಯಿರಿ. ಹೋರಾಟದಲ್ಲಿ ಅಂಜಿಕೆ ಏಕೆ? ಜನರ ಪರವಾಗಿ ನಿಲ್ಲುವುದಕ್ಕೆ ಅಳಕು ಏಕೆ?'' ಎಂದು ನೂತನ ಶಾಸಕರನ್ನು ಮಾಜಿ ಪ್ರಧಾನಿಗಳು ಹುರಿದುಂಬಿಸಿದರು.

''ಯಾರೂ ಎದೆಗುಂದಬೇಕಿಲ್ಲ. ಪಕ್ಷ ಕಟ್ಟಿ. ಸೋಲಿನಿಂದ ಹತಾಶರಾಗುವುದು ಬೇಡ. ಛಲವಿದ್ದರೆ ಗೆಲುವು ಖಚಿತ. ಅಧೈರ್ಯವೇ ಅವಸಾನಕ್ಕೆ ನಾಂದಿ ಆಗುತ್ತದೆ ಎಚ್ಚರ ಇರಲಿ'' ಎಂದು ಅವರು ಕಿವಿಮಾತು ಹೇಳಿದರು.

''ರಾಜಕಾರಣ ಗೊಂದಲಮಯವಾಗಿದೆ''

ಈ ಪಕ್ಷವನ್ನು ಉಳಿಸಲೇಬೇಕು, ಉಳಿಸುವ ಕೆಲಸವನ್ನು ನಾವೆಲ್ಲರೂ ಸೇರಿ ಮಾಡೋಣ. ಇವತ್ತಿನ ರಾಜ್ಯ ಮತ್ತು ದೇಶದ ರಾಜಕಾರಣ ಗೊಂದಲಮಯವಾಗಿದೆ. ನಾವು ಜನನಿಷ್ಠರಾಗಿ ಅವರ ಜತೆ ನಿಲ್ಲೋಣ ಎಂದು ಮಾಜಿ ಪ್ರಧಾನಿಗಳು ಕರೆ ನೀಡಿದರು. 

ರಾಷ್ಟ್ರೀಯ ಪಕ್ಷಗಳ ದೊಡ್ಡ ದೊಡ್ಡ ನಾಯಕರಲ್ಲಿ ಈಗ ಅಳುಕಿದೆ. ಚುನಾವಣೆಯ ಬಗ್ಗೆ ಭಯವಿದೆ. ನಮಗೆ ಅಂತಹ ಆತಂಕ, ಭಯ ಇಲ್ಲ. ಯಾವುದೇ ತಪ್ಪು ನಮ್ಮಿಂದ ಆಗಿಲ್ಲ. ಅವಕಾಶ ಸಿಕ್ಕಿದಾಗಲೆಲ್ಲ ಜನರ ಪರವಾಗಿಯೇ ಹೋರಾಟ ಮಾದಿದ್ದೇವೆ ಎಂದು ಅವರು ಹೇಳಿದರು.

ನನ್ನ ಆರೋಗ್ಯದ ಬಗ್ಗೆ ಯಾರಿಗೂ ಆತಂಕ ಬೇಡ. ಕೊಂಚ ಮಂಡಿ ನೋವು ಇದೆ. ಅದಕ್ಕಿಂತ ಜನರು ಎದುರಿಸುತ್ತಿರುವ ಕಾಶತಗಳ ಬಗ್ಗೆ ನನಗೆ ಹೆಚ್ಚು ನೋವಿದೆ. ಯಾವುದೇ ಸಂದರ್ಭದಲ್ಲಿ ಹೋರಾಟ ಮಾಡುವ ಛಲ ನನ್ನಲ್ಲಿದೆ. ನಿಮ್ಮೆಲ್ಲರ ಜತೆ ನಾನಿದ್ದೇನೆ ಎಂದು ಅವರು ಹೇಳಿದರು.

ಸಮಾನ ನಾಗರಿಕ ಸಂಹಿತೆ ಬಗ್ಗೆ ದೇಶದ ಉದ್ದಗಲಕ್ಕೂ ಚರ್ಚೆ ನಡೆಯುತ್ತಿದೆ. ಸಂಹಿತೆಯ ಕರಡು ಮೊದಲು ಹೊರಬರಲಿ. ಆಮೇಲೆ ಚರ್ಚೆ ನಡೆಸಿ ನಮ್ಮ ನಿಲುವು ಏನು ಎಂಬುದನ್ನು ತಿಳಿಸೋಣ ಎಂದು ಇದೇ ವೇಳೆ ಮಾಜಿ ಪ್ರಧಾನಿಗಳು ಹೇಳಿದರು.

ಎಲ್ಲ ಶಾಸಕರು, ಮಾಜಿ ಶಾಸಕರು, ಜಿಲ್ಲಾ ಘಟಕಗಳ ಅಧ್ಯಕ್ಷರು, ಪರಾಭವಗೊಂಡ ಅಭ್ಯರ್ಥಿಗಳು ಸೇರಿ ಅನೇಕ ಆಹ್ವಾನಿತರು ಈ ಮಹತ್ವದ ಸಭೆಯಲ್ಲಿ ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News