ಶ್ರೀರಾಮುಲುರನ್ನು ಶಾಸಕರನ್ನಾಗಿ ಮಾಡಿದ್ದು ನಾನು: ಜನಾರ್ಧನ ರೆಡ್ಡಿ

Update: 2023-10-29 13:38 GMT

ಜನಾರ್ಧನ ರೆಡ್ಡಿ

ಕೊಪ್ಪಳ: ‘ಬಳ್ಳಾರಿಯ ಕೊಳಗೇರಿಯಲ್ಲಿ ಹುಟ್ಟಿರುವ ಬಿ.ಶ್ರೀರಾಮುಲುರನ್ನು ಕರೆತಂದು ಶಾಸಕರನ್ನಾಗಿ, ಅವರನ್ನು ರಾಜ್ಯಮಟ್ಟದ ನಾಯಕನನ್ನಾಗಿ ಬೆಳೆಸಿದ್ದು ನಾನು’ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ತಿಳಿಸಿದ್ದಾರೆ.

ಜಿಲ್ಲೆಯ ಗಂಗಾವತಿಯಲ್ಲಿ ನಿನ್ನೆ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾಯಕ ಸಮುದಾಯದ ಬಿ.ಶ್ರೀರಾಮುಲು, ಸಿರಗುಪ್ಪಾ ಕ್ಷೇತ್ರದ ಸೋಮಲಿಂಗಪ್ಪ ಅವರನ್ನು ಶಾಸಕರನ್ನಾಗಿ ಮಾಡಿದ್ದು ನಾನು. ಪರಿಶಿಷ್ಟ ಪಂಗಡ (ಎಸ್ಟಿ)ಕ್ಕೆ ಮೀಸಲಾತಿ ಇಲ್ಲದ ಸಂದರ್ಭದಲ್ಲೂ ನಾಯಕ ಸಮಾಜದವರನ್ನು ಶಾಸಕರನ್ನಾಗಿ ಮಾಡಿದ್ದೇನೆ’ ಎಂದು ಹೇಳಿದರು.

‘ಬಿ.ಶ್ರೀರಾಮುಲು ಹಾಗೂ ನನಗೆ ರಾಜಕೀಯ ಏನೇ ಆಗಿರಬಹುದು. ಆದರೆ, ನಾಯಕ ಸಮಾಜದ ಒಬ್ಬರನ್ನು ಬೆಳೆಸಿದ ಹೆಮ್ಮೆ ಇದೆ. ರಾಜ್ಯದಲ್ಲಿ ವಾಲ್ಮೀಕಿ ಜಯಂತಿಯನ್ನು ಸರಕಾರಿ ಕಾರ್ಯಕ್ರಮವಾಗಿ ರಾಜ್ಯಾದ್ಯಂತ ಆಚರಿಸಲು ಹಾಗೂ ಸರಕಾರಿ ರಜೆ ಘೋಷಿಸಬೇಕೆಂದು ಅಂದಿನ ಸಿಎಂ ಯಡಿಯೂರಪ್ಪ ಅವರಿಗೆ ಒತ್ತಾಯಿಸಿದ್ದು ನಾನು ಹಾಗೂ ಶ್ರೀರಾಮುಲು’ ಎಂದು ನುಡಿದರು.

ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರಕಾರ ನನ್ನ ಯೋಜನೆಗಳನ್ನು ಜಾರಿ ಮಾಡುತ್ತಿದ್ದು, ಪಂಚ ಗ್ಯಾರಂಟಿಗಳು ನನ್ನ ಯೋಜನೆಗಳು. ಅವುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾರಿ ಮಾಡುತ್ತಿದ್ದಾರೆ ಎಂದು ಜನಾರ್ಧನ ರೆಡ್ಡಿ, ಗಂಗಾವತಿ ಕ್ಷೇತ್ರದ ಅಭಿವೃದ್ಧಿ ನನ್ನ ಧ್ಯೇಯ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News